ಲೈಂಗಿಕ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು “ಕೊರೊನಾ ಸೋಂಕಿನ ವೇಷ ಧರಿಸಿ ಕೊರೊನಾ ಎಂದು ನಾಟಕವಾಡುತ್ತಿದ್ದಾರೆ” ಎಂದು ಆರೋಪಿಸಿ, ಪ್ರಕರಣದಲ್ಲಿ ಸಂತ್ರಸ್ತೆಯ ಪರವಾಗಿ ವಾದಿಸುತ್ತಿರುವ ವಕೀಲ ಜಗದೀಶ್ ಕೆ.ಎನ್. ಮಹಾದೇವ್ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
“ರಮೇಶ್ ಜಾರಕಿಹೊಳಿ ಐಸಿಯೂನಲ್ಲಿ ಚಿಕಿತ್ಸೆ ಪಡೆಯುವ ಹಾಗೆ ನಾಟಕವಾಡುತ್ತಿದ್ದಾರೆ. ವೈದ್ಯಕೀಯ ಇತಿಹಾಸದಲ್ಲಿ ಮೊದಲ ಬಾರಿಗೆ ವೆಂಟಿಲೇಟರ್ ಮಾಸ್ಕ್ ಬದಲು ಬಟ್ಟೆ ಮಾಸ್ಕ್ ಹಾಕಿ ಚಿಕಿತ್ಸೆ ನೀಡುತ್ತಿದ್ದಾರೆ. ನಕಲಿ ಕೊರೊನಾ ವರದಿ ತಯಾರಿಸಿ ಐಸಿಯೂನಲ್ಲಿ ನಾಟಕ ಆಡುತ್ತಿದ್ದಾರೆ” ಎಂದು ವಕೀಲ ಜಗದೀಶ್ ಮಹಾದೇವ್ ಪತ್ರದಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಸಿಡಿ ಕೇಸ್: FIR ದಾಖಲಿಸದ ಕಮಲ್ ಪಂತ್ ವಿರುದ್ಧ ಖಾಸಗಿ ದೂರು ನೀಡಿದ ಜಸಂಪ
“ಮಾಜಿ ಸಚಿವ ರಮೇಶ್ ಜಾರಕಿಹೋಳಿ ಅವರು ತನ್ನ ಪ್ರಭಾವ ಬಳಸಿ ದಿಕ್ಕು ತಪ್ಪಿಸುತ್ತಿದ್ದಾರೆ. ಅವರು ನಿಜವಾಗಿಯೂ ಕೊರೊನಾ ಪಾಸಿಟಿವ್ ಆಗಿದೆಯಾ ಎಂದು ಪರೀಕ್ಷೆ ನಡೆಸಿ ವರದಿ ನೀಡಬೇಕೆಂದು” ವಕೀಲರು ಪೊಲೀಸ್ ಆಯುಕ್ತರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಜಾರಕಿಹೊಳಿ ಅವರು ಸೋಮವಾರ ವಿಚಾರಣೆಗೆ ಎಸ್ಐಟಿ ಮುಂದೆ ಹಾಜರಾಗಬೇಕಿತ್ತು. ಆದರೆ ಕೆಲ ದಿನಗಳಿಂದ ಎಲ್ಲೂ ಕಾಣಿಸಿಕೊಂಡಿರದ ರಮೇಶ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಬೆಳಗಾವಿಯಲ್ಲಿ ಸಚಿವ ಬೈರತಿ ಬಸವರಾಜ್ ಹೇಳಿದ್ದರು. ಅವರು, “ರಮೇಶ ಜಾರಕಿಹೊಳಿ ಅವರಿಗೆ ಕೊರೊನಾ ಸೋಂಕು ತಗುಲಿದೆ, ಅವರು ಬೆಂಗಳೂರಿನಲ್ಲಿಯೇ ಇದ್ದಾರೆ” ಎಂದು ಹೇಳಿಕೊಂಡಿದ್ದರು. ಆದರೆ ನಂತರ ರಮೇಶ ಜಾರಕಿಹೊಳಿ ಅವರು ಬೆಂಗಳೂರಿನಲ್ಲಿ ಇಲ್ಲ, ಗೋಕಾಕ್ ಇದ್ದಾರೆ ಎಂಬುದು ಖಚಿತಗೊಂಡಿತ್ತು.
ಇದಾದ ನಂತರ ರಮೇಶ ಜಾರಕಿಹೊಳಿ ಅವರು ಆಸ್ಪತ್ರೆಯ ಐಸಿಯುನಲ್ಲಿ ಇರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಅವರು ಪಿಪಿಇ ಕಿಟ್ ಹಾಕಿ ಆಸ್ಪತ್ರೆಯ ಬೆಡ್ನಲ್ಲಿ ಮಲಗಿರುವ ದೃಶ್ಯವನ್ನು ತೋರಿಸಲಾಗಿತ್ತು. ಜೊತೆಗೆ ಅವರು ಬಟ್ಟೆಯ ಮಾಸ್ಕ್ ಅನ್ನು ಹಾಕಿಕೊಂಡಿರುವುದು ಸಾಕಷ್ಟು ಚರ್ಚೆಗೆ ಈಡು ಮಾಡಿತ್ತು.
ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಕೊರೊನಾ ಎಂದ ಭೈರತಿ ಬಸವರಾಜ್, ಎಸ್ಐಟಿ ವಿಚಾರಣೆಗೆ ಗೈರು ಸಾಧ್ಯತೆ