ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ರಾಜ್ಯದ ಎಲ್ಲಾ ಪಕ್ಷಗಳು ತಯಾರಾಗುತ್ತಿದೆ. ಇದೀಗ ಬಿಜೆಪಿ ನಾಯಕ, ಮಾಜಿ ಶಾಸಕ ರಾಮ್ ಇಕ್ಬಾಲ್ ಸಿಂಗ್ ಅವರು ಸೋಮವಾರದಂದು ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ರಾಮ್ ಸಿಂಗ್ ಬಿಜೆಪಿಯಲ್ಲಿದ್ದರೂ, ಪಕ್ಷದ ಮತ್ತು ಯುಪಿ ಮುಖ್ಯಮಂತ್ರಿ ಆದಿತ್ಯನಾಥ್ರ ಪ್ರಮುಖ ಟೀಕಾಕಾರರಾಗಿದ್ದರು.
ಈ ಬಗ್ಗೆ ಟ್ವೀಟರ್ನಲ್ಲಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷ, “ಬೆಳೆಯುತ್ತಿರುವ ಕಾರವಾನ್ ಸಂಕೇತ” ಎಂದು ಬಣ್ಣಿಸಿದೆ.
“ಎಸ್ಪಿಯ ಬೆಳೆಯುತ್ತಿರುವ ಕಾರವಾನ್. ಬಲ್ಲಿಯಾದ ಚಿಲ್ಕಹಾರ್ ವಿಧಾನಸಭಾ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ರಾಮ್ ಇಕ್ಬಾಲ್ ಸಿಂಗ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡು ತಮ್ಮ ಸಹಚರರೊಂದಿಗೆ ಸಮಾಜವಾದಿ ಪಕ್ಷಕ್ಕೆ ಸೇರಿದರು” ಎಂದು ಪಕ್ಷ ಟ್ವೀಟ್ನಲ್ಲಿ ತಿಳಿಸಿದೆ.
ಇದನ್ನೂ ಓದಿ:ಆದಿತ್ಯನಾಥ್ ಅವರನ್ನು ‘ವಿಷ’ ಎಂದು ಉಲ್ಲೇಖಿಸಿದ ಯುಪಿ BJP ಕಾರ್ಯಕಾರಿಣಿ ಸದಸ್ಯ!
ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಯ ಮಾಜಿ ಸದಸ್ಯರೂ ಆಗಿರುವ ರಾಮ್ ಸಿಂಗ್, 2002 ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಚಿಲ್ಕಹಾರ್ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2008 ರಲ್ಲಿ ವಿಧಾನಸಭಾ ಕ್ಷೇತ್ರಗಳ ವಿಂಗಡಣೆಯ ನಂತರ, ಚಿಲ್ಕಹಾರ್ ಅಸ್ತಿತ್ವದಲ್ಲಿಲ್ಲ.
ಅಕ್ಟೋಬರ್ 14 ರಂದು, ಲಖಿಂಪುರ ಹಿಂಸಾಚಾರದ ಹಿಂದೆ ಒಕ್ಕೂಟ ಸರ್ಕಾರದ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರ ಕೈವಾಡವಿದೆ ಎಂದು ರಾಮ್ ಸಿಂಗ್ ಆರೋಪಿಸಿದ್ದರು ಮತ್ತು ಅವರನ್ನು ವಜಾಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೋರಿದ್ದರು.
ರಾಜ್ಯದಲ್ಲಿ ಅಧಿಕಾರಶಾಹಿಗಳು ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಅವರು ಈ ಹಿಂದೆ ಹೇಳಿದ್ದರು ಮತ್ತು ಆದಿತ್ಯನಾಥ್ ಸರ್ಕಾರವು ಎರಡನೇ ಕೋವಿಡ್ ಅಲೆಯನ್ನು ನಿಭಾಯಿಸಿರುವ ಬಗ್ಗೆ ಪ್ರಶ್ನೆ ಮಾಡಿದ್ದರು.
ನವೆಂಬರ್ 10 ರಂದು, ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತುಹಾಕಿದರೆ, ಅವರು ತಕ್ಷಣವೇ ಸನ್ಯಾಸಿಯಾಗುತ್ತಾರೆ ಎಂದು ರಾಮ್ ಸಿಂಗ್ ಸಲಹೆ ನೀಡಿದ್ದರು.
ಇದನ್ನೂ ಓದಿ:ಕಾಸ್ಗಂಜ್ ಮುಸ್ಲಿಂ ಯುವಕನ ಲಾಕಪ್ ಡೆತ್: ಸರ್ಕಾರದಿಂದ ವರದಿ ಕೇಳಿದ ಅಲ್ಪಸಂಖ್ಯಾತರ ಆಯೋಗ