Homeಕರ್ನಾಟಕದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌'ಗಳ ದುಸ್ಥಿತಿ

ದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌’ಗಳ ದುಸ್ಥಿತಿ

- Advertisement -
- Advertisement -

ಪ್ರೊಎಂ.ಡಿ.ನಂಜುಂಡಸ್ವಾಮಿ ಯವರಿರುವ ತನಕ (ಮತ್ತು ಬಹುಶಃ ಈಗಲೂ) ರೈತಸಂಘದ ದೊಡ್ಡ ಹೋರಾಟಗಳ ಪೋಸ್ಟರ್‌ನಲ್ಲಿ ಗಾಂಧಿಯವರ ಚಿತ್ರ ಕಡ್ಡಾಯವಾಗಿ ಇರುತ್ತಿತ್ತು. ಒಂದು ವೇಳೆ ಆ ಹೋರಾಟವು ಯಾವುದೋ ಸರ್ಕಾರಿ ನಿಯಮದ ವಿರುದ್ಧವಿದ್ದರೆ, ಪೋಸ್ಟರ್‌ನಲ್ಲಿನ ಗಾಂಧಿ ಆ ನಿಯಮದ ಪ್ರತಿಯನ್ನು ಹರಿದು ಹಾಕುತ್ತಿರುವ ಚಿತ್ರ ಬರೆಸಲಾಗುತ್ತಿತ್ತು. ಒಮ್ಮೊಮ್ಮೆ ಗಾಂಧಿ ಕೋಲು ತೆಗೆದುಕೊಂಡು ಅಟ್ಟಿಸಿಕೊಂಡೂ ಹೋಗುತ್ತಿದ್ದರು. ಅದೇನೇ ಇದ್ದರೂ, ರೈತಸಂಘ ಅನುಸರಿಸುವುದು ಗಾಂಧಿಯವರ ಅಹಿಂಸಾ ಮಾರ್ಗದ ಹೋರಾಟ ಎಂದೇ ಹೇಳುತ್ತಿತ್ತು.

ಅಧಿಕಾರಿಗಳನ್ನು ಕೂಡಿ ಹಾಕುವುದು, ಊರೊಳಗೆ ಬಿಡದಂತೆ ತಡೆಯುವುದು ಇತ್ಯಾದಿಗಳು ರೈತಸಂಘದ ಹೋರಾಟದ ಭಾಗವಾಗಿತ್ತು. ಅಷ್ಟೇಕೆ ಕೆಂಟುಕಿ ಚಿಕನ್ ಅಂಗಡಿಗೆ ನುಗ್ಗಿ ಅದನ್ನು ಧ್ವಂಸಗೊಳಿಸಿದ್ದು, ಮೊನ್ಸಾಂಟೊ ಬೀಜ ಬಿತ್ತಿದ್ದ ಹೊಲಕ್ಕೆ ನುಗ್ಗಿ ನಾಶ ಮಾಡಿದ್ದು ಇತ್ಯಾದಿ ಸಾಂಕೇತಿಕ ಕ್ರಮಗಳನ್ನೂ ರೈತಸಂಘ ಕೈಗೊಂಡಿತ್ತು. ಆದರೆ, ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಮನುಷ್ಯರಿಗೆ ದೈಹಿಕ ಹಿಂಸೆ ಕೊಡುವ ಕೆಲಸವನ್ನು ರೈತಸಂಘ ಮಾಡುತ್ತಿರಲಿಲ್ಲ. ಆದರೆ ಆಸ್ತಿನಾಶ ಅಥವಾ ಕಾನೂನುಭಂಗವನ್ನು ಹಿಂಸೆಯೆಂದು ಬಗೆದಿರಲಿಲ್ಲ. ಹಾಗೆ ನೋಡಿದರೆ ಕಾಯ್ದೆ ಭಂಗವನ್ನು ಸ್ವತಃ ಗಾಂಧಿಯವರು ಹೋರಾಟದ ಒಂದು ವಿಧಾನವಾಗಿಯೂ ಬಳಸಿದ್ದರು.

ಗಾಂಧಿಯವರ ಹಿಂಸೆ ಅಥವಾ ಅಹಿಂಸೆಯ ಮಾನದಂಡಗಳೇ ಸರಿಯೆಂದೋ, ಅವನ್ನೇ ಸಾರ್ವತ್ರಿಕವಾಗಿ ಮತ್ತು ಸಾರ್ವಕಾಲಿಕವಾಗಿ ಅವುಗಳನ್ನು ಮಾನದಂಡಗಳನ್ನಾಗಿಟ್ಟುಕೊಳ್ಳಬೇಕೆಂದೋ ಅಲ್ಲ. ಆದರೆ ಹಿಂಸೆ ಅಥವಾ ಅಹಿಂಸೆಯ ಚರ್ಚೆ ಬಂದಾಗ ಈ ದೇಶದಲ್ಲಿ ಗಾಂಧಿಯವರ ಮಾರ್ಗವನ್ನು ಒಂದು ಮಾನದಂಡವಾಗಿ ಬಳಸಿರುವುದರಿಂದ ಇವನ್ನು ಉಲ್ಲೇಖಿಸಲಾಗಿದೆ.

ಬಹಳ ಮುಖ್ಯವಾಗಿ ಗಾಂಧಿಯವರ ಹಿಂಸೆ-ಅಹಿಂಸೆ ಚರ್ಚೆಯಲ್ಲಿ ಹಿಂಸೆಯ ವ್ಯಾಖ್ಯಾನವನ್ನು ಸೀಮಿತಗೊಳಿಸುವುದನ್ನು ಕೆಲವರು ವಿರೋಧಿಸುತ್ತಾರೆ. ಶ್ರೀಮಂತಿಕೆ-ಅಧಿಕಾರದ ಅಡಿಯಲ್ಲಿ ನಲುಗುವ ದುಡಿಯುವ ಸಮುದಾಯ, ಜಾತಿ ಶೋಷಣೆಯಿಂದ ನಲುಗುವ ಶೋಷಿತ ಜಾತಿಗಳು, ಗಂಡಾಳ್ವಿಕೆಯಲ್ಲಿ ಹಿಂಡಲ್ಪಡುವ ಮಹಿಳೆ ಇವರೆಲ್ಲರೂ ಸ್ಟ್ರಕ್ಚರಲ್ ಹಿಂಸೆಯಿಂದಲೇ ನೋವುಣ್ಣುವುದಿಲ್ಲವೇ? ಕೆಲವೊಮ್ಮೆ ಇಂತಹವರಿಗೆ ತಕ್ಷಣದಲ್ಲೇ ತಿರುಗೇಟು ನೀಡಬೇಕಾಗಿ ಬರುವ ಅನಿವಾರ್ಯತೆ ಇರುವುದಿಲ್ಲವೇ? ಅಂತಹ ಹೊತ್ತಿನಲ್ಲಿ ನೀವು ಅವರಿಗೆ ಅಹಿಂಸೆಯನ್ನು ಬೋಧಿಸುವುದೇ ಹಿಂಸೆಯಾಗುತ್ತದೆ ಎಂಬುದು ಹಿಂಸೆ-ಅಹಿಂಸೆಯ ಕುರಿತು ಗಾಂಧಿ ವಿಚಾರಧಾರೆಗಿರುವ ಪ್ರಮುಖ ತಕರಾರು.

ವಾಸ್ತವದಲ್ಲಿ ಅಂತಹ ಯಾವ ಹಿಂಸೆಯನ್ನೂ ಮಾಡದೇ 60 ದಿನಗಳಿಂದ ಅತ್ಯಂತ ಶುದ್ಧ ಗಾಂಧಿ ಮಾರ್ಗದಲ್ಲಿ ದೆಹಲಿಯ ಹೊರಗೆ ಸತ್ಯಾಗ್ರಹವನ್ನು ನಡೆಸಿದ ಧೀಮಂತ ರೈತ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಇಂದು ಮಾಡಲಾಯಿತು. ಲಕ್ಷಾಂತರ ಜನರು ನಾವು ಊಹಿಸಿಕೊಳ್ಳಲಾಗದ ಚಳಿಯಲ್ಲಿ, ಮನೆಯಿಂದ ದೂರ ಉಳಿದು, ಸಂಪಾದನೆಯಿಂದ ದೂರ ಉಳಿದು ಎರಡು ತಿಂಗಳು ಬೀದಿಯಲ್ಲಿ ಕಳೆದಿದ್ದು ಸತ್ಯಾಗ್ರಹದ ಭಾಗವಾಗಿ. ’ಸ್ವತಂತ್ರ ಭಾರತದಲ್ಲಿ ಪ್ರಜೆಗಳು ಹೀಗೆ ಮಾಡಬೇಕಾಗಿ ಬಂದಿದ್ದು ಪ್ರಭುತ್ವದ ಕ್ರೌರ್ಯದಿಂದಲ್ಲದೇ ಮತ್ತೇನು? ಇದರ ಬಗ್ಗೆ ದನಿಯೆತ್ತಿದ ಮಾತ್ರಕ್ಕೆ ರಾಜ್‌ದೀಪ್ ಸರದೇಸಾಯಿ, ಬರ್ಖಾದತ್‌ಗಳಿಗೆ ’ಆಕ್ರೋಶ ಭರಿತ’ ರೈತರು ಬ್ಯಾರಿಕೇಡ್‌ಗಳನ್ನು ಕಿತ್ತು ದೆಹಲಿಯ ಕಡೆಗೆ ಹೊರಟಿದ್ದು ಅಂತಹ ದೊಡ್ಡ ಸಮಸ್ಯೆಯಾಗಿ ಏಕೆ ಕಂಡಿತು? ತಮ್ಮ ತಮ್ಮ ಸುಖಾಸೀನ ಬದುಕಿನಿಂದ ಇದರ ಕುರಿತು ಸಲೀಸು ಕಾಮೆಂಟ್ ಮಾಡುವ ಧಾರ್ಷ್ಟ್ಯ ಎಲ್ಲಿಂದ ಬಂದಿತು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

PC : India Today

ಅರ್ನಾಬ್ ಗೋಸ್ವಾಮಿಯಂತಹ ಮನುಷ್ಯರೇ ಅಲ್ಲದ ಪತ್ರಕರ್ತ ವೇಷಧಾರಿಗಳು ಒಂದು ವೇಳೆ ಈ ವಿಚಾರದಲ್ಲಿ ಕೂಗಾಡಬಹುದು ಎಂಬ ಭಯ ಇರುವುದೇ ಆದಲ್ಲಿ, ಅದಕ್ಕೆ ಪ್ರತಿಯಾಗಿ ಆಡಬಹುದಾದ ಮಾತುಗಳು ಮೇಲೆ ಹೆಸರಿಸಿದ ಪತ್ರಕರ್ತರಲ್ಲಿ ಇರುವುದಿಲ್ಲ. ಏಕೆಂದರೆ ರೈತ ಕಾರ್ಮಿಕರೇ ಮೊದಲಾದ ಶೋಷಿತರು ದೀನರಾಗಿ ಪ್ರಭುತ್ವದ ಗುಂಡಿಗೆ ಎದೆಯೊಡ್ಡಿ ಮನಕರಗಿಸಬೇಕೇ ಹೊರತು, ಹಕ್ಕನ್ನು ಕೇಳುವುದು ಇವರಿಗೂ ಸಹನೆಯ ಸಂಗತಿಯಲ್ಲ.

ಹಾಗೆಯೇ ಶಶಿತರೂರ್‌ನಂತಹ ಒಬ್ಬ ’ಲಿಬರಲ್ ವ್ಯಕ್ತಿಗೆ, ಕೆಂಪು ಕೋಟೆಯ ಮುಂದಿನ ಧ್ವಜಸ್ತಂಭವೊಂದರಲ್ಲಿ ಬೇರೊಂದು ಧ್ವಜ ಹಾರಿದಾಕ್ಷಣ (ಅದನ್ನು ಹಾರಿಸಲು ಕಾರಣರಾದವರು ರೈತ ಚಳವಳಿಯ ಶೇ.99ರಷ್ಟು ಜನರನ್ನು ಪ್ರತಿನಿಧಿಸುವುದಿಲ್ಲ; ಅವರು ಸಂಚುಕೋರರೂ ಆಗಿರಬಹುದೆಂಬ ಅನುಮಾನಗಳು ಎದ್ದಿವೆ) ಕೂಡಲೇ ಖಂಡಿಸಬೇಕೆನಿಸುತ್ತದೆ. ದೆಹಲಿಯ ಸುತ್ತಮುತ್ತ ಎಂದೂ ಹಾರದಷ್ಟು ಸಂಖ್ಯೆಯ ಭಾರತದ ತ್ರಿವರ್ಣಧ್ವಜಗಳನ್ನು ಈ ರೈತರು ಕಟ್ಟಿಕೊಂಡು ಪರೇಡ್ ಹೊರಟಿದ್ದರು. ಇದನ್ನು ಬಿಟ್ಟರೆ ಆ ರೀತಿ ರಾಷ್ಟ್ರಧ್ವಜಗಳು ಕಂಡಿದ್ದು ಸಿಎಎ/ಎನ್‌ಆರ್‌ಸಿ ವಿರುದ್ಧದ ಆಂದೋಲನದಲ್ಲಿ! ಹೀಗಿರುವಾಗ ಇದ್ದಕ್ಕಿದ್ದಂತೆ ರಾಷ್ಟ್ರಧ್ವಜದ ಕುರಿತು ರೈತರಿಗೆ ತಿಳಿಸಿಕೊಡಲು ಹೋಗುವ ಆತುರ ಅವರದ್ದು. ಇಷ್ಟಕ್ಕೂ ದೇಶದ ಮರ್ಯಾದೆಯು ಬಾವುಟದಲ್ಲಿ ಇಲ್ಲ ಎಂಬುದು ಅರ್ಥವಾಗದಷ್ಟು ಮತಿಹೀನರೇ ಇವರು?

ಚಳವಳಿಯೊಂದನ್ನು ಕಟ್ಟುವುದು, ಸರ್ಕಾರದ ವಿರುದ್ಧ ನಿಲ್ಲುವುದು ಸುಲಭದ ಸಂಗತಿಯಲ್ಲ. ಅದರಲ್ಲೂ ಬಿಜೆಪಿಯಂತಹ ಪಕ್ಷದ ನೇತೃತ್ವದ, ಮೋದಿ-ಶಾರಂತಹ ಸರ್ವಾಧಿಕಾರಿಗಳ ನಾಯಕತ್ವದ ಎದುರು ಹೋರಾಟ ಕಟ್ಟುವುದು ಇನ್ನೂ ಕಷ್ಟ. ಮಾಧ್ಯಮಗಳು ಜನರ ದನಿಯಾಗದೇ ಆಳುವವರ ಬೇಟೆ ನಾಯಿಗಳಾದಾಗಂತೂ ಅಸಾಧ್ಯ. ಒಂದು ವೇಳೆ ಏನೋ ಒಂದು ದಿನದ ಹೋರಾಟ ಹೇಗೋ ಕಷ್ಟಪಟ್ಟು ಮಾಡಿ ಹೋಗಿಯೂ ಬಿಡಬಹುದು. ಆದರೆ ಲಕ್ಷಾಂತರ ಜನರನ್ನು ತಿಂಗಳುಗಟ್ಟಲೆ ಒಂದು ಕಡೆ ಇಟ್ಟುಕೊಂಡು ಚಳವಳಿ ಕಟ್ಟುವುದರ ಹಿಂದಿನ ಪರಿಶ್ರಮ ಮತ್ತು ಪ್ರಬುದ್ಧತೆಯನ್ನು ಕೇವಲ ವಿಶ್ಲೇಷಣೆಯ ಮುಖಾಂತರ ಅರಿತುಕೊಳ್ಳುವುದು ಅಸಾಧ್ಯ. ಅದು ಪ್ರತಿನಿತ್ಯ ಹೊಂದಿಸಬೇಕಾದ ರೊಟ್ಟಿ ಮತ್ತು ಇತರ ವ್ಯವಸ್ಥೆಗಳ ವಿಚಾರವಷ್ಟೇ ಅಲ್ಲ; ನೂರೆಂಟು ಬಗೆಯ ವ್ಯಕ್ತಿಗಳು ಮತ್ತು ವ್ಯಕ್ತಿತ್ವಗಳನ್ನು ನಿಭಾಯಿಸಬೇಕಾದ ಸವಾಲು. ಅದರಲ್ಲೂ ಇಲ್ಲಿ ಒಂದೇ ಸಂಘಟನೆಯಿಲ್ಲ; ಇರುವ ಇಡೀ ಜನಸಮೂಹವು ರೆಜಿಮೆಂಟೇಷನ್‌ಗೆ ಒಳಪಟ್ಟ ಸೈನಿಕರಲ್ಲ. ಅದರ ನೈತಿಕ ಶಕ್ತಿ ಕುಗ್ಗದಂತೆ, ವಿವಿಧ ಬಣ ಹಾಗೂ ಬಣ್ಣಗಳ ನಾಯಕರನ್ನೂ ಸಂಭಾಳಿಸಿಕೊಂಡು ಹೋಗುವುದು ಏನೋ ಒಂದು ಮಟ್ಟಿಗೆ ಸಾಧ್ಯವಾದರೆ ಅದೊಂದು ಪವಾಡ.

ಅಂತಹ ಪವಾಡವನ್ನು ಸಂಯುಕ್ತ ಕಿಸಾನ್ ಮೋರ್ಚಾದವರು ಮಾಡಿದ್ದಾರೆ. ಅದರ ಪ್ರಮುಖ ನೇತಾರರೊಬ್ಬರು ಹೇಳಿದಂತೆ, ’ವಿಚಾರಗಳ ಕುರಿತು ದಿನವಿಡೀ ಕಿತ್ತಾಡುತ್ತೇವೆ, ಅಂತಿಮವಾಗಿ ಸರ್ವಸಮ್ಮತ ತೀರ್ಮಾನಕ್ಕೆ ಬರುತ್ತೇವೆ’. ಇಂತಹ ಪವಾಡವನ್ನು ಸಾಧ್ಯವಾಗಿಸಿದ್ದು ನಾಯಕರು ಮಾತ್ರವಲ್ಲಾ, ಲಕ್ಷ ಲಕ್ಷ ಸಂಖ್ಯೆಯ ಸಾಮಾನ್ಯ ಜನರೂ ಸಹಾ. ಇಂತಹದೊಂದು ಅಪೂರ್ವ, ಧೀಮಂತ ಚಳವಳಿಯ ಕುರಿತು ’ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು’ ಎಂಬ ತೀರ್ಪುಗಳನ್ನು ವಿವಿಧ ಬಣ್ಣ, ಶ್ರೇಣಿಯ ಜನರು ನೀಡುವುದು ರೇಜಿಗೆ ಹುಟ್ಟಿಸುತ್ತದೆ. ಮಲದಲ್ಲೇ ಮುಳುಗೇಳುವ ತುತ್ತೂರಿ ಮಾಧ್ಯಮಗಳು ಮತ್ತು ಗುಲಾಮೀ ಮನಸ್ಥಿತಿಯ ಭಕ್ತರಿಂದ ಅಂತಹ ನಿರೀಕ್ಷೆಯಿಲ್ಲವೇ ಇಲ್ಲ. ಆದರೆ ಚಳವಳಿಯ ಕುರಿತಂತೆ ಕಾಳಜಿ ಮತ್ತು ಸದಾಶಯವುಳ್ಳವರೂ ಈ ಪರಿ ಜಡ್ಜ್‌ಮೆಂಟಲ್ ಆಗಿರುವುದು ಒಳ್ಳೆಯ ಲಕ್ಷಣವಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಒಂದು ವೇಳೆ ಚಳವಳಿನಿರತ ರೈತರೇ ಅರಾಜಕವಾಗಿ ಬೀದಿಗಿಳಿದಿದ್ದರೂ, ಈ ಸಂದರ್ಭದ ಹಿನ್ನೆಲೆಯನ್ನರಿತುಕೊಂಡು ಅದಕ್ಕೆ ಕಾರಣವಾದ ಸರ್ಕಾರವನ್ನು ಗುರಿ ಮಾಡಬೇಕಾದ್ದು ಸರಿಯಾದದ್ದು. ಸಿಎಎ ವಿರೋಧಿ ಹೋರಾಟದಲ್ಲಿ ಹೇಗೋ ಹಾಗೆ, ಇಲ್ಲೂ ಸಹಾ ಅಪಾರವಾದ ತಾಳ್ಮೆ, ಸಹನೆ ಹಾಗೂ ಪ್ರಬುದ್ಧತೆಯನ್ನು ರೈತ ಚಳವಳಿಯು ಪ್ರದರ್ಶಿಸಿದೆ. ಮಿಲಿಟೆಂಟ್ ಚಳವಳಿಯ ಹಿನ್ನೆಲೆಯುಳ್ಳ ಪಂಜಾಬಿನ ಜನರು ಈ ವಿಚಾರದಲ್ಲಿ ತೋರಿರುವ ಸಂಯಮವೇ ಅನನ್ಯವಾದದ್ದು. ಅಂತೆಯೇ ಸರ್ಕಾರದ ಮನುಷ್ಯ ವಿರೋಧಿತನವೂ ಎದ್ದು ತೋರುವಂಥಾದ್ದೇ ಆಗಿತ್ತು.

ಒಂದೇ ಮಾತಲ್ಲಿ ಹೇಳುವುದಾದರೆ ಸರ್ಕಾರವು ಕೃಷಿ ಕಾಯ್ದೆಗಳನ್ನು ತರುವುದರ ಮುಖಾಂತರವೇ ಹಿಂಸೆ ಮತ್ತು ಅರಾಜಕತೆಯನ್ನು ಹುಟ್ಟಿಹಾಕಿತ್ತು. ರೈತರು ಅದನ್ನು ತಾಳ್ಮೆ ಮತ್ತು ವಿವೇಕದಿಂದ ಎದುರಿಸಿದರು. ಹೆಜ್ಜೆ ಹೆಜ್ಜೆಗೂ ಸರ್ಕಾರವು ಹಿಂಸೆಯನ್ನು ಹೆಚ್ಚಿಸುತ್ತಾ ಹೋಗಿತ್ತು. ರೈತರು ತಮ್ಮ ವಿಶಿಷ್ಟ ಪ್ರಬುದ್ಧತೆಯಿಂದ ಅದನ್ನು ಎದುರುಗೊಂಡರು. ಉಳಿದಂತೆ ಆಗಬಹುದಾದ ಸಣ್ಣ ಪುಟ್ಟ ಅವಘಡಗಳೆಲ್ಲಾ ಕೇವಲ ಕೊಲ್ಯಾಟರೆಲ್ ಡ್ಯಾಮೇಜ್. ಅದನ್ನೇ ಧ್ಯಾನಿಸದೇ, ಒಟ್ಟಾರೆ ಒಳಿತಿನ ಕಡೆಗೆ ನಡೆಯುವುದಾದರೆ, ನಮ್ಮ ಕೈಲಾದಷ್ಟು ಜೊತೆಗೂಡುವ ಕೆಲಸ ಮಾಡುವುದೇ ಇಂದು ಎಲ್ಲಾ ಪ್ರಜಾತಂತ್ರವಾದಿಗಳ ಕರ್ತವ್ಯವಾಗಿದೆ.


ಇದನ್ನೂ ಓದಿ: ಸಿಖ್ ಧ್ವಜ ಹಾರಿಸಿದ ಗುಂಪನ್ನು ಕೆಂಪುಕೋಟೆಯವರೆಗೆ ಹೋಗಲು ಪೊಲೀಸರು ಬಿಟ್ಟಿದ್ದೇಕೆ? – ರೈತ ಮುಖಂಡರ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...