Homeನ್ಯಾಯ ಪಥಊರಿಗೆಲ್ಲ ಬುದ್ಧಿ ಹೇಳೋರು ಕೋವಿಡ್ ನಿಯಮ ಕಡೆಗಣಿಸಿದ ಕತೆ!

ಊರಿಗೆಲ್ಲ ಬುದ್ಧಿ ಹೇಳೋರು ಕೋವಿಡ್ ನಿಯಮ ಕಡೆಗಣಿಸಿದ ಕತೆ!

- Advertisement -
- Advertisement -

(ಇದು ಕಳೆದ ವಾರದ ನ್ಯಾಯಪಥದಲ್ಲಿ ಪ್ರಕಟವಾದ ಲೇಖನ)

ಕೊರೊನಾ ವೈರಾಣು ವೇಷಾಂತರಿಸುತ್ತ ಮಾರಣ ಹೋಮ ಮಾಡುತ್ತ ಜನರನ್ನು ಕಂಗಾಲಾಗಿಸುತ್ತಿದೆ; ಮತ್ತೊಂದೆಡೆ ಈ ರೋಗವನ್ನು ನಿಯಂತ್ರಿಸುವ ಸರ್ಕಾರಿ ನಿಯಮಗಳ ಹೆಸರಲ್ಲಿ ಅಧಿಕಾರಿಗಳು ಅಮಾಯಕರ ಗೋಳು ಹುಯ್ದುಕೊಳ್ಳುತ್ತಿದ್ದಾರೆ. ಮಾಸ್ಕ್ ಧಾರಣೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಜನಸಂದಣಿ ಸೇರದಿರುವುದು, ಸಭೆ-ಸಮಾರಂಭ, ಮದುವೆ-ಮೆಹಂದಿ ಬೇಕಾಬಿಟ್ಟಿಯಾಗಿ ನಡೆಸದಂತ ನಿಯಮಾವಳಿಗಳನ್ನೇನೋ ಆಡಳಿತಗಾರರು ಘೋಷಿಸಿದ್ದಾರೆ. ಆದರೆ ಈ ನಿಯಮಗಳನ್ನು ಪ್ರಾಮಾಣಿಕವಾಗಿ ಪಾಲಿಸಲು ಪ್ರಯತ್ನಿಸುವ ಜನಸಾಮಾನ್ಯರಿಗೆ ತಿಳಿಹೇಳಿ, ತಾವೂ ನಿಯಮಗಳನ್ನು ಪಾಲಿಸಿ ಮಾದರಿಯಾಗಬೇಕಾದ ಆಯಕಟ್ಟಿನ ಅಧಿಕಾರಸ್ಥರೇ ಬುದ್ಧಿಪೂರ್ವಕವಾಗಿ ನಿಯಮ ಧಿಕ್ಕರಿಸುತ್ತ ಜನಜಂಗುಳಿಯಲ್ಲಿ ಮೈಮರೆಯುತ್ತಿರುವುದು ವಿಪರ್ಯಾಸವೇ ಸರಿ.

ಲಾಕ್‌ಡೌನ್, ಸೆಮಿಲಾಕ್‌ಡೌನ್, ಕರ್ಫ್ಯೂ, ಸೆಕ್ಷನ್-144ನಂಥ ನಿಯಮಗಳನ್ನು ಜಾರಿಗೊಳಿಸುವಾಗ ಅಧಿಕಾರಿಗಳು ಕಿರಾತಕರಂತೆ ಕಾಡುತ್ತಿರುವುದು ಘೋರವಾಗಿದೆ! ನಿಯಮಾವಳಿ ತರುವ ಮೊದಲು ಅಗತ್ಯ ಸಿದ್ಧತೆ-ಬದ್ಧತೆಗಳಿಲ್ಲದೆ ಪಾಪದ ಮಂದಿಗೆ ಚಿತ್ರಹಿಂಸೆ ಕೊಡಲಾಗುತ್ತಿದೆ. ಹಾಲು-ತರಕಾರಿ ದಿನಸಿಯಂಥ ಜೀವನಾವಶ್ಯಕ ವಸ್ತು ತರಲೆಂದು ಹೊರಬರುವವರನ್ನು ಜೀವರಕ್ಷಕ ಔಷಧ ಖರೀದಿಗೆಂದು ಮೆಡಿಕಲ್ ಶಾಪ್‌ಗೆ ಹೋಗುವವರನ್ನು ಬಿಡದೆ ಬೆನ್ನಟ್ಟಿ ಬಡಿಯುವ ಅತಿರೇಕದ ವರ್ತನೆಯನ್ನು ಪೊಲೀಸರು ಮತ್ತು ಜಿಲ್ಲಾಡಳಿತ ನಿರ್ದಯವಾಗಿ ಪ್ರದರ್ಶಿಸುತ್ತಿದ್ದಾರೆ ಎಂಬ ಸಿಟ್ಟು ಜನಸಮೂಹದಲ್ಲಿ ಹೆಪ್ಪುಗಟ್ಟಿದೆ. ಅಧಿಕಾರಸ್ಥರು, ಅವರ ನೆಂಟರು-ಇಷ್ಟರಿಗೆ ಈ ಕೋವಿಡ್ ಕಾನೂನು ಅನ್ವಯವಾಗುತ್ತಿಲ್ಲ ಎಂಬುದು ದಿನಬೆಳಗಾದರೆ ಜರುಗುವ “ವಿವಿಐಪಿ ಪ್ರಹಸನಗಳಿಂದ” ಸಾಬೀತಾಗಿಹೋಗಿದೆ!

ದಿನಕ್ಕೊಂದರಂತೆ ಬದಲಾಗುವ ಕೋವಿಡ್ ಕಾಯ್ದೆಗಳು ಜನಸಾಮಾನ್ಯರ ಹೈರಾಣಾಗಿಸಿ ಬಿಟ್ಟಿದೆ; ಅಪ್ರಜ್ಞಾಪೂರ್ವಕ ಸಣ್ಣ ಪ್ರಮಾದವಾದರೂ ದೊಡ್ಡ “ದಂಡ” ಪ್ರಯೋಗವಾಗುತ್ತಿದೆ. ಹಾಗಂತ ಮಂತ್ರಿ-ಮಾಂಡಲೀಕರು ಮತ್ತವರ ಅಧಿಕಾರಿ ಪಂಡಿತರು ರಾಜಾರೋಷವಾಗಿ ಕಾನೂನು ಮುರಿದು ದಕ್ಕಿಸಿಕೊಳ್ಳುತ್ತಿದ್ದಾರೆ. ಗೊಂದಲದಲ್ಲಿರುವ ಕಾನೂನು ಪಾಲಕರೇ ಎಡಬಿಡಂಗಿಗಳಾಗಿದ್ದಾರೆ. ಕಳೆದ ವಾರ ಕರಾವಳಿಯ ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ನಡೆದ ಎರಡು ಮೆಹಂದಿ-ಮದುವೆ ಸಡಗರದಲ್ಲಿ ವಿಧಾನಸಭೆ ಅಧ್ಯಕ್ಷ ಸಾಹೇಬರು, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಾವ ಮುಲಾಜು-ಮುಜುಗರವಿಲ್ಲದೆ ಭಾಗವಹಿಸಿರುವುದು ಕೋವಿಡ್ ಕಾನೂನುಗಳನ್ನೆಲ್ಲ ಅಣಕಿಸಿರುವಂತಿದೆ!

ಕಳೆದ ಶನಿವಾರ ಉತ್ತರಕನ್ನಡದ ಸಿದ್ಧಾಪುರ ತಾಲ್ಲೂಕಿನ ಮನಮನೆ ಎಂಬಲ್ಲಿ ಮಾಜಿ ಜಿಪಂ ಸದಸ್ಯರೊಬ್ಬರ ಮಗಳ ಮದುವೆ ನಡೆದಿತ್ತು. ಮಾಜಿ ತಾಪಂ ಅಧ್ಯಕ್ಷೆಯ ಮಗ ವರ. ಇದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವಕ್ಷೇತ್ರ ಶಿರಸಿಯ ಹಳ್ಳಿ. ಕಾಗೇರಿ ಅವರು ಹೇಳಿಕೇಳಿ ಸಂಘಪರಿವಾರದ ಕುಂಕುಮಧಾರಿ ದೇಶಭಕ್ತರು. ದೇಶದ ನೀತಿ ನಿಯಮ ಕಾನೂನುಗಳನ್ನು ಗುತ್ತಿಗೆ ಹಿಡಿದಂತೆ ವ್ಯಾಖ್ಯಾನಿಸಬಲ್ಲವರು. ಇಂಥ ಕಾಗೇರಿಯವರು ಸದರಿ ವಿವಾಹ ಸಮಾರಂಭದಲ್ಲಿ ಕೋವಿಡ್ ಕಾನೂನು ಕಡೆಗಣಿಸಿ ಕಾಣಿಸಿಕೊಂಡಿದ್ದರು! ಅದಕ್ಕಾಗಿ ಬೆಂಗಳೂರಿಂದಲೇ ಬಂದಿದ್ದರೆಂಬುದು ಸುದ್ದಿ.

ಕಾಗೇರಿ ಮಾಸ್ಕ್ ಹಾಕಿಕೊಳ್ಳದೆ ಜನರ ಮಧ್ಯೆ ಬೆರೆತಿದ್ದು ಆಕ್ಷೇಪಕ್ಕೆ ಕಾರಣವಾಗಿದೆ. ಕೊರೊನಾ ವೈರಾಣು ಹಾವಳಿ ಹೆಚ್ಚಾಗಿರುವ ಬೆಂಗಳೂರಿನಿಂದ ಬಂದಿದ್ದ ಕಾಗೇರಿಯವರು ಕನಿಷ್ಠ ಅಂತರವೂ ಕಾಯ್ದುಕೊಳ್ಳದೆ ಮದುಮಕ್ಕಳಿಗೆ ಅಂಟಿಕೊಂಡೇ ಹರಸಿದ್ದು, ಫೋಟೊ ಶೂಟ್‌ಗೆ ಫೋಸ್ ಕೊಟ್ಟಿದ್ದು ಜನಸಾಮಾನ್ಯರಲ್ಲಿ ಬೇಸರ ಮತ್ತು ಆತಂಕ ಮೂಡಿಸಿಬಿಟ್ಟಿದೆ. ಕೋವಿಡ್ ಕಾನೂನು ಅನುಷ್ಠಾನಗೊಳಿಸುವ ರಾಜಕಾರಣಿ-ಅಧಿಕಾರಿಗಳ ಢೋಂಗಿತನ ಮನದಟ್ಟು ಮಾಡಿದೆ. ತಾನು ಫೋಟೊಗಷ್ಟೇ ಮಾಸ್ಕ್ ತೆಗೆದಿದ್ದೆನೆಂದು ಕಾಗೇರಿ ಸಮಜಾಯಿಷಿ ಕೊಡುತ್ತಿದ್ದಾರೆ. ಹಾಗೆ ಮಾಸ್ಕ್ ತೆಗೆಯುವುದೇ ಅಪರಾಧವಲ್ಲವಾ ಎಂಬುದು ಜನರ ಪ್ರಶ್ನೆ. ನೀರು ಕುಡಿಯಲೆಂದೋ, ಅಥವಾ ಇನ್ಯಾವುದೋ ಕಾರಣಕ್ಕೆ ಒಂದು ಕ್ಷಣ ಮಾಸ್ಕ್ ಸರಿಸಿದ್ದಕ್ಕೆ ಎಷ್ಟು ಜನ ದಂಡ ಹಾಕಿಸಿಕೊಂಡಿಲ್ಲ?

ಇದಕ್ಕೂ ಒಂದು ದಿನ ಮೊದಲು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರರ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಕೋವಿಡ್-19ರ ಅಷ್ಟೂ ನಿಯಮ ಧಿಕ್ಕರಿಸಿ ಪಾಲ್ಗೊಂಡಿದ್ದು ನೆಟ್ಟಿಗರು ಮತ್ತು ಸಾಮಾನ್ಯ ಜನರಲ್ಲಿ ಆಕ್ರೋಶ, ಸಿಟ್ಟು ಮೂಡಿಸಿದೆ! ಸಾಮಾಜಿಕ ಜಾಲತಾಣದಲ್ಲಿ “#ಶೇಮ್‌ಆನ್‌ಸಿಸ್ಟಮ್ #ಡಿಸಿಉಡುಪಿ” ಎಂಬ ಹ್ಯಾಶ್ ಟ್ಯಾಗ್ ಅಭಿಯಾನದಲ್ಲಿ ಡಿಸಿ ಸಾಹೇಬರು ಒಂದೇಸಮನೆ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ.

ಅಸಹಾಯಕ ಜನಸಾಮಾನ್ಯರ ಮೇಲೆ ದಾಳಿ ಮಾಡಿ ಕೋವಿಡ್ “ದಂಡ” ಕಠೋರವಾಗಿ ಚಲಾಯಿಸಿ, ಕಾನೂನು ನಿಷ್ಠ ಅಧಿಕಾರಿ ಗೆಟಪ್‌ನಲ್ಲಿ ಓಡಾಡುವ ಡಿಸಿ ಜಗದೀಶ್ ತಾವೆ ಆ ನಿಯಮಗಳನ್ನು ಮನಸೋ ಇಚ್ಛೆ ಮುರಿದು ಸಂಭ್ರಮಿಸಿದ್ದು ಕರಾವಳಿಯಲ್ಲಿ ಭರ್ಜರಿ “ವೈರಲ್ ಸುದ್ದಿಯಾಗಿದೆ.

ಉಡುಪಿ ಹೆಚ್ಚುವರಿ ಎಸ್‌ಪಿ ಕುಮಾರಚಂದ್ರರ ಮಗಳ ಮದುವೆಯ ಮುಂಚಿನ ಮೆಹಂದಿ ಕಾರ್ಯಕ್ರಮ 23-4-2021 ರ ರಾತ್ರಿ ಅವರ ಅಧಿಕೃತ ನಿವಾಸದಲ್ಲಿ ಆಯೋಜಿಸಲಾಗಿತ್ತು. ಆ ಅದ್ಧೂರಿ ಸಮಾರಂಭಕ್ಕೆ ನೂರಾರು ಮಂದಿ ಬಂದಿದ್ದರು. ಮದುಮಗಳನ್ನು ನೃತ್ಯ ತಂಡ ಮೆರವಣಿಗೆಯಲ್ಲಿ ಕರೆತಂದಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂಥ ಜನದಟ್ಟಣೆ ಸಮಾರಂಭಕ್ಕೆ ಜಿಲ್ಲಾಧಿಕಾರಿ ಜಗದೀಶ್ ಮಡದಿಯೊಂದಿಗೆ ಬಂದಿದ್ದರು! ಡಿಸಿ, ಎಸ್‌ಪಿ ಅವರ ಧರ್ಮ ಪತ್ನಿಯರು ಮತ್ತು ಮದುಮಗಳು ಹೀಗೆ ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ ಮತ್ತು ಸಾಮಾಜಿಕ ಅಂತರವೂ ಇರಲಿಲ್ಲ. ಮದುಮಗಳನ್ನು ನಿಕಟವಾಗಿ ನಿಂತು ಹಾರೈಸಿದ್ದಾರೆ. ಫೋಟೊ ಶೂಟ್‌ಗೆ ನಗುನಗುತ್ತಲೇ ಡಿಸಿ ಪರಿವಾರ ಪೋಸು ನೀಡಿದೆ!

ಕೋವಿಡ್-19 ಮಾರ್ಗಸೂಚಿ ಪ್ರಕಾರ ಮದುವೆಗಳಲ್ಲಿ 50 ಮಂದಿಗಿಂತ ಹೆಚ್ಚಿನವರಿಗೆ ಅವಕಾಶವಿಲ್ಲ. ಇಂಥ ಮದುವೆಗೂ ಮೊದಲು ತಾಲ್ಲೂಕು ಕಚೇರಿಯಿಂದ ಕಡ್ಡಾಯವಾಗಿ ಪರವಾನಗಿ ಪಡೆಯಬೇಕು. ಹಾಗಂತ ಮಾರ್ಗಸೂಚಿ ಪಟ್ಟಿಯಲ್ಲಿ ಮೆಹಂದಿ ಫಂಕ್ಷನ್ ಉಲ್ಲೇಖವಿಲ್ಲ. ಅಂದರೆ ಅನುಮತಿಯಿಲ್ಲದ ಮೆಹಂದಿ ಕಾರ್ಯಕ್ರಮ ತಡೆಯಬೇಕಿದ್ದ, ಕಾನೂನು ಕ್ರಮ ಕೈಗೊಳ್ಳಬೇಕಿದ್ದ ಜಿಲ್ಲಾಧಿಕಾರಿ ತಾವೇ ಸಮಾರಂಭದಲ್ಲಿ ಭಾಗಿಯಾಗಿದ್ದು ಅಕ್ಷಮ್ಯ ಅಪರಾಧವೆಂದು ಜನ ಆಡಿಕೊಳ್ಳುತ್ತಿದ್ದಾರೆ.

“ಪೊಲೀಸ್ ಅಧಿಕಾರಿಯೊಬ್ಬರ ಮಗಳ ಮೆಹಂದಿ ಕಾರ್ಯಕ್ರಮದಲ್ಲಿ ಸುರಕ್ಷಿತ ಅಂತರವೂ ಇಲ್ಲದೆ, ಮಾಸ್ಕ್ ಹಾಕದೆ ನಗುತ್ತ ನಿಂತಿರುವ ಪರಿ ನೋಡಿ ಕಾನೂನು, ಶಿಕ್ಷೆ, ಬೈಗುಳ, ಒದೆ ಎಲ್ಲ ಸಾಮಾನ್ಯ ಜನರಿಗೆ ಮಾತ್ರ ಅಲ್ಲವೆ, ಜಿಲ್ಲಾಧಿಕಾರಿಯೇ? ಉಡುಪಿ ಡಿಸಿ ಜಗದೀಶ್, ಶೇಮ್ ಆನ್ ಯು. ಅಂದಹಾಗೆ ಈ ಮದುವೆಗೆ ಹೋಗುವ ಅತಿಥಿಗಳು, ಆಧಾರ್ ಕಾರ್ಡ್ ಪರೀಕ್ಷಿಸಿ ಪಡಕೊಂಡ ಪಾಸ್ ಪಟ್ಟಿಯಲ್ಲಿ ಜಿಲ್ಲಾಧಿಕಾರಿ ಹೆಸರಿತ್ತೇ ಉತ್ತರಿಸಲೇಬೇಕು ಡಿಸಿ ಸಾಹೇಬರು” ಎಂಬ ಚರ್ಚೆ ಫೇಸ್‌ಬುಕ್‌ನಲ್ಲಿ ನಡೆಯುತ್ತಿದೆ.

“ಅದೆಷ್ಟೋ ಬಡ ಕುಟುಂಬಗಳ ಮನೇಲಿ ಇಂದು ನಡೆಯಬೇಕಿದ್ದ ಮೆಹಂದಿ-ಮದುವೆಗಳು ನಿಂತಿವೆ. ಕೇವಲ ಬಡವರ ಮೇಲೆ ಅಪ್ಲೈ ಆಗುವ ಕಾನೂನಿಗೆ ಹೆದರಿ ಅವು ನಿಂತಿರಬಹುದು. ಆದರೆ ಉಡುಪಿ ಡಿಸಿ ಮಾತ್ರ ಮೆಹಂದಿಗೆ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೆ ಭಾಗವಹಿಸಿದ್ದು ಹೀಗೆ. ಇದು ನಮ್ಮ ವ್ಯವಸ್ಥೆ” ಎಂಬ ಟೀಕೆಗಳು ಫೇಸ್‌ಬುಕ್ ಅಭಿಯಾನದಲ್ಲಿ ವ್ಯಕ್ತವಾಗುತ್ತಿವೆ. ಸ್ವತಃ ತಾವೇ ವಿಧಿಸಿದ ನಿಯಮಗಳನ್ನು ಡಿಸಿ ಜಗದೀಶ್ ಉಲ್ಲಂಘಿಸಿದ್ದಾರೆ. ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಮಾತ್ರ ತಪ್ಪಿತಸ್ಥ ಡಿಸಿ ಜಗದೀಶ್ ಪರ ವಕಾಲತ್ತು ಮಾಡುತ್ತಿರುವುದು ಜನರ ಆಕ್ರೋಶಕ್ಕೆ ತುಪ್ಪ ಸುರಿದಂತಾಗಿದೆ.

ಸದರಿ ಮೆಹಂದಿ ಕಾರ್ಯಕ್ರಮಕ್ಕೂ ಮೂರ್ನಾಲ್ಕು ದಿನ ಮೊದಲು ಇದೇ ಡಿಸಿಯವರು, ಕೋವಿಡ್ ನಿಯಮ ಉಲ್ಲಂಘಿಸಿ ಜನ ತುಂಬಿದ್ದಾರೆಂದು ಆರೋಪಿಸಿ, ನಡುರಸ್ತೆಯಲ್ಲೇ ಬಸ್ ಒಂದರ ಮೇಲೆ ರೇಡು ಮಾಡಿದ ಘಟನೆ ನಡೆದಿತ್ತು. ಉಡುಪಿ ಹತ್ತಿರದ ಸಂತೆಕಟ್ಟೆ ಎಂಬಲ್ಲಿ ಬಸ್ ಅಡ್ಡಹಾಕಿದ್ದ ಡಿಸಿ ಜಗದೀಶ್ ಅದರಲ್ಲಿ ನಿಂತು ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯರನ್ನು ಕೆಳಗಿಳಿಸಿದ್ದರು. ಈ ವಿದಾರ್ಥಿನಿಯರು ತಾವು ಪರೀಕ್ಷೆಗೆ ಹೋಗುತ್ತಿದ್ದೇವೆ ನಮಗೆ ಬೇರೆ ಖಾಲಿ ಬಸ್‌ಗಳು ಸಿಗುವುದಿಲ್ಲ, ನಾವೀಗ ನಡುಬೀದಿಯಲ್ಲಿ ಹೀಗೆ ನಿಂತರೆ ಪರೀಕ್ಷೆ ಸಮಯ ಮೀರುತ್ತದೆಂದು ಪರಿಪರಿಯಾಗಿ ಬೇಡಿಕೊಂಡರೂ ಡಿಸಿ ಜಗದೀಶ್ ಅವರ ಕಲ್ಲು ಹೃದಯ ಕರಗಿರಲಿಲ್ಲ!

ತಾವು ಕಷ್ಟಪಟ್ಟು ಓದಿದ್ದು ವ್ಯರ್ಥವಾಗುತ್ತದೆಂದು ವಿದ್ಯಾರ್ಥಿನಿಯರು ಪರಿಪರಿಯಾಗಿ ತಿಳಿಸಿಹೇಳಿದರೂ, ಇದ್ಯಾವುದೂ ಅರ್ಥವಾಗದಂತೆ ವರ್ತಿಸಿದ ಡಿಸಿ “ನೀವು ಎಜ್ಯುಕೇಟೆಡ್‌ಗಳಾ? ಶಾಲೆ-ಕಾಲೇಜಿಗೆ ಹೋಗೋರು… ನಿಮಗೆ ಪ್ರಜ್ಞೆ ಬೇಡವಾ” ಎಂದು ನಿಯಮಾವಳಿಗಳನ್ನು ದರ್ಪದಿಂದ ಬೋಧಿಸಿದ್ದರು. ಮೆಹಂದಿ ಕಾರ್ಯಕ್ರಮದಲ್ಲಿ ಈ ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಲಾಗಿತ್ತು.
ಕೋವಿಡ್ ನಿಯಮಾವಳಿಗಳನ್ನು ಹೇರುವ ಆದರೆ ತಾವೇ ಪಾಲಿಸದ ಹುಚ್ಚಾಟಕ್ಕೆ ಕೊನೆಯೇ ಇಲ್ಲವೇ?

ಶುದ್ಧೋದನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...