ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಬೆದರಿಕೆಯೊಡ್ಡಿದ 21 ವರ್ಷಗಳ ಹಳೆಯ ಪ್ರಕರಣದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕನಿಗೆ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 2,500 ರೂಪಾಯಿ ದಂಡ ವಿಧಿಸಿದೆ.
ಬಹರೈಚ್ ಜಿಲ್ಲೆಯ ಮಹಸಿ ವಿಧಾನಸಭಾ ಕ್ಷೇತ್ರದ ಶಾಸಕ ಸುರೇಶ್ವರ್ ಸಿಂಗ್ ಶಿಕ್ಷೆಗೊಳಗಾದ ಅಪರಾಧಿ. ಇವರ ವಿರುದ್ದ ಐಪಿಸಿ ಸೆಕ್ಷನ್ 506, 353ರಡಿ ದಾಖಲಾಗಿದ್ದ ಪ್ರಕರಣಗಳನ್ನು ವಿಚಾರಣೆ ನಡೆಸಿದ ಬಹರೈಚ್ನ ಎಂಪಿ-ಎಂಎಲ್ಎ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ತೀರ್ಪು ಪ್ರಕಟಿಸಿದ ಬಳಿಕ ನ್ಯಾಯಾಲಯ ಅಪರಾಧಿಗೆ ಜಾಮೀನು ನೀಡಿದ್ದು, ಮೇಲ್ಮನವಿ ಸಲ್ಲಿಸಲು ಅವರಿಗೆ ಅವಕಾಶ ನೀಡಿದೆ. ಶಾಸಕ ದಂಡ ಪಾವತಿಸಲು ವಿಫಲರಾದರೆ ಏಳು ದಿನಗಳ ಕಾಲ ಹೆಚ್ಚವರಿ ಜೈಲಿನಲ್ಲಿರುವಂತೆ ನ್ಯಾಯಾಲಯ ಸೂಚಿಸಿದೆ.
ಎರಡು ವರ್ಷಗಳ ಶಿಕ್ಷೆಗೆ ಒಳಗಾಗಿರುವ ಹಿನ್ನೆಲೆ ಶಾಸಕ ಸುರೇಶ್ವರ್ ಸಿಂಗ್ ಪ್ರಜಾಪ್ರತಿನಿಧಿ ಕಾಯ್ದೆ-1951ರ ಪ್ರಕಾರ ವಿಧಾನಸಭೆಯಿಂದ ಅಮಾನತಾಗು ಸಾಧ್ಯತೆ ಇದೆ.
ಪ್ರಾಸಿಕ್ಯೂಷನ್ ಪ್ರಕಾರ, ಸೆಪ್ಟೆಂಬರ್ 2, 2002ರಂದು ಪ್ರಕರಣವೊಂದರ ಸಂಬಂಧ ಮಹಿಳೆಯೊಬ್ಬರ ಹೇಳಿಕೆ ದಾಖಲಿಸಿಕೊಳ್ಳಲು ಲಕ್ನೋದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಕಚೇರಿಗೆ ಕರೆತರಲಾಗಿತ್ತು. ಈ ಕಚೇರಿಗೆ ಹೊರಗಿನವರಿಗೆ ಪ್ರವೇಶ ಇರಲಿಲ್ಲ. ಆದರೂ, ನಿಯಮಗಳನ್ನು ಮೀರಿ ಶಾಸಕ ಸುರೇಶ್ವರ್ ಸಿಂಗ್ ಒಳ ಪ್ರವೇಶಿಸಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಬೆದರಿಕೆ ಹಾಕಿದ ಆರೋಪವಿದೆ.
ಶಾಸಕ ಸಿಂಗ್ ವಿರುದ್ದ ಕಚೇರಿಗೆ ನುಗ್ಗಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಮಹಸಿ ತಹಸಿಲ್ ಎಸ್ಡಿಎಂ ಲಾಲ್ ಮಣಿ ಮಿಶ್ರಾ ಅವರು ಹಾರ್ಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
2019ರಲ್ಲಿ ಬಹರೈಚ್ನ ಸೆಷನ್ಸ್ ನ್ಯಾಯಾಲಯ ಸಿಂಗ್ ಮತ್ತು ಇತರ ಮೂವರನ್ನು 1995ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿತ್ತು. ಆದರೆ ಸಿಂಗ್ ಸಹೋದರ ಬ್ರಿಜೇಶ್ವರ್ ಸಿಂಗ್ ಮತ್ತು ಇತರ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಇದನ್ನೂ ಓದಿ : ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಬಿಜೆಪಿ ಶಾಸಕ