ಟಿಆರ್ಪಿ ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಇಂದು ಪ್ರಸಾರ ವೀಕ್ಷಕ ಸಂಶೋಧನಾ ಮಂಡಳಿಯ (BARC) ಮಾಜಿ ಮುಖ್ಯ ನಿರ್ವಹಣಾಧಿಕಾರಿ ಪಾರ್ಥೋ ದಾಸ್ಗುಪ್ತಾ ಅವರನ್ನು ಬಂಧಿಸಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 15 ಜನರನ್ನು ಬಂಧಿಸಲಾಗಿದೆ.
ಇವರನ್ನು ಪುಣೆ ಜಿಲ್ಲೆಯ ರಾಜ್ಗಡ್ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಅಪರಾಧ ಗುಪ್ತಚರ ಘಟಕ (ಸಿಐಯು) ಬಂಧಿಸಿದ್ದು, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಹಿಂದೆ BARC ನ ಮತ್ತೋರ್ವ ಮಾಜಿ ಮುಖ್ಯಸ್ಥ ರೊಮಿಲ್ ರಾಮ್ಗರ್ಹಿಯಾ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಟಿಆರ್ಪಿ ಹಗರಣ: BARC ನ ಮಾಜಿ ಮುಖ್ಯ ನಿರ್ವಹಣಾಧಿಕಾರಿ ರೊಮಿಲ್ ರಾಮ್ಗರ್ಹಿಯಾ ಬಂಧನ
ಇತ್ತೀಚೆಗೆ ರಿಪಬ್ಲಿಕ್ ಮೀಡಿಯಾ ನೆಟ್ವರ್ಕ್ನ ಸಿಇಒ ವಿಕಾಸ್ ಖಾನ್ಚಂದಾನಿರನ್ನು ಬಂಧಿಸಲಾಗಿತ್ತು. ಆದರೆ ಅವರು ತಕ್ಷಣವೇ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು.
ಕೆಲವು ವೀಕ್ಷಕರು ರಿಪಬ್ಲಿಕ್ ಟಿವಿಯನ್ನು ನೋಡದಿದ್ದರೂ ಸಹ ಅದನ್ನು ನೋಡುವಂತೆ ಮಾಡಲು ಟಿವಿ ವೀಕ್ಷಕರಿಗೆ ಹಣ ನೀಡಲಾಗಿದೆ ಎಂಬುದಕ್ಕೆ ಸಾಕ್ಷ್ಯ ದೊರಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಟಿಆರ್ಪಿ ಹಗರಣದ ಬಗ್ಗೆ ಆರಂಭಿಕ ತನಿಖೆಯಲ್ಲಿ ಎರಡು ಸ್ಥಳೀಯ ಫಕ್ತ್ ಮರಾಠಿ ಮತ್ತು ಬಾಕ್ಸ್ ಸಿನೆಮಾ ಚಾನೆಲ್ಗಳನ್ನು ಹೆಸರಿಸಲಾಗಿದೆ.
ಇದನ್ನೂ ಓದಿ: Explainer: ಏನಿದು ಟಿಆರ್ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?
ರಿಪಬ್ಲಿಕ್ ಟಿವಿಯ ವೀಕ್ಷಕರ ಸಂಖ್ಯೆ ಹೆಚ್ಚಿಸಲು ಬೇಕಾಗಿ ಆಯ್ದ ಕುಟುಂಬಗಳಿಗೆ ಪ್ರತಿ ತಿಂಗಳು 15 ಲಕ್ಷ ರೂ. ಪಾವತಿಸಲಾಗುತ್ತಿತ್ತು ಎಂದು ಥಾಣೆ ಮೂಲದ ಕೇಬಲ್ ವಿತರಕ ಸಂಸ್ಥೆಯಾದ ಕ್ರಿಸ್ಟಲ್ ಬ್ರಾಡ್ಕಾಸ್ಟ್ ಮಾಲಕ ಆಶಿಶ್ ಚೌಧರಿ ಒಪ್ಪಿಕೊಂಡಿದ್ದಾಗಿ ಟಿಆರ್ಪಿ ಹಗರಣದ ಬಗ್ಗೆ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ತಿಳಿಸಿತ್ತು.
ಆರೋಪಿಯು ತಾನು ಹವಾಲಾ ಆಪರೇಟರ್ಗಳಿಂದ ಹಣ ಸ್ವೀಕರಿಸಿದ್ದಾಗಿ ಮತ್ತು ಈ ಬಗ್ಗೆ ತಪ್ಪೊಪ್ಪಿಗೆ ಸಾಕ್ಷಿಯಾಗಲು ಒಪ್ಪಿಕೊಂಡಿದ್ದಾಗಿಯೂ ಪೊಲೀಸರು ತಿಳಿಸಿದ್ದಾರೆ. ಮ್ಯಾಕ್ಸ್ಮೀಡಿಯಾ ಎಂಬ ಮಾರಾಟ ಸಂಸ್ಥೆಯ ಅಭಿಷೇಕ್ ಕೊಲವಾಡೆ ಮತ್ತು ಆಶಿಶ್ ಚೌಧರಿಯ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಕೋರಿ ಅಪರಾಧ ವಿಭಾಗ ಸಲ್ಲಿಸಿದ ಅರ್ಜಿಯಲ್ಲಿ ಈ ವಿಚಾರವನ್ನು ಪೊಲೀಸರು ಬಹಿರಂಗಪಡಿಸಿದ್ದರು.
ಇದನ್ನೂ ಓದಿ: TRP ಹಗರಣ: ರಿಪಬ್ಲಿಕ್ ಟಿವಿ ಹಣ ನೀಡಿರುವುದನ್ನು ಒಪ್ಪಿಕೊಂಡ ವೀಕ್ಷಕರು