ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಧುನಿಕ ಕಾಲದ ‘ತಾತ್ವಿಕ ರಾಜ’ ಎಂದು ಶ್ಲಾಘಿಸಿ, ದೇಶದಲ್ಲಿ ಕೋಮುಗಲಭೆಗಳಿಗೆ ‘ಮುಸ್ಲಿಮರೇ ಕಾರಣ’ ಎಂದು ಹೇಳಿದ್ದ ಉತ್ತರ ಪ್ರದೇಶದ ಬರೇಲಿಯ ನ್ಯಾಯಾಧೀಶರ ವಿವಾದಾತ್ಮಕ ಹೇಳಿಕೆಯನ್ನು ಅಲಹಾಬಾದ್ ಹೈಕೋರ್ಟ್ ಅಳಿಸಿ ಹಾಕಿದೆ.
ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ರವಿಕುಮಾರ್ ದಿವಾಕರ್ ಮಾರ್ಚ್ 5ರಂದು ಮಾಡಿದ ಟೀಕೆಗಳು ರಾಜಕೀಯ ಪ್ರೇರಿತವಾಗಿದೆ ಮತ್ತು ವೈಯಕ್ತಿಕ ಅಭಿಪ್ರಾಯಗಳನ್ನು ಒಳಗೊಂಡಿರುವ ಅನಗತ್ಯ ಅಭಿವ್ಯಕ್ತಿಯಾಗಿದೆ ಎಂದು ಅಲಹಬಾದ್ ಹೈಕೋರ್ಟ್ ಹೇಳಿದೆ. 2010ರ ಬರೇಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಧೀಶರ ಈ ವಿವಾದಾತ್ಮಕ ಟೀಕೆಗಳನ್ನು ಮಾಡಿದ್ದು, ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರ ಗುಂಪು ಜಡ್ಜ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ಬರೇಲಿ ಗಲಭೆಯ ಮುಖ್ಯ ಸೂತ್ರಧಾರ ಎಂದು ಹೇಳಲಾಗಿದ್ದ ಮೌಲಾನಾ ತೌಕೀರ್ ರಜಾ ಖಾನ್ ಅವರು ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಧೀಶ ದಿವಾಕರ್ ಅವರು ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡಿದ್ದಕ್ಕಾಗಿ ಹೈಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ನ್ಯಾಯಾಂಗದ ಆದೇಶವನ್ನು ನೀಡುವಾಗ ಇಂತದ್ದೆಲ್ಲಾ ಅಗತ್ಯವಿಲ್ಲ ಎಂದು ಜಸ್ಟಿಸ್ ರಾಮ್ ಮನೋಹರ್ ನಾರಾಯಣ ಮಿಶ್ರಾ ಅವರು ಹೇಳಿದ್ದಾರೆ.
ನ್ಯಾಯಾಂಗ ಅಧಿಕಾರಿಯು ಈ ವಿಷಯದಲ್ಲಿ ತನ್ನ ವೈಯಕ್ತಿಕ ಅಥವಾ ಪೂರ್ವ ಕಲ್ಪಿತ ಕಲ್ಪನೆಗಳು ಅಥವಾ ಒಲವುಗಳನ್ನು ವ್ಯಕ್ತಪಡಿಸುವುದಾಗಿ ನಿರೀಕ್ಷಿಸುವುದಿಲ್ಲ. ಅಂತಹ ಆದೇಶವನ್ನು ಜನಸಾಮಾನ್ಯರು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ ಜಸ್ಟಿಸ್ ನಾರಾಯಣ ಮಿಶ್ರಾ, ನ್ಯಾ.ದಿವಾಕರ ಅವರ ಮಾ.5ರ ಆದೇಶದ ಆರನೇ ಪುಟದ ಕೊನೆಯ ಪ್ಯಾರಾದಿಂದ 8ನೇ ಪುಟದ ಮಧ್ಯದವರೆಗಿನ ಭಾಗವನ್ನು ತೆಗೆಯುವಂತೆ ಆದೇಶಿಸಿದ್ದಾರೆ.
ಮಾರ್ಚ್ 5ರಂದು ನ್ಯಾಯಾಧೀಶ ದಿವಾಕರ್ 2010ರಲ್ಲಿ ಬರೇಲಿಯಲ್ಲಿ ನಡೆದ ಕೋಮು ಹಿಂಸಾಚಾರದ ಪ್ರಕರಣದಲ್ಲಿ ಮುಸ್ಲಿಂ ಧರ್ಮಗುರು-ರಾಜಕಾರಣಿ ಮೌಲಾನಾ ಖಾನ್ ವಿರುದ್ಧದ ಕೊಲೆ ಯತ್ನ ಸೇರಿದಂತೆ ಗಂಭೀರ ಕ್ರಿಮಿನಲ್ ಆರೋಪಗಳ ಕುರಿತು ವಿಚಾರಣೆ ನಡೆಸುವಾಗ ಅಧಿಕಾರ ಸ್ಥಾನಗಳಲ್ಲಿರುವವರು ಧಾರ್ಮಿಕ ವ್ಯಕ್ತಿಗಳಾಗಿರಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದ್ದಾರೆ ಎಂದಿದ್ದರು. ಅವರು ಆದಿತ್ಯನಾಥ್ ಅವರ ಧಾರ್ಮಿಕ ಹಿನ್ನೆಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದು ಮಾತ್ರವಲ್ಲದೆ, ದೇಶದಲ್ಲಿ ಗಲಭೆಗಳನ್ನು ನಿರ್ದಿಷ್ಟ ಸಮುದಾಯದ ಮೇಲೆ ಹೊರಿಸುವ ಪ್ರಯತ್ನವನ್ನು ಮಾಡಿದ್ದರು.
ಭಾರತದಲ್ಲಿ ಗಲಭೆಗಳಿಗೆ ಮುಖ್ಯ ಕಾರಣ ಇಲ್ಲಿನ ರಾಜಕೀಯ ಪಕ್ಷಗಳು ನಿರ್ದಿಷ್ಟ ಧರ್ಮದ ತುಷ್ಟೀಕರಣದಲ್ಲಿ ತೊಡಗಿಕೊಂಡಿರುವುದಾಗಿದೆ ಎಂದು ಜಸ್ಟಿಸ್ ದಿವಾಕರ್ ಹೇಳಿದ್ದು, ಆ ನಿರ್ದಿಷ್ಟ ಧರ್ಮದ ಪ್ರಮುಖರ ನೈತಿಕ ಸ್ಥೈರ್ಯ ಎಷ್ಟರ ಮಟ್ಟಿಗೆ ಹೆಚ್ಚುತ್ತದೆ ಎಂದರೆ ಅವರು ಗಲಭೆ ಎಬ್ಬಿಸಿದರೂ ಅಧಿಕಾರದ ರಕ್ಷಣೆಯಿಂದ ತಮಗೆ ಯಾವುದೇ ಹಾನಿಯಾಗುವುದಿಲ್ಲ ಎಂದು ನಂಬುತ್ತಾರೆ ಎಂದು ಹೇಳಿದ್ದರು.
2010ರ ಬರೇಲಿ ಗಲಭೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಧೀಶರಾದ ದಿವಾಕರ್ ಅವರು ಚಾರ್ಜ್ಶೀಟ್ನಲ್ಲಿ ಖಾನ್ ಅವರ ಹೆಸರನ್ನು ಸೇರಿಸಿದರು ಮತ್ತು ಮಾರ್ಚ್ 11ರಂದು ಅವರ ಮುಂದೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಖಾನ್ ಅವರು ಬರೇಲ್ವಿ ಪಂಥದ ಪ್ರಮುಖ ಧರ್ಮಗುರು ಮತ್ತು ಇತ್ತೆಹಾದ್-ಎ-ಮಿಲ್ಲತ್ ಕೌನ್ಸಿಲ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮಾರ್ಚ್ 2, 2010ರಂದು ಬರೇಲಿಯಲ್ಲಿ ಮುಸ್ಲಿಂ ಧಾರ್ಮಿಕ ಮೆರವಣಿಗೆಯ ಮಾರ್ಗದ ಬಗ್ಗೆ ವಿವಾದ ಉಂಟಾದ ನಂತರ ನಡೆದ ಗಲಭೆಯ ಮುಖ್ಯ ಸೂತ್ರಧಾರ ಎಂದು ನ್ಯಾಯಾಧೀಶರು ಖಾನ್ ಅವರನ್ನು ಹೆಸರಿಸಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಆಸ್ತಿಪಾಸ್ತಿಗೆ ಹಾನಿಯಾಗಿದೆ. ನಗರದಲ್ಲಿ ಹಲವು ದಿನಗಳಿಂದ ಕರ್ಫ್ಯೂ ಹೇರಲಾಗಿತ್ತು.
#BREAKING | #AllahabadHighCourt EXPUNGES remarks made by ASJ, Bareilly Ravi Kumar Diwakar in one of his orders pertaining to the 2010 Bareilly Riots case wherein he had praised UP CM Yogi Adityanath and stated that "religious person in power gives good results". pic.twitter.com/D46ImIPkTq
— Live Law (@LiveLawIndia) March 20, 2024
ಇದನ್ನು ಓದಿ: ಸಿಎಎ: ಮುಸ್ಲಿಮರ ಮೇಲಿನ ಪ್ರಭಾವದ ಬಗ್ಗೆ ಯುಎಸ್ ಸೆನೆಟರ್ ಕಳವಳ