ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯಲ್ಲಿ ಎಥೆನಾಲ್ ಕಂಪೆನಿ ವಿರುದ್ಧ ಗ್ರಾಮಸ್ಥರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ್ದು, ಈ ವೇಳೆ ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಮಾರಿಕಲ್ ಮಂಡಲದ ಚಿತ್ತನೂರು ಗ್ರಾಮದಲ್ಲಿ ಇರುವ ಎಥೆನಾಲ್ ಸ್ಥಾವರದಿಂದ ಹೊರಹಾಕುವ ಮಾಲಿನ್ಯಕಾರಕಗಳನ್ನು ಟ್ಯಾಂಕರ್ ಸಾಗಿಸುತ್ತಿದ್ದು, ತ್ಯಾಜ್ಯವನ್ನು ತಮ್ಮ ಪ್ರದೇಶದಲ್ಲಿ ಸುರಿದು ಮಾಲಿನ್ಯಗೊಳಿಸುತ್ತಿದೆ ಎಂದು ಹಲವಾರು ಗ್ರಾಮಸ್ಥರು ಟ್ಯಾಂಕರ್ ನಿಲ್ಲಿಸಿ ರಸ್ತೆಯಲ್ಲಿ ಧರಣಿ ನಡೆಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಲಿದೆ ಎಂದು ಜಿಲ್ಲಾಧಿಕಾರಿಗಳು ಸ್ಥಳೀಯ ನಿವಾಸಿಗಳಿಗೆ ಭರವಸೆ ನೀಡಿದ್ದರು. ಪ್ರತಿಭಟನಾಕಾರರ ಜೊತೆ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಮಾತುಕತೆ ನಡೆಸುತ್ತಿದ್ದರು.
ಆದರೆ ಈ ವೇಳೆ ಕೆಲವು ಕಿಡಿಗೇಡಿಗಳು ಅಧಿಕಾರಿಗಳ ಮೇಲೆ ಕಲ್ಲು ಎಸೆಯಲು ಪ್ರಾರಂಭಿಸಿದ್ದಾರೆ. ಕೆಲ ಪ್ರತಿಭಟನಕಾರರು ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿ ಹಾನಿಗೊಳಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ತಕ್ಷಣ ಪೊಲೀಸರು ಗ್ರಾಮಸ್ಥರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದ್ದಾರೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ನಾವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಂಡಿದ್ದೇವೆ. ಕಲ್ಲು ತೂರಾಟದಲ್ಲಿ ಓರ್ವ ಸರ್ಕಲ್ ಇನ್ಸ್ಪೆಕ್ಟರ್ ಮತ್ತು ಸಬ್ ಇನ್ಸ್ಪೆಕ್ಟರ್ಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಇದನ್ನು ಓದಿ: ಜೆಡಿಎಸ್ ಜೊತೆ ಸಂಬಂಧ ಕೊನೆಗೊಳಿಸಿ ಸ್ವತಂತ್ರವಾಗಿ ಇರುವುದಾಗಿ ಹೇಳಿದ ಕೇರಳ ಜೆಡಿಎಸ್ ಘಟಕ