ಸನಾತನ ಧರ್ಮದ ಕುರಿತಾದ ಹೇಳಿಕೆಗೆ ಅಯೋಧ್ಯೆ ಸ್ವಾಮೀಜಿ ಜೀವ ಬೆದರಿಕೆ ಹಾಕಿದ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡಿನ ಕ್ರೀಡಾ ಸಚಿವ ಮತ್ತು ಸಿಎಂ ಸ್ಟಾಲಿನ್ ಪುತ್ರ ಉದಯ್ ನಿಧಿ ಸ್ಟಾಲಿನ್, ತಮಿಳುನಾಡಿಗಾಗಿ ತನ್ನ ಪ್ರಾಣವನ್ನು ಪಣ ಇಟ್ಟಿರುವ ವ್ಯಕ್ತಿಯ ಮೊಮ್ಮಗ ನಾನು ಮತ್ತು ಈ ಬೆದರಿಕೆಗಳಿಗೆ ನಾನು ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದ ವಿವಾದಾತ್ಮಕ ಸ್ವಾಮೀಜಿ ಪರಮಹಂಸ ಆಚಾರ್ಯ, ಉದಯ್ ನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ಹೇಳಿಕೆ ಕೊಟ್ಟಿದ್ದಕ್ಕೆ ಅವರ ತಲೆಗೆ 10 ಕೋಟಿ ಬಹುಮಾನವನ್ನು ಘೋಷಿಸಿದ್ದರು. ಸ್ಟಾಲಿನ್ ಶಿರಚ್ಛೇದ ಮಾಡಿ ತಲೆ ತಂದು ಕೊಡುವವರಿಗೆ 10 ಕೋಟಿ ಬಹುಮಾನ ನೀಡುತ್ತೇನೆ. ಯಾರೂ ಸ್ಟಾಲಿನ್ನನ್ನು ಕೊಲ್ಲುವ ಧೈರ್ಯ ಮಾಡದಿದ್ದರೆ ನಾನೇ ಆತನನ್ನು ಪತ್ತೆ ಮಾಡಿ ಹತ್ಯೆ ಮಾಡುತ್ತೇನೆ ಎಂದು ತಪಸ್ವಿ ಚಾವ್ನಿ ದೇವಸ್ಥಾನದ ಪ್ರಧಾನ ಅರ್ಚಕ ಪರಮಹಂಸ ಆಚಾರ್ಯ ಹೇಳಿದ್ದರು.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಉತ್ತರ ಪ್ರದೇಶದಲ್ಲಿ ಪರಮಹಂಸ ಆಚಾರ್ಯ ಅವರು ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕಾಗಿ ನನ್ನ ತಲೆ ಬೋಳಿಸಲು 10 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ನನ್ನ ತಲೆ ಬಾಚಲು 10 ರೂಪಾಯಿ ಬಾಚಣಿಗೆ ಸಾಕು ಎಂದು ಹೇಳಿದ್ದಾರೆ.
ಬೆದರಿಕೆಗಳು ನಮಗೇನು ಹೊಸತಲ್ಲ, ನಾವು ಇದಕ್ಕೆಲ್ಲ ಬೆದರುವವರಲ್ಲ, ನಾನು ತಮಿಳುನಾಡಿಗಾಗಿ ತನ್ನ ತಲೆಯನ್ನು ರೈಲ್ವೇ ಟ್ರಾಕ್ಗೆ ಇಟ್ಟ ಕಲಾವಿದನ ಮೊಮ್ಮಗ. ಕರುಣಾನಿಧಿ ತಮಿಳುನಾಡಿನಲ್ಲಿ ಐದು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ನಡೆಸಿದ್ದು, ಪೆರಿಯಾರ್ ಅವರು ಆರಂಭಿಸಿದ ಬ್ರಾಹ್ಮಣ ವಿರೋಧಿ ದ್ರಾವಿಡ ಚಳವಳಿಯನ್ನು ಮುನ್ನಡೆಸಿದ್ದರು ಎಂದು ಹೇಳಿದ್ದಾರೆ.
1953ರಲ್ಲಿ ತಮಿಳುನಾಡಿನ ಗ್ರಾಮವೊಂದಕ್ಕೆ ದಾಲ್ಮಿಯಾಸ್ ಕುಟುಂಬದ ಹೆಸರನ್ನು ಮರುನಾಮಕರಣ ಮಾಡುವುದನ್ನು ವಿರೋಧಿಸಿ ಕರುಣಾನಿಧಿ ನೇತೃತ್ವದಲ್ಲಿ ಡಿಎಂಕೆ ಕಾರ್ಯಕರ್ತರು ರೈಲ್ವೇ ಹಳಿಗಳ ಮೇಲೆ ಮಲಗಿ ಪ್ರತಿಭಟನೆಯನ್ನು ನಡೆಸಿದ್ದರು.
ಚೆನ್ನೈನಲ್ಲಿ ನಡೆದ ಲೇಖಕರ ಸಮಾವೇಶದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ. ಅದು ಮಲೇರಿಯಾ ಮತ್ತು ಡೆಂಗ್ಯೂ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು.
ಸನಾತನ ಕಲ್ಪನೆಯು ಜಾತಿ ಮತ್ತು ಲಿಂಗದ ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ ಮತ್ತು ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು.ಸನಾತನ ಧರ್ಮವನ್ನು ಕಿತ್ತುಹಾಕುವುದು ಮಾನವೀಯತೆ ಮತ್ತು ಮಾನವ ಸಮಾನತೆಯನ್ನು ಎತ್ತಿಹಿಡಿಯುತ್ತದೆ. ನಾನು ಮಾತನಾಡುವ ಪ್ರತಿಯೊಂದು ಮಾತಿಗೂ ದೃಢವಾಗಿ ನಿಲ್ಲುತ್ತೇನೆ. ಸನಾತನ ಧರ್ಮದಿಂದ ಬಳಲುತ್ತಿರುವ, ತುಳಿತಕ್ಕೊಳಗಾದವರ ಪರವಾಗಿ ಮಾತನಾಡಿದ್ದೇನೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದರು.
ಇದನ್ನು ಓದಿ:‘ಉದಯನಿಧಿ ಸ್ಟಾಲಿನ್ ತಲೆ ಕಡಿದವರಿಗೆ 10 ಕೋಟಿ’: ಅಯೋಧ್ಯೆಯ ಸ್ವಾಮೀಜಿಯಿಂದ ಬೆದರಿಕೆ