ಮಧ್ಯಪ್ರದೇಶದ ಹಿರಿಯ ಐಎಎಸ್ ಅಧಿಕಾರಿ ಅನಯ್ ದ್ವಿವೇದಿ ಅವರು ತಮ್ಮ ಸಂಬಂಧಿಗೆ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಖಾತೆ ಸಚಿವ ಫಗ್ಗನ್ ಸಿಂಗ್ ಕುಲಾಸ್ತೆ ಆರೋಪಿಸಿದ್ದಾರೆ. ಬಿಜೆಪಿ ಆಡಳಿತದ ರಾಜ್ಯದಲ್ಲಿ ಬಿಜೆಪಿಯ ಕೇಂದ್ರ ಸಚಿವರೋರ್ವರು ತಮ್ಮ ಕುಟುಂಬಸ್ಥನ ಮೇಲೆ ಜಾತಿ ನಿಂದನೆ ಮಾಡಲಾಗಿದೆ ಎಂದು ಆರೋಪಿಸಿದ್ದು, ಬಿಜೆಪಿಗೆ ಮುಜುಗರವನ್ನು ತರಿಸಿದೆ.
ಮಧ್ಯಪ್ರದೇಶ ವಿದ್ಯುತ್ ಇಲಾಖೆಯ ಅಧೀನದ ಪೂರ್ವ ಕ್ಷೇತ್ರ ವಿದ್ಯುತ್ ವಿತರಣೆ ಕಂಪನಿಯಲ್ಲಿ ಕೆಲಸ ಮಾಡುವ ನನ್ನ ಸಂಬಂಧಿ ಅಶೋಕ್ ಧೂರ್ವೆಗೆ ಸಾರ್ವಜನಿಕವಾಗಿ ಜಾತಿ ನಿಂದನೆ ಮಾಡಿ ಕಿರುಕುಳ ನೀಡಿದ ದ್ವಿವೇದಿ ವಿರುದ್ಧ ನಾನು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ದೂರು ನೀಡಿದ್ದೇನೆ ಎಂದು ಸಚಿವರು ಹೇಳಿದ್ದಾರೆ. ಆದರೆ ಸಚಿವರ ಸಂಬಂಧಿ ಮಾತ್ರ, ದ್ವಿವೇದಿ ಯಾವುದೇ ಅಧಿಕೃತ ಸಭೆಯಲ್ಲಿ ತಮ್ಮ ವಿರುದ್ಧ ಜಾತಿ ಭಾಷೆ ಅಥವಾ ಕಾಮೆಂಟ್ಗಳನ್ನು ಬಳಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಧಿಕಾರಿಗಳ ಸಭೆಯೊಂದರಲ್ಲಿ ಇತ್ತೀಚೆಗೆ ಈ ಘಟನೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಯಾದವ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ ಎಂದು ಕೇಂದ್ರ ಸಚಿವ ಕುಲಸ್ತೆ ಅವರು ಹೇಳಿದ್ದಾರೆ.
ಅನಯ್ ದ್ವಿವೇದಿ ರಾಜ್ಯದ ವಿದ್ಯುತ್ ವಿತರಣಾ ಸಂಸ್ಥೆಯಾದ ಪೂರ್ವ ಕ್ಷೇತ್ರ ವಿದ್ಯುತ್ ವಿತರಣಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ ತಕ್ಷಣಕ್ಕೆ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಕಿರಿಯ ಅಧಿಕಾರಿಗಳ ಜೊತೆಗಿನ ಸಭೆಗಳಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸದಿದ್ದಲ್ಲಿ ಮೇಲಾಧಿಕಾರಿಗಳು ಕೋಪಗೊಳ್ಳುವುದು ಸಹಜ, ಸಭೆಯಲ್ಲೂ ಅದೇ ನಡೆದಿದೆ ಆದರೆ ಯಾವುದೇ ಅಧಿಕೃತ ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರು ತಮ್ಮ ವಿರುದ್ಧ ಜಾತಿವಾದಿ ಪದಗಳನ್ನು ಅಥವಾ ಕಾಮೆಂಟ್ಗಳನ್ನು ಬಳಸಿಲ್ಲ ಎಂದು ಸಚಿವರ ಸಂಬಂಧಿ ಅಶೋಕ್ ಧೂರ್ವೆ ಹೇಳಿದ್ದಾರೆ.
ಫಗ್ಗನ್ ಸಿಂಗ್ ಕುಲಸ್ತೆ ಭಾರತದ ಗ್ರಾಮೀಣಾಭಿವೃದ್ಧಿ ಖಾತೆಯ ರಾಜ್ಯ ಖಾತೆಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಧ್ಯಪ್ರದೇಶದ ಮಾಂಡ್ಲಾ ಕ್ಷೇತ್ರದ ಬಿಜೆಪಿಯ ಸಂಸದರಾಗಿದ್ದು, ಮಧ್ಯಪ್ರದೇಶದ ಪ್ರಮುಖ ಬುಡಕಟ್ಟು ನಾಯಕರಾಗಿದ್ದಾರೆ ಮತ್ತು ಲೋಕಸಭೆಯಲ್ಲಿ ಬಿಜೆಪಿಯ ಹಿರಿಯ ಸಂಸದರಲ್ಲಿ ಓರ್ವರಾಗಿದ್ದಾರೆ.
ಇದನ್ನು ಓದಿ: ಮಣಿಪುರದಲ್ಲಿ ಮತ್ತೆ ಉದ್ವಿಗ್ನ: ಪೊಲೀಸ್ ಪ್ರಧಾನ ಕಚೇರಿ ಮೇಲೆ ದಾಳಿ, ಮನೆಗಳ ಧ್ವಂಸ