Homeಮುಖಪುಟಸಂಸತ್ತಿನ ಮೊದಲ ಮಹಡಿಯಲ್ಲಿ 'ಮೋದಾನಿ' ಬ್ಯಾನರ್ ಪ್ರದರ್ಶನ: ಪ್ರತಿಪಕ್ಷಗಳ ವಿನೂತನ ಪ್ರತಿಭಟನೆ

ಸಂಸತ್ತಿನ ಮೊದಲ ಮಹಡಿಯಲ್ಲಿ ‘ಮೋದಾನಿ’ ಬ್ಯಾನರ್ ಪ್ರದರ್ಶನ: ಪ್ರತಿಪಕ್ಷಗಳ ವಿನೂತನ ಪ್ರತಿಭಟನೆ

- Advertisement -
- Advertisement -

ಅದಾನಿ ಹಗರಣದ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಕಿವುಡಾಗಿದೆ, ಆ ಬಗ್ಗೆ ಮಾತೇ ಆಡುತ್ತಿಲ್ಲ. ಹಾಗಾಗಿ ಕೇಂದ್ರಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ವಿನೂತನವಾಗಿ ಪ್ರತಿಭಟಿಸಿವೆ.

ಮಂಗಳವಾರದ ಸಂಸತ್ತ ಕಲಾಪ ಆರಂಭವಾಗುವುದಕ್ಕೂ ಮುನ್ನ, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪ್ರತಿಪಕ್ಷಗಳ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ‘ವಿನೂತನ’ ಪ್ರತಿಭಟನೆಗೆ ನಿಧಾರ ತಗೆದುಕೊಳ್ಳಲಾಯಿತು.

ಸಂಸತ್ತಿನ ಉಭಯ ಸದನಗಳ ಕಲಾಪವು ಮಂಗಳವಾರ ಮಧ್ಯಾಹ್ನಕ್ಕೆ ಮುಂದೂಡಿಕೆಯಾದ ಬಳಿಕ, 17 ಪ್ರತಿಪಕ್ಷಗಳ ಸಂಸದರು ಸಂಸತ್ ಭವನದ ಮೊದಲ ಮಹಡಿಯಲ್ಲಿರುವ ಎಸ್‌ಬಿಐ ಕಚೇರಿ ಎದುರು ಸೇರಿದರು. ಅದಾನಿ ಸಮೂಹಕ್ಕೆ ಸಾಲ ನೀಡಿರುವ ಎಸ್‌ಬಿಐ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮಂಗಳವಾರ ಸಂಸತ್ತಿನ ಮೊದಲ ಮಹಡಿಯಲ್ಲಿ ಪ್ರತಿಪಕ್ಷಗಳು, ಪ್ರಧಾನಿ ನರೇಂದ್ರ ಮೋದಿ ಹಾಗೂ ಉದ್ಯಮಿ ಗೌತಮ್ ಅದಾನಿ ಅವರ ಭಾವಚಿತ್ರಗಳಿರುವ ಬೃಹತ್ ಗಾತ್ರದ ಬ್ಯಾನರ್‌ನ್ನು ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದವು. ಸಂಸತ್ ಭವನದಲ್ಲಿ ಈ ರೀತಿಯ ದೊಡ್ಡ ಬ್ಯಾನರ್ ನೇತುಹಾಕಿ ಪ್ರತಿಭಟಿಸಿದ್ದು ಇದೇ ಮೊದಲು ಎನ್ನಬಹುದು.

ಆ ಬ್ಯಾನರ್‌ನಲ್ಲಿ ‘ಮೋದಾನಿ’, ‘ನಮಗೆ ಜೆಪಿಸಿ ಬೇಕು’ ಎಂದು ಬರೆಯಲಾಗಿದೆ. ಈ ವೇಳೆ ”ಮೋದಿ ಮತ್ತು ಅದಾನಿ ಅಣ್ಣತಮ್ಮಂದಿರು. ಇಬ್ಬರೂ ಸೇರಿ ದೇಶವನ್ನು ಮಾರುತ್ತಾರೆ” ಎನ್ನುವ ಘೋಷಣೆಗಳನ್ನು ಕೂಗಿ ಪ್ರತಿಪಕ್ಷಗಲು ತಮ್ಮ ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್, ಎಎಪಿ, ಬಿಆರ್‌ಎಸ್, ಡಿಎಂಕೆ, ಸಿಪಿಎಂ, ಸಿಪಿಐ, ಆರ್‌ಜೆಡಿ, ಎನ್‌ಸಿಪಿ ಹಾಗೂ ಎಸ್‌ಪಿ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಒಳಮೀಸಲಾತಿಯ ಮುಂಚೂಣಿ ನಾಯಕ ಅಂಬಣ್ಣ, ಬಿ.ಗೋಪಾಲ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆ

ಈ ಪ್ರತಿಪಕ್ಷಗಳ ಪ್ರತಿಭಟನೆಯಿಂದ ತೃಣಮೂಲ ಕಾಂಗ್ರೆಸ್ ಮತ್ತೆ ಅಂತರ ಕಾಯ್ದುಕೊಂಡಿದೆ. ಪ್ರತಿಪಕ್ಷಗಳ ಗುಂಪಿನಲ್ಲಿದ್ದರೂ, ಪ್ರತ್ಯೇಕ ಮಾರ್ಗ ಅನುಸರಿಸುತ್ತಿರುವ ಟಿಎಂಸಿ, ಅದಾನಿ ವಿಚಾರವಾಗಿ ಪ್ರತ್ಯೇಕ ಪ್ರತಿಭಟನೆ ಹಮ್ಮಿಕೊಂಡಿತ್ತು. ಅದಾನಿಯನ್ನು ಬಂಧಿಸಿ ಎಂಬ ಬರಹವುಳ್ಳ ಹಾಗೂ ಎಲ್ಲ ಟಿಎಂಸಿ ಸಂಸದರ ಸಹಿ ಇರುವ ಟೋಪಿಯನ್ನು ಧರಿಸಿ ಸಂಸದರು ಸಂಸತ್ ಭವನದ ಪಕ್ಷದ ಕಚೇರಿಯಿಂದ ವಿಜಯ್ ಚೌಕದವರೆಗೆ ಮೆರವಣಿಗೆ ನಡೆಸಿದರು.

”ಹಣಕಾಸು ಸಚಿವರು, ಸೆಬಿ, ಎಲ್‌ಐಸಿ, ಎಸ್‌ಬಿಐ ಮುಖ್ಯಸ್ಥರಿಗೆ ಟೋಪಿಯನ್ನು ನೀಡಲಾಗುವುದು” ಎಂದು ರಾಜ್ಯಸಭೆಯಲ್ಲಿ ಟಿಎಂಸಿ ಪಕ್ಷದ ನಾಯಕರಾಗಿರುವ ಡೆರೆಕ್ ಒಬ್ರಿಯನ್ ತಿಳಿಸಿದರು.

ಅದಾನಿ ಪ್ರಕರಣದಲ್ಲಿ ಪಕ್ಷವು ಮೆದುವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಟಿಎಂಸಿ, ಅದಾನಿಯನ್ನು ಬಂಧಿಸಿ ಎಂದು ಆಗ್ರಹಿಸಿರುವ ಏಕೈಕ ಪಕ್ಷ ತಮ್ಮದು ಎಂದು ಹೇಳಿಕೊಂಡಿದೆ.

ಸಂಸತ್ ಕಲಾಪದ ಬಿಕ್ಕಟ್ಟನ್ನು ಪರಿಹರಿಸುವ ಕುರಿತು ಮಂಗಳವಾರ ರಾಜ್ಯಸಭೆಯ ಸಭಾಪತಿ ಜಗದೀಪ್‌ ಧನಕರ್ ಅವರು, ಕರೆದಿದ್ದ ಎರಡು ಸಭೆಗಳಿಗೆ ಪ್ರತಿಪಕ್ಷದ ಸದಸ್ಯರು ಹಾಜರಾಗಲಿಲ್ಲ. ”ಸರ್ಕಾರ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚನೆಗೆ ಸಿದ್ಧವಿಲ್ಲ ಎಂಬುದು ಈ ನಡೆಯಿಂದ ಗೊತ್ತಾಗುತ್ತದೆ. ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಸರ್ಕಾರದ ಜೊತೆ ಸಭೆ ನಡೆಸುವುದರಲ್ಲಿ ಅರ್ಥವಿಲ್ಲ” ಎಂದು ಪ್ರತಿಪಕ್ಷಗಳು ಹೇಳಿವೆ.

ಸಭೆಯಲ್ಲಿ ಬಿಜೆಪಿ, ವೈಎಸ್‌ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳು ಭಾಗಿಯಾಗಿದ್ದವು. ಇನ್ನುಳಿದ ಪ್ರತಿಪಕ್ಷಗಳು ಸಭೆಗೆ ಹಾಜರಾಗದಿರುವುದು ಸರಿಯಯಾದ ವರ್ತನೆಯಲ್ಲ. ಸಭೆಗೂ ಮುನ್ನ ತಮ್ಮನ್ನು ಭೇಟಿಯಾಗಿದ್ದ ಕಾಂಗ್ರೆಸ್ ಮುಖ್ಯ ಸಚೇತಕ ಮತ್ತು ಡಿಎಂಕೆ ಸದನ ನಾಯಕರು ಸಭೆಗೆ ಹಾಜರಾಗುತ್ತಿಲ್ಲ ಎಂಬುದನ್ನು ತಿಳಿಸಿದ್ದರು ಎಂದು ಧನಕರ್ ಅವರು ಟ್ವೀಟ್ ಮಾಡಿದ್ದಾರೆ.

ಧನಕರ್ ಅವರು ಮಧ್ಯಾಹ್ನ 2.30ಕ್ಕೆ ಮತ್ತೊಂದು ಸಭೆ ಕರೆದಿದ್ದರು. ಈ ಸಭೆಯಲ್ಲಿ ಪ್ರತಿಪಕ್ಷಗಳಾದ ಎನ್‌ಸಿಪಿ, ಡಿಎಂಕೆ ಹಾಗೂ ಟಿಎಂಸಿಯ ಕೆಲವು ಪ್ರತಿನಿಧಿಗಳು ಕಾಣಿಸಿಕೊಂಡರು. ಸಭಾಪತಿಗೆ ಪದೇಪದೇ ಅಗೌರವ ತೋರಬಾರದು ಎನ್ನುವ ಕಾರಣಕ್ಕೆ ಕೆಲವರನ್ನು ಸಭೆಗೆ ಕಳುಹಿಸಲು ಪ್ರತಿಪಕ್ಷಗಳು ತೀರ್ಮಾನಿಸಿದ್ದವು ಎಂದು ಮೂಲಗಳು ಹೇಳಿವೆ.

ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳು ತಮ್ಮ ವಿಷಯಗಳನ್ನು ಪಕ್ಕಕ್ಕಿಡಬೇಕು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಲೋಕಸಭೆ ಸ್ಪೀಕರ್ ಓ ಬಿರ್ಲಾ ಅವರು ಸಲಹೆ ನೀಡಿದ್ದಾರೆ. ಆಡಳಿತರೂಢ ಬಿಜೆಪಿ ಇದಕ್ಕೆ ಒಪ್ಪಿಕೊಂಡಿತು. ಆದರೆ, ಅದಾನಿ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸುವುದನ್ನು ಮುಂದುವರಿಸುವುದಾಗಿ ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದರು. ಇದೇ ವೇಳೆ ಅವರು, ರಾಹುಲ್ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...