ಭಾರತದಲ್ಲಿ ಸಿಎಎ ಕುರಿತು ಅಧಿಸೂಚನೆ ಹೊರಡಿಸಿರುವ ಬಗ್ಗೆ ಅಮೆರಿಕದ ಸೆನೆಟರ್ವೋರ್ವರು ಆತಂಕ ವ್ಯಕ್ತಪಡಿಸಿದ್ದು, ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧವು ಧರ್ವವನ್ನು ಮೀರಿ ಮಾನವ ಹಕ್ಕುಗಳನ್ನು ಕಾಪಾಡುವ ಮೌಲ್ಯಗಳಲ್ಲಿ ಬೇರೂರಿರುವುದು ಅತ್ಯಗತ್ಯ ಎಂದು ಹೇಳಿದ್ದಾರೆ.
ಭಾರತ ಸರಕಾರದ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ, ವಿಶೇಷವಾಗಿ ಭಾರತದ ಮುಸ್ಲಿಂ ಸಮುದಾಯದ ಮೇಲೆ ಕಾನೂನಿನ ಸಂಭಾವ್ಯ ಪರಿಣಾಮಗಳನ್ನು ಸೂಚಿಸುವ ಭಾರತ ಸರ್ಕಾರದ ಕಾಯ್ದೆ ಬಗ್ಗೆ ನಾನು ತೀವ್ರವಾಗಿ ಕಳವಳಗೊಂಡಿದ್ದೇನೆ. ಪವಿತ್ರವಾದ ರಂಜಾನ್ ತಿಂಗಳಲ್ಲಿ ಅದನ್ನು ಜಾರಿಗೆ ತರಲಾಗಿದೆ ಇದು ಮತ್ತಷ್ಟು ಹದಗೆಡಿಸುವಂತೆ ಮಾಡಿದೆ ಎಂದು ಅಮೆರಿಕದ ಸೆನೆಟರ್, ವಿದೇಶಿ ಸಂಬಂಧಗಳ ಸಮಿತಿಯ ಅಧ್ಯಕ್ಷ ಕಾರ್ಡಿನ್ ಹೇಳಿದ್ದಾರೆ.
ಅಮೆರಿಕ ಮತ್ತು ಭಾರತದ ಸಂಬಂಧವು ಗಾಢವಾಗುತ್ತಿದ್ದಂತೆ, ನಮ್ಮ ಸಹಕಾರವು ಧರ್ಮವನ್ನು ಲೆಕ್ಕಿಸದೆ ಎಲ್ಲಾ ವ್ಯಕ್ತಿಗಳ ಮಾನವ ಹಕ್ಕುಗಳನ್ನು ರಕ್ಷಿಸುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಸಿಎಎ ಜಾರಿ ಬಗ್ಗೆ ಹಿಂದೂ ಅಮೆರಿಕನ್ ಗುಂಪುಗಳು ಭಾರತವನ್ನು ಶ್ಲಾಘಿಸಿದ ಬೆನ್ನಲ್ಲಿ ಅಮೆರಿಕದ ಸೆನೆಟರ್ ಈ ಹೇಳಿಕೆಯನ್ನು ನೀಡಿದ್ದು, ಹೆಚ್ಚಿನ ಮಹತ್ವವನ್ನು ಪಡೆದುಕೊಂಡಿದೆ. ಕಳೆದ ವಾರ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸಿಎಎ ಅಧಿಸೂಚನೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ವಿವಾದಿತ ಕಾನೂನಿನ ಅನುಷ್ಠಾನದ ಬಗ್ಗೆ ಬಿಡೆನ್ ಆಡಳಿತವು ಪರಿಶೀಲನೆ ನಡೆಸುತ್ತಿದೆ ಎಂದು ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದರು.
ಧಾರ್ಮಿಕ ಸ್ವಾತಂತ್ರ್ಯಕ್ಕೆ ಗೌರವ ಮತ್ತು ಕಾನೂನಿನಡಿಯಲ್ಲಿ ಎಲ್ಲಾ ಸಮುದಾಯಗಳಿಗೆ ಸಮಾನವಾದ ಹಕ್ಕುಗಳನ್ನು ನೀಡುವುದು ಮೂಲಭೂತ ಪ್ರಜಾಪ್ರಭುತ್ವದ ತತ್ವಗಳಾಗಿವೆ ಎಂದು ಮಿಲ್ಲರ್ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಭಾರತ, ಅಮೆರಿಕ ಸಿಎಎ ಬಗ್ಗೆ ತಪ್ಪು ಮಾಹಿತಿ ಹೊಂದಿದೆ ಮತ್ತು ಟೀಕೆ ಅನಗತ್ಯ ಎಂದು ಪ್ರತಿಕ್ರಿಯಿಸಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆ ಅಥವಾ ಸಿಎಎ ಕಾಯ್ದೆಯು ಡಿಸೆಂಬರ್ 31, 2014ರೊಳಗೆ ಭಾರತಕ್ಕೆ ಆಗಮಿಸಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರು ಸೇರಿದಂತೆ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವವನ್ನು ನೀಡುತ್ತದೆ. CAA ಡಿಸೆಂಬರ್ 2019ರಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದ್ದು, ಆ ಬಳಿಕ ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆದಿದೆ. ಇದಾದ 5 ವರ್ಷಗಳ ಬಳಿಕ ಕೇಂದ್ರವು ಕಳೆದ ವಾರ ದೇಶದಲ್ಲಿ ಸಿಎಎ ಜಾರಿಗೆ ತಂದಿದೆ. ಸಿಎಎ ತಮ್ಮ ಪೌರತ್ವದ ಮೇಲೆ ಪರಿಣಾಮ ಬೀರುವುದಿಲ್ಲ ಮತ್ತು ಹಿಂದೂಗಳಂತೆ ಸಮಾನ ಹಕ್ಕುಗಳನ್ನು ಭಾರತೀಯ ಮುಸ್ಲಿಮರು ಕೂಡ ಹೊಂದಿದ್ದಾರೆ, ಯಾರೂ ಕೂಡ ಈ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಸರ್ಕಾರವು ಪತ್ರಿಕಾ ಹೇಳಿಕೆಯನ್ನು ನೀಡಿತ್ತು.