ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಸರ್ಕಾರಿ ಯೋಜನೆಗಳನ್ನು ಪ್ರಚಾರ ಪಡಿಸಲು ಸರಕಾರಿ ನೌಕರರನ್ನು ಮತ್ತು ಸಶಸ್ತ್ರ ಪಡೆಗಳಿಗೆ ಸೂಚಿಸುವ ಎರಡು ಆದೇಶಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅ.18 ರ ಸರಕಾರದ ಆದೇಶವನ್ನು ಉಲ್ಲೇಖಿಸಿದ್ದು, ಇದರಲ್ಲಿ ಬಿಜೆಪಿ ಸರಕಾರದ 9 ವರ್ಷಗಳ ಸಾಧನೆಗಳನ್ನು ಪ್ರಚಾರ ಮಾಡಲು ಜಂಟಿ ಕಾರ್ಯದರ್ಶಿ, ನಿರ್ದೇಶಕ ಮತ್ತು ಉಪ ಕಾರ್ಯದರ್ಶಿ ಶ್ರೇಣಿಯ ಹಿರಿಯ ಅಧಿಕಾರಿಗಳನ್ನು ರಥ ಪ್ರಭಾರಿಗಳು ಆಗಿ ಕಾರ್ಯನಿರ್ವಹಿಸಲು ಕೇಂದ್ರ ಸೂಚಿಸಿದೆ ಎಂದು ಹೇಳಲಾಗಿದೆ.
ಈ ಆದೇಶವು ಕೇಂದ್ರ ನಾಗರಿಕ ಸೇವೆಗಳ (ನಡತೆ) ನಿಯಮಗಳು 1964ನ್ನು ಉಲ್ಲಂಘಿಸಿದೆ ಎಂದು ಖರ್ಗೆ ಬರೆದಿದ್ದಾರೆ. ಯಾವುದೇ ಸರ್ಕಾರಿ ನೌಕರರು ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಬಾರದು ಎಂದು ನಿರ್ದೇಶಿಸುತ್ತದೆ. ಸರಕಾರದ ಆದೇಶವು ಇದರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಖರ್ಗೆ ಹೇಳಿದ್ದಾರೆ.
ಮೋದಿ ಆಡಳಿತದ ಪ್ರಚಾರಕ್ಕಾಗಿ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ಅಧ್ಯಕ್ಷರು, ತಮ್ಮ ಪತ್ರದಲ್ಲಿ ಅ.9 ರಂದು ರಕ್ಷಣಾ ಸಚಿವಾಲಯ ಹೊರಡಿಸಿದ ಮತ್ತೊಂದು ಆದೇಶವನ್ನು ಉಲ್ಲೇಖಿಸಿದ್ದಾರೆ. ಸೈನಿಕರು ತಮ್ಮ ವಾರ್ಷಿಕ ರಜೆಯ ಸಮಯದಲ್ಲಿ ಸರ್ಕಾರಿ ಯೋಜನೆಗಳನ್ನು ಪ್ರಚಾರ ಮಾಡುವಂತೆ ಅದರಲ್ಲಿ ನಿರ್ದೇಶಿಸಲಾಗಿತ್ತು.
ಪ್ರತಿಯೊಬ್ಬ ಜವಾನನ ನಿಷ್ಠೆ, ರಾಷ್ಟ್ರ ಮತ್ತು ಸಂವಿಧಾನಕ್ಕೆ ಇದೆ. ನಮ್ಮ ಸೈನಿಕರನ್ನು ಸರ್ಕಾರದ ಯೋಜನೆಗಳ ಮಾರ್ಕೆಟಿಂಗ್ ಏಜೆಂಟ್ಗಳಾಗುವಂತೆ ಒತ್ತಾಯಿಸುವುದು ಸಶಸ್ತ್ರ ಪಡೆಗಳ ರಾಜಕೀಕರಣಕ್ಕೆ ತೆಗೆದುಕೊಂಡ ಅಪಾಯಕಾರಿ ಹೆಜ್ಜೆಯಾಗಿದೆ ಎಂದು ಖರ್ಗೆ ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದರೆ.
ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಆದೇಶಗಳನ್ನು ಸಮರ್ಥಿಸಿಕೊಂಡಿದ್ದು, ಸರಕಾರದ ಯೋಜನೆಗಳನ್ನು ತಳಮಟ್ಟಕ್ಕೆ ತಲುಪಿಸುವುದು ಆಡಳಿತದ ಮೂಲ ತತ್ವವಾಗಿದೆ ಎಂದು ಹೇಳಿದರು.
ಇದನ್ನು ಓದಿ: ಜೆಡಿಎಸ್ ಜೊತೆ ಸಂಬಂಧ ಕೊನೆಗೊಳಿಸಿ ಸ್ವತಂತ್ರವಾಗಿ ಇರುವುದಾಗಿ ಹೇಳಿದ ಕೇರಳ ಜೆಡಿಎಸ್ ಘಟಕ