ಕೊರೊನಾ ವಿರುದ್ಧದ ಹೋರಾಟದಲ್ಲಿ ಮೂಂಚೂಣಿಯಲ್ಲಿದ್ದು, ರಕ್ಷಣಾತ್ಮಕ ಸಾಧನಗಳನ್ನು ಕೋರಿದ ಗುತ್ತಿಗೆ ಆರೋಗ್ಯ ಕಾರ್ಯಕರ್ತರನ್ನು ಉತ್ತರ ಪ್ರದೇಶ ಸರ್ಕಾರ ವಜಾ ಮಾಡಿದೆ.
ಈ ಗುತ್ತಿಗೆ ಆರೋಗ್ಯ ಕಾರ್ಯಕರ್ತರು ಕೊರೊನಾ ವೈರಸ್ ಸೋಂಕಿತ ರೋಗಿಗಳ ಚಿಕಿತ್ಸೆ ನೀಡುತ್ತಿದ್ದರು. ತಮಗೆ ಕೊರೊನ ಸುರಕ್ಷತಾ ಕಿಟ್ಗಳನ್ನು ನೀಡುವಂತೆ ಒತ್ತಾಯಿಸಿ ಏಪ್ರಿಲ್ 2 ರಿಂದ ಮುಷ್ಕರದಲ್ಲಿದ್ದರು. ಎಪ್ರಿಲ್ 3ರಂದು 26 ಜನರನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಉತ್ತರ ಪ್ರದೇಶ ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕ ಅಗ್ಯತ್ ಗುಪ್ತಾ ಅವರು ಶುಕ್ರವಾರ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಿಗೆ ಪತ್ರ ಬರೆದು 26 ಆರೋಗ್ಯ ಕಾರ್ಯಕರ್ತರನ್ನು ಕೆಲಸದಿಂದ ವಜಾ ಮಾಡಿ ಎಂದು ತಿಳಿಸಿದ್ದಾರೆ.
“ದೇಶದಲ್ಲಿ ಕಠಿಣ ಪರಿಸ್ಥಿತಿಯ ಹೊರತಾಗಿಯೂ, ನೀವು ಅನಿಯಂತ್ರಿತ ಮುಷ್ಕರ ನಡೆಸುತ್ತಿದ್ದೀರಿ. ದೇಶವು ಎಸ್ಮಾ ಕಾನೂನಿನ ಅಡಿಯಲ್ಲಿದೆ. ನಿಮ್ಮ ಈ ಕೃತ್ಯದಿಂದಾಗಿ ಬಂಡಾದ ಸರ್ಕಾರಿ ವೈದ್ಯಕೀಯ ಕಾಲೇಜಿನ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರುತ್ತಿವೆ. ಆದ್ದರಿಂದ, ಒಪ್ಪಂದದ ಆಧಾರದ ಮೇಲೆ, ಎಲ್ಲರನ್ನು ಸೇವೆಯಿಂದ ವಜಾಗೊಳಿಸುವಂತೆ ತಕ್ಷಣದಿಂದ ಜಾರಿಗೆ ತರಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಈ ರೀತಿಯ ಏಕಪಕ್ಷೀಯ ಕ್ರಮದಿಂದ ಆರೋಗ್ಯ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ಈ ಪರಿಸ್ಥಿತಿಯಲ್ಲಿ ನಮ್ಮನ್ನು ವಜಾಗೊಳಿಸಿದರೆ ನಮ್ಮ ಗತಿಯೇನು? ಇಷ್ಟು ವರ್ಷ ಮಾಡಿದ ಸೇವೆಗೆ ಬೆಲೆಯೇನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕಾಲೇಜು ಪ್ರಾಂಶುಪಾಲರ ಪಿತೂರಿಯಿಂದಾಗಿ ನಮ್ಮನ್ನು ವಜಾಗೊಳಿಸಿದ್ದು ಇದರು ವಿರುದ್ಧ ಎಲ್ಲ ಗುತ್ತಿಗೆ ಕಾರ್ಮಿಕರು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದಿದ್ದಾರೆ.
ವಜಾಗೊಳಿಸಲ್ಪಟ್ಟ ಆರೋಗ್ಯ ಕಾರ್ಯಕರ್ತೆ, ಪ್ರೀತಿ ದ್ವಿವೇದಿಯವರು “ರಾಜ್ಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರು ಯಾವುದೇ ಭದ್ರತಾ ಕಿಟ್ಗಳಿಲ್ಲದೆ ಕೊರೊನಾ ಐಸೊಲೇಷನ್ ವಾರ್ಡ್ಗಳಲ್ಲಿ ಹೊರಗುತ್ತಿಗೆ ನೌಕರರನ್ನು ಮಾತ್ರ ಕರ್ತವ್ಯಕ್ಕೆ ಸೇರಿಸಿದ್ದಾರೆ” ಎಂದು ಆರೋಪಿಸಿದ್ದಾರೆ.
ಕೊರೊನಾ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆಯ ಬಗ್ಗೆ ಆರೋಗ್ಯ ತಜ್ಞರು ನಿರಂತರವಾಗಿ ಹೇಳುತ್ತಿದ್ದಾರೆ ಮತ್ತು ಸುರಕ್ಷತಾ ಕಿಟ್ಗಳನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.
ಏಪ್ರಿಲ್ 5 ರ ರಾತ್ರಿ ದೀಪವನ್ನು ಬೆಳಗಿಸುವಂತೆ ಪ್ರಧಾನಿ ಮೋದಿಯವರ ಮನವಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಕೊರೊನಾ ವಿರುದ್ಧ ಹೋರಾಡುವ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಲಭ್ಯತೆಯ ವಿಷಯವನ್ನು ಎತ್ತಿದೆ. ‘ನೀವು ಚಪ್ಪಾಳೆ ತಟ್ಟಿದ ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳು ಸಿಗುತ್ತಿಲ್ಲ, ಇದು ಯಾರ ಜವಾಬ್ದಾರಿ?’ ಎಂದು ಕಾಂಗ್ರೆಸ್ ಹೇಳಿದೆ.
ಈ ಹಿಂದೆ ಪ್ರಧಾನಿ ಮೋದಿ ಅವರು ಮಾರ್ಚ್ 22 ರಂದು ಜನತಾ ಕರ್ಫ್ಯೂ ಘೋಷಿಸಿ, ಕೊರೊನ ವೈರಸ್ ಸೋಂಕಿತರ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ಗೌರವಾರ್ಥವಾಗಿ ಸಂಜೆ 5 ಗಂಟೆಗೆ ಚಪ್ಪಾಳೆ ತಟ್ಟಿ ಎಂದು ದೇಶಕ್ಕೆ ಕರೆ ನೀಡಿದ್ದರು. ಆದರೆ ಕೊರೊನ ಸೋಂಕಿನ ಬೆದರಿಕೆಯ ಹೊರತಾಗಿಯೂ ದೇಶಾದ್ಯಂತ ಜನರು ಚಪ್ಪಾಳೆ ತಟ್ಟಿ, ತಟ್ಟೆಗಳಿಗೆ ಹೊಡೆದು, ಶಂಖವನ್ನು ಊದಿ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದರು.
ಆದರೆ ಈಗ ಆರೋಗ್ಯ ಕಾರ್ಯಕರ್ತರು ತಮ್ಮ ಜೀವ ರಕ್ಷಿಸಿಕೊಳ್ಳಲು ಸುರಕ್ಷಾ ಕಿಟ್ಗಳನ್ನು ಕೇಳಿದಾಗ, ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಅವರನ್ನು ಉದ್ಯೋಗದಿಂದ ವಜಾಗೊಳಿಸಿದೆ. ವೈದ್ಯರು ವೈದ್ಯಕೀಯ ಕಿಟ್ಗಳ ಕೊರತೆಯನ್ನು ಎದುರಿಸುತ್ತಿವುದು ಎದೊಂದೇ ಉದಾಹರಣೆಯಲ್ಲ. ಪಿಪಿಇ ಲಭ್ಯತೆ, ಪರೀಕ್ಷಾ ಕಿಟ್ಗಳು ಮತ್ತು ಸಂಪರ್ಕತಡೆ ಸೌಲಭ್ಯಗಳ ಬಗ್ಗೆ ಇರುವ ಸಮಸ್ಯೆಗಳನ್ನು ಉಲ್ಲೇಖಿಸಿ ಏಮ್ಸ್ ವೈದ್ಯರ ಸಂಘವು ಮೋದಿಗೆ ಪತ್ರ ಬರೆದಿತ್ತು.
ಇದನ್ನೂ ಓದಿ: PPE ಕೇಳಿದ ವೈದ್ಯರನ್ನು ದೂಷಿಸುವುದು ಸರಿಯಲ್ಲ: ಪ್ರಧಾನಿಗೆ ಪತ್ರ ಬರೆದ ಏಮ್ಸ್ ವೈದ್ಯರು