Homeಅಂಕಣಗಳುಬಹುಜನ ಭಾರತ; ತಡೆಯಬೇಕಿದೆ ಬಿಸಿಪ್ರಳಯದ ಘೋರವನು...

ಬಹುಜನ ಭಾರತ; ತಡೆಯಬೇಕಿದೆ ಬಿಸಿಪ್ರಳಯದ ಘೋರವನು…

- Advertisement -
- Advertisement -

ಶತಮಾನದ ಅಂತ್ಯದ ವೇಳೆಗೆ ಜಗತ್ತಿನ ಮೂರನೆಯ ಒಂದರಷ್ಟು ಹೊಲಗದ್ದೆಗಳು, ತೋಟತುಡಿಕೆಗಳು, ಗೋಮಾಳಗಳು ಸಾರಾಸಗಟು ಬಂಜರು ಬೀಳಲಿವೆ. ಅರ್ಥಾತ್ ಅವುಗಳಲ್ಲಿ ಆಹಾರ ಉತ್ಪಾದನೆ ಅಸಾಧ್ಯವೆನಿಸಲಿದೆ. ಮುಂದಿನ ಇಪ್ಪತ್ತೆಂಟು ವರ್ಷಗಳಲ್ಲಿ ಜಗತ್ತಿನ ಅನ್ನದ ಕಣಜಗಳು ಬೆಳೆ ವೈಫಲ್ಯ ಎದುರಿಸಲಿದ್ದು, ತೀವ್ರ ತಾಪಮಾನದಿಂದಾಗಿ ಜಾನುವಾರುಗಳು ಸಾಯಲಿವೆ. ಆಹಾರದ ಬೆಲೆಗಳು ಆಗಸಕ್ಕೆ ಜಿಗಿದು, ಈಗಾಗಲೇ ಹಸಿವನ್ನೇ ಹೊದ್ದು ಮಲಗುತ್ತಿರುವ ಜನಕೋಟಿಯೊಂದಿಗೆ ಮುಂದಿನ ಎಂಟು ವರ್ಷಗಳಲ್ಲಿ 12 ಕೋಟಿ ತುತ್ತಿನ ಚೀಲಗಳು ಹೊಸದಾಗಿ ಸೇರಿಕೊಳ್ಳಲಿವೆ.

ಜಾಗತಿಕ ತಾಪಮಾನ ಏರಿಕೆಯು ಜಗತ್ತನ್ನು ಹೆಚ್ಚುಹೆಚ್ಚು ಬರಗಾಲ, ಜಲಕ್ಷಾಮ, ಕಾಳ್ಗಿಚ್ಚು, ಉಷ್ಣೋಗ್ರತೆಯ ಗಾಳಿ ಗುಮ್ಮಟಗಳು, ಬಿಸಿಮಾರುತಗಳು, ಯರ್ರಾಬಿರ್ರಿ ಮಳೆ-ಬೆಳೆಯ ಏರುಪೇರುಗಳು, ಹಸಿವೆ, ರೋಗರುಜಿನ, ದಾರಿದ್ರ್ಯ ಅಂಧಕಾರ ಅಪಾಯಗಳತ್ತ ಒಯ್ಯಲಿದೆ. ಸಾಮಾಜಿಕ-ಆರ್ಥಿಕ ಅಸಮಾನತೆಯ ಕಂದಕಗಳು ಇನ್ನಷ್ಟು ಹಿರಿದಾಗಲಿವೆ. ಸಾಗರ ಸಮುದ್ರಗಳು ಉಕ್ಕಿ ಹರಿದು ಹೆಚ್ಚುಹೆಚ್ಚು ನೆಲವನ್ನು ನುಂಗಲಿವೆ. ಮೂರನೆಯ ಒಂದರಷ್ಟು ಮನುಕುಲ ಅಸಹನೀಯ ಉಷ್ಣೋಗ್ರತೆಯಲ್ಲಿ ಬದುಕಿ ಬಾಳುವ ಆಪತ್ತು ಎದುರಾಗಲಿದೆ. ಪ್ರತಿಕೂಲ ಪರಿಸರದ ಕಾರಣ ಮನುಕುಲವು ಮಹಾವಲಸೆಗಳಿಗೆ ಸಾಕ್ಷಿಯಾಗಲಿದೆ. ವಲಸೆಯ ಶಕ್ತಿ ಸಂಪನ್ಮೂಲಗಳಿಲ್ಲದ ಸಮುದಾಯಗಳು ಇದ್ದಲ್ಲಿಯೇ ನವೆದು ಸಾಯಲಿವೆ.

ಈ ಸಂಕಟವು ಈಗಾಗಲೆ ಜಗತ್ತಿನ 330 ಕೋಟಿ ಜನರ ಮೇಲೆ ಎರಗಿದೆ. ಅವರ ದೈನಂದಿನ ಬದುಕು ದುರ್ಬರವಾಗಿದೆ. ಉಷ್ಣಮಾರುತಗಳು, ಹವಾಮಾಲಿನ್ಯ, ಹವಾಮಾನ ಅತಿರೇಕಗಳು, ರೋಗರುಜಿನಗಳಿಂದ ಸಾಯುವ ಜನರ ಸಂಖ್ಯೆ ಗಣನೀಯವಾಗಿ ಏರಲಿದೆ. ಹಸಿವಿನೊಂದಿಗೆ ಉಷ್ಣೋಗ್ರತೆಯ ಒತ್ತಡ, ಶ್ವಾಸಕೋಶದ ಸಮಸ್ಯೆಗಳು, ಸಾಂಕ್ರಾಮಿಕ ಕಾಯಿಲೆಗಳು ಮನುಷ್ಯ ಕುಲವನ್ನು ಮುತ್ತಲಿವೆ.

ಕೈಗಾರಿಕೆ ಯುಗ ಆರಂಭವಾಗುವ ಮುನ್ನ ನೆಲೆಸಿದ್ದ ತಾಪಮಾನ ಒಂದೂವರೆ ಡಿಗ್ರಿಯಷ್ಟು ಹೆಚ್ಚಿತೆಂದರೆ ಬಿಸಿಪ್ರಳಯದ ಘನಘೋರ ದುಃಸ್ವಪ್ನ ನಿಜರೂಪ ತಳೆದು ಇಳೆಯನ್ನು ಆವರಿಸಲಿದೆ. ಒಂದೂವರೆ ಡಿಗ್ರಿಯ ಪೈಕಿ 1.1ರಷ್ಟು ಡಿಗ್ರಿ ಈಗಾಗಲೆ ಹೆಚ್ಚಿಬಿಟ್ಟಿದೆ. ಕೇವಲ ಇಪ್ಪತ್ತೇ ವರ್ಷಗಳಲ್ಲಿ 1.5 ಡಿಗ್ರಿಯನ್ನು ಮುಟ್ಟುವ ನಿರೀಕ್ಷೆ ಇದೆ. ತಾಪಮಾನ ಹೆಚ್ಚಳ ಎರಡು ಡಿಗ್ರಿ ಮುಟ್ಟಿದರೆ ಕಾಳ್ಗಿಚ್ಚಿಗೆ ಸಿಗುವ ಭೂಪ್ರದೇಶ ಮೂರನೆಯ ಒಂದರಷ್ಟು ಪ್ರಮಾಣವನ್ನು ಮುಟ್ಟಿ ಮುನ್ನಡೆಯಲಿದೆ. ನಗರ-ಮಹಾನಗರಗಳ ಬದುಕು ಅಸಾಧ್ಯವೆನಿಸಲಿದೆ. ಆರ್ಥವ್ಯವಸ್ಥೆಗಳು ಮುಳುಗಿ ತಳ ಸೇರಲಿವೆ. ಆಹಾರ ಪೂರೈಕೆಯ ಸ್ಥಿತಿ ತೀರಾ ಗಂಭೀರವೆನಿಸಲಿದೆ.

ಭಾರೀ ಮಳೆ, ಉಗ್ರ ಉಷ್ಣ, ನಿಸ್ಸಾರ ಮಣ್ಣು, ಬೆಳೆಗಳ ಮೇಲೆ ಬಿರುಗಾಳಿಯಂತೆ ಎರಗಿ ನಿಮಿಷಗಳಲ್ಲಿ ಕಬಳಿಸುವ ಮಿಡತೆಗಳಂತಹ ಕೀಟಗಳ ಹೆಚ್ಚಳ, ಪರಾಗಸ್ಪರ್ಶದಂತಹ ಬಹುಮುಖ್ಯ ಕ್ರಿಯೆಯನ್ನು ಆಗು ಮಾಡುವ ಜೇನುನೊಣಗಳ ಸಂಖ್ಯೆಯ ಕುಸಿತದಿಂದ ಆಹಾರ ಧಾನ್ಯಗಳ ಉತ್ಪಾದನೆ ಇಳಿಮುಖವಾಗಲಿದೆ. ಏರುತ್ತ ಹೋಗುವ ಪ್ರತಿ ಡಿಗ್ರಿ ತಾಪಮಾನ ಭತ್ತ, ಗೋಧಿ, ಮುಸುಕಿನ ಜೋಳದ ಇಳುವರಿಯನ್ನು ಶೇ.10ರಿಂದ ಶೇ.25ರಷ್ಟು ಬಲಿ ತೆಗೆದುಕೊಳ್ಳಲಿದೆ. ವರ್ಷದ 250ಕ್ಕೂ ಹೆಚ್ಚು ದಿನಗಳಲ್ಲಿ ಹಗಲು ಹೊಲಗದ್ದೆಗಳಿಗೆ ಇಳಿದು ಕೆಲಸ ಮಾಡುವುದು ಅಸಹನೀಯವೆನಿಸಿ ಕೃಷಿಕೂಲಿಗೆ ಜನ ಮುಂದೆ ಬಾರದಿರುವ ದಿನಗಳು ಎದುರಾಗಲಿವೆ.

ಭಾರತದಂತಹ ಸಮಶೀತೋಷ್ಣ ದೇಶಗಳಲ್ಲಿ ಉಷ್ಣೋಗ್ರತೆಯು ಜಾನುವಾರುಗಳ ಸಂಖ್ಯೆಯನ್ನು ಕುಗ್ಗಿಸಲಿದ್ದು ಹಾಲು ಹೈನು, ಮಾಂಸದ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಸಿಯಲಿದೆ. ಚಂಡಮಾರುತಗಳು, ಪ್ರವಾಹಗಳು, ಬರಗಾಲಗಳು ಪೌಷ್ಠಿಕ ಆಹಾರ ಉತ್ಪಾದನೆಗೆ ದೊಡ್ಡ ಏಟು ನೀಡಲಿವೆ.

ತಾಪಮಾನ ಏರಿಕೆಯ ಈ ವಿನಾಶ ಸಮುದ್ರ ಸಾಗರಗಳನ್ನೂ ಆವರಿಸಲಿದೆ. ಅಲೆಗಳು ಬಿಸಿಯೇರಲಿವೆ. ಸಾಗರಗಳ ನೀರು ಹೆಚ್ಚುಹೆಚ್ಚು ಆಮ್ಲಮಯ ಆಗಲಿದೆ. ಕುಡಿಯುವ ನೀರಿನ ಮೂಲಗಳಿಗೆ ಉಪ್ಪು ನೀರು ಜಿನುಗಿ ಸೇರಿಕೊಳ್ಳಲಿದೆ. ಹಾನಿಕಾರಕ ಪಾಚಿಗಳು ಮೈತಳೆದು ಮೀನು ಮತ್ತಿತರೆ ಸಾಗರೋತ್ಪನ್ನ ಆಹಾರವನ್ನು ಕುಂದಿಸಲಿವೆ. ಅತೀವ ತಾಪಕ್ಕೆ ಸಿಕ್ಕಿ ನವೆಯಲಿರುವ ಹವಳದ ಬಂಡೆಗಳು ಕರಾವಳಿಯನ್ನು ಬಿರುಗಾಳಿಗಳಿಂದ ರಕ್ಷಿಸಲು ಅಸಮರ್ಥವಾಗಲಿವೆ. ಕರಾವಳಿ ಜನವಸತಿಗಳು ತೀವ್ರ ಪ್ರವಾಹಗಳಿಗೆ ಸಿಲುಕಲಿವೆ. ಮುಂದಿನ ಇಪ್ಪತ್ತು ವರ್ಷಗಳಲ್ಲಿ ಸಮುದ್ರ ಸಾಗರ ಮಟ್ಟಗಳು ಕಳೆದ ಶತಮಾನಗಳಲ್ಲಿ ಏರಿದ್ದಕ್ಕಿಂತ ರಭಸದಿಂದ ಮೇಲೇರಿ ಜನವಸತಿಗಳನ್ನು ಕಬಳಿಸಲಿವೆ.

ಇತ್ತೀಚೆಗೆ ಹೊರಬಿದ್ದಿರುವ ಐ.ಪಿ.ಸಿ.ಸಿ. ವರದಿಯು ಈ ವಿನಾಶ ಕುರಿತು ನೀಡಿರುವ ಎಚ್ಚರಿಕೆಯು
ಮನುಕುಲದ ಮರಣದ ಗಂಟೆಯೆಂದೇ ಪರಿಗಣಿಸಬೇಕಿದೆ. ತಡ ಮಾಡಿದರೆ ಮಾನವ ಜನಾಂಗ ಮತ್ತೊಂದು ಪ್ರಳಯದೊಳಕ್ಕೆ ನಡೆಯತ್ತಿರುವ ಈ ದುರಂತವನ್ನು ತಡೆಯುವ ಅವಕಾಶ ಕೂಡ ಇಲ್ಲವಾಗಲಿದೆ. 67 ದೇಶಗಳ 200 ವಿಜ್ಞಾನಿಗಳ ಆಳ ಅಧ್ಯಯನ ಫಲ ಈ ವರದಿ. ತಾಪಮಾನ ಹೆಚ್ಚಳವನ್ನು 1.5 ಡಿಗ್ರಿಗಳಿಗೇ ಹಿಡಿದು ನಿಲ್ಲಿಸಿದರೂ ಹಲವು ಅವಘಢಗಳು ಈಗಾಗಲೆ ಕೈ ಮೀರಿವೆಯಂತೆ. 1.5 ಡಿಗ್ರಿಯನ್ನು ಹಂಗಾಮಿಯಾಗಿ ಮೀರಿದರೂ ಸಾಧಕ ಬಾಧಕಗಳು ತೀರಾ ಗಂಭೀರ. ಇವುಗಳನ್ನು ಸರಿಪಡಿಸುವುದು ಸಾಧ್ಯವೇ ಇಲ್ಲ. ಜಾಗತಿಕ ತಾಪಮಾನ ಈಗಾಗಲೆ ಅಂತಹ ಹಲವು ಬದಲಾವಣೆಗಳನ್ನು ಮಾಡಿದ್ದು, ಅವುಗಳ ದುಷ್ಪರಿಣಾಮಗಳು ಈಗಾಗಲೆ ಅನುಭವಗೋಚರವಾಗಿವೆ.

ಮುಂಬರುವ ದಶಕಗಳಲ್ಲಿ ತಾಪಮಾನ ಏರುತ್ತ ಹೋದಂತೆ ಪ್ರವಾಹಗಳು, ಉಷ್ಣಮಾರುತಗಳು, ಬರಗಾಲಗಳು, ಜಲಕ್ಷಾಮಗಳು ಜಗತ್ತಿನ ನೂರಾರು ಕೋಟಿ ಜನರನ್ನು ಕಡು ಸಂಕಟಕ್ಕೆ ಗುರಿ ಮಾಡಲಿವೆ. ಇಂತಹ ಜನಕೋಟಿಯ ಪ್ರಮಾಣ ಕನಿಷ್ಠ ಮುನ್ನೂರು ಕೋಟಿ ಎಂದು ಅಂದಾಜು ಮಾಡಲಾಗಿದೆ. ಸೊಳ್ಳೆಗಳಿಂದ ಹಬ್ಬುವ ಡೆಂಘೀ, ಮಲೇರಿಯಾದಂತಹ ಸಾಂಕ್ರಾಮಿಕಗಳು ಹೊಸಹೊಸ ಪ್ರದೇಶಗಳಿಗೆ ಲಗ್ಗೆ ಇಕ್ಕಲಿವೆ. ವ್ಯಾಪಕ ಬೆಳೆ ವೈಫಲ್ಯಗಳು ಆಫ್ರಿಕಾ ಮತ್ತು ಏಷ್ಯಾದ ಜನರನ್ನು ಹಸಿವು-ಅಪೌಷ್ಟಿಕತೆಯ ದವಡೆಗೆ ನೂಕಲಿವೆ.

ತಾಪಮಾನ ಮೂರು ಡಿಗ್ರಿಯಷ್ಟು ಹೆಚ್ಚಿತೆಂದರೆ ಶತಮಾನದ ಅಂತ್ಯದ ವೇಳೆಗೆ ಹವಾಮಾನ
ವೈಪರೀತ್ಯದ ಅಪಾಯಗಳು ಐದು ಪಟ್ಟು ಹೆಚ್ಚಲಿವೆ. ಶೇ.29ರಷ್ಟು ಸಸ್ಯ ಮತ್ತು ಪ್ರಾಣಿ ಸಂಕುಲಗಳು ಇಳೆಯಿಂದ ಅಳಿಸಿ ಹೋಗುವ ಅಪಾಯ ಎದುರಿಸಲಿವೆ.

ಈ ಅನಾಹುತಗಳನ್ನು ಭಾಗಶಃವಾಗಿಯಾದರೂ ತಡೆಯಬೇಕಿದ್ದರೆ ಮನುಕುಲ ’ಇಂಗಾಲಶಾಹಿ’ಯ ಹಿಡಿತದಿಂದ ಹೊರಬರಬೇಕು. ಭೂಗೋಳವನ್ನು ಬಿಸಿಯಾಗಿಸಿ ಕುದಿಬಿಂದುವಿನ ವಿನಾಶದತ್ತ ಒಯ್ಯುತ್ತಿರುವ ಇಂಗಾಲದ ಡೈ ಆಕ್ಸೈಡು, ಮೀಥೇನ್ ಮುಂತಾದ ಅಪಾಯಕಾರಿ ಅನಿಲಗಳ ಬಿಡುಗಡೆಯನ್ನು ತಕ್ಷಣವೇ ನಿಲ್ಲಿಸಬೇಕು. ಪಳೆಯುಳಿಕೆ ಮೂಲಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳ ಉರಿಸುವಿಕೆಯನ್ನು ಕೂಡಲೇ ನಿಲ್ಲಿಸಬೇಕು. ಅರಣ್ಯನಾಶವನ್ನು ಅಕ್ಷರಶಃ ತಡೆಯಬೇಕು. 2050ರ ವೇಳೆಗಾದರೂ ಈ ಆತ್ಮಹತ್ಯೆಯ ಕೃತ್ಯವನ್ನು ಸಂಪೂರ್ಣವಾಗಿ ಅಂತ್ಯಗೊಳಿಸಬೇಕು. ನಾವು ಮನೆ ಕಟ್ಟುವ, ಆಹಾರ ಬೆಳೆಯುವ, ಊರ್ಜೆಯನ್ನು ಉತ್ಪಾದಿಸುವ, ಹಾಗೂ ನಿಸರ್ಗವನ್ನು ಸಂರಕ್ಷಿಸುವ ಬಗೆಗಳಲ್ಲಿ ಭಾರೀ ರೂಪಾಂತರವೇ ಆಗಬೇಕಿದೆ.

ಈ ವಿನಾಶವನ್ನು ತಡೆಯುವ ಈವರೆಗಿನ ಪ್ರಯತ್ನಗಳು ಕೇವಲ ಕಾಟಾಚಾರದವು. ಈ ಅವಘಢವನ್ನು ಬಲು ವೇಗದಿಂದ ಹತ್ತಿರ ಕರೆದುಕೊಳ್ಳಲು ಕಾರಣವಾಗಿರುವ ಜಗತ್ತಿನ ಸಿರಿವಂತ ದೇಶಗಳು ತಮ್ಮ ಹೊಣೆಗೇಡಿತನವನ್ನು ಒಪ್ಪಿ ಪರಿಹಾರ ರೂಪಿಸಲು ಈಗಲೂ ಮನಸು ಮಾಡಿಲ್ಲ.

ವಿನಾಶದ ಭಾರೀ ಭಾರವನ್ನು ವಿನಾಶಕ್ಕೆ ಕಾರಣರಲ್ಲದ ಜನಸಮುದಾಯಗಳ ಮೇಲೆ ಬೀಳುತ್ತಿರುವುದು ದುರಂತದ ಸಂಗತಿ. ಆಫ್ರಿಕಾದ ಮುಸುಕಿನ ಜೋಳ ಬೆಳೆಯುವ ಶೇ.30ರಷ್ಟು ಭೂಪ್ರದೇಶ ಈ ಅವಗಢಕ್ಕೆ ಬಲಿಯಾಗಲಿದೆ. ಬೀನ್ಸ್ ಬೆಳೆಯುವ ಶೇ.50ರಷ್ಟು ಭೂಪ್ರದೇಶ ಕೈ ತಪ್ಪಲಿದೆ.

ತಾಪಮಾನ ಏರಿಕೆ ಬಹುತೇಕರು ಭಾವಿಸಿರುವಂತೆ ದೂರ ಭವಿಷ್ಯದ ವಿದ್ಯಮಾನವಲ್ಲ. ಬದಲಾಗಿ ಅಂಗಳಕ್ಕೆ ಬಂದು ನಿಂತು ಬಾಗಿಲು ಬಡಿಯುತ್ತಿರುವ ಬಹುದೊಡ್ಡ ಆತಂಕ.

ಕಳೆದ ವರ್ಷ ಅಮೆರಿಕ ಮತ್ತು ಕೆನಡಾದ ಪೆಸಿಫಿಕ್ ಕರಾವಳಿ ತೀರದಲ್ಲಿ ಬೀಸಿದ ಬಿಸಿ ಉರಿಮಾರುತ ಐನೂರು ಮಂದಿಯನ್ನು ಕೊಂದುಹಾಕಿತು. ಕೆನಡಾದ ರೋಗಿಯೊಬ್ಬಾಕೆಯನ್ನು ಅಲ್ಲಿನ ವೈದ್ಯರು ಜಾಗತಿಕ ತಾಪಮಾನ ಏರಿಕೆಯ ರೋಗಿ ಎಂದು ಬಣ್ಣಿಸಿದರು.

ದಕ್ಷಿಣ ಆಫ್ರಿಕಾ ಈಗಾಗಲೆ ತೀವ್ರ ಬರಗಾಲಗಳು, ಉಗ್ರ ಉಷ್ಣ ಮಾರುತಗಳು, ಉಷ್ಣಗಾಳಿಯ ಗುಮ್ಮಟಗಳು, ಆಹಾರ ಅಭದ್ರತೆಗಳ ಅವಘಢಗಳಿಗೆ ಮುಖಾಮುಖಿಯಾಗಿಬಿಟ್ಟಿದೆ. ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ಎದುರಿಸಲು ಸಬ್ ಸಹಾರ ಅಫ್ರಿಕಾ ಮಾಡಬೇಕಿರುವ ವಾರ್ಷಿಕ ವೆಚ್ಚ ಏಳರಿಂದ 15 ಶತಕೋಟಿ ಡಾಲರುಗಳಂತೆ!

ಈಗಲೇ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾದರೆ ಹಲವು ಆಯ್ಕೆಗಳು ನಮಗೆ ಉಳಿಯುತ್ತವೆ. ವಿಳಂಬ ಮಾಡಿದಷ್ಟೂ ಆಯ್ಕೆಗಳು ತಗ್ಗುತ್ತವೆ ಮಾತ್ರವಲ್ಲ, ಕಡು ಕಠಿಣವೂ ಆಗುತ್ತವೆ. ಬದುಕಲು ಯೋಗ್ಯವಾದ ಪರಿಸರವನ್ನು ಉಳಿಸಿಕೊಳ್ಳಲು ತೆರೆದಿರುವ ಕಿಟಕಿ ಅಥವಾ ಬಾಗಿಲು ಅತಿ ತ್ವರೆಯಿಂದ ಮುಚ್ಚತೊಡಗಿದೆ. ಮುಚ್ಚುವುದರೊಳಗಾಗಿ ಎಚ್ಚೆತ್ತು ತಪ್ಪು ತಿದ್ದಿಕೊಳ್ಳಬೇಕಿದೆ. ತಡ ಮಾಡಿದಷ್ಟೂ ದುಬಾರಿ ದಂಡ ತೆರಬೇಕಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.


ಇದನ್ನೂ ಓದಿ: ಹವಾಮಾನ ಬಿಕ್ಕಟ್ಟು; ಇಡೀ ಭೂಮಿ ಧಗಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...