2023-24ನೇ ಹಣಕಾಸು ವರ್ಷಕ್ಕೆ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಹಿಳೆಯರಿಗಾಗಿ ಒನ್ಟೈಮ್ ಹೊಸ ಸಣ್ಣ ಉಳಿತಾಯ ಯೋಜನೆಯನ್ನು ಘೋಷಿಸಿದ್ದಾರೆ.
ಯೋಜನೆ- ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ- ಎರಡು ವರ್ಷಗಳ ಅವಧಿಗೆ ಮಹಿಳೆ ಅಥವಾ ಹುಡುಗಿಯ ಹೆಸರಿನಲ್ಲಿ ರೂ 2 ಲಕ್ಷದವರೆಗೆ ಠೇವಣಿ ಸೌಲಭ್ಯವನ್ನು ನೀಡುತ್ತದೆ. ಈ ಯೋಜನೆಯು 7.5% ಸ್ಥಿರ ಬಡ್ಡಿದರವನ್ನು ನೀಡುತ್ತದೆ ಮತ್ತು ಭಾಗಶಃ ಹಿಂತೆಗೆದುಕೊಳ್ಳುವ ಆಯ್ಕೆಯನ್ನು ಹೊಂದಿರುತ್ತದೆ. ಈ ಯೋಜನೆಯನ್ನು ಮಾರ್ಚ್ 2025 ರವರೆಗೆ ಎರಡು ವರ್ಷಗಳ ಅವಧಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.
ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಗರಿಷ್ಠ ಠೇವಣಿ ಮಿತಿಯನ್ನು 15 ಲಕ್ಷದಿಂದ 30 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸೀತಾರಾಮನ್ ಘೋಷಿಸಿದರು. 60 ವರ್ಷ ಮತ್ತು ಮೇಲ್ಪಟ್ಟ ನಾಗರಿಕರು ಯೋಜನೆಯಡಿ ಖಾತೆಯನ್ನು ತೆರೆಯಬಹುದು ಎಂದು ತಿಳಿಸಿದರು.
ಇದನ್ನೂ ಓದಿ: ಬಜೆಟ್ ಪೂರ್ವ ಸಮೀಕ್ಷೆ: ಸಾಲದ ಸುಳಿಯಲ್ಲಿ ಸರ್ಕಾರಗಳು
ಸ್ವಯಂ ನಿವೃತ್ತಿ ಅಥವಾ ನಿವೃತ್ತಿಯನ್ನು ಆಯ್ಕೆ ಮಾಡಿಕೊಂಡ 55 ರಿಂದ 60 ವರ್ಷ ವಯಸ್ಸಿನ ನಾಗರಿಕರಿಗೆ ಈ ಯೋಜನೆಯು ಮುಕ್ತವಾಗಿದೆ. ಸಶಸ್ತ್ರ ಪಡೆಗಳ ನಿವೃತ್ತ ಸದಸ್ಯರು 50 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಯೋಜನೆಯ ಅಡಿಯಲ್ಲಿ ಖಾತೆಯನ್ನು ತೆರೆಯಬಹುದು.
ಮಾಸಿಕ ಆದಾಯ ಖಾತೆ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು 4.5 ಲಕ್ಷದಿಂದ 9 ಲಕ್ಷಕ್ಕೆ ಮತ್ತು ಜಂಟಿ ಖಾತೆಗಳಿಗೆ 9 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಹಣಕಾಸು ಸಚಿವರು ಹೇಳಿದರು.
ಯೋಜನೆಯಡಿ, ನಾಗರಿಕರು ಅಂಚೆ ಕಚೇರಿಯಲ್ಲಿ ಖಾತೆಯನ್ನು ತೆರೆಯಬಹುದು ಮತ್ತು ಕನಿಷ್ಠ 1,500 ರೂ ಹೂಡಿಕೆ ಮಾಡಬೇಕು. ಬಡ್ಡಿಯನ್ನು ಮಾಸಿಕ ಆಧಾರದ ಮೇಲೆ ವಿತರಿಸಲಾಗುತ್ತದೆ ಮತ್ತು ಖಾತೆದಾರರು ಕನಿಷ್ಠ ಐದು ವರ್ಷಗಳವರೆಗೆ ಠೇವಣಿ ಮಾಡಿದ ಮೊತ್ತವನ್ನು ಹಿಂಪಡೆಯಲು ಸಾಧ್ಯವಿಲ್ಲ.
ಈ ನಡುವೆ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಣ್ಣ ರೈತರಿಗೆ 2.25 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ ಎಂದು ಸೀತಾರಾಮನ್ ಲೋಕಸಭೆಗೆ ತಿಳಿಸಿದರು ಎಂದು ಪಿಟಿಐ ವರದಿ ಮಾಡಿದೆ. ಯೋಜನೆಯ ಪ್ರಕಾರ, ಭೂಮಿ ಹೊಂದಿರುವ ಕೃಷಿಕ ಕುಟುಂಬಗಳಿಗೆ ವರ್ಷಕ್ಕೆ ರೂ 6,000 ಮೊತ್ತವನ್ನು ಮೂರು ಸಮಾನ ಕಂತುಗಳಲ್ಲಿ ಪಾವತಿಸಲಾಗುತ್ತದೆ.
ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರವು 81 ಲಕ್ಷ ಸ್ವ-ಸಹಾಯ ಗುಂಪುಗಳನ್ನು ರಚಿಸಿದೆ ಎಂದು ಹಣಕಾಸು ಸಚಿವರು ಹೇಳಿದರು.