Homeಅಂಕಣಗಳುಟ್ರಾನ್ಸ್‌ಜೆಂಡರ್ ಸಮುದಾಯದ ಅರಿವಿನ ಲೋಕ ವಿಸ್ತರಿಸುತ್ತಿರುವ ಉಮಾ

ಟ್ರಾನ್ಸ್‌ಜೆಂಡರ್ ಸಮುದಾಯದ ಅರಿವಿನ ಲೋಕ ವಿಸ್ತರಿಸುತ್ತಿರುವ ಉಮಾ

- Advertisement -
- Advertisement -

ಎಲೆಮರೆ – 16

ಇದೀಗ ಟ್ರಾನ್ಸ್‌ಜೆಂಡರ್ ಸಮುದಾಯ ಹಲವು ಕ್ಷೇತ್ರಗಳಲ್ಲಿ ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಿದೆ. ಈ ಸಮುದಾಯಕ್ಕೆ ಶಾಪವಾಗಿದ್ದ ಕಾಯ್ದೆ ಕಾನೂನುಗಳ ವಿರುದ್ಧ ಹೋರಾಟಕ್ಕೆ ಗೆಲುವು ಸಿಗುತ್ತಿದೆ. ಇಂತಹ ಹೋರಾಟ ಚಳವಳಿಯಲ್ಲಿ ಟ್ರಾನ್ಸ್‌ಜೆಂಡರ್ ಕಮುನಿಟಿಯ ಅನೇಕರು ಶ್ರಮಿಸುತ್ತಿದ್ದಾರೆ. ಆರಂಭದಿಂದಲೂ ಕರ್ನಾಟಕದಲ್ಲಿ ಸಂಗಮ ಸಂಸ್ಥೆಯ ಮನೋಹರ್ ಇಂತಹ ವಾತಾವರಣ ರೂಪಿಸುತ್ತಿದ್ದಾರೆ. ಈ ಸಂಸ್ಥೆಯಲ್ಲಿ ಕೆಲಸ ಮಾಡಿ ಜಾಗೃತರಾದ ಟ್ರಾನ್ಸ್‍ಜೆಂಡರ್ ಸಮುದಾಯದ ಸದಸ್ಯರು ಇದೀಗ ಸ್ವತಂತ್ರವಾದ ಸಂಘಟನೆಗಳೊಂದಿಗೆ ಸಮುದಾಯಕ್ಕಾಗಿ ದುಡಿಯುತ್ತಿದ್ದಾರೆ.

ಇಂಥವರಲ್ಲಿ ಎದ್ದು ಕಾಣುವ ಹೆಸರು ಅಕ್ಕೈ ಪದ್ಮಶಾಲಿ, ಚಾಂದಿನಿ, ಮಲ್ಲಪ್ಪ ಮುಂತಾದವರನ್ನು ಒಳಗೊಂಡಂತೆ ಸಮರ, ಪಯಣ, ಒಂದೆಡೆ, ಕರ್ನಾಟಕ ಸೆಕ್ಷುವಲ್ ಮೈನಾರಿಟೀಸ್ ಫೋರಂ (ಕೆ.ಎಸ್.ಎಮ್.ಎಫ್) ಮುಂತಾದ ಸಂಘಟನೆಗಳನ್ನು ಹೆಸರಿಸಬಹುದು. ಈ ಸಂಘಟನೆಗಳ ಜತೆ ಜತೆ ಎಲೆಮರೆಯಂತೆ ಕೆಲಸ ಮಾಡುವ ಉಮಾ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಟ್ರಾನ್ಸ್ ಜೆಂಡರ್ ಕಮುನಿಟಿಯ ಹಕ್ಕೊತ್ತಾಯ ಮತ್ತು ಅವರ ಅಭಿವೃದ್ಧಿಯ ಬಗ್ಗೆ ದೂರದೃಷ್ಠಿಯ ವಿಷನ್ ಹೊಂದಿದ ಉಮಾ ಸಮುದಾಯದ ಜೊತೆಗಿದ್ದೂ, ತನ್ನದೇ ಆದ ಗುರುತು ಕಾಯ್ದುಕೊಂಡಿದ್ದಾರೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ಸಮೀಪದ ದೇವಿಪಾಳ್ಯ ಎಂಬ ಚಿಕ್ಕ ಹಳ್ಳಿ. ಈ ಹಳ್ಳಿಯಲ್ಲಿ ಇದ್ದ ಸ್ವಲ್ಪ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದ ಪುಟ್ಟ ಕುಟುಂಬ. ಈ ಕುಟುಂಬದಲ್ಲಿ ಮೂರು ಗಂಡು ಮಕ್ಕಳು. ಉಮೇಶ್ ಮೂರನೆಯವ. ತಾಯಿ ಬಾಲ್ಯದಲ್ಲಿ ಉದ್ದನೆ ಕೂದಲಿದ್ದ ಉಮೇಶನಿಗೆ ಜಡೆ ಹಾಕಿ ಹೂಮುಡಿಸಿ ಶಾಲೆಗೆ ಕಳಿಸುತ್ತಿದ್ದಳು. ಆದು ಮಗನಿಗೂ ಖುಷಿ ತಾಯಿಗೂ ಖುಷಿ. ಶಾಲೆಯಲ್ಲಿ ಉಮೇಶ್ ಹುಡುಗಿಯರೊಂದಿಗೆ ಇರತೊಡಗಿ ಗಂಡು ಹುಡುಗರು ಕಂಡರೆ ತುಸು ನಾಚುವ ಸ್ವಭಾನ ನಿಧಾನಕ್ಕೆ ಗರಿಗಟ್ಟಿತು. ಹೀಗೆ ಬಾಲಕನೊಳಗಿನ ಹೆಣ್ಣಿನ ಮೊಳಕೆ ಅಮ್ಮನನ್ನು ಹೊರತುಪಡಿಸಿ ಎಲ್ಲರಿಂದಲೂ ತಿರಸ್ಕಾರ, ಅವಮಾನಕ್ಕೆ ಕಾರಣವಾಯಿತು. `ನಾನೇಕೆ ಹೀಗೆ’ ಎನ್ನುವ ಪ್ರಶ್ನೆ ತೀವ್ರವಾಗಿ ಕಾಡಿ ಆತ್ಮಹತ್ಯೆಯ ತನಕ ಕರೆದೊಯ್ಯಿತು. ಈ ರೂಪಾಂತರವೊಂದು ನೋವಿನ ಕಥನ.

ಅಮ್ಮನ ಜತೆ ಬೆಂಗಳೂರಿನ ಸಂಬಂಧಿಕರ ಮನೆಗೆ ಬಂದಾಗ, ಬಸ್‍ಸ್ಟಾಂಡ್‍ನಲ್ಲಿ ತನ್ನಂಥಹದೇ ಭಾವನೆಗಳಿರುವವರನ್ನು ನೋಡಿ ಉಮೇಶ್ ಖುಷಿಯಾಗುತ್ತಾನೆ. ಅರೆ ನಾನು ಅವರ ಹಾಗೆ ಇರಬಹುದಲ್ಲವೇ? ಎನ್ನುವ ಯೋಚನೆ ಬದುಕುವ ಬರವಸೆ ಮೂಡಿಸುತ್ತದೆ. ಉಮೇಶ್ ಕೆಲವರನ್ನು ಮಾತಾಡಿಸಿ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾನೆ. ಇದರಿಂದಾಗಿ ಅಮ್ಮನ ಜತೆ ಊರಿಗೆ ಹೋದರೂ, ಮರಳಿ ಬೆಂಗಳೂರಿಗೆ ಬರುತ್ತಾನೆ. ತನ್ನ ಸಂಬಂಧಿಕರ ಮನೆಯಲ್ಲಿದ್ದುಕೊಂಡೆ ತನ್ನ ಸಮುದಾಯದ ಪರಿಚಯ ಸಂಪಾದಿಸುತ್ತಾನೆ. ನಿಧಾನಕ್ಕೆ ಉಮೇಶ್ ಉಮಾಳಾಗಿ ಬದಲಾಗುತ್ತಾನೆ. ತನ್ನವರಂತೆ ಭಿಕ್ಷೆ ಉಮಾಗೆ ಹಿಂಸೆ ಅನ್ನಿಸಿ, ಸೆಕ್ಸ್ ವರ್ಕ್‍ನಲ್ಲಿ ಉಮಾ ಎರಡು ವರ್ಷ ಕಳೆಯುತ್ತಾಳೆ.

2004 ರಲ್ಲಿ ಸಂಗಮ ಸಂಸ್ಥೆಯಲ್ಲಿ ಸೇರಿಕೊಳ್ಳುತ್ತಾರೆ. ವಾಲಂಟರಿಯಾಗಿ ಒಂದು ವರ್ಷ ಆ ಸಂಸ್ಥೆಯಲ್ಲಿ ಕೆಲಸ ಮಾಡಿ ನಂತರ ಕಮ್ಯುನಿಟಿ ಮೊಬಿಲೈಜರ್ ಆಗಿ ದುಡಿಯುತ್ತಾರೆ. ಈ ಸಂಸ್ಥೆಯಲ್ಲಿ ನಡೆಯುವ ಸಭೆ, ಮೀಟಿಂಗ್, ಓದು ಭಾಷಣಗಳಿಂದ ತನ್ನ ಅರಿವನ್ನು ವಿಸ್ತರಿಸಿಕೊಳ್ಳುತ್ತಾರೆ. ಸಂಗಮದಲ್ಲಿದ್ದೇ ಇತರರ ಜೊತೆಗೆ 2005 ದಲ್ಲಿ ಸಮರ ಎನ್ನುವ ಸಂಸ್ಥೆ ರೂಪಿಸುತ್ತಾರೆ. ಈ ಸಂಘಟನೆ ಸರಕಾರದ ಹೆಚ್.ಐ.ವಿ ಜಾಗೃತಿ ಕಾರ್ಯಕ್ರಮವನ್ನು ಪಡೆದು ಕೆಲಸ ಮಾಡುವುದಕ್ಕೆ ಶುರುಮಾಡುತ್ತದೆ.

ಎನ್.ಜಿ.ಓಗಳು ಒಂದು ಇಶ್ಶು ಬಿಟ್ಟು ದಿಡೀರ್ ಮತ್ತೊಂದು ಇಶ್ಶು ಎತ್ತಿಕೊಳ್ಳುತ್ತವೆ. ಹಾಗಾಗಿ ಎನ್.ಜಿ.ಓಗಳಿಗಿಂತ ಸಮುದಾಯದ ಒಳಗೇ ಒಂದು ಸಂಘಟನೆ, ಸಮುದಾಯಿಕ ಚಟುವಟಿಕೆಗಳು ಪ್ರಾರಂಭವಾಗಬೇಕು. ಹಾಗಾದಲ್ಲಿ ಸಮುದಾಯದ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಹುದು ಎಂದರಿತು, 2007 ರಲ್ಲಿ ಕರ್ನಾಟಕ ಸೆಕ್ಷುವಲ್ ಮೈನಾರಿಟೀಸ್ ಫೋರಂ (ಕೆ.ಎಸ್.ಎಮ್.ಎಫ್) ಕಟ್ಟುತ್ತಾರೆ. ಹೀಗೆ ಬೇರೆ ಬೇರೆ ಸಂಘಟನೆಗಳ ಕೆಲಸದ ಕಾರಣ 2009 ರಲ್ಲಿ ಭಿನ್ನಾಭಿಪ್ರಾಯ ಬಂದು ಚಾಂದಿನಿ ಮತ್ತು ಉಮಾ `ಸಂಗಮ’ ತೊರೆಯುತ್ತಾರೆ. ಆಗ ಪಯಣ ಎನ್ನುವ ಸಂಸ್ಥೆ ಸ್ಥಾಪಿಸಿ ಅದರ ಮೂಲಕವೂ ಕೆಲಸ ಮಾಡುತ್ತಾರೆ.

ಪ್ರೀವೀಲ್ಸ್ ಇಂಡಿಯಾ ಪ್ರವೇಟ್ ಲಿಮಿಟೆಡ್ ಎನ್ನುವ ಕಂಪನಿಯಲ್ಲಿ ಟ್ರಾನ್ಸ್ ಜೆಂಡರ್ ಐಡೆಂಟಿಟಿ ಗೊತ್ತಿದ್ದೂ ಕೆಲಸ ಮಾಡಲು ಅವಕಾಶ ಕೊಡುತ್ತಾರೆ. ಇದರಲ್ಲಿ ಉಮಾ ಚಾಂದಿನಿ ಕೆಲಸಕ್ಕೆ ಸೇರುತ್ತಾರೆ. ಮುಖ್ಯವಾಗಿ ಆಟೋ ಡ್ರೈವರುಗಳ ಬಗ್ಗೆ ಅಧ್ಯಯನ ಮಾಡುತ್ತಾರೆ. ಹೀಗೆ 2 ವರ್ಷ ಕೆಲಸ ಮಾಡಿದ ಮೇಲೆ, ಸಮುದಾಯದ ಸಂಘಟನೆ ಹಿನ್ನೆಡೆಯಾಗುತ್ತದೆ. ಹೀಗಾಗಿ ಉಮಾ ಮತ್ತು ಚಾಂದಿನಿ ಈ ಕೆಲಸದಿಂದಲೂ ಹೊರಬರುತ್ತಾರೆ.

ಈಗಾಗಲೆ ಇರುವ ಸಂಘಟನೆಗಳು ಅವುಗಳದ್ದೇ ಚೌಕಟ್ಟುಗಳಲ್ಲಿ ಕೆಲಸ ಮಾಡುತ್ತಿವೆ. ಇವುಗಳು ಮಾಡದ ಕ್ಷೇತ್ರವನ್ನು ಆಯ್ದುಕೊಂಡು ಕೆಲಸ ಮಾಡಬೇಕೆಂದು ಉಮಾ ಟ್ರಾನ್ಸ್ ಸಮುದಾಯದ ಮಾನಸಿಕ ಸಮಸ್ಯೆಗಳನ್ನು ಆಧರಿಸಿ ಒಂದು ಪ್ರತ್ಯೇಕ ಫೋರಂ ರಚಿಸುತ್ತಾರೆ. ಅದುವೆ `ಜೀವ’ ಎನ್ನುವ ಸಂಸ್ಥೆ, ಅದು 2012ರಲ್ಲಿ ರೂಪು ತಳೆಯುತ್ತದೆ.

`ಜೀವ’ ಉಮಾ ಅವರ ಕನಸಿನ ಕೂಸು. ಜೀವನವೇ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಪ್ರಯತ್ನಿಸುವುದು, ಅಲ್ಕೋಹಾಲ್ ಒಳಗೊಂಡಂತೆ ಚಟಗಳಿಗೆ ಅಡಿಕ್ಟ್ ಆಗೋರ ಮನ ಪರಿವರ್ತನೆ ಮಾಡೋದು, ಪರ್ಯಾಯ ಬದುಕು ಕಟ್ಟಿಕೊಳ್ಳಲು ನೆರವಾಗೋದು ಈ ಸಂಸ್ಥೆಯ ಮುಖ್ಯ ಗುರಿ. ಹಾಗಾಗಿ ಈ ಸಂಸ್ಥೆಯ ಭಾಗವಾಗಿ `ಅನನ್ಯ’ ಎನ್ನುವ ಟ್ರಾನ್ಸ್ ಕಮುನಿಟಿಗೇ ಪ್ರತ್ಯೇಕವಾದ ಪತ್ರಿಕೆ ಆರಂಭಿಸಿದ್ದಾರೆ. ಈ ಪತ್ರಿಕೆ ಟ್ರಾನ್ಸ್‍ಜೆಂಡರುಗಳ ಹೋರಾಟ, ಚಟುವಟಿಕೆ, ಆತ್ಮಕಥನದ ಭಾಗಗಳನ್ನು ಪ್ರಕಟಿಸುತ್ತಿದೆ. ಇಷ್ಟೇ ಅಲ್ಲದೆ, 2011 ರಿಂದ ಕರ್ನಾಟಕದ ಸರಕಾರ ಜಾರಿಗೊಳಿಸಿದ್ದ ಟ್ರಾನ್ಸ್ ಕಮುನಿಟಿಯನ್ನು ಕಂಟ್ರೋಲ್ ಮಾಡುವ ಕರ್ನಾಟಕ 36 ಕಾಯ್ದೆಯನ್ನು ರದ್ದುಗೊಳಿಸುವಲ್ಲಿಯೂ, 1861 ರಿಂದ ಜಾರಿಯಾಗಿದ್ದ 377 ಆಕ್ಟ್ ವಿರುದ್ಧದ ಹೋರಾಟದಲ್ಲಿ ಉಮಾ, ಅಕ್ಕೈ, ಮತ್ತು ಸ್ವಾತಿ ಕರ್ನಾಟಕದಿಂದ ಪಿಟಿಷನ್ ಪೈಲ್ ಮಾಡಿದ್ದರು. 2018 ನಲ್ಲಿ ಸುಪ್ರೀಂಕೋರ್ಟ್ 377 ಸೆಕ್ಷನ್ ಅಸಂವಿಧಾನಿಕ ಎಂದು ಕಾಯ್ದೆಯನ್ನು ರದ್ದುಗೊಳಿದ್ದರಲ್ಲಿ ಉಮಾ ಅವರ ಪಾಲೂ ಇದೆ.

ಈಚೆಗೆ ನಾಲ್ಕು ತಿಂಗಳ ಹಿಂದಷ್ಟೇ ತನ್ನ 17 ವರ್ಷ ಜೊತೆ ಬಾಳಿದ ಸಂಗಾತಿ ಲಿವರ್ ತೊಂದರೆಯಿಂದ ಉಮಾ ಅವರನ್ನು ಅಗಲಿದ್ದಾರೆ. ಈ ದುಃಖವಿನ್ನೂ ಉಮಾ ಅವರಿಂದ ದೂರವಾಗಿಲ್ಲ. ಸಮಾಜದಲ್ಲಿ ಗಂಡು ಹೆಣ್ಣಾಗಿ ಮಾತ್ರವೇ ಬದುಕಬೇಕೇ? ಎರಡೂ ಭಾವದಲ್ಲಿಯೂ ನಮಗೆ ತೋಚಿದಂತೆ ಬದುಕಲು ಸಾಧ್ಯವಿಲ್ಲವೇ ಎನ್ನುವ ಜಿಜ್ಞಾಸೆ ಉಮಾ ಅವರನ್ನು ಕಾಡಿದೆ. ಹಾಗಾಗಿ ನಿರ್ವಾಣಹೊಂದಿ ಪೂರ್ಣ ಹೆಣ್ಣಾಗಿಯೂ ಜೀವಿಸದೆಯೆ, ಗಂಡಿನಂತೆಯೂ ತೋರಿಸಿಕೊಳ್ಳದೆ ತನ್ನ ಭಾವನೆಗೆ ಪೂರವಾದ ನಡೆನುಡಿಯನ್ನು ರೂಢಿಸಿಕೊಂಡಿದ್ದಾರೆ. ನನಗೆ ನನ್ನದೇ ಬಗೆಯ ವ್ಯಕ್ತಿತ್ವವಿದೆ. ಸಮಾಜ ನನ್ನನ್ನು ಹೇಗಾದರೂ ನೋಡಲಿ ಎನ್ನುವ ಖಚಿತತೆಯಲ್ಲಿ ಬದುಕುತ್ತಾರೆ. ಉಮಾ ಅವರ ಹೋರಾಟ, ಕಾಳಜಿ, ಬದ್ಧತೆಗಳಿಗೆ ಜಯ ಸಿಗಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...