ಬಾಂಬೆ ಹೈಕೋರ್ಟ್ ಇಂದು ಬುಧವಾರ ವಕೀಲೆ ಮತ್ತು ಪರಿಸರ ಕಾರ್ಯಕರ್ತೆ ನಿಕಿತಾ ಜಾಕೋಬ್ರಿಗೆ ಮೂರು ವಾರಗಳ ಟ್ರಾನ್ಸಿಟ್ (ಬಂಧಿಸಿ ಬೇರೆ ರಾಜ್ಯಕ್ಕೆ ಕರೆದೊಯ್ಯುವುದರಿಂದ) ನಿರೀಕ್ಷಣಾ ಜಾಮೀನು ನೀಡಿತು. ಅವರ ವಿರುದ್ಧ ಗ್ರೆಟಾ ಥನ್ಬರ್ಗ್ ಟೂಲ್ಕಿಟ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು.
ಒಂದು ವೇಳೆ ದೆಹಲಿ ಪೋಲಿಸ್ ಸ್ಪೆಷಲ್ ಸೆಲ್ ದಾಖಲಿಸಿದ ಅಪರಾಧದಲ್ಲಿ ಜಾಕೋಬ್ ಬಂಧಿಸಲ್ಪಟ್ಟರೆ, ಅರ್ಜಿದಾರರನ್ನು (ಜಾಕೋಬ್) 25000 ವೈಯಕ್ತಿಕ ಬಾಂಡ್ಗಳು ಮತ್ತು ಶ್ಯೂರಿಟಿ ಆಧಾರದ ಮೇಲೆ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಕೋರ್ಟ್ ನಿರ್ದೇಶನ ನೀಡಿದೆ.
“ಅರ್ಜಿದಾರರಿಗೆ ಸೂಕ್ತ ಪರಿಹಾರವನ್ನು ಪಡೆಯಲು ಅವರ ಆಯ್ಕೆಯ ಸಮರ್ಥ ನ್ಯಾಯಾಲಯವನ್ನು ಸಂಪರ್ಕಿಸಲು ಅನುವು ಮಾಡಿಕೊಡಲು ಇಂದಿನಿಂದ (ಬುಧವಾರ) ಮೂರು ವಾರಗಳವರೆಗೆ ಈ ರಕ್ಷಣೆಯನ್ನು ನೀಡಲಾಗಿದೆ” ಎಂದು ನ್ಯಾಯಪೀಠ ತಿಳಿಸಿದೆ. ಮಂಗಳವಾರ ಜಾಕೋಬ್ ಅವರ ಮನವಿಯ ಮೇರೆಗೆ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಯುಕೆ ಮೂಲದ ಎನ್ಜಿಒ ‘ಎಕ್ಸ್ಟಿಂಕನ್ ರೆಬೆಲಿಯನ್’ಗೆ ಕೆಲಸ ಮಾಡುವ ನಿಕಿತಾ ಜಾಕೋಬ್ ಮತ್ತು ಶಾಂತನು ಮುಲುಕ್ ವಿರುದ್ಧ ಜಾಮೀನು ರಹಿತ ವಾರಂಟ್ಗಳನ್ನು ಜಾರಿಗೊಳಿಸಿದ್ದ ದೆಹಲಿ ಪೊಲೀಸರು, ರೈತರ ಪ್ರತಿಭಟನೆಯ ಕುರಿತು ಥನ್ಬರ್ಗ್ ಟ್ವೀಟ್ ಮಾಡಿದ ಟೂಲ್ಕಿಟ್ ಅನ್ನು ಜಾಕೊಬ್ ಮತ್ತು ಶಾಂತನು ರಚಿಸಿದ್ದಾರೆ ಎಂದು ಆರೋಪಿಸಿದ್ದರು. ದೇಶದ್ರೋಹಕ್ಕಾಗಿ ಐಪಿಸಿ ಸೆಕ್ಷನ್ಸ್ 124 (ಎ), ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸಲು 153 (ಎ) ಮತ್ತು ಕ್ರಿಮಿನಲ್ ಪಿತೂರಿಗಾಗಿ 120 (ಬಿ) ಅಡಿಯಲ್ಲಿ ಜಾಕೋಬ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಂಗಳವಾರ, ಬಾಂಬೆ ಹೈಕೋರ್ಟ್ನ ಔರಂಗಾಬಾದ್ ನ್ಯಾಯಪೀಠದ ನ್ಯಾಯಮೂರ್ತಿ ವಿಭಾ ವಿ ಕಂಕನ್ವಾಡಿ ಅವರ ಏಕ-ನ್ಯಾಯಾಧೀಶರ ಪೀಠವು, ಮುಲುಕ್ಗೆ 50,000 ರೂ.ಗಳ ವೈಯಕ್ತಿಕ ಬಾಂಡ್ನಲ್ಲಿ 10 ದಿನಗಳ ಟ್ರಾನ್ಸಿಟ್ ನಿರೀಕಷಣಾ ಜಾಮೀನು ನೀಡಿದೆ. ಪರಿಹಾರಕ್ಕಾಗಿ ಸಮರ್ಥ / ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸಲು ಅವಕಾಶ ನೀಡಿದೆ.
ನ್ಯಾಯಮೂರ್ತಿ ಪ್ರಕಾಶ್ ಡಿ ನಾಯಕ್ ಅವರ ಏಕ-ನ್ಯಾಯಾಧೀಶರ ಪೀಠದ ಮುಂದೆ ಮಂಗಳವಾರ ಹಾಜರಾದ ದೆಹಲಿ ಪೊಲೀಸರ ಸೈಬರ್ ಸೆಲ್ ಘಟಕವನ್ನು ಪ್ರತಿನಿಧಿಸಿದ ವಕೀಲ ಹಿತೆನ್ ವೆನೆಗಾಂವ್ಕರ್, ಜಾಕೋಬ್ ಅವರ ಮನವಿಯನ್ನು ಸಮರ್ಥಿಸಿಕೊಳ್ಳುವುದನ್ನು ಪ್ರಶ್ನಿಸಿ, ಅಪರಾಧವನ್ನು ದೆಹಲಿಯಲ್ಲಿ ನೋಂದಾಯಿಸಲಾಗಿದೆ, ಜಾಮೀನು ನೀಡಲು ಬಾಂಬೆ ಹೈಕೋರ್ಟ್ನ ವ್ಯಾಪ್ತಿಯಲ್ಲಿ ಯಾವುದೇ ಕಾರಣವಿಲ್ಲ ಎಂದು ವಾದಿಸಿದ್ದರು.
ಜಾಕೋಬ್ ಪರವಾಗಿ ಹಾಜರಾದ ಹಿರಿಯ ವಕೀಲ ಮಿಹಿರ್ ದೇಸಾಯಿ, ಸುಮಾರು 6-7 ವರ್ಷಗಳಿಂದ ಹೈಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ತನ್ನ ಕಕ್ಷಿದಾರೆ ಜಾಕೋಬ್ ಬಂಧನದ ಸಾಧ್ಯತೆ ಊಹಿಸಿ, ಫೆಬ್ರವರಿ 12 ರಂದು ತಾತ್ಕಾಲಿಕ ಪೂರ್ವ ಬಂಧನ ಜಾಮೀನು ಕೋರಿದ್ದಾರೆ ಎಂದು ವಿವಿರವಾಗಿ ವಾದ ಮಾಡಿ, ಟ್ರಾನ್ಸಿಟ್ ನಿರೀಕ್ಷಣಾ ಜಾಮೀನಿನ ಅಗತ್ಯವನ್ನು ಒತ್ತಿ ಹೇಳಿದ್ದರು.
ಇದನ್ನೂ ಓದಿ: ಆಕೆಯ ಹೆಸರು ‘ದಿಶಾ ರವಿ ಜೋಸೇಫ್’ ಅಲ್ಲ!: ಸುಳ್ಳಿನ ವಿರುದ್ಧ ದಿಶಾ ಸ್ನೇಹಿತರ ಆಕ್ರೋಶ