Homeಕರ್ನಾಟಕದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌'ಗಳ ದುಸ್ಥಿತಿ

ದೂರದಲ್ಲಿ ನಿಂತು ಸರಿತಪ್ಪುಗಳ ಕುರಿತು ತೀರ್ಪು ನೀಡುವ ’ಲಿಬರಲ್‌’ಗಳ ದುಸ್ಥಿತಿ

- Advertisement -
- Advertisement -

ಪ್ರೊಎಂ.ಡಿ.ನಂಜುಂಡಸ್ವಾಮಿ ಯವರಿರುವ ತನಕ (ಮತ್ತು ಬಹುಶಃ ಈಗಲೂ) ರೈತಸಂಘದ ದೊಡ್ಡ ಹೋರಾಟಗಳ ಪೋಸ್ಟರ್‌ನಲ್ಲಿ ಗಾಂಧಿಯವರ ಚಿತ್ರ ಕಡ್ಡಾಯವಾಗಿ ಇರುತ್ತಿತ್ತು. ಒಂದು ವೇಳೆ ಆ ಹೋರಾಟವು ಯಾವುದೋ ಸರ್ಕಾರಿ ನಿಯಮದ ವಿರುದ್ಧವಿದ್ದರೆ, ಪೋಸ್ಟರ್‌ನಲ್ಲಿನ ಗಾಂಧಿ ಆ ನಿಯಮದ ಪ್ರತಿಯನ್ನು ಹರಿದು ಹಾಕುತ್ತಿರುವ ಚಿತ್ರ ಬರೆಸಲಾಗುತ್ತಿತ್ತು. ಒಮ್ಮೊಮ್ಮೆ ಗಾಂಧಿ ಕೋಲು ತೆಗೆದುಕೊಂಡು ಅಟ್ಟಿಸಿಕೊಂಡೂ ಹೋಗುತ್ತಿದ್ದರು. ಅದೇನೇ ಇದ್ದರೂ, ರೈತಸಂಘ ಅನುಸರಿಸುವುದು ಗಾಂಧಿಯವರ ಅಹಿಂಸಾ ಮಾರ್ಗದ ಹೋರಾಟ ಎಂದೇ ಹೇಳುತ್ತಿತ್ತು.

ಅಧಿಕಾರಿಗಳನ್ನು ಕೂಡಿ ಹಾಕುವುದು, ಊರೊಳಗೆ ಬಿಡದಂತೆ ತಡೆಯುವುದು ಇತ್ಯಾದಿಗಳು ರೈತಸಂಘದ ಹೋರಾಟದ ಭಾಗವಾಗಿತ್ತು. ಅಷ್ಟೇಕೆ ಕೆಂಟುಕಿ ಚಿಕನ್ ಅಂಗಡಿಗೆ ನುಗ್ಗಿ ಅದನ್ನು ಧ್ವಂಸಗೊಳಿಸಿದ್ದು, ಮೊನ್ಸಾಂಟೊ ಬೀಜ ಬಿತ್ತಿದ್ದ ಹೊಲಕ್ಕೆ ನುಗ್ಗಿ ನಾಶ ಮಾಡಿದ್ದು ಇತ್ಯಾದಿ ಸಾಂಕೇತಿಕ ಕ್ರಮಗಳನ್ನೂ ರೈತಸಂಘ ಕೈಗೊಂಡಿತ್ತು. ಆದರೆ, ಈ ಎಲ್ಲಾ ಕಾರ್ಯಾಚರಣೆಗಳಲ್ಲಿ ಮನುಷ್ಯರಿಗೆ ದೈಹಿಕ ಹಿಂಸೆ ಕೊಡುವ ಕೆಲಸವನ್ನು ರೈತಸಂಘ ಮಾಡುತ್ತಿರಲಿಲ್ಲ. ಆದರೆ ಆಸ್ತಿನಾಶ ಅಥವಾ ಕಾನೂನುಭಂಗವನ್ನು ಹಿಂಸೆಯೆಂದು ಬಗೆದಿರಲಿಲ್ಲ. ಹಾಗೆ ನೋಡಿದರೆ ಕಾಯ್ದೆ ಭಂಗವನ್ನು ಸ್ವತಃ ಗಾಂಧಿಯವರು ಹೋರಾಟದ ಒಂದು ವಿಧಾನವಾಗಿಯೂ ಬಳಸಿದ್ದರು.

ಗಾಂಧಿಯವರ ಹಿಂಸೆ ಅಥವಾ ಅಹಿಂಸೆಯ ಮಾನದಂಡಗಳೇ ಸರಿಯೆಂದೋ, ಅವನ್ನೇ ಸಾರ್ವತ್ರಿಕವಾಗಿ ಮತ್ತು ಸಾರ್ವಕಾಲಿಕವಾಗಿ ಅವುಗಳನ್ನು ಮಾನದಂಡಗಳನ್ನಾಗಿಟ್ಟುಕೊಳ್ಳಬೇಕೆಂದೋ ಅಲ್ಲ. ಆದರೆ ಹಿಂಸೆ ಅಥವಾ ಅಹಿಂಸೆಯ ಚರ್ಚೆ ಬಂದಾಗ ಈ ದೇಶದಲ್ಲಿ ಗಾಂಧಿಯವರ ಮಾರ್ಗವನ್ನು ಒಂದು ಮಾನದಂಡವಾಗಿ ಬಳಸಿರುವುದರಿಂದ ಇವನ್ನು ಉಲ್ಲೇಖಿಸಲಾಗಿದೆ.

ಬಹಳ ಮುಖ್ಯವಾಗಿ ಗಾಂಧಿಯವರ ಹಿಂಸೆ-ಅಹಿಂಸೆ ಚರ್ಚೆಯಲ್ಲಿ ಹಿಂಸೆಯ ವ್ಯಾಖ್ಯಾನವನ್ನು ಸೀಮಿತಗೊಳಿಸುವುದನ್ನು ಕೆಲವರು ವಿರೋಧಿಸುತ್ತಾರೆ. ಶ್ರೀಮಂತಿಕೆ-ಅಧಿಕಾರದ ಅಡಿಯಲ್ಲಿ ನಲುಗುವ ದುಡಿಯುವ ಸಮುದಾಯ, ಜಾತಿ ಶೋಷಣೆಯಿಂದ ನಲುಗುವ ಶೋಷಿತ ಜಾತಿಗಳು, ಗಂಡಾಳ್ವಿಕೆಯಲ್ಲಿ ಹಿಂಡಲ್ಪಡುವ ಮಹಿಳೆ ಇವರೆಲ್ಲರೂ ಸ್ಟ್ರಕ್ಚರಲ್ ಹಿಂಸೆಯಿಂದಲೇ ನೋವುಣ್ಣುವುದಿಲ್ಲವೇ? ಕೆಲವೊಮ್ಮೆ ಇಂತಹವರಿಗೆ ತಕ್ಷಣದಲ್ಲೇ ತಿರುಗೇಟು ನೀಡಬೇಕಾಗಿ ಬರುವ ಅನಿವಾರ್ಯತೆ ಇರುವುದಿಲ್ಲವೇ? ಅಂತಹ ಹೊತ್ತಿನಲ್ಲಿ ನೀವು ಅವರಿಗೆ ಅಹಿಂಸೆಯನ್ನು ಬೋಧಿಸುವುದೇ ಹಿಂಸೆಯಾಗುತ್ತದೆ ಎಂಬುದು ಹಿಂಸೆ-ಅಹಿಂಸೆಯ ಕುರಿತು ಗಾಂಧಿ ವಿಚಾರಧಾರೆಗಿರುವ ಪ್ರಮುಖ ತಕರಾರು.

ವಾಸ್ತವದಲ್ಲಿ ಅಂತಹ ಯಾವ ಹಿಂಸೆಯನ್ನೂ ಮಾಡದೇ 60 ದಿನಗಳಿಂದ ಅತ್ಯಂತ ಶುದ್ಧ ಗಾಂಧಿ ಮಾರ್ಗದಲ್ಲಿ ದೆಹಲಿಯ ಹೊರಗೆ ಸತ್ಯಾಗ್ರಹವನ್ನು ನಡೆಸಿದ ಧೀಮಂತ ರೈತ ಸಮುದಾಯದ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಇಂದು ಮಾಡಲಾಯಿತು. ಲಕ್ಷಾಂತರ ಜನರು ನಾವು ಊಹಿಸಿಕೊಳ್ಳಲಾಗದ ಚಳಿಯಲ್ಲಿ, ಮನೆಯಿಂದ ದೂರ ಉಳಿದು, ಸಂಪಾದನೆಯಿಂದ ದೂರ ಉಳಿದು ಎರಡು ತಿಂಗಳು ಬೀದಿಯಲ್ಲಿ ಕಳೆದಿದ್ದು ಸತ್ಯಾಗ್ರಹದ ಭಾಗವಾಗಿ. ’ಸ್ವತಂತ್ರ ಭಾರತದಲ್ಲಿ ಪ್ರಜೆಗಳು ಹೀಗೆ ಮಾಡಬೇಕಾಗಿ ಬಂದಿದ್ದು ಪ್ರಭುತ್ವದ ಕ್ರೌರ್ಯದಿಂದಲ್ಲದೇ ಮತ್ತೇನು? ಇದರ ಬಗ್ಗೆ ದನಿಯೆತ್ತಿದ ಮಾತ್ರಕ್ಕೆ ರಾಜ್‌ದೀಪ್ ಸರದೇಸಾಯಿ, ಬರ್ಖಾದತ್‌ಗಳಿಗೆ ’ಆಕ್ರೋಶ ಭರಿತ’ ರೈತರು ಬ್ಯಾರಿಕೇಡ್‌ಗಳನ್ನು ಕಿತ್ತು ದೆಹಲಿಯ ಕಡೆಗೆ ಹೊರಟಿದ್ದು ಅಂತಹ ದೊಡ್ಡ ಸಮಸ್ಯೆಯಾಗಿ ಏಕೆ ಕಂಡಿತು? ತಮ್ಮ ತಮ್ಮ ಸುಖಾಸೀನ ಬದುಕಿನಿಂದ ಇದರ ಕುರಿತು ಸಲೀಸು ಕಾಮೆಂಟ್ ಮಾಡುವ ಧಾರ್ಷ್ಟ್ಯ ಎಲ್ಲಿಂದ ಬಂದಿತು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

PC : India Today

ಅರ್ನಾಬ್ ಗೋಸ್ವಾಮಿಯಂತಹ ಮನುಷ್ಯರೇ ಅಲ್ಲದ ಪತ್ರಕರ್ತ ವೇಷಧಾರಿಗಳು ಒಂದು ವೇಳೆ ಈ ವಿಚಾರದಲ್ಲಿ ಕೂಗಾಡಬಹುದು ಎಂಬ ಭಯ ಇರುವುದೇ ಆದಲ್ಲಿ, ಅದಕ್ಕೆ ಪ್ರತಿಯಾಗಿ ಆಡಬಹುದಾದ ಮಾತುಗಳು ಮೇಲೆ ಹೆಸರಿಸಿದ ಪತ್ರಕರ್ತರಲ್ಲಿ ಇರುವುದಿಲ್ಲ. ಏಕೆಂದರೆ ರೈತ ಕಾರ್ಮಿಕರೇ ಮೊದಲಾದ ಶೋಷಿತರು ದೀನರಾಗಿ ಪ್ರಭುತ್ವದ ಗುಂಡಿಗೆ ಎದೆಯೊಡ್ಡಿ ಮನಕರಗಿಸಬೇಕೇ ಹೊರತು, ಹಕ್ಕನ್ನು ಕೇಳುವುದು ಇವರಿಗೂ ಸಹನೆಯ ಸಂಗತಿಯಲ್ಲ.

ಹಾಗೆಯೇ ಶಶಿತರೂರ್‌ನಂತಹ ಒಬ್ಬ ’ಲಿಬರಲ್ ವ್ಯಕ್ತಿಗೆ, ಕೆಂಪು ಕೋಟೆಯ ಮುಂದಿನ ಧ್ವಜಸ್ತಂಭವೊಂದರಲ್ಲಿ ಬೇರೊಂದು ಧ್ವಜ ಹಾರಿದಾಕ್ಷಣ (ಅದನ್ನು ಹಾರಿಸಲು ಕಾರಣರಾದವರು ರೈತ ಚಳವಳಿಯ ಶೇ.99ರಷ್ಟು ಜನರನ್ನು ಪ್ರತಿನಿಧಿಸುವುದಿಲ್ಲ; ಅವರು ಸಂಚುಕೋರರೂ ಆಗಿರಬಹುದೆಂಬ ಅನುಮಾನಗಳು ಎದ್ದಿವೆ) ಕೂಡಲೇ ಖಂಡಿಸಬೇಕೆನಿಸುತ್ತದೆ. ದೆಹಲಿಯ ಸುತ್ತಮುತ್ತ ಎಂದೂ ಹಾರದಷ್ಟು ಸಂಖ್ಯೆಯ ಭಾರತದ ತ್ರಿವರ್ಣಧ್ವಜಗಳನ್ನು ಈ ರೈತರು ಕಟ್ಟಿಕೊಂಡು ಪರೇಡ್ ಹೊರಟಿದ್ದರು. ಇದನ್ನು ಬಿಟ್ಟರೆ ಆ ರೀತಿ ರಾಷ್ಟ್ರಧ್ವಜಗಳು ಕಂಡಿದ್ದು ಸಿಎಎ/ಎನ್‌ಆರ್‌ಸಿ ವಿರುದ್ಧದ ಆಂದೋಲನದಲ್ಲಿ! ಹೀಗಿರುವಾಗ ಇದ್ದಕ್ಕಿದ್ದಂತೆ ರಾಷ್ಟ್ರಧ್ವಜದ ಕುರಿತು ರೈತರಿಗೆ ತಿಳಿಸಿಕೊಡಲು ಹೋಗುವ ಆತುರ ಅವರದ್ದು. ಇಷ್ಟಕ್ಕೂ ದೇಶದ ಮರ್ಯಾದೆಯು ಬಾವುಟದಲ್ಲಿ ಇಲ್ಲ ಎಂಬುದು ಅರ್ಥವಾಗದಷ್ಟು ಮತಿಹೀನರೇ ಇವರು?

ಚಳವಳಿಯೊಂದನ್ನು ಕಟ್ಟುವುದು, ಸರ್ಕಾರದ ವಿರುದ್ಧ ನಿಲ್ಲುವುದು ಸುಲಭದ ಸಂಗತಿಯಲ್ಲ. ಅದರಲ್ಲೂ ಬಿಜೆಪಿಯಂತಹ ಪಕ್ಷದ ನೇತೃತ್ವದ, ಮೋದಿ-ಶಾರಂತಹ ಸರ್ವಾಧಿಕಾರಿಗಳ ನಾಯಕತ್ವದ ಎದುರು ಹೋರಾಟ ಕಟ್ಟುವುದು ಇನ್ನೂ ಕಷ್ಟ. ಮಾಧ್ಯಮಗಳು ಜನರ ದನಿಯಾಗದೇ ಆಳುವವರ ಬೇಟೆ ನಾಯಿಗಳಾದಾಗಂತೂ ಅಸಾಧ್ಯ. ಒಂದು ವೇಳೆ ಏನೋ ಒಂದು ದಿನದ ಹೋರಾಟ ಹೇಗೋ ಕಷ್ಟಪಟ್ಟು ಮಾಡಿ ಹೋಗಿಯೂ ಬಿಡಬಹುದು. ಆದರೆ ಲಕ್ಷಾಂತರ ಜನರನ್ನು ತಿಂಗಳುಗಟ್ಟಲೆ ಒಂದು ಕಡೆ ಇಟ್ಟುಕೊಂಡು ಚಳವಳಿ ಕಟ್ಟುವುದರ ಹಿಂದಿನ ಪರಿಶ್ರಮ ಮತ್ತು ಪ್ರಬುದ್ಧತೆಯನ್ನು ಕೇವಲ ವಿಶ್ಲೇಷಣೆಯ ಮುಖಾಂತರ ಅರಿತುಕೊಳ್ಳುವುದು ಅಸಾಧ್ಯ. ಅದು ಪ್ರತಿನಿತ್ಯ ಹೊಂದಿಸಬೇಕಾದ ರೊಟ್ಟಿ ಮತ್ತು ಇತರ ವ್ಯವಸ್ಥೆಗಳ ವಿಚಾರವಷ್ಟೇ ಅಲ್ಲ; ನೂರೆಂಟು ಬಗೆಯ ವ್ಯಕ್ತಿಗಳು ಮತ್ತು ವ್ಯಕ್ತಿತ್ವಗಳನ್ನು ನಿಭಾಯಿಸಬೇಕಾದ ಸವಾಲು. ಅದರಲ್ಲೂ ಇಲ್ಲಿ ಒಂದೇ ಸಂಘಟನೆಯಿಲ್ಲ; ಇರುವ ಇಡೀ ಜನಸಮೂಹವು ರೆಜಿಮೆಂಟೇಷನ್‌ಗೆ ಒಳಪಟ್ಟ ಸೈನಿಕರಲ್ಲ. ಅದರ ನೈತಿಕ ಶಕ್ತಿ ಕುಗ್ಗದಂತೆ, ವಿವಿಧ ಬಣ ಹಾಗೂ ಬಣ್ಣಗಳ ನಾಯಕರನ್ನೂ ಸಂಭಾಳಿಸಿಕೊಂಡು ಹೋಗುವುದು ಏನೋ ಒಂದು ಮಟ್ಟಿಗೆ ಸಾಧ್ಯವಾದರೆ ಅದೊಂದು ಪವಾಡ.

ಅಂತಹ ಪವಾಡವನ್ನು ಸಂಯುಕ್ತ ಕಿಸಾನ್ ಮೋರ್ಚಾದವರು ಮಾಡಿದ್ದಾರೆ. ಅದರ ಪ್ರಮುಖ ನೇತಾರರೊಬ್ಬರು ಹೇಳಿದಂತೆ, ’ವಿಚಾರಗಳ ಕುರಿತು ದಿನವಿಡೀ ಕಿತ್ತಾಡುತ್ತೇವೆ, ಅಂತಿಮವಾಗಿ ಸರ್ವಸಮ್ಮತ ತೀರ್ಮಾನಕ್ಕೆ ಬರುತ್ತೇವೆ’. ಇಂತಹ ಪವಾಡವನ್ನು ಸಾಧ್ಯವಾಗಿಸಿದ್ದು ನಾಯಕರು ಮಾತ್ರವಲ್ಲಾ, ಲಕ್ಷ ಲಕ್ಷ ಸಂಖ್ಯೆಯ ಸಾಮಾನ್ಯ ಜನರೂ ಸಹಾ. ಇಂತಹದೊಂದು ಅಪೂರ್ವ, ಧೀಮಂತ ಚಳವಳಿಯ ಕುರಿತು ’ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು’ ಎಂಬ ತೀರ್ಪುಗಳನ್ನು ವಿವಿಧ ಬಣ್ಣ, ಶ್ರೇಣಿಯ ಜನರು ನೀಡುವುದು ರೇಜಿಗೆ ಹುಟ್ಟಿಸುತ್ತದೆ. ಮಲದಲ್ಲೇ ಮುಳುಗೇಳುವ ತುತ್ತೂರಿ ಮಾಧ್ಯಮಗಳು ಮತ್ತು ಗುಲಾಮೀ ಮನಸ್ಥಿತಿಯ ಭಕ್ತರಿಂದ ಅಂತಹ ನಿರೀಕ್ಷೆಯಿಲ್ಲವೇ ಇಲ್ಲ. ಆದರೆ ಚಳವಳಿಯ ಕುರಿತಂತೆ ಕಾಳಜಿ ಮತ್ತು ಸದಾಶಯವುಳ್ಳವರೂ ಈ ಪರಿ ಜಡ್ಜ್‌ಮೆಂಟಲ್ ಆಗಿರುವುದು ಒಳ್ಳೆಯ ಲಕ್ಷಣವಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ ಒಂದು ವೇಳೆ ಚಳವಳಿನಿರತ ರೈತರೇ ಅರಾಜಕವಾಗಿ ಬೀದಿಗಿಳಿದಿದ್ದರೂ, ಈ ಸಂದರ್ಭದ ಹಿನ್ನೆಲೆಯನ್ನರಿತುಕೊಂಡು ಅದಕ್ಕೆ ಕಾರಣವಾದ ಸರ್ಕಾರವನ್ನು ಗುರಿ ಮಾಡಬೇಕಾದ್ದು ಸರಿಯಾದದ್ದು. ಸಿಎಎ ವಿರೋಧಿ ಹೋರಾಟದಲ್ಲಿ ಹೇಗೋ ಹಾಗೆ, ಇಲ್ಲೂ ಸಹಾ ಅಪಾರವಾದ ತಾಳ್ಮೆ, ಸಹನೆ ಹಾಗೂ ಪ್ರಬುದ್ಧತೆಯನ್ನು ರೈತ ಚಳವಳಿಯು ಪ್ರದರ್ಶಿಸಿದೆ. ಮಿಲಿಟೆಂಟ್ ಚಳವಳಿಯ ಹಿನ್ನೆಲೆಯುಳ್ಳ ಪಂಜಾಬಿನ ಜನರು ಈ ವಿಚಾರದಲ್ಲಿ ತೋರಿರುವ ಸಂಯಮವೇ ಅನನ್ಯವಾದದ್ದು. ಅಂತೆಯೇ ಸರ್ಕಾರದ ಮನುಷ್ಯ ವಿರೋಧಿತನವೂ ಎದ್ದು ತೋರುವಂಥಾದ್ದೇ ಆಗಿತ್ತು.

ಒಂದೇ ಮಾತಲ್ಲಿ ಹೇಳುವುದಾದರೆ ಸರ್ಕಾರವು ಕೃಷಿ ಕಾಯ್ದೆಗಳನ್ನು ತರುವುದರ ಮುಖಾಂತರವೇ ಹಿಂಸೆ ಮತ್ತು ಅರಾಜಕತೆಯನ್ನು ಹುಟ್ಟಿಹಾಕಿತ್ತು. ರೈತರು ಅದನ್ನು ತಾಳ್ಮೆ ಮತ್ತು ವಿವೇಕದಿಂದ ಎದುರಿಸಿದರು. ಹೆಜ್ಜೆ ಹೆಜ್ಜೆಗೂ ಸರ್ಕಾರವು ಹಿಂಸೆಯನ್ನು ಹೆಚ್ಚಿಸುತ್ತಾ ಹೋಗಿತ್ತು. ರೈತರು ತಮ್ಮ ವಿಶಿಷ್ಟ ಪ್ರಬುದ್ಧತೆಯಿಂದ ಅದನ್ನು ಎದುರುಗೊಂಡರು. ಉಳಿದಂತೆ ಆಗಬಹುದಾದ ಸಣ್ಣ ಪುಟ್ಟ ಅವಘಡಗಳೆಲ್ಲಾ ಕೇವಲ ಕೊಲ್ಯಾಟರೆಲ್ ಡ್ಯಾಮೇಜ್. ಅದನ್ನೇ ಧ್ಯಾನಿಸದೇ, ಒಟ್ಟಾರೆ ಒಳಿತಿನ ಕಡೆಗೆ ನಡೆಯುವುದಾದರೆ, ನಮ್ಮ ಕೈಲಾದಷ್ಟು ಜೊತೆಗೂಡುವ ಕೆಲಸ ಮಾಡುವುದೇ ಇಂದು ಎಲ್ಲಾ ಪ್ರಜಾತಂತ್ರವಾದಿಗಳ ಕರ್ತವ್ಯವಾಗಿದೆ.


ಇದನ್ನೂ ಓದಿ: ಸಿಖ್ ಧ್ವಜ ಹಾರಿಸಿದ ಗುಂಪನ್ನು ಕೆಂಪುಕೋಟೆಯವರೆಗೆ ಹೋಗಲು ಪೊಲೀಸರು ಬಿಟ್ಟಿದ್ದೇಕೆ? – ರೈತ ಮುಖಂಡರ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...