Homeಕರ್ನಾಟಕದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌'ಗಳ ದುಸ್ಥಿತಿ

ದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌’ಗಳ ದುಸ್ಥಿತಿ

- Advertisement -
- Advertisement -

ಪ್ರೊಎಂ.ಡಿ.ನಂಜುಂಡಸ್ವಾಮಿ ಯವರಿರುವ ತನಕ (ಮತ್ತು ಬಹುಶಃ ಈಗಲೂ) ರೈತಸಂಘದ ದೊಡ್ಡ ಹೋರಾಟಗಳ ಪೋಸ್ಟರ್‌ನಲ್ಲಿ ಗಾಂಧಿಯವರ ಚಿತ್ರ ಕಡ್ಡಾಯವಾಗಿ ಇರುತ್ತಿತ್ತು. ಒಂದು ವೇಳೆ ಆ ಹೋರಾಟವು ಯಾವುದೋ ಸರ್ಕಾರಿ ನಿಯಮದ ವಿರುದ್ಧವಿದ್ದರೆ, ಪೋಸ್ಟರ್‌ನಲ್ಲಿನ ಗಾಂಧಿ ಆ ನಿಯಮದ ಪ್ರತಿಯನ್ನು ಹರಿದು ಹಾಕುತ್ತಿರುವ ಚಿತ್ರ ಬರೆಸಲಾಗುತ್ತಿತ್ತು. ಒಮ್ಮೊಮ್ಮೆ ಗಾಂಧಿ ಕೋಲು ತೆಗೆದುಕೊಂಡು ಅಟ್ಟಿಸಿಕೊಂಡೂ ಹೋಗುತ್ತಿದ್ದರು. ಅದೇನೇ ಇದ್ದರೂ, ರೈತಸಂಘ ಅನುಸರಿಸುವುದು ಗಾಂಧಿಯವರ ಅಹಿಂಸಾ ಮಾರ್ಗದ ಹೋರಾಟ ಎಂದೇ ಹೇಳುತ್ತಿತ್ತು.

ಅಧಿಕಾರಿಗಳನ್ನು ಕೂಡಿ ಹಾಕುವುದು, ಊರೊಳಗೆ ಬಿಡದಂತೆ ತಡೆಯುವುದು ಇತ್ಯಾದಿಗಳು ರೈತಸಂಘದ ಹೋರಾಟದ ಭಾಗವಾಗಿತ್ತು. ಅಷ್ಟೇಕೆ ಕೆಂಟುಕಿ ಚಿಕನ್ ಅಂಗಡಿಗೆ ನುಗ್ಗಿ ಅದನ್ನು ಧ್ವಂಸಗೊಳಿಸಿದ್ದು, ಮೊನ್ಸಾಂಟೊ ಬೀಜ ಬಿತ್ತಿದ್ದ ಹೊಲಕ್ಕೆ ನುಗ್ಗಿ ನಾಶ ಮಾಡಿದ್ದು ಇತ್ಯಾದಿ ಸಾಂಕೇತಿಕ ಕ್ರಮಗಳನ್ನೂ ರೈತಸಂಘ ಕೈಗೊಂಡಿತ್ತು. ಆದರೆ, ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಮನುಷ್ಯರಿಗೆ ದೈಹಿಕ ಹಿಂಸೆ ಕೊಡುವ ಕೆಲಸವನ್ನು ರೈತಸಂಘ ಮಾಡುತ್ತಿರಲಿಲ್ಲ. ಆದರೆ ಆಸ್ತಿನಾಶ ಅಥವಾ ಕಾನೂನುಭಂಗವನ್ನು ಹಿಂಸೆಯೆಂದು ಬಗೆದಿರಲಿಲ್ಲ. ಹಾಗೆ ನೋಡಿದರೆ ಕಾಯ್ದೆ ಭಂಗವನ್ನು ಸ್ವತಃ ಗಾಂಧಿಯವರು ಹೋರಾಟದ ಒಂದು ವಿಧಾನವಾಗಿಯೂ ಬಳಸಿದ್ದರು.

ಗಾಂಧಿಯವರ ಹಿಂಸೆ ಅಥವಾ ಅಹಿಂಸೆಯ ಮಾನದಂಡಗಳೇ ಸರಿಯೆಂದೋ, ಅವನ್ನೇ ಸಾರ್ವತ್ರಿಕವಾಗಿ ಮತ್ತು ಸಾರ್ವಕಾಲಿಕವಾಗಿ ಅವುಗಳನ್ನು ಮಾನದಂಡಗಳನ್ನಾಗಿಟ್ಟುಕೊಳ್ಳಬೇಕೆಂದೋ ಅಲ್ಲ. ಆದರೆ ಹಿಂಸೆ ಅಥವಾ ಅಹಿಂಸೆಯ ಚರ್ಚೆ ಬಂದಾಗ ಈ ದೇಶದಲ್ಲಿ ಗಾಂಧಿಯವರ ಮಾರ್ಗವನ್ನು ಒಂದು ಮಾನದಂಡವಾಗಿ ಬಳಸಿರುವುದರಿಂದ ಇವನ್ನು ಉಲ್ಲೇಖಿಸಲಾಗಿದೆ.

ಬಹಳ ಮುಖ್ಯವಾಗಿ ಗಾಂಧಿಯವರ ಹಿಂಸೆ-ಅಹಿಂಸೆ ಚರ್ಚೆಯಲ್ಲಿ ಹಿಂಸೆಯ ವ್ಯಾಖ್ಯಾನವನ್ನು ಸೀಮಿತಗೊಳಿಸುವುದನ್ನು ಕೆಲವರು ವಿರೋಧಿಸುತ್ತಾರೆ. ಶ್ರೀಮಂತಿಕೆ-ಅಧಿಕಾರದ ಅಡಿಯಲ್ಲಿ ನಲುಗುವ ದುಡಿಯುವ ಸಮುದಾಯ, ಜಾತಿ ಶೋಷಣೆಯಿಂದ ನಲುಗುವ ಶೋಷಿತ ಜಾತಿಗಳು, ಗಂಡಾಳ್ವಿಕೆಯಲ್ಲಿ ಹಿಂಡಲ್ಪಡುವ ಮಹಿಳೆ ಇವರೆಲ್ಲರೂ ಸ್ಟ್ರಕ್ಚರಲ್ ಹಿಂಸೆಯಿಂದಲೇ ನೋವುಣ್ಣುವುದಿಲ್ಲವೇ? ಕೆಲವೊಮ್ಮೆ ಇಂತಹವರಿಗೆ ತಕ್ಷಣದಲ್ಲೇ ತಿರುಗೇಟು ನೀಡಬೇಕಾಗಿ ಬರುವ ಅನಿವಾರ್ಯತೆ ಇರುವುದಿಲ್ಲವೇ? ಅಂತಹ ಹೊತ್ತಿನಲ್ಲಿ ನೀವು ಅವರಿಗೆ ಅಹಿಂಸೆಯನ್ನು ಬೋಧಿಸುವುದೇ ಹಿಂಸೆಯಾಗುತ್ತದೆ ಎಂಬುದು ಹಿಂಸೆ-ಅಹಿಂಸೆಯ ಕುರಿತು ಗಾಂಧಿ ವಿಚಾರಧಾರೆಗಿರುವ ಪ್ರಮುಖ ತಕರಾರು.

ವಾಸ್ತವದಲ್ಲಿ ಅಂತಹ ಯಾವ ಹಿಂಸೆಯನ್ನೂ ಮಾಡದೇ 60 ದಿನಗಳಿಂದ ಅತ್ಯಂತ ಶುದ್ಧ ಗಾಂಧಿ ಮಾರ್ಗದಲ್ಲಿ ದೆಹಲಿಯ ಹೊರಗೆ ಸತ್ಯಾಗ್ರಹವನ್ನು ನಡೆಸಿದ ಧೀಮಂತ ರೈತ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಇಂದು ಮಾಡಲಾಯಿತು. ಲಕ್ಷಾಂತರ ಜನರು ನಾವು ಊಹಿಸಿಕೊಳ್ಳಲಾಗದ ಚಳಿಯಲ್ಲಿ, ಮನೆಯಿಂದ ದೂರ ಉಳಿದು, ಸಂಪಾದನೆಯಿಂದ ದೂರ ಉಳಿದು ಎರಡು ತಿಂಗಳು ಬೀದಿಯಲ್ಲಿ ಕಳೆದಿದ್ದು ಸತ್ಯಾಗ್ರಹದ ಭಾಗವಾಗಿ. ’ಸ್ವತಂತ್ರ ಭಾರತದಲ್ಲಿ ಪ್ರಜೆಗಳು ಹೀಗೆ ಮಾಡಬೇಕಾಗಿ ಬಂದಿದ್ದು ಪ್ರಭುತ್ವದ ಕ್ರೌರ್ಯದಿಂದಲ್ಲದೇ ಮತ್ತೇನು? ಇದರ ಬಗ್ಗೆ ದನಿಯೆತ್ತಿದ ಮಾತ್ರಕ್ಕೆ ರಾಜ್‌ದೀಪ್ ಸರದೇಸಾಯಿ, ಬರ್ಖಾದತ್‌ಗಳಿಗೆ ’ಆಕ್ರೋಶ ಭರಿತ’ ರೈತರು ಬ್ಯಾರಿಕೇಡ್‌ಗಳನ್ನು ಕಿತ್ತು ದೆಹಲಿಯ ಕಡೆಗೆ ಹೊರಟಿದ್ದು ಅಂತಹ ದೊಡ್ಡ ಸಮಸ್ಯೆಯಾಗಿ ಏಕೆ ಕಂಡಿತು? ತಮ್ಮ ತಮ್ಮ ಸುಖಾಸೀನ ಬದುಕಿನಿಂದ ಇದರ ಕುರಿತು ಸಲೀಸು ಕಾಮೆಂಟ್ ಮಾಡುವ ಧಾರ್ಷ್ಟ್ಯ ಎಲ್ಲಿಂದ ಬಂದಿತು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

PC : India Today

ಅರ್ನಾಬ್ ಗೋಸ್ವಾಮಿಯಂತಹ ಮನುಷ್ಯರೇ ಅಲ್ಲದ ಪತ್ರಕರ್ತ ವೇಷಧಾರಿಗಳು ಒಂದು ವೇಳೆ ಈ ವಿಚಾರದಲ್ಲಿ ಕೂಗಾಡಬಹುದು ಎಂಬ ಭಯ ಇರುವುದೇ ಆದಲ್ಲಿ, ಅದಕ್ಕೆ ಪ್ರತಿಯಾಗಿ ಆಡಬಹುದಾದ ಮಾತುಗಳು ಮೇಲೆ ಹೆಸರಿಸಿದ ಪತ್ರಕರ್ತರಲ್ಲಿ ಇರುವುದಿಲ್ಲ. ಏಕೆಂದರೆ ರೈತ ಕಾರ್ಮಿಕರೇ ಮೊದಲಾದ ಶೋಷಿತರು ದೀನರಾಗಿ ಪ್ರಭುತ್ವದ ಗುಂಡಿಗೆ ಎದೆಯೊಡ್ಡಿ ಮನಕರಗಿಸಬೇಕೇ ಹೊರತು, ಹಕ್ಕನ್ನು ಕೇಳುವುದು ಇವರಿಗೂ ಸಹನೆಯ ಸಂಗತಿಯಲ್ಲ.

ಹಾಗೆಯೇ ಶಶಿತರೂರ್‌ನಂತಹ ಒಬ್ಬ ’ಲಿಬರಲ್ ವ್ಯಕ್ತಿಗೆ, ಕೆಂಪು ಕೋಟೆಯ ಮುಂದಿನ ಧ್ವಜಸ್ತಂಭವೊಂದರಲ್ಲಿ ಬೇರೊಂದು ಧ್ವಜ ಹಾರಿದಾಕ್ಷಣ (ಅದನ್ನು ಹಾರಿಸಲು ಕಾರಣರಾದವರು ರೈತ ಚಳವಳಿಯ ಶೇ.99ರಷ್ಟು ಜನರನ್ನು ಪ್ರತಿನಿಧಿಸುವುದಿಲ್ಲ; ಅವರು ಸಂಚುಕೋರರೂ ಆಗಿರಬಹುದೆಂಬ ಅನುಮಾನಗಳು ಎದ್ದಿವೆ) ಕೂಡಲೇ ಖಂಡಿಸಬೇಕೆನಿಸುತ್ತದೆ. ದೆಹಲಿಯ ಸುತ್ತಮುತ್ತ ಎಂದೂ ಹಾರದಷ್ಟು ಸಂಖ್ಯೆಯ ಭಾರತದ ತ್ರಿವರ್ಣಧ್ವಜಗಳನ್ನು ಈ ರೈತರು ಕಟ್ಟಿಕೊಂಡು ಪರೇಡ್ ಹೊರಟಿದ್ದರು. ಇದನ್ನು ಬಿಟ್ಟರೆ ಆ ರೀತಿ ರಾಷ್ಟ್ರಧ್ವಜಗಳು ಕಂಡಿದ್ದು ಸಿಎಎ/ಎನ್‌ಆರ್‌ಸಿ ವಿರುದ್ಧದ ಆಂದೋಲನದಲ್ಲಿ! ಹೀಗಿರುವಾಗ ಇದ್ದಕ್ಕಿದ್ದಂತೆ ರಾಷ್ಟ್ರಧ್ವಜದ ಕುರಿತು ರೈತರಿಗೆ ತಿಳಿಸಿಕೊಡಲು ಹೋಗುವ ಆತುರ ಅವರದ್ದು. ಇಷ್ಟಕ್ಕೂ ದೇಶದ ಮರ್ಯಾದೆಯು ಬಾವುಟದಲ್ಲಿ ಇಲ್ಲ ಎಂಬುದು ಅರ್ಥವಾಗದಷ್ಟು ಮತಿಹೀನರೇ ಇವರು?

ಚಳವಳಿಯೊಂದನ್ನು ಕಟ್ಟುವುದು, ಸರ್ಕಾರದ ವಿರುದ್ಧ ನಿಲ್ಲುವುದು ಸುಲಭದ ಸಂಗತಿಯಲ್ಲ. ಅದರಲ್ಲೂ ಬಿಜೆಪಿಯಂತಹ ಪಕ್ಷದ ನೇತೃತ್ವದ, ಮೋದಿ-ಶಾರಂತಹ ಸರ್ವಾಧಿಕಾರಿಗಳ ನಾಯಕತ್ವದ ಎದುರು ಹೋರಾಟ ಕಟ್ಟುವುದು ಇನ್ನೂ ಕಷ್ಟ. ಮಾಧ್ಯಮಗಳು ಜನರ ದನಿಯಾಗದೇ ಆಳುವವರ ಬೇಟೆ ನಾಯಿಗಳಾದಾಗಂತೂ ಅಸಾಧ್ಯ. ಒಂದು ವೇಳೆ ಏನೋ ಒಂದು ದಿನದ ಹೋರಾಟ ಹೇಗೋ ಕಷ್ಟಪಟ್ಟು ಮಾಡಿ ಹೋಗಿಯೂ ಬಿಡಬಹುದು. ಆದರೆ ಲಕ್ಷಾಂತರ ಜನರನ್ನು ತಿಂಗಳುಗಟ್ಟಲೆ ಒಂದು ಕಡೆ ಇಟ್ಟುಕೊಂಡು ಚಳವಳಿ ಕಟ್ಟುವುದರ ಹಿಂದಿನ ಪರಿಶ್ರಮ ಮತ್ತು ಪ್ರಬುದ್ಧತೆಯನ್ನು ಕೇವಲ ವಿಶ್ಲೇಷಣೆಯ ಮುಖಾಂತರ ಅರಿತುಕೊಳ್ಳುವುದು ಅಸಾಧ್ಯ. ಅದು ಪ್ರತಿನಿತ್ಯ ಹೊಂದಿಸಬೇಕಾದ ರೊಟ್ಟಿ ಮತ್ತು ಇತರ ವ್ಯವಸ್ಥೆಗಳ ವಿಚಾರವಷ್ಟೇ ಅಲ್ಲ; ನೂರೆಂಟು ಬಗೆಯ ವ್ಯಕ್ತಿಗಳು ಮತ್ತು ವ್ಯಕ್ತಿತ್ವಗಳನ್ನು ನಿಭಾಯಿಸಬೇಕಾದ ಸವಾಲು. ಅದರಲ್ಲೂ ಇಲ್ಲಿ ಒಂದೇ ಸಂಘಟನೆಯಿಲ್ಲ; ಇರುವ ಇಡೀ ಜನಸಮೂಹವು ರೆಜಿಮೆಂಟೇಷನ್‌ಗೆ ಒಳಪಟ್ಟ ಸೈನಿಕರಲ್ಲ. ಅದರ ನೈತಿಕ ಶಕ್ತಿ ಕುಗ್ಗದಂತೆ, ವಿವಿಧ ಬಣ ಹಾಗೂ ಬಣ್ಣಗಳ ನಾಯಕರನ್ನೂ ಸಂಭಾಳಿಸಿಕೊಂಡು ಹೋಗುವುದು ಏನೋ ಒಂದು ಮಟ್ಟಿಗೆ ಸಾಧ್ಯವಾದರೆ ಅದೊಂದು ಪವಾಡ.

ಅಂತಹ ಪವಾಡವನ್ನು ಸಂಯುಕ್ತ ಕಿಸಾನ್ ಮೋರ್ಚಾದವರು ಮಾಡಿದ್ದಾರೆ. ಅದರ ಪ್ರಮುಖ ನೇತಾರರೊಬ್ಬರು ಹೇಳಿದಂತೆ, ’ವಿಚಾರಗಳ ಕುರಿತು ದಿನವಿಡೀ ಕಿತ್ತಾಡುತ್ತೇವೆ, ಅಂತಿಮವಾಗಿ ಸರ್ವಸಮ್ಮತ ತೀರ್ಮಾನಕ್ಕೆ ಬರುತ್ತೇವೆ’. ಇಂತಹ ಪವಾಡವನ್ನು ಸಾಧ್ಯವಾಗಿಸಿದ್ದು ನಾಯಕರು ಮಾತ್ರವಲ್ಲಾ, ಲಕ್ಷ ಲಕ್ಷ ಸಂಖ್ಯೆಯ ಸಾಮಾನ್ಯ ಜನರೂ ಸಹಾ. ಇಂತಹದೊಂದು ಅಪೂರ್ವ, ಧೀಮಂತ ಚಳವಳಿಯ ಕುರಿತು ’ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು’ ಎಂಬ ತೀರ್ಪುಗಳನ್ನು ವಿವಿಧ ಬಣ್ಣ, ಶ್ರೇಣಿಯ ಜನರು ನೀಡುವುದು ರೇಜಿಗೆ ಹುಟ್ಟಿಸುತ್ತದೆ. ಮಲದಲ್ಲೇ ಮುಳುಗೇಳುವ ತುತ್ತೂರಿ ಮಾಧ್ಯಮಗಳು ಮತ್ತು ಗುಲಾಮೀ ಮನಸ್ಥಿತಿಯ ಭಕ್ತರಿಂದ ಅಂತಹ ನಿರೀಕ್ಷೆಯಿಲ್ಲವೇ ಇಲ್ಲ. ಆದರೆ ಚಳವಳಿಯ ಕುರಿತಂತೆ ಕಾಳಜಿ ಮತ್ತು ಸದಾಶಯವುಳ್ಳವರೂ ಈ ಪರಿ ಜಡ್ಜ್‌ಮೆಂಟಲ್ ಆಗಿರುವುದು ಒಳ್ಳೆಯ ಲಕ್ಷಣವಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಒಂದು ವೇಳೆ ಚಳವಳಿನಿರತ ರೈತರೇ ಅರಾಜಕವಾಗಿ ಬೀದಿಗಿಳಿದಿದ್ದರೂ, ಈ ಸಂದರ್ಭದ ಹಿನ್ನೆಲೆಯನ್ನರಿತುಕೊಂಡು ಅದಕ್ಕೆ ಕಾರಣವಾದ ಸರ್ಕಾರವನ್ನು ಗುರಿ ಮಾಡಬೇಕಾದ್ದು ಸರಿಯಾದದ್ದು. ಸಿಎಎ ವಿರೋಧಿ ಹೋರಾಟದಲ್ಲಿ ಹೇಗೋ ಹಾಗೆ, ಇಲ್ಲೂ ಸಹಾ ಅಪಾರವಾದ ತಾಳ್ಮೆ, ಸಹನೆ ಹಾಗೂ ಪ್ರಬುದ್ಧತೆಯನ್ನು ರೈತ ಚಳವಳಿಯು ಪ್ರದರ್ಶಿಸಿದೆ. ಮಿಲಿಟೆಂಟ್ ಚಳವಳಿಯ ಹಿನ್ನೆಲೆಯುಳ್ಳ ಪಂಜಾಬಿನ ಜನರು ಈ ವಿಚಾರದಲ್ಲಿ ತೋರಿರುವ ಸಂಯಮವೇ ಅನನ್ಯವಾದದ್ದು. ಅಂತೆಯೇ ಸರ್ಕಾರದ ಮನುಷ್ಯ ವಿರೋಧಿತನವೂ ಎದ್ದು ತೋರುವಂಥಾದ್ದೇ ಆಗಿತ್ತು.

ಒಂದೇ ಮಾತಲ್ಲಿ ಹೇಳುವುದಾದರೆ ಸರ್ಕಾರವು ಕೃಷಿ ಕಾಯ್ದೆಗಳನ್ನು ತರುವುದರ ಮುಖಾಂತರವೇ ಹಿಂಸೆ ಮತ್ತು ಅರಾಜಕತೆಯನ್ನು ಹುಟ್ಟಿಹಾಕಿತ್ತು. ರೈತರು ಅದನ್ನು ತಾಳ್ಮೆ ಮತ್ತು ವಿವೇಕದಿಂದ ಎದುರಿಸಿದರು. ಹೆಜ್ಜೆ ಹೆಜ್ಜೆಗೂ ಸರ್ಕಾರವು ಹಿಂಸೆಯನ್ನು ಹೆಚ್ಚಿಸುತ್ತಾ ಹೋಗಿತ್ತು. ರೈತರು ತಮ್ಮ ವಿಶಿಷ್ಟ ಪ್ರಬುದ್ಧತೆಯಿಂದ ಅದನ್ನು ಎದುರುಗೊಂಡರು. ಉಳಿದಂತೆ ಆಗಬಹುದಾದ ಸಣ್ಣ ಪುಟ್ಟ ಅವಘಡಗಳೆಲ್ಲಾ ಕೇವಲ ಕೊಲ್ಯಾಟರೆಲ್ ಡ್ಯಾಮೇಜ್. ಅದನ್ನೇ ಧ್ಯಾನಿಸದೇ, ಒಟ್ಟಾರೆ ಒಳಿತಿನ ಕಡೆಗೆ ನಡೆಯುವುದಾದರೆ, ನಮ್ಮ ಕೈಲಾದಷ್ಟು ಜೊತೆಗೂಡುವ ಕೆಲಸ ಮಾಡುವುದೇ ಇಂದು ಎಲ್ಲಾ ಪ್ರಜಾತಂತ್ರವಾದಿಗಳ ಕರ್ತವ್ಯವಾಗಿದೆ.


ಇದನ್ನೂ ಓದಿ: ಸಿಖ್ ಧ್ವಜ ಹಾರಿಸಿದ ಗುಂಪನ್ನು ಕೆಂಪುಕೋಟೆಯವರೆಗೆ ಹೋಗಲು ಪೊಲೀಸರು ಬಿಟ್ಟಿದ್ದೇಕೆ? – ರೈತ ಮುಖಂಡರ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...