ಆರ್ಎಸ್ಎಸ್ ಮುಖ್ಯಸ್ಥರಾಗಿದ್ದ ಎಂ.ಎಸ್.ಗೋಲ್ವಾಲ್ಕರ್ ಹೇಳಿದ್ದಾರೆ ಎನ್ನಲಾದ ಹೇಳಿಕೆಯ ಪೇಪರ್ ಕಟಿಂಗ್ನ್ನು ಟ್ವೀಟ್ ಮಾಡಿದ್ದ ಕಾರಣಕ್ಕೆ ಇದೀಗ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರ್ಎಸ್ಎಸ್ ಕಾರ್ಯಕರ್ತ ಹಾಗೂ ವಕೀಲ ರಾಜೇಶ ಜೋಶಿ ಎಂಬುವವರು, ದಿಗ್ವಿಜಯ್ ಸಿಂಗ್ ವಿರುದ್ಧ ದೂರು ನೀಡಿದ್ದು, ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತುವುದು, ಮಾನಹಾನಿ, ಸಾರ್ವಜನಿಕ ಸ್ಥಳ ದುರ್ಬಳಕೆ ಅರೋಪಗಳ ಮೇಲೆ ಪ್ರಕರಣ ದಾಖಲಾಗಿದೆ.
ದಿಗ್ವಿಜಯ್ ಸಿಂಗ್ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) 153 ಎ, 469, 500 ಮತ್ತು 505 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರು ಗೋಲ್ವಾಲ್ಕರ್ ವಿರುದ್ಧದ ಹೇಳಿಕೆಯ ಟ್ವಿಟ್ ಮಾಡಿದ್ದಾರೆ. ಇದರಿಂದ ದಲಿತರು, ಹಿಂದುಳಿದ ವರ್ಗ, ಮುಸ್ಲಿಂ ಹಾಗೂ ಹಿಂದೂಗಳ ನಡುವೆ ಪರಸ್ಪರ ದ್ವೇಷ ಭಾವನೆ ಮೂಡಲಿದೆ. ಜತೆಗೆ ಹಿಂದೂಗಳ ಭಾವನೆಗೆ ಮತ್ತು ಅರ್ಎಸ್ಎಸ್ನ ಕಾರ್ಯಕರ್ತರ ನಂಬಿಕೆಗಳಿಗೆ ಧಕ್ಕೆ ತಂದಿದೆ ಎಂದು ಜೋಶಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರು ಶನಿವಾರ ಪೋಸ್ಟರ್ ಒಂದನ್ನು ಟ್ವೀಟ್ ಮಾಡಿದ್ದು, ”ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರು ಮತ್ತು ರಾಷ್ಟ್ರೀಯ ನೀರು, ಅರಣ್ಯ ಮತ್ತು ನೆಲದ ಮೇಲಿನ ಗುರು ಗೋಲ್ವಾಲ್ಕರ್ ಜಿ ಅವರ ಚಿಂತನೆಗಳು ಹೀಗಿದ್ದವು” ಎಂದು ಶೀರ್ಷಿಕೆ ನೀಡಿದ್ದಾರೆ.
गुरु गोलवलकर जी के दलितों पिछड़ों और मुसलमानों के लिए व राष्ट्रीय जल जंगल व ज़मीन पर अधिकार पर क्या विचार थे अवश्य जानिए। @INCIndia @INCMP pic.twitter.com/dIYLrGUHQ3
— digvijaya singh (@digvijaya_28) July 7, 2023
”ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರಿಗೆ ಸಮಾನವಾದ ಹಕ್ಕುಗಳನ್ನು ನೀಡುವುದಕ್ಕಿಂತ ಬ್ರಿಟಿಷ್ ಆಳ್ವಿಕೆಯಲ್ಲಿ ಗುಲಾಮನಾಗಿ ನಾನು ಬದುಕಲು ಬಯಸುತ್ತೇನೆ” ಎಂದಿರುವ ಗೋಲ್ವಾಲ್ಕರ್ ಹೇಳಿಕೆಯನ್ನು ಟ್ವೀಟ್ನಲ್ಲಿ ಉಲ್ಲೇಖಿಸಿದ್ದಾರೆ.
ದಿಗ್ವಿಜಯ್ ಸಿಂಗ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಆರ್ಎಸ್ಎಸ್ ಪ್ರಚಾರ ವಿಭಾಗದ ಮುಖ್ಯಸ್ಥ ಸುನೀಲ್ ಅಂಬೇಕರ್, ”ಗೋಲ್ವಾಲ್ಕರ್ ಗುರೂಜಿ ಅವರ ದೃಷ್ಟಿಯಲ್ಲಿ, ಈ ಟ್ವೀಟ್ ವಾಸ್ತವವಲ್ಲ ಮತ್ತು ಸಾಮಾಜಿಕ ಅಸಂಗತತೆಯನ್ನು ಉಂಟುಮಾಡುತ್ತದೆ. ಸುಳ್ಳು ಫೋಟೋಶಾಪ್ ಚಿತ್ರವನ್ನು ಹಾಕಲಾಗಿದೆ. ಸಂಘದ ವರ್ಚಸ್ಸಿಗೆ ಕಳಂಕ ತರುವ ಗುರಿ ಇದೆ. ಗುರೂಜಿ ಅಂತಹ ಮಾತನ್ನು ಎಂದಿಗೂ ಹೇಳಲಿಲ್ಲ. ಅವರ ಇಡೀ ಜೀವನವು ಸಾಮಾಜಿಕ ತಾರತಮ್ಯವನ್ನು ಕೊನೆಗೊಳಿಸುವಲ್ಲಿ ತೊಡಗಿಸಿಕೊಂಡಿದೆ” ಎಂದಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ವಕೀಲ ರಾಜೇಶ್ ಜೋಶಿ ಅವರು ಎಫ್ಐಆರ್ ದಾಖಲಿಸಿದ್ದು, ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡಲು ಸಿಂಗ್ ಉದ್ದೇಶಪೂರ್ವಕವಾಗಿ ಗೋಲ್ವಾಲ್ಕರ್ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗುವುದೇ RSS ಶಾಖೆಯ ನಿತ್ಯ ಪಾಠವೇ?: ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ