ರೈತರ ಪ್ರತಿಭಟನೆಯ ಕುರಿತು ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೆಟಾ ಹಂಚಿಕೊಂಡ ಟೂಲ್ಕಿಟ್ ಪ್ರಕರಣದಲ್ಲಿ ಬೆಂಗಳೂರು ಮೂಲದ ದಿಶಾ ರವಿಯನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ದಿಶಾ ರವಿಯ ಕುರಿತು ಬಿಜೆಪಿ ಐಟಿ ಸೆಲ್ ಕೆಲವು ಸುಳ್ಳು ಮಾಹಿತಿಗಳನ್ನು ಹಂಚಿಕೊಳ್ಳುತ್ತಿದೆ. ಇದನ್ನು ಕೆಲವು ಪ್ರಮುಖರೇ ಕುರುಡಾಗಿ ಅನುಸರಿಸುತ್ತಿದ್ದಾರೆ. ಇದರಲ್ಲಿ ದಿಶಾ ಕ್ರಿಶ್ಚಿಯನ್ ಎನ್ನುವ ಸುಳ್ಳೂ ಒಂದು.
ಟ್ವಿಟರ್ನಲ್ಲಿ ನೂರಾರು ಜನರು ದಿಶಾಳ ನಿಜವಾದ ಹೆಸರು, ‘ದಿಶಾ ರವಿ ಜೋಸೆಫ್’ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ ಈ ಪ್ರತಿಪಾದನೆಯನ್ನು ತಿರಸ್ಕರಿಸಿದ ಆಕೆಯ ಕುಟುಂಬ ಮತ್ತು ಸ್ನೇಹಿತರು ಅವಳ ಪೂರ್ಣ ಹೆಸರು ‘ದಿಶಾ ಅನ್ನಪ್ಪ ರವಿ’ ಎಂದು ಸ್ಪಷ್ಟಪಡಿಸಿದ್ದಾರೆ.
ದಿಶಾ ಅವರ ಕೌಟುಂಬಿಕ ವಕೀಲರು ಮತ್ತು ಆಪ್ತ ಸ್ನೇಹಿತರಾದ ಪ್ರಸನ್ನ ಎಂಬುವವರು, “ಅವರ ತಾಯಿಯ ಹೆಸರು ಮಂಜುಳ ನಂಜಯ್ಯ, ತಂದೆಯ ಹೆಸರು ರವಿ. ಅವರು ಕರ್ನಾಟಕದ ತುಮಕೂರು ಜಿಲ್ಲೆಯ ತಿಪಟೂರಿನವರು” ಎಂದು ದಿ ನ್ಯೂಸ್ ಮಿನಿಟ್ಗೆ ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮ ಮನುಜ ನಿಷ್ಠೆ, ಧರ್ಮ ನಿಷ್ಠೆಯ ಬಗ್ಗೆ ಸಂದೇಹವಿದೆ: ಪೇಜಾವರರ ವಿರುದ್ಧ ಭುಗಿಲೆದ್ದ ಆಕ್ರೋಶ
“ದಿಶಾಳ ವಿರುದ್ಧ ಸಂಚು ರೂಪಿಸಲು ಟ್ವಿಟರ್ನಲ್ಲಿ ನಕಲಿ ಮಾಹಿತಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆಕೆ ಯಾವ ಧರ್ಮಕ್ಕೆ ಸೇರಿದವಳಾದರೇನು? ಅದು ಇಲ್ಲಿ ಅಪ್ರಸ್ತುತ. ಅವಳು ಕ್ರಿಶ್ಚಿಯನ್ ಆಗಿರಲಿ ಅಥವಾ ಹಿಂದೂವಾಗಿರಲಿ. ಅದು ಈ ವಿಷಯಕ್ಕೆ ಹೇಗೆ ಸಂಬಂಧಪಡುತ್ತದೆ. ಅವಳು ಪ್ರಕೃತಿ ಪ್ರೇಮಿಯಾಗಿದ್ದು, ಎಲ್ಲಾ ಕಡೆಯಿಂದಲೂ ಅವಳಿಗೆ ಸ್ನೇಹಿತರಿದ್ದಾರೆ. ಅಕೆ ಲಿಂಗಾಯತ ಕುಟುಂಬದವಳಾಗಿದ್ದರೂ ಸಹ ಯಾವುದೇ ಧರ್ಮವನ್ನು ಅನುಸರಿಸಿಲ್ಲ. ದ್ವೇಷ ಹರಡಲು ಬಳಸುವ ಈ ಧಾರ್ಮಿಕ ಗುರುತುಗಳನ್ನು ನಾವು ಇನ್ನೂ ನಿರಾಕರಿಸದಿರುವುದು ದುರದೃಷ್ಟಕರ” ಎಂದು ಅವರು ಹೇಳಿದರು.
ಅಷ್ಟೆ ಅಲ್ಲದೇ ದಿಶಾಳ ಕುಟುಂಬವು ಈ ಕೆಲಸಕ್ಕಾಗಿ ವಿದೇಶದಿಂದ ಹಣ ಪಡೆದುಕೊಂಡಿದೆ ಎಂದೂ ಕೆಲವರು ಆರೋಪಿಸುತ್ತಿದ್ದಾರೆ. ಜೊತೆಗೆ ಆಕೆಯ ಬಗ್ಗೆ ಅಸಹ್ಯಕರವಾದ ಸುಳ್ಳನ್ನು ಹರಿಬಿಡಲಾಗುತ್ತಿದೆ. ಕೆಲವು ಕನ್ನಡದ ಚಾನೆಲ್ಗಳೂ ಕೂಡ ಈ ಸುಳ್ಳು ಮಾಹಿತಿಯನ್ನು ಹರಡುತ್ತಿವೆ. ಆದರೆ ಇದು ಶುದ್ಧ ಸುಳ್ಳು ಎಂದು ಹೇಳಿದರು.
ದಿಶಾ ಅವರ ಸ್ನೇಹಿತರೊಬ್ಬರು ಅಕೆಯ ಧರ್ಮಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದು, “ಅವಳ ಹೆಸರು ದಿಶಾ ಎ ರವಿ. ಈಕೆಯ ಧರ್ಮದ ವಿಷಯ ಈಗ ಯಾಕೆ ಚರ್ಚೆಯಾಗುತ್ತಿದೆ. ಯಾರು ಯಾವ ಧರ್ಮ ಅಥವಾ ಜಾತಿಗೆ ಸೇರಿದ್ದರೇನು. ಆಕೆ ಭಾರತೀಯಳು. ನಾವೆಲ್ಲರೂ ಈ ರಾಷ್ಟ್ರದ ಒಳಿತಿಗಾಗಿ ಮತ್ತು ಮಾನವೀಯತೆಗಾಗಿ ಒಟ್ಟಿಗೆ ಬರುತ್ತಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಿಶಾ ಬಂಧನ: ದೆಹಲಿ ಪೊಲೀಸರಿಗೆ ದೆಹಲಿ ಮಹಿಳಾ ಆಯೋಗದ ನೋಟಿಸ್
ದಿಶಾ ರವಿ ಜೋಸೆಫ್ ಎಂಬುದು ಟ್ವಿಟರ್ ನಲ್ಲಿ ಇಂದು (ಬುಧವಾರ) ಟ್ರೆಂಡಿಂಗ್ ಆಗುತ್ತಿದ್ದು, ಈಕೆ ಕೇರಳದ ಸಿರಿಯನ್ ಕ್ರಿಶ್ಚಿಯನ್ ಎನ್ನುವ ಟ್ವೀಟ್ಗಳು ಹರಿದಾಡುತ್ತಿದೆ. ಜೊತೆಗೆ ದಿಶಾ ಮತ್ತು ನಿಕಿತಾ ಜಾಕೋಬ್ ಅವರನ್ನು ಬಂಧಿಸಲು ದೆಹಲಿಯಿಂದ ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿದೆ. ಬೆಳಿಗ್ಗೆ 10 ಗಂಟೆಯ ಸುಮಾರಿಗೆ 10,000 ಕ್ಕೂ ಹೆಚ್ಚಿನ ಟ್ವೀಟ್ಗಳು ಈ ಸುಳ್ಳನ್ನೇ ಪ್ರತಿಪಾದಿಸುತ್ತಿದ್ದವು.
ಆಕೆಯ ಹೆಸರಿನ ಬಗ್ಗೆ ತಪ್ಪು ಮಾಹಿತಿ ಹೊಂದಿರುವ ಟ್ವೀಟ್ಗಳಲ್ಲಿ 9,000 ಕ್ಕೂ ಹೆಚ್ಚು ಲೈಕ್ಗಳು ಮತ್ತು 3,000 ರಿಟ್ವೀಟ್ಗಳಿವೆ.
ಆಕೆಯ ಬಂಧನದ ನಂತರ, ದಿಶಾ ರವಿ ಅವರೊಂದಿಗೆ ಸಂಪರ್ಕ ಹೊಂದಿದೆಯೆಂದು ಹೇಳಿಕೊಂಡು ಅನೇಕ ನಕಲಿ ಟ್ವಿಟರ್ ಖಾತೆಗಳು ಸಹ ರಚನೆಯಾಗಿವೆ. ಆದರೆ, ದಿಶಾ ಅವರ ಆಪ್ತರು ಆಕೆಯ ಹೆಸರಿನಲ್ಲಿ ಯಾವುದೇ ಟ್ವಿಟ್ಟರ್ ಖಾತೆಯನ್ನು ತೆರೆದಿಲ್ಲ ಮತ್ತು ಟ್ವೀಟ್ಗಳನ್ನೂ ಮಾಡುತ್ತಿಲ್ಲ ಎಂದು ಕುಟುಂಬದವರೆ ದೃಢಪಡಿಸಿದ್ದಾರೆ.
ಇದನ್ನೂ ಓದಿ: ನಮ್ಮ ಪೂಜೆಯ ಎದುರು ಇವರ ‘ರಾಮ ಜಪ’ ಕಾಲು ಭಾಗಕ್ಕೂ ಸಾಲದು; ಇವರದು ಧಾರ್ಮಿಕ…
ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಭಯೋತ್ಪಾದಕರ ಕೈವಾಡವಿದೆ ಮತ್ತು ಖಲೀಸ್ತಾನಿಗಳ ಹಸ್ತಕ್ಷೇಪವಿದೆ ಎಂದು ದೆಹಲಿ ಪೊಲೀಸರು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೆಬ್ರವರಿ 4 ರಂದು ಎಫ್ಐಆರ್ ಕೂಡ ದಾಖಲಾಗಿತ್ತು.
ದಿಶಾ ಹಂಚಿಕೊಂಡಿರುವ ಟೂಲ್ಕಿಟ್ನಲ್ಲಿ, “ರೈತರ ಹೋರಾಟವನ್ನು ತೀವ್ರಗೊಳಿಸಲು ಏನು ಮಾಡಬಹದು? ನಾವಿರುವಲ್ಲಿಂದಲೇ ರೈತ ಹೋರಾಟವನ್ನು ಹೇಗೆ ಬೆಂಬಲಿಸಬಹುದು?” ಎನ್ನುವುದರ ಬಗ್ಗೆ ಕೆಲವು ಮಾಹಿತಿಗಳಿವೆ ಅಷ್ಟೆ. ಆದರೆ ಇದಕ್ಕೆ ಖಲೀಸ್ತಾನದ ನಂಟಿನ ಆರೋಪ ಹೊರಿಸಿ, ಭಯೋತ್ಪಾದಕ ಕೃತ್ಯ ಎಂದು ಬಿಂಬಿಸಿ, ದೇಶದ್ರೋಹ ಪ್ರಕರಣ ದಾಖಲಿಸುವಷ್ಟು ಸರ್ಕಾರದ ನಿದ್ದೆಗೆಡಿಸಿದೆಯೆಂದರೆ ಇದನ್ನು ನಾವು ಯಾವ ದೃಷ್ಟಿಕೋನದಿಂದ ನೋಡಬೇಕು?
ಇದನ್ನೂ ಓದಿ: ಲೀ ಪೆಟ್ರೋಲ್ ದರ ರೂ. 06!, ರಾಮದೇವ್ ಯೋಗ ಭಂಗಿಯಲ್ಲಿ ನೋಡಿದರೆ: ತರೂರ್ ವ್ಯಂಗ್ಯ