ಜಮ್ಮು ಕಾಶ್ಮೀರದ ಅನಂತ್ನಾಗ್ನಲ್ಲಿ ಸೈನಿಕರು ಹುತಾತ್ಮರಾಗಿರುವಾಗ ದೇಶದೆಲ್ಲೆಡೆ ಜನರು ಶೋಕವನ್ನು ಆಚರಿಸುತ್ತಿದ್ದಾರೆ ಆದರೆ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದ್ದೂರಿ ಸ್ವಾಗತ ಸ್ವೀಕರಿಸಿ ಸಂಭ್ರಮದಲ್ಲಿದ್ದರು ಎಂದು ಟಿಎಂಸಿ ಟೀಕಿಸಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಹುತಾತ್ಮರಾದ ಭಾರತೀಯ ವೀರಯೋಧರಿಗೆ ದೇಶವೇ ಶೋಕ ವ್ಯಕ್ತಪಡಿಸುತ್ತಿದೆ. ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರಿಗೆ ಇಡೀ ದೇಶವೇ ನಮನ ಸಲ್ಲಿಸುತ್ತಿದೆ. ಅನಂತನಾಗ್ನ ಕೋಕರ್ನಾಗ್ನಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್ಕೌಂಟರ್ನಲ್ಲಿ ಭಾರತೀಯ ಸೇನೆಯ ಓರ್ವ ಕರ್ನಲ್ ಮತ್ತು ಸೇನೆಯ ಓರ್ವ ಮೇಜರ್ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಹುತಾತ್ಮರಾಗಿದ್ದಾರೆ. ಎನ್ಕೌಂಟರ್ನಲ್ಲಿ ಭದ್ರತಾ ಸಿಬ್ಬಂದಿ ಪ್ರಾಣ ತ್ಯಾಗ ಮಾಡಿದ ದಿನದಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದಾರೆ ಎಂದು ಟಿಎಂಸಿ ಟೀಕಿಸಿದೆ.
ಅನಂತ್ನಾಗ್ನ ಕೋಕರ್ನಾಗ್ ಪ್ರದೇಶದಲ್ಲಿ ಭಯೋತ್ಪಾದಕರು ಇದ್ದಾರೆ ಎಂಬ ಮಾಹಿತಿಯ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದೆ. ಆರಂಭದಲ್ಲಿ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದಿತ್ತು. ಈ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು ಭದ್ರತಾ ಪಡೆಗಳು ಸಹ ಪ್ರತಿದಾಳಿ ನಡೆಸಿದೆ. ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭಾರೀ ಗುಂಡಿನ ಚಕಮಕಿ ನಡೆದಿದೆ.
ಭಾರತೀಯ ಸೇನೆಯ ಕರ್ನಲ್ ಮನ್ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋಂಚಕ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಡಿಎಸ್ಪಿ ಹುಮಾಯೂನ್ ಭಟ್ ಅವರು ಭಯೋತ್ಪಾದಕರ ಜೊತೆಗಿನ ಗುಂಡಿನ ಚಕಮಕಿ ವೇಳೆ ಮೃತಪಟ್ಟಿದ್ದಾರೆ.
ಭದ್ರತಾ ಸಿಬ್ಬಂದಿಯ ಸಾವಿಗೆ ಇಡೀ ದೇಶವೇ ಸಂತಾಪ ಸೂಚಿಸಿದೆ. ದೆಹಲಿಯಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಿ20 ಸಭೆಯ ಅಧ್ಯಕ್ಷತೆ ವಹಿಸಿದ ಬಳಿಕ ಬಿಜೆಪಿ ಕಚೇರಿಗೆ ಮೊದಲ ಬಾರಿಗೆ ಭೇಟಿ ಕೊಟ್ಟಾಗ ಅದ್ಧೂರಿ ಸ್ವಾಗತ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರಿನ ಮೇಲೆ ಹೂವಿನ ದಳಗಳನ್ನು ಸುರಿಸಲಾಗಿದೆ. ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಪ್ರಧಾನಿಗೆ ಗುಲಾಬಿ ಹೂವುಗಳನ್ನು ನೀಡಿದರು ಎಂದು ಟಿಎಂಸಿ ಟೀಕಿಸಿದೆ.
ರಾಜ್ಯಸಭಾ ಸಂಸದ ಮತ್ತು ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಸಾಕೇತ್ ಗೋಖಲೆ ಅವರು ಈ ಕುರಿತು ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದು, 2023ರ ಅತ್ಯಂತ ದುರಂತ ಎನ್ಕೌಂಟರ್ಗೆ ದೇಶ ಸಾಕ್ಷಿಯಾಗಿದೆ. ನಮ್ಮ ಕೆಚ್ಚೆದೆಯ ಸೈನಿಕರಾದ ಮೇಜರ್ ಆಶಿಶ್ ಧೋನಾಕ್ ಮತ್ತು ಕರ್ನಲ್ ಮನ್ಪ್ರೀತ್ ಸಿಂಗ್ ಮತ್ತು ಡಿವೈ ಎಸ್ಪಿ ಹುಮಾಯನ್ ಭಟ್ ಹುತಾತ್ಮರಾಗಿರುವಾಗ ಮೋದಿ ನಾಚಿಕೆಯಿಲ್ಲದೆ ಬಿಜೆಪಿ ಕಚೇರಿಯಲ್ಲಿಅದ್ದೂರಿ ಸ್ವಾಗತ ಸ್ವೀಕರಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.
ಸೈನಿಕರ ಶೌರ್ಯಕ್ಕಾಗಿ ರಾಷ್ಟ್ರವು ಅವರಿಗೆ ಶಾಶ್ವತವಾಗಿ ಋಣಿಯಾಗಿದೆ ಮತ್ತು ಕುಟುಂಬದ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಅವರು ನಿನ್ನೆ ಬಿಜೆಪಿ ಕಚೇರಿಯಲ್ಲಿ ಜಿ 20 ಬಳಿಕ ಸಂಭ್ರಮಾಚರಣೆಗೆ ಆಯ್ಕೆ ಮಾಡಿಕೊಂಡಿರುವುದು ಸಂಪೂರ್ಣ ಆಘಾತಕಾರಿ ಸಂಗತಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಾರ್ಯಕ್ರಮವನ್ನು ಮುಂದೂಡಬೇಕಿತ್ತು. ಮೋದಿಯವರು ಕೇವಲ 1 ದಿನಕ್ಕೆ ತಮ್ಮ ಸ್ವಯಂ ಕಾರ್ಯಕ್ರಮ ಮುಂದೂಡಲು ಸಾಧ್ಯವಾಗಲಿಲ್ಲವೇ? ಇಂತಹ ದುರಂತ ಸಂಭವಿಸಿದಾಗ ಬಿಜೆಪಿ ಮೋದಿಯನ್ನು ಈ ರೀತಿ ಸಂಭ್ರಮಾಚರಣೆ ಮಾಡಿ ವೈಭವೀಕರಿಸಬೇಕಿತ್ತೇ? ಎಂದು ಟೀಕಿಸಿದ್ದಾರೆ.
ಇದನ್ನು ಓದಿ: ಮಧ್ಯಪ್ರದೇಶ: ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಶಿಕ್ಷಕನನ್ನು ವಿವಸ್ತ್ರಗೊಳಿಸಿ ಥಳಿಸಿದ ಸ್ಥಳೀಯರು