‘ಇಲ್ಲಿ ಶ್ರೇಷ್ಠರು, ಕನಿಷ್ಠರು ಇಲ್ಲವೇ ಇಲ್ಲ. ತಮ್ಮನ್ನು ತಾವು ಶ್ರೇಷ್ಠರು ಎನ್ನುವವರು, ಮತ್ತೊಬ್ಬರನ್ನು ಕನಿಷ್ಠರು ಎನ್ನುವವರು ಮನುಷ್ಯರೇ ಅಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕನಕಗಿರಿ ಉತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ ಮಾತನಾಡಿದ ಅವರು, ‘ಶ್ರೇಷ್ಠತೆಯ ವ್ಯಸನದಿಂದ 58 ಲಕ್ಷ ಯಹೂದಿಗಳನ್ನು ಹತ್ಯೆ ಮಾಡಿದ ಹಿಟ್ಲರ್ ಕೊನೆಗೆ ಒಬ್ಬ ಹೇಡಿಯಂತೆ ಗುಂಡು ಹಾರಿಸಿಕೊಂಡು ಸತ್ತ. ಇಂಥಾ ಪರಿಸ್ಥಿತಿ ನಮ್ಮ ದೇಶದಲ್ಲಿ ಬರಬಾರದು. ಇಲ್ಲಿ ಶ್ರೇಷ್ಠರು, ಕನಿಷ್ಠರು ಇಲ್ಲವೇ ಇಲ್ಲ. ತಮ್ಮನ್ನು ತಾವು ಶ್ರೇಷ್ಠರು ಎನ್ನುವವರು, ಮತ್ತೊಬ್ಬರನ್ನು ಕನಿಷ್ಠರು ಎನ್ನುವವರು ಮನುಷ್ಯರೇ ಅಲ್ಲ. ಈ ರೀತಿಯ ಶ್ರೇಷ್ಠತೆಯ ವ್ಯಸನವನ್ನು ಹೋಗಲಾಡಿಸಲು ಬಸವಣ್ಣ, ಅಂಬೇಡ್ಕರ್ ಹೋರಾಟ ಮಾಡಿದರು’ ಎಂದರು.
‘ಸಮಾಜದಲ್ಲಿ ಅಸಮಾನತೆ ಇದೆ. ಇದನ್ನು ಹೋಗಲಾಡಿಸಲು ಏನಾದ್ರೂ ಪ್ರಯತ್ನ ಮಾಡಿದ್ದೀವಾ ಎನ್ನುವ ಕುರಿತು ಪ್ರತಿಯೊಬ್ಬರೂ ತಮ್ಮನ್ನು ಪ್ರಶ್ನಿಸಿಕೊಳ್ಳಬೇಕು. ಚತುರ್ವರ್ಣ ವ್ಯವಸ್ಥೆ ರೂಪಿಸಿ ಒಬ್ಬರನ್ನು ಶ್ರೇಷ್ಠರು ಉಳಿದವರನ್ನು ಕನಿಷ್ಠರು ಎನ್ನುವ ವ್ಯವಸ್ಥೆ ರೂಪಿಸಿದರು. ಇದನ್ನೇ ಹಿಟ್ಲರ್ ಮತ್ತು ಮುಸಲೋನಿ ಜರ್ಮನಿಯಲ್ಲಿ ಮಾಡಿದ್ದು. ಕೊನೆಗೆ ಅವರಿಗೆ ಯಾವ ಗತಿ ಆಯ್ತು ಎಂದು ಇಡಿ ಮನುಕುಲ ನೋಡಿದೆ’ ಎಂದರು.
‘ನಾವು ಅಂಬೇಡ್ಕರ್, ಬುದ್ಧ, ಬಸವ, ಕುವೆಂಪು ಮುಂತಾದವರ ವಿಚಾರಗಳನ್ನು ಹೆಚ್ಚೆಚ್ಚು ಪಾಲಿಸುತ್ತಾ ತಾರತಮ್ಯದ ಸಮಾಜವನ್ನು ಹೋಗಲಾಡಿಸಬೇಕು. ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು, ಶೂದ್ರರಿಗೆ ಶಿಕ್ಷಣ ಸಿಕ್ಕಿದ್ದು ಇವರೆಲ್ಲಾ ಮಹನೀಯರ ಹೋರಾಟದಿಂದ’ ಎಂದು ಹೇಳಿದರು.
‘ಈ ಚರಿತ್ರೆಯನ್ನು ನೆನಪಿಸುವುದಕ್ಕೇ ನಾನು ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಅವರ ಹೆಸರು ಇಟ್ಟಿದ್ದು. ಬಸವ ಜಯಂತಿಯ ದಿನವೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದೆ. ನಮ್ಮ ಗ್ಯಾರಂಟಿ ಯೋಜನೆಗಳು ಕೂಡ ಬಸವೇಶ್ವರರ ಕಾಯಕ ದಾಸೋಹ ತತ್ವದ ಮೇಲೆ ರಚನೆಯಾದದ್ದು. ನಾವು ಯಾವತ್ತೂ ಸೀತಾರಾಮನ ಸಂಸ್ಕೃತಿಯವರು. ಸೀತೆ, ಲಕ್ಷ್ಮಣನನ್ನು ಬಿಟ್ಟು ರಾಮ ಯಾವತ್ತೂ ಒಂಟಿ ಅಲ್ಲ. ರಾಮನನ್ನು ಒಂಟಿ ಮಾಡುವುದಲ್ಲ. ಸಕುಂಟುಂಬ ಸಮೇತನಾದ ಸೀತಾರಾಮ ನಮ್ಮವ’ ಎಂದು ಬಿಜೆಪಿಗೆ ತಿರುಗೇಟು ಕೊಟ್ಟರು.
‘ಮುಂದಿನ ವರ್ಷ ಕನಕಗಿರಿ ಅಭಿವೃದ್ಧಿ ಪ್ರಾಧಿಕಾರವನ್ನು ರಚನೆ ಮಾಡಲಾಗುವುದು. ಕನಕಗಿರಿ ಉತ್ಸವವನ್ನು ನಿರಂತರವಾಗಿ ನಡೆಸಲು, ಕನಕಗಿರಿಯ ಸರ್ವತೋಮುಖ ಅಭಿವೃದ್ಧಿಗೆ ನಾನು ಮತ್ತು ನಮ್ಮ ಸರ್ಕಾರ ಸದಾ ಬದ್ಧವಾಗಿದೆ. ಸರ್ವೋದಯ, ಸರ್ವಧರ್ಮ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟುಕೊಂಡಿರುವವನು ನಾನು. ಈ ದಿಕ್ಕಿನಲ್ಲೇ ನಮ್ಮ ಸರ್ಕಾರ ಮುನ್ನಡೆಯಲಿದೆ; ಕೊಪ್ಪಳ ನನ್ನದೇ ಕ್ಷೇತ್ರ. ಈ ಜಿಲ್ಲೆಯ ಜನರ ಪ್ರೀತಿಗೆ ನಾನು ಸದಾ ಋಣಿ’ ಎಂದು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ; ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ವ್ಯಾಪಾರ ಮತ್ಸರ; ಗೃಹ ಸಚಿವರು ಹೇಳಿದ್ದೇನು?