Homeಕರ್ನಾಟಕಒಳಮೀಸಲಾತಿಯ ಮುಂಚೂಣಿ ನಾಯಕ ಅಂಬಣ್ಣ, ಬಿ.ಗೋಪಾಲ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆ

ಒಳಮೀಸಲಾತಿಯ ಮುಂಚೂಣಿ ನಾಯಕ ಅಂಬಣ್ಣ, ಬಿ.ಗೋಪಾಲ್ ಸೇರಿದಂತೆ ಹಲವರು ಕಾಂಗ್ರೆಸ್ ಸೇರ್ಪಡೆ

ದಲಿತ ರಾಜಕೀಯದ ಕುರಿತು ಎದ್ದಿರುವ ಪ್ರಶ್ನೆಗಳಿಗೆ ಅಂಬಣ್ಣ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿದ್ದಾರೆ.

- Advertisement -
- Advertisement -

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾಯಕರಾದ ಅಂಬಣ್ಣ ಅರೋಲಿಕರ್‌, ಬಿ.ಗೋಪಾಲ್ ಸೇರಿದಂತೆ ಹಲವು ದಲಿತ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಬೆಂಗಳೂರಿನ ಕ್ವೀನ್ಸ್‌ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಎಂಆರ್‌ಎಚ್‌ಎಸ್‌ನ ಅಂಬಣ್ಣ (ರಾಯಚೂರು) ಅವರೊಂದಿಗೆ, ಡಿಎಸ್‌ಎಸ್‌ ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್ (ಬೆಂಗಳೂರು), ದಸಂಸ ಮುಖಂಡ ಮಾರೇಶ್‌ ನಾಗಣ್ಣನವರ್‌ (ಧಾರವಾಡ), ಅಲೆಮಾರಿ ಸಮುದಾಯದ ರಾಜ್ಯ ಮುಖಂಡ ಸಣ್ಣಮಾರಣ್ಣ (ವಿಜಯನಗರ), ಮಾದಿಗ ದಂಡೋರದ ವೆಂಕಟೇಶ್ ಆಲೂರ್‌ (ಯಾದಗಿರಿ), ಸ್ಲಂ ನಿವಾಸಿಗಳ ರಾಜ್ಯ ಸಂಚಾಲಕ ನರಸಿಂಹಮೂರ್ತಿ (ತುಮಕೂರು), ದಸಂಸ ಮುಖಂಡ ಮರಿಸ್ವಾಮಿ ಕೊಟ್ಟೂರು (ವಿಜಯನಗರ), ಯುವ ಮುಖಂಡರಾದ ಮುರಳೀಧರ ಮೇಲಿನಮನಿ (ಕೊಪ್ಪಳ), ಹತವಾಡಿ ಲಕ್ಷ್ಮಣ್‌ (ಬೆಂಗಳೂರು), ವಿಜಯಕುಮಾರ್‌ (ಬೀದರ್‌), ಎಂಆರ್‌ಎಚ್‌ಎಸ್‌ ರಾಯಚೂರು ಜಿಲ್ಲಾ ಮುಖಂಡ ತಿಮ್ಮಪ್ಪ ಆಲ್ಕೂರು, ರಾಜಣ್ಣ (ಚಿತ್ರದುರ್ಗ), ಉಡುಚಪ್ಪ ಯಲ್ಲಮ್ಮ ಮಳಗಿ (ಹಾವೇರಿ), ಆದಿಜಾಂಬಜ ಜನಸಂಘದ ರಾಜ್ಯ ಮುಖಂಡ ಮುನಿಕೃಷ್ಣಯ್ಯ (ಬೆಂಗಳೂರು), ದಸಂಸ ಮುಖಂಡ ಯಲ್ಲಪ್ಪ ಗೊರಮಗೊಲ್ಲ (ಬೆಳಗಾವಿ), ಮಾರುತಿ ಸಿದ್ದಪ್ಪ ರಂಗಪುರಿ (ಬೆಳಗಾವಿ), ಬಿಎಸ್‌ಪಿ ಮಾಜಿ ರಾಜ್ಯಾಧ್ಯಕ್ಷರಾದ ಬಿ.ಗೋಪಾಲ್‌, ದಾವಣಗೆರೆ ಜಿಲ್ಲಾ ದಸಂಸ ಮುಖಂಡ ಎ.ಡಿ.ಈಶ್ವರಪ್ಪ, ಅಂಬೇಡ್ಕರ್‌ ಸೇನೆ ರಾಜ್ಯ ಮುಖಂಡ ಪಂಡಿತ್‌ ಮುನಿವೆಂಕಟಪ್ಪ, ಬೆಳಗಾವಿ ಡಿಎಸ್‌ಎಸ್ ಲೀಡರ್‌ ಪ್ರಭಾಕರ್‌ ಚಲವಾದಿ ತೇರದಾಳ, ಹಾಸನದ ಶಿವಪ್ಪ ದಿಣ್ಣೇಕೆರೆ, ಎಚ್‌.ಪಿ.ಸುಧಾಮ್ ದಾಸ್‌ ಕಾಂಗ್ರೆಸ್ ಸೇರಿದ್ದಾರೆ.

ಮೂವತ್ತು ವರ್ಷಗಳ ಇತಿಹಾಸವಿರುವ ಒಳಮೀಸಲಾತಿ ಹೋರಾಟ ಕಳೆದ ಡಿಸೆಂಬರ್‌ನಲ್ಲಿ ಪುನಾರಂಭವಾಗಿತ್ತು. ಅದರ ಮುಂದಾಳತ್ವವನ್ನು ಅಂಬಣ್ಣ ವಹಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳನ್ನು ಕಟುವಾಗಿ ಟೀಕಿಸುತ್ತಾ, ಹೊಲೆಯ ಮತ್ತು ಮಾದಿಗ ಸಮುದಾಯಕ್ಕೆ ಆಗಿರುವ ಅನ್ಯಾಯದ ಕುರಿತು ದನಿ ಎತ್ತುತ್ತಾ ಬಂದಿರುವ ಅಂಬಣ್ಣ ಕಾಂಗ್ರೆಸ್ ಸೇರುವ ಮೂಲಕ ಹಲವು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದ್ದಾರೆ. ಜೊತೆಗೆ ಹಲವು ಪ್ರಶ್ನೆಗಳನ್ನು ಹುಟ್ಟಿಹಾಕಿದ್ದಾರೆ.

Ambanna Arolikar (@AmbannaArolikar) / Twitter
ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅಂಬಣ್ಣ ಅರೋಲಿಕರ್‌

ಹೊಲೆಯ ಹಾಗೂ ಮಾದಿಗ ಸಮುದಾಯದ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾಗಿರುವ ಕುರಿತು ‘ನಾನುಗೌರಿ.ಕಾಂ’ಗೆ ಅಂಬಣ್ಣ ಅರೋಲಿಕರ್‌‌ ಪ್ರತಿಕ್ರಿಯಿಸಿದ್ದಾರೆ.

ನಾನುಗೌರಿ: ಎಲ್ಲಾ ರಾಜಕೀಯ ಪಕ್ಷಗಳನ್ನು ಸಮನಾಂತರವಾಗಿ ವಿರೋಧಿಸುತ್ತಾ ಬಂದಿದ್ದೀರಿ. ಈಗ ಕಾಂಗ್ರೆಸ್ ಸೇರಿದ್ದೀರಿ. ಒಳಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ ಮುಂದೆ ಬರುವ ಪ್ರಶ್ನೆಗಳಿಗೆ ನಿಮ್ಮ ಪ್ರತಿಕ್ರಿಯೆ ಏನು? ನಿಮ್ಮ ಮುಂದಿನ ನಡೆ ಏನು?

ಅಂಬಣ್ಣ: ಒಳಮೀಸಲಾತಿ ಹೋರಾಟದ ಭಾಗವಾಗಿಯೇ ನಾವು ಪಕ್ಷ ಸೇರಿದ್ದೇವೆ. ರಾಜಕೀಯ ಪಕ್ಷಗಳನ್ನು ಪ್ರಶ್ನಿಸುವ ಕೆಲಸವನ್ನು ಇದುವರೆಗೂ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ. ಕಾಂಗ್ರೆಸ್‌ ಪಕ್ಷದ ಪ್ರತಿನಿಧಿಯಾಗಿ ಅಥವಾ ಜನಪ್ರತಿನಿಧಿಯಾಗಿ ಹೋರಾಟವನ್ನು ಮುಂದುವರಿಸುವ ಪ್ರಕ್ರಿಯೆ ಇದಾಗಿದೆ. ಪಕ್ಷ ಸೇರ್ಪಡೆ ಎಂಬುದು ರಾಜಕಾರಣಕ್ಕೆ ಹೋದಂತೆ ಅಲ್ಲ, ಇದು ಕೂಡ ಒಂದು ರೀತಿಯಲ್ಲಿ ಹೋರಾಟವಾಗಿದೆ. ರಾಜಕೀಯೇತರವಾಗಿ ಹೋರಾಟ ಮಾಡಿದ್ದರಿಂದ ಎರಡು ಪಕ್ಷಗಳು ಬೆಚ್ಚಿಬಿದ್ದಿವೆ. ಕೆಲವೇ ದಿನಗಳಲ್ಲಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಶಿಫಾರಸ್ಸು ಮಾಡಲು ನಿರ್ಧಾರವನ್ನು ಸರ್ಕಾರ ಕೈಗೊಳ್ಳುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷವು ಚಿತ್ರದುರ್ಗದಲ್ಲಿ ಸಮಾವೇಶ ಮಾಡಿ, ನಮ್ಮ ಬಗ್ಗೆ ತೀರ್ಮಾನ ತೆಗೆದುಕೊಂಡಿದೆ. ಒಳಮೀಸಲಾತಿ ಹೋರಾಟದ ಮತ್ತೊಂದು ಮುಖ್ಯ ಬೇಡಿಕೆಯನ್ನೂ ಗಮನಿಸಬೇಕು. ಹೊಲೆಯ, ಮಾದಿಗ ಸಮುದಾಯಗಳನ್ನು ಸೇರಿದಂತೆ ಮೂಲ ಅಸ್ಪೃಶ್ಯರಾಗಿರುವ 96 ಜಾತಿಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯವನ್ನು ನೀಡಬೇಕು. ಕನಿಷ್ಠ 28 ಕ್ಷೇತ್ರಗಳಲ್ಲಿ ಅಸ್ಪೃಶ್ಯ ಸಮುದಾಯಗಳಿಗೆ ಟಿಕೆಟ್ ನೀಡಬೇಕು. ಒಳಮೀಸಲಾತಿ ಹಂಚಿಕೆ ಸಿದ್ಧಾಂತವನ್ನು ಟಿಕೆಟ್ ವಿಚಾರದಲ್ಲೂ ನಾವು ಪ್ರತಿಪಾದಿಸುತ್ತಿದ್ದೇವೆ.

ಮಾದಿಗ ಸಮುದಾಯಕ್ಕೆ ಶೇ. 6ರಷ್ಟು, ಹೊಲೆಯ ಸಮುದಾಯಕ್ಕೆ ಶೇ. 5ರಷ್ಟು ಹಂಚಿಕೆ ಆಗಬೇಕಿದೆ. ನಾವು ಅಣ್ಣತಮ್ಮಂದಿರು ಐದೂವರೆ- ಐದೂವರೆ ಪಾಲನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿದ್ದೇವೆ. ಹೀಗಾಗಿ 14 ಮೀಸಲು ಕ್ಷೇತ್ರಗಳಲ್ಲಿ ಹೊಲೆಯ ಸಮುದಾಯದ ಅಭ್ಯರ್ಥಿಗೆ, 14 ಕ್ಷೇತ್ರಗಳಲ್ಲಿ ಮಾದಿಗ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಬೇಕು, ಪ್ರಥಮ ಅಧಿವೇಶನದಲ್ಲೇ ಒಳಮೀಸಲಾತಿಯನ್ನು ಜಾರಿಗೊಳಿಸಬೇಕು ಎಂಬುದು ನಮ್ಮ ಷರತ್ತಾಗಿದೆ.

2004ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಒಳಮೀಸಲಾತಿ ವಿಚಾರ ರಿಜೆಕ್ಟ್ ಆಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಸ್ವಯಂಪ್ರೇರಿತವಾಗಿ ಉಷಾ ಮೆಹ್ರಾ ಆಯೋಗವನ್ನು ಮಾಡಿತ್ತು. ಸಾಂವಿಧಾನಿಕವಾಗಿ ಅಖಿಲ ಭಾರತ ಮಟ್ಟದಲ್ಲಿ ಒಳಮೀಸಲಾತಿ ವಿಚಾರವನ್ನು ಚರ್ಚಿಸಲು ವೇದಿಕೆಯನ್ನು ಸಿದ್ಧಪಡಿಸಲಾಗಿದ್ದು, ಈ ಕಾರಣಕ್ಕಾಗಿ ನಾವು ನೇರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲು ಮುಂದಾಗಿದ್ದೇವೆ. ಇದು ಹೋರಾಟದ ಮುಂದುವರಿಕೆಯ ಭಾಗ. ಒಳಮೀಸಲಾತಿಯ ವಿಚಾರವನ್ನು ಎಲ್ಲಿ ಪ್ರತಿಪಾದಿಸಬೇಕೋ, ಅಲ್ಲಿ ಪ್ರತಿಪಾದಿಸಲು ಸಿದ್ಧರಾಗಿದ್ದೇವೆ. ನಾವು ಸ್ವಯಂಪ್ರೇರಿತವಾಗಿ ಹೋಗಿಲ್ಲ. ಕಾಂಗ್ರೆಸ್ ಪಕ್ಷವೇ ನಮ್ಮನ್ನು ಆಹ್ವಾನಿಸಿದೆ.

ಕಳೆದ 30 ವರ್ಷಗಳ ಹೋರಾಟದಲ್ಲಿ ಎಲ್ಲಾ ಪಕ್ಷಗಳನ್ನು ವಿರೋಧಿಸಿದ್ದೇವೆ. ಆದರೆ ನಮ್ಮ ಪರವಾಗಿ ಅಧಿಕೃತವಾಗಿ ಕಾಂಗ್ರೆಸ್ ಒಲುವು ತೋರಿದೆ. ನಮ್ಮ ಬೇಡಿಕೆಯನ್ನು ಒಪ್ಪಿಕೊಂಡಿದೆ. ಪಕ್ಷಕ್ಕೆ ಸೇರಿದ ಬಳಿಕ ಒಳಮೀಸಲಾತಿ ಹೋರಾಟವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಈ ಹೋರಾಟವನ್ನು ರಾಜಕೀಯವಾಗಿ ಹೇಗೆ ಮುಂದುವರಿಸಬೇಕು ಎನ್ನುವ ತಾಲೀಮು ಮಾಡುತ್ತಿದ್ದೇವೆ.

ಒಂದು ಪಕ್ಷವನ್ನು ಒಪ್ಪಿಕೊಳ್ಳುವುದರಿಂದ ಸಮುದಾಯಕ್ಕೆ ಒಳ್ಳೆಯದಾಗುತ್ತದೆ ಎನ್ನುವುದಾದರೆ, ಸಮುದಾಯದ ಮುಖಂಡರು ತಮ್ಮೊಂದಿಗೆ ಇರಬೇಕೆಂದು ಪಕ್ಷ ಬಯಸಿದಾಗ ಅದರೊಂದಿಗೆ ಹೋಗುವುದು ಸೂಕ್ತವೆನಿಸುತ್ತದೆ. ಹೊಲೆಯ ಮಾದಿಗ ಸಮುದಾಯಗಳಿಗೆ ಸಮನಾಂತರವಾಗಿ ಬಿ ಫಾರಂ ಕೊಡುತ್ತೇವೆ ಎಂದಾಗ, ಆರ್‌ಎಸ್‌ಎಸ್‌ ವ್ಯಕ್ತಿಯೇ ನೀನು ಎಂಬ ಪ್ರಶ್ನೆಗಳು ಬಂದಾಗ ಕಾಂಗ್ರೆಸ್ಅನ್ನು ಬಲವಂತವಾಗಿ ಒಪ್ಪಿಕೊಂಡಿದ್ದೇನೆ.

ಈವರೆಗೆ ನಾನು ಇವರಿಗೆ ಮತ ಹಾಕಿಲ್ಲ. ಹೀಗಿರುವವನು ಈ ಪಕ್ಷಕ್ಕೆ ಮತ ಹಾಕಿ ಎಂದು ಹೇಳಬೇಕೆಂದರೆ ಇಲ್ಲಿ ಬಲವಾದ ಸಿದ್ಧಾಂತವಿದೆ. ಹಂಚಿ ತಿನ್ನುವ ನ್ಯಾಯವಿದೆ. ಪ್ರಾಯೋಗಿಕವಾಗಿ ಈ ಸಿದ್ಧಾಂತವನ್ನು ಮುಂದುವರಿಸಬೇಕಿದೆ. ಚಳವಳಿಯ ಸಂಗಾತಿಗಳು ಬೀದಿ ಹೋರಾಟವನ್ನೂ ಮುಂದುವರಿಸುತ್ತಾರೆ. ಹೋರಾಟದ ಮುಂಚೂಣಿಯಲ್ಲಿರುವ ಕೆಲವೇ ಕೆಲವರು ಪಕ್ಷ ಸೇರಿದ್ದೇವೆ.

ನಮ್ಮ ಸ್ಥಿತಿ ಬಿಜೆಪಿ ಬಂದಾಗ ಬಿಜೆಪಿ, ಜೆಡಿಎಸ್ ಬಂದಾಗ ಜೆಡಿಎಸ್‌, ಕಾಂಗ್ರೆಸ್ ಬಂದಾಗ ಕಾಂಗ್ರೆಸ್ ಎಂಬಂತಾಗಿತ್ತು. ನಮ್ಮ ನಿಲುವು ಸ್ಪಷ್ಟವಾಗಿರಬೇಕಿತ್ತು. ಎಲ್ಲ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಇಬ್ಬಗೆ ನೀತಿ ಬೇಸರ ತರಿಸಿತು. ಎಲ್ಲರಿಂದಲೂ ನಿಷ್ಠುರವಾಗುವುದು ತಪ್ಪುತ್ತಿರಲಿಲ್ಲ, ಅದರಿಂದ ಸಮುದಾಯಕ್ಕೂ ಯಾವುದೇ ಲಾಭವೂ ಆಗಲಿಲ್ಲ. ಈ ವಾಸ್ತವವನ್ನು ಅರ್ಥಮಾಡಿಕೊಂಡು ಈ ನಿರ್ಧಾರ ತೆಗೆದುಕೊಂಡಿದ್ದೇವೆ.

ನಾನುಗೌರಿ: ನಿಮಗೆ ಟಿಕೆಟ್ ನೀಡುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ನೀಡಿದೆಯೇ? 

ಅಂಬಣ್ಣ: ಒಳಮೀಸಲಾತಿ ಜಾರಿ ಮತ್ತು ಚುನಾವಣೆಯಲ್ಲಿ ಮಾದಿಗ ಸಮುದಾಯಕ್ಕೆ 14, ಹೊಲೆಯ ಸಮುದಾಯಕ್ಕೆ 14 ಬಿ ಫಾರಂ ನೀಡಬೇಕು ಎಂಬುದು ನಮ್ಮ ಷರತ್ತುಗಳಾಗಿವೆ. ದೊಡ್ಡ ಸಂಖ್ಯೆಯ ಮಾದಿಗ ಸಮುದಾಯವು ತಮ್ಮೊಂದಿಗೆ ಬರಲಿರುವುದರಿಂದ ಎಲ್ಲಾದರೂ ಟಿಕೆಟ್‌ ಕೊಡಬಹುದೆಂದು ವೈಯಕ್ತಿಕವಾಗಿ ಅನಿಸುತ್ತದೆ. ಅದರಲ್ಲಿ ನನಗೆ ಬಲವಾದ ನಂಬಿಕೆ ಇಲ್ಲ. ಈವರೆಗೆ ಪಕ್ಷದಲ್ಲಿ ಇರುವವರಿಗೆಯೇ ಟಿಕೆಟ್ ಸಿಗುವ ಸಾಧ್ಯತೆಗಳು ಕಡಿಮೆ ಇದೆ. ಪಕ್ಷದ ಸದಸ್ಯರಲ್ಲದ ನಮ್ಮಂಥವರನ್ನು ಹೇಗೆ ನೋಡುತ್ತಾರೆಂಬುದು ಸದ್ಯಕ್ಕೆ ತಿಳಿದಿಲ್ಲ. ಒಂದು ವೇಳೆ ಆ ರೀತಿಯಲ್ಲಿ ಪ್ರಿಯಾರಿಟಿ ನೀಡಿದರೆ, ರಾಜ್ಯದ 36 ಮೀಸಲು ಕ್ಷೇತ್ರಗಳಲ್ಲಿ ಎಲ್ಲಿ ಟಿಕೆಟ್ ನೀಡುತ್ತಾರೋ ಅಲ್ಲಿ ಚುನಾವಣೆ ಎದುರಿಸಬೇಕೆಂಬ ನಿರ್ಧಾರವನ್ನೂ ನಮ್ಮ ವೇದಿಕೆಯಿಂದ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ಬಹುದೊಡ್ಡ ಸಮುದ್ರವಾಗಿದ್ದು, ಟಿಕೆಟ್ ಸಿಗುತ್ತದೆ ಎಂಬುದು ನಮ್ಮ ನಿರೀಕ್ಷೆಗೆ ಮೀರಿರುವ ಮಾತು. ಪಾಲು ನೀಡುವ ತೀರ್ಮಾನವನ್ನು ಪಕ್ಷ ಮಾಡಿದರೆ ಸಕಾರಾತ್ಮಕವಾಗಿ ಸ್ವೀಕರಿಸುತ್ತೇವೆ.

ನಾನುಗೌರಿ: ಕಳೆದ ಮೂರು ತಿಂಗಳಿಂದ ನಡೆಯುತ್ತಿರುವ ಹೋರಾಟವು ಕಾಂಗ್ರೆಸ್ ಕೃಪಾಪೋಷಿತವಾಗಿತ್ತು ಎಂದು ಬಿಜೆಪಿ ಆರೋಪಿಸಲು ಈಗ ಅವಕಾಶ ನೀಡಿದಂತಾಗುತ್ತಿದೆಯಲ್ಲವೇ? 

ಅಂಬಣ್ಣ: ಒಳಮೀಸಲಾತಿಗಾಗಿ ಒಂದು ಆಯೋಗ ಮಾಡದೆ ಇರುವಂತಹ ಸಂದರ್ಭದಲ್ಲಿ, “ಮಾದಿಗರ ನೋವೇ ಕಾಂಗ್ರೆಸ್‌ನ ಸಾವು’’ ಎಂಬುದು ನಮ್ಮ ಘೋಷಣೆಯಾಗಿತ್ತು. ನಮ್ಮ ಬೇಡಿಕೆಗೆ ಸ್ಪಂದಿಸಿ ಆಯೋಗವನ್ನು ರಚಿಸಿದರು. ನಂತರದಲ್ಲಿ ಬಂದ ಬಿಜೆಪಿ, ಕಾಂಗ್ರೆಸ್‌ ಸರ್ಕಾರಗಳು ನಮಗೆ ಲಾಠಿ ಏಟು ಕೊಟ್ಟಿವೆ. ಯಾವ ಸಂದರ್ಭದಲ್ಲಿ ಯಾರ್‍ಯಾರನ್ನು ಸೋಲಿಸಬೇಕೋ ಅವರನ್ನು ಸೋಲಿಸಿದ್ದೇವೆ. ಈಗ ಕಾಂಗ್ರೆಸ್ ನಮ್ಮ ಬೇಡಿಕೆಯನ್ನು ಒಪ್ಪಿಕೊಂಡಿರುವುದರಿಂದ ಅವರ ಜೊತೆಯಲ್ಲಿ ಇರುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅವರೊಂದಿಗೆ ಸೌಹಾರ್ದದಿಂದ ಇರುವುದು ತಪ್ಪಲ್ಲ. ನಮ್ಮ ಸಮುದಾಯ ಮಾತಿಗೆ ತಪ್ಪುವುದಿಲ್ಲ. ಕೃತಜ್ಞತೆಯನ್ನು ಮರೆಯದವರು ನಾವು. ನಿಯತ್ತಿನ ಜಾತಿಯ ವಾರಸುದಾರರಾಗಿರುವುದರಿಂದ ಕಾಂಗ್ರೆಸ್ ಪಕ್ಷವನ್ನು ಒಪ್ಪಿಕೊಂಡಿದ್ದೇವೆ.

ನಾನುಗೌರಿ: ಚಳವಳಿಯಲ್ಲಿದ್ದ ಬಿ.ಕೃಷ್ಣಪ್ಪನವರು ಬಿಎಸ್‌ಪಿಯನ್ನು ಅಪ್ಪಿಕೊಂಡಿದ್ದರಿಂದ ದಲಿತ ಸಂಘರ್ಷ ಸಮಿತಿ (ದಸಂಸ) ಒಡೆದು ಹೋಯಿತು ಎಂಬ ಮಾತುಗಳಿವೆ. ನಿಮ್ಮ ನಿರ್ಧಾರದಿಂದ ಚಳವಳಿಯಲ್ಲಿ ತೊಡಕು ಉಂಟಾಗಬಹುದೇ?

ಅಂಬಣ್ಣ: ರಾಜಕೀಯ ಮತ್ತು ಬೀದಿ ಹೋರಾಟ ಒಟ್ಟಿಗೆ ನಡೆಯಬೇಕು. ಅದು ನಿಂತು ಹೋಗಿತ್ತು. ಆದರೆ ಬೀದಿ ಹೋರಾಟಕ್ಕೆ ಪೂರಕವಾದ ಒಂದು ರಾಜಕೀಯ ಮೈತ್ರಿ ಅಗತ್ಯ ಎಂಬ ಪಾಠವನ್ನು ನಾವು ಕಲಿತ್ತಿದ್ದೇವೆ. ಇಲ್ಲವಾದರೆ ನಮ್ಮ ಗುರಿ ತಲುಪುದಿಲ್ಲ ಎಂಬುದು ಅರ್ಥವಾಗಿದೆ. ಈ ಹೋರಾಟದಲ್ಲಿ ಸಾವಿರಾರು ಭೀಮ ಸೈನಿಕರು, ಮಹಿಷಿ ಸೈನಿಕರು ಇದ್ದಾರೆ. ಹೀಗಾಗಿ ನಮ್ಮ ಹೋರಾಟ ದಿಕ್ಕು ತಪ್ಪುವುದಿಲ್ಲ. ಸಮುದಾಯದಲ್ಲಿ ರಾಜಕೀಯ ಪ್ರಜ್ಞೆ ಮೂಡಿದೆ. ಸಮುದಾಯದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದೆಂಬ ಭರವಸೆ ನಮಗೆ ಇದೆ. ಚಳವಳಿಗೆ ದ್ರೋಹವಾಗದಂತೆ, ರಾಜಕೀಯ ಪ್ರಾತಿನಿಧ್ಯಕ್ಕೂ ಚ್ಯುತಿ ಬಾರದಂತೆ ಮುಂದುವರಿಯುವ ಜವಾಬ್ದಾರಿ ನಮ್ಮ ಮೇಲಿದೆ ಎಂಬುದು ವಾಸ್ತವ.

ನಾನುಗೌರಿ: ಈಗ ಬಿಜೆಪಿ ಸರ್ಕಾರ ಜಸ್ಟೀಸ್ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿದರೆ ನಿಮ್ಮ ನಿಲುವು ಏನಾಗುತ್ತದೆ?

ಅಂಬಣ್ಣ: ರಾಜ್ಯ ಬಿಜೆಪಿ ಸರ್ಕಾರ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತದೆ ಎಂಬ ಭರವಸೆ ನಮಗೆ ಇದೆ. ಆದರೆ 17 ಪರ್ಸೆಂಟ್‌ಗೆ ಹೆಚ್ಚಿಸಲಾಗಿರುವ ಮೀಸಲಾತಿಯಲ್ಲಿ ಎಲ್ಲ ಸಮುದಾಯಗಳಿಗೆ ಸಮನಾಗಿ ಹಂಚಿಕೆ ಮಾಡುವ ತೀರ್ಮಾನವನ್ನು ಅದು ಕೈಗೊಳ್ಳುತ್ತಿದೆ ಎಂಬ ಸುಳಿವು ಸಿಕ್ಕಿದೆ. ಇದು ಅಸಾಂವಿಧಾನಿಕ. ಮೀಸಲಾತಿ ಹೆಚ್ಚಿಸಿದ್ದೇವೆ ಎಂಬ ಡ್ರಾಮಾದ ಜೊತೆಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮತ್ತೊಂದು ಡ್ರಾಮಾವನ್ನು ಮಾಡಲು ಬಿಜೆಪಿ ಸಿದ್ಧವಾಗಿದೆ. ನಮ್ಮ ಬಗ್ಗೆ ಬದ್ಧತೆ, ಕಾಳಜಿ ಇದ್ದರೆ ಒಂದೇ ತಿಂಗಳೊಳಗೆ ಇಡಬ್ಲ್ಯುಎಸ್‌ ರೀತಿಯಲ್ಲಿ ಸುಗ್ರೀವಾಜ್ಞೆ ಮಾಡಿದರೆ ಅದು ಸರಿಯಾದ ತೀರ್ಮಾನವಾಗುತ್ತದೆ. ಯಾವುದೇ ತಜ್ಞರ ಶಿಫಾರಸ್ಸು ಇಲ್ಲದೆ, ಆಯೋಗದ ವರದಿ ಇಲ್ಲದೆ ಇಡಬ್ಲ್ಯುಎಸ್ ಜಾರಿಗೊಳಿಸಿದ್ದಾರೆ. ನಾವು 30 ವರ್ಷ ಹೋರಾಟ ಮಾಡಿದ್ದರೂ ಒಳಮೀಸಲಾತಿ ಜಾರಿ ಯಾಕೆ ಸಾಧ್ಯವಾಗುತ್ತಿಲ್ಲ? ಸಮುದಾಯವನ್ನು ದಿಕ್ಕುತಪ್ಪಿಸುವ ಕುತಂತ್ರ ರಾಜಕಾರಣದ ವಿರುದ್ಧ ಯಶಸ್ವಿ ರಾಜಕಾರಣವನ್ನು ನಾವು ಮಾಡಬೇಕಿದೆ. ಕುತಂತ್ರವನ್ನು ವಿಫಲ ಮಾಡುವ ಭಾಗವಾಗಿ ನಾವು ಕಾಂಗ್ರೆಸ್ ಸೇರಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...