ಸಿಂಹಗಳ ಜೋಡಿಯ ನಾಮಕರಣ ವಿವಾದದ ಬೆನ್ನಲ್ಲಿ ಅಕ್ಬರ್ ಮತ್ತು ಸೀತಾ ಎಂದು ಸಿಂಹಗಳ ಜೋಡಿಗೆ ನಾಮಕರಣವನ್ನು ಮಾಡಿದ್ದ ವಿವಾದಕ್ಕೆ ಸಂಬಂಧಿಸಿ ತ್ರಿಪುರಾ ರಾಜ್ಯ ಸರ್ಕಾರವು, ಮುಖ್ಯ ವನ್ಯಜೀವಿ ವಾರ್ಡನ್ ಪ್ರಬಿನ್ ಲಾಲ್ ಅಗರವಾಲ್ ಅವರನ್ನು ಫೆಬ್ರವರಿ 24 ರಂದು ಅಮಾನತುಗೊಳಿಸಿದ್ದಾರೆ.
ಸಂಭಾವ್ಯ ಧಾರ್ಮಿಕ ವಿವಾದಗಳನ್ನು ಉಂಟುಮಾಡಲು ಅಕ್ಬರ್ ಮತ್ತು ಸೀತೆಯ ಹೆಸರನ್ನು ಸಿಂಹಗಳಿಗೆ ಏಕೆ ಇಡಲಾಗಿದೆ ಎಂದು ಕೋಲ್ಕತ್ತಾ ಹೈಕೋರ್ಟ್ ಕೇಳಿದ ನಂತರ ಈ ಬೆಳವಣಿಗೆ ನಡೆದಿದೆ. ಬಿಜೆಪಿ ಮತ್ತು ಅದರ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಸಮ್ಮಿಶ್ರ ಸರಕಾರ ಅಗರವಾಲ್ ಅವರನ್ನು ಅಮಾನತು ಮಾಡಿದೆ ಎಂದು ದಿ ವೈರ್ ವರದಿ ತಿಳಿಸಿದೆ.
1994ರ ಬ್ಯಾಚ್ನ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರಬಿನ್ ಲಾಲ್ ಅಗರವಾಲ್ ಅವರು ಸಿಂಹಗಳ ಜೋಡಿಯನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸುವ ಮೊದಲು ಜೋಡಿಯ ಹೆಸರನ್ನು ಅಕ್ಬರ್ ಮತ್ತು ಸೀತಾ ಎಂದು ದಾಖಲಿಸಿದ್ದರು. ಅಗರವಾಲ್ ಅವರು ತ್ರಿಪುರಾದ ಮುಖ್ಯ ವನ್ಯಜೀವಿ ವಾರ್ಡನ್ ಆಗಿದ್ದು, ರಾಜ್ಯ ಅರಣ್ಯ ಇಲಾಖೆಯ ಉನ್ನತ ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರು. ಅವರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿದ್ದರು.
ಫೆಬ್ರವರಿ 16ರಂದು ಸ್ಥಳೀಯ ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಸಿಂಹಗಳ ಜೋಡಿಯನ್ನು ಅಕ್ಬರ್ ಮತ್ತು ಸೀತಾ ಎಂದು ಹೆಸರಿಸುವುದರ ಕುರಿತು ಕೋಲ್ಕತ್ತಾ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ವಿಎಚ್ಪಿ ಜಿಲ್ಲಾ ಮುಖ್ಯಸ್ಥ ದುಲಾಲ್ ಚಂದ್ರ ರೇ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ನಾಮಕರಣವು ಹಿಂದೂ ಧರ್ಮದ ಮೇಲಿನ ದಾಳಿ, ಅಕ್ಬರ್ ಎಂಬುದು ಮೊಘಲ್ ಚಕ್ರವರ್ತಿಯ ಹೆಸರು ಮತ್ತು ಸೀತಾ ಹಿಂದೂ ಮಹಾಕಾವ್ಯ ರಾಮಾಯಣದಲ್ಲಿ ಒಂದು ಪಾತ್ರವಾಗಿದೆ, ಇದನ್ನು ಹಿಂದೂ ಧರ್ಮದಲ್ಲಿ ದೇವತೆಯಾಗಿ ಪೂಜಿಸಲಾಗುತ್ತದೆ ಎಂದು ಹೇಳಿದ್ದರು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್ ವಿವಾದವನ್ನು ತಪ್ಪಿಸಬಹುದಿತ್ತು ಎಂದು ಹೇಳಿದೆ.
ವರದಿಯ ಪ್ರಕಾರ, ತ್ರಿಪುರಾ ಸರ್ಕಾರವು ಅಗರವಾಲ್ ಅವರಿಂದ ಸ್ಪಷ್ಟೀಕರಣವನ್ನು ಕೇಳಿದೆ ಮತ್ತು ಅವರು ಜೋಡಿಗೆ ಅಕ್ಬರ್ ಮತ್ತು ಸೀತಾ ಎಂದು ಹೆಸರಿಸಿರುವುದನ್ನು ನಿರಾಕರಿಸಿದ್ದಾರೆ. ಆದರೆ ತ್ರಿಪುರಾದಲ್ಲಿನ ವನ್ಯಜೀವಿ ಅಧಿಕಾರಿಗಳು ಸಿಂಹದ ಜೋಡಿಯ ಹೆಸರುಗಳನ್ನು ಬದಲಾಯಿಸಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ.
ಇದನ್ನು ಓದಿ: ಅಕ್ಬರ್-ಸೀತಾ ಸಿಂಹಗಳ ಹೆಸರು ಬದಲಿಸಲು ಹೈಕೋರ್ಟ್ ಸೂಚನೆ