ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ‘ರಾವಣ’ ಎಂದು ಕರೆದ ಕೆಲವು ದಿನಗಳ ನಂತರ, ಕಾಂಗ್ರೆಸ್ ನಾಯಕ ಸುರೇಂದ್ರ ಸಿಂಗ್ ಜಾದಾವತ್ ಅವರು ಶನಿವಾರ ಚಿತ್ತೋರ್ಗಢದಲ್ಲಿ ಕೇಂದ್ರ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
“ರಾವಣನಿಗೆ 10 ತಲೆಗಳಿದ್ದವು, ಹಾಗೆಯೇ ಈ ರಾಜಸ್ಥಾನ ಸರ್ಕಾರ ಮತ್ತು ರಾಜಕೀಯದ ರಾವಣನಿಗೆ 10 ತಲೆಗಳಿವೆ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮೊದಲ ಸ್ಥಾನ ಪಡೆದಿದೆ, ತುಷ್ಟೀಕರಣದಲ್ಲಿ ತೊಡಗಿದೆ, ರೈತ ವಿರೋಧಿಯಾಗಿದೆ ಮತ್ತು ಮಹಿಳೆಯರನ್ನು ತುಳಿಯುತ್ತಿದೆ. ಈ ಸರ್ಕಾರವು ‘ಮಾಫಿಯಾ-ರಾಜ್’ ಮತ್ತು ‘ಗೂಂಡರಾಜ್’ಗಳನ್ನು ಪೋಷಿಸುತ್ತದೆ” ಎಂದು ಟೀಕಿಸಿದ್ದರು.
“ಈ ಸರ್ಕಾರ ಸುಲಿಗೆ ಮಾಡುವವರದ್ದು, ನಿರುದ್ಯೋಗ ಹೆಚ್ಚಿಸುವವರದ್ದು ಮತ್ತು ದ್ರೋಹ ಮಾಡುವವರದ್ದು. ಈ ರಾಜಕೀಯ ರಾವಣನನ್ನು ಮುಗಿಸುವ ಮೂಲಕ ರಾಜಸ್ಥಾನದಲ್ಲಿ ‘ರಾಮ ರಾಜ್ಯ’ವನ್ನು ಸ್ಥಾಪಿಸಬೇಕು” ಎಂದು ಚಿತ್ತೋರ್ಗಢದಲ್ಲಿ ಗುರುವಾರ ನಡೆದ ರ್ಯಾಲಿಯಲ್ಲಿ ಶೇಖಾವತ್ ಹೇಳಿದ್ದರು.
ಮೇಲಿನ ಹೇಳಿಕೆಗಳನ್ನು ನೀಡಿದ ಕೇಂದ್ರ ಸಚಿವರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 143, 153-ಎ, 295 ಎ, 500, 504, 505 ಮತ್ತು 511ರ ಅಡಿಯಲ್ಲಿ ಚಿತ್ತೋರ್ಗಢದ ಸದರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಇದಲ್ಲದೆ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾವಣನಿಗೆ ಹೋಲಿಕೆ ಮಾಡಿರುವ ಕುರಿತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶುಕ್ರವಾರ ತಿರುಗೇಟು ನೀಡಿದ್ದಾರೆ.
ಚುರುದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅಶೋಕ್ ಗೆಹ್ಲೋಟ್, “ಅವರು (ಗಜೇಂದ್ರ ಶೇಖಾವತ್) ನನ್ನನ್ನು ‘ರಾವಣ ರೂಪಿ’ ಎಂದಿದ್ದಾರೆ ಮತ್ತು ನನ್ನನ್ನು ಮುಗಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ನಾನು ಇದನ್ನು ಸಹ ಸ್ವಾಗತಿಸುತ್ತೇನೆ. ನಾನು ರಾವಣನಾಗಿದ್ದರೆ, ನೀವು ಮರ್ಯಾದಾ ಪುರುಷೋತ್ತಮ ರಾಮನಂತೆ ವರ್ತಿಸಿ ಬಡವರ ಹಣವನ್ನು ವಾಪಸ್ ಕೊಡಿ. ಆಗ ನೀವು ರಾಮನ ಅನುಯಾಯಿಯಾಗುತ್ತೀರಿ ಮತ್ತು ನಾನು ರಾವಣ ಎಂದು ಒಪ್ಪಿಕೊಳ್ಳುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿರಿ: ಬಿಹಾರ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಡಿ ಬಿಜೆಪಿ ನಾಯಕನ ಬಂಧನ