ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಹಿರಿಯ ಪತ್ರಕರ್ತ ವಿನೋದ್ ದುವಾ ಅವರನ್ನು ಜುಲೈ 6 ರವರೆಗೆ ಬಂಧಿಸದಂತೆ ಸುಪ್ರೀಂಕೋರ್ಟ್ ಮಧ್ಯಂತರ ರಕ್ಷಣೆ ನೀಡಿದೆ.
ಭಾನುವಾರ ವಿಶೇಷ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಎಂ.ಎ ಶಾಂತನಗೌಡರ್, ನ್ಯಾ.ವಿನೀತ್ ಸರಣ್ ಅವರಿದ್ದ ತ್ರಿಸದಸ್ಯ ಪೀಠ ದುವಾ ಅವರನ್ನು ಬಂಧಿಸಿದಂತೆ ರಕ್ಷಣೆ ನೀಡಿದ್ದು, ಇದರಿಂದ ದುವಾಗೆ ತಾತ್ಕಾಲಿಕ ರಿಲೀಫ್ ದೊರೆತಿದೆ.
ಹಿಮಾಚಲ ಪ್ರದೇಶದ ಪೊಲೀಸರು ದುವಾ ಅವರ ನಿವಾಸಕ್ಕೆ 24 ಗಂಟೆಯೊಳಗೆ ನೋಟಿಸ್ ನೀಡಿ ವಿಚಾರಣೆ ನಡೆಸಬೇಕು ಮತ್ತು ತನಿಖೆ ಆರಂಭಿಸಬೇಕು ಎಂದು ಕೋರ್ಟ್ ಹೇಳಿದೆ.
ವಿಚಾರಣೆ ಸಂದರ್ಭದಲ್ಲಿ ದೈಹಿಕ ಅಂತರದ ನಿಯಮಗಳನ್ನು ಅನುಸರಿಸುವುದು ಕಡ್ಡಾಯ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಆದೇಶ ಬಂದ ನಂತರ ದೇಶದ್ರೋಹ ಪ್ರಕರಣವನ್ನು ರದ್ದುಪಡಿಸುವಂತೆ ದುವಾ ಪರ ವಕೀಲರು ಅರ್ಜಿ ಸಲ್ಲಿಸಿದರು. ಆದರೆ ತನಿಖೆಗೆ ತಡೆ ನೀಡಲು ನ್ಯಾಯಾಲಯ ನಿರಾಕರಿಸಿತು.
ವಿನೋದ್ ದುವಾ ವಿರುದ್ದ 124ಎ ದೇಶದ್ರೋಹ, 268 ಸಾರ್ವಜನಿಕ ಉಪದ್ರವ, 501 ಮಾನಹಾನಿ, 505 ಸಾರ್ವಜನಿಕವಾಗಿ ದುರ್ಬಳಕೆ ಪ್ರಕಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಹಿರಿಯ ಪತ್ರಕರ್ತ ವಿನೋದ್ ದುವಾ ವಿರುದ್ಧ ದೆಹಲಿಯಲ್ಲಿ ಎಫ್ಐಆರ್!