ಮಾರ್ಚ್ 31ರಂದು ರಾಮನವಮಿಯ ಮೆರವಣಿಗೆ ಸಂದರ್ಭದಲ್ಲಿ ಸಸಾರಾಮ್ ಪಟ್ಟಣದಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಿಜೆಪಿ ನಾಯಕ ಜವಾಹರ್ ಪ್ರಸಾದ್ ಅವರನ್ನು ಶನಿವಾರ ಬಿಹಾರ ಪೊಲೀಸರು ಬಂಧಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾದ 63 ಜನರಲ್ಲಿ ಬಿಜೆಪಿ ನಾಯಕ ಜವಾಹರ್ ಪ್ರಸಾದ್ ಅವರು ಒಬ್ಬರಾಗಿದ್ದಾರೆ. ಇವರು ಐದು ಬಾರಿ ಶಾಸಕರಾಗಿದ್ದರು.
Bihar | Former BJP MLA Jawahar Prasad arrested from his residence in Sasaram in connection with the communal violence case which took place on March 31 pic.twitter.com/raR5MIkXIv
— ANI (@ANI) April 29, 2023
ರಾಮನವಮಿ ಹಬ್ಬದ ಸಂದರ್ಭದಲ್ಲಿ ಬಿಹಾರದ ಹಲವು ಭಾಗಗಳಲ್ಲಿ ಹಿಂದೂ-ಮುಸ್ಲಿಮರ ನಡುವೆ ಘರ್ಷಣೆಗಳು ನಡೆದ ಬಗ್ಗೆ ವರದಿಯಾಗಿವೆ. ಸಸಾರಾಮ್ ಜೊತೆಗೆ, ರೋಹ್ತಾಸ್, ಬಿಹಾರ್ಷರೀಫ್, ನಳಂದಾ, ಭಾಗಲ್ಪುರ್, ಗಯಾ ಮತ್ತು ಮುಂಗೇರ್ನಲ್ಲಿ ಹಿಂಸಾಚಾರ ನಡೆದಿತ್ತು.
ವಾಹನಗಳು, ಮನೆಗಳು ಹಾಗೂ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಬಿಹಾರ್ಷರೀಫ್ನಲ್ಲಿ ನಡೆದ ಹಿಂಸಾಚಾರದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.
ಪ್ರಸಾದ್ ಕೋಮುಗಲಭೆಯಲ್ಲಿ ಭಾಗಿಯಾಗಿರುವುದು ತನಿಖೆಯ ವೇಳೆ ಗೊತ್ತಾಗದ್ದು ಆನಂತರ ಅವರನ್ನು ಬಂಧಿಸಲಾಗಿದೆ ಎಂದು ರೋಹ್ತಾಸ್ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಕುಮಾರ್ ಶನಿವಾರ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ‘ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ’ದ ಬಂಧನವಾಗಿದೆ ಎಂದು ಆರೋಪಿಸಿದೆ.
ಇದನ್ನೂ ಓದಿ: ಬಿಹಾರ: ರಾಮನವಮಿ ಹಿಂಸಾಚಾರದ ಮಾಸ್ಟರ್ ಮೈಂಡ್, ಬಜರಂಗದಳ ಸಂಚಾಲಕ ಪೊಲೀಸರಿಗೆ ಶರಣು
”ನಮಗೆ ಆಶ್ಚರ್ಯವಿಲ್ಲ ಏಕೆಂದರೆ ಹಿಂಸಾಚಾರವನ್ನು ರಾಜಕೀಯ ಪಿತೂರಿ ಎಂದು ಸಿಎಂ [ನಿತೀಶ್ ಕುಮಾರ್] ಮೊದಲೇ ನಿರ್ಧರಿಸಿದ್ದರು, ಆದರೆ ಪ್ರಾಥಮಿಕ ತನಿಖೆಗೆ ಮುಂಚೆಯೇ ಬಂಧಿಸಿದ್ದಾರೆ” ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಪ್ರಸಾದ್ ಅವರನ್ನು ಬಿಹಾರ ಸರ್ಕಾರವು ಬಲಿಪಶು ಮಾಡಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಹಿಂದುಳಿದ ವರ್ಗ) ನಿಖಿಲ್ ಆನಂದ್ ಹೇಳಿದ್ದಾರೆ.
”ಪ್ರಸಾದ್ ಹಿಂದುಳಿದ [ಸಮುದಾಯ] ನಾಯಕ… ಸರ್ಕಾರವು ಅವರನ್ನು ಮತ್ತು ಇತರ ನಾಯಕರನ್ನು ಅಪರಾಧಿಗಳೆಂದು ಬಿಂಬಿಸುತ್ತಿದೆ. ಬಿಹಾರ ಸರ್ಕಾರವು ಮುಸ್ಲಿಂ ತುಷ್ಟೀಕರಣದ ರಾಜಕೀಯ ಮಾಡಲು ಇಷ್ಟೊಂದು ಆಳಕ್ಕೆ ಹೋಗುತ್ತಿದೆ ಎಂದು ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ನಾಯಕರ ಆರೋಪಗಳನ್ನು ತಳ್ಳಿಹಾಕಿದ್ದು, ”ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವನ್ನು ಪಕ್ಷಾತೀತವಾಗಿ ಎಲ್ಲರನ್ನು ಬಂಧಿಸಲಾಗುತ್ತದೆ” ಎಂದು ಹೇಳಿದ್ದಾರೆ.