ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಕಣ ರಣಗೇರಿದ್ದು, ಎಲ್ಲ ಪಕ್ಷಗಳಿಂದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಇದೇ ಹೊತ್ತಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪಶ್ಚಿಮ ಯುಪಿಯಲ್ಲಿ ಇಂದಿನ ರ್ಯಾಲಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ.
ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಮಗಳು ಕೊರೊನಾ ಸೋಂಕಿಗೆ ಒಳಗಾದ ಒಂದು ದಿನದ ನಂತರ ಈ ನಿರ್ಧಾರವನ್ನು ತಿಳಿಸಿದ್ದು, ಮುಂದಿನ ಮೂರು ದಿನಗಳ ಕಾಲ ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿರುತ್ತೇವೆ ಎಂದು ಘೋಷಿಸಿದ್ದಾರೆ.
ತಮ್ಮ ಕೊರೊನಾ ನೆಗೆಟಿವ್ ವರದಿಯನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಅವರು, ಕುಟುಂಬ ಸದಸ್ಯರು ಸೋಂಕಿಗೆ ಒಳಗಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ‘ನನ್ನೊಂದಿಗೆ ಸಹೋದರಿ ಇದ್ದಾಳೆ’: 2022ರ ಯುಪಿ ಚುನಾವಣೆಗೆ ಫಿಲ್ಮ್ ಡೈಲಾಗ್ ನೆನಪಿಸಿಕೊಂಡ ಪ್ರಿಯಾಂಕಾ ಗಾಂಧಿ
ಅಖಿಲೇಶ್ ಯಾದವ್, ಇಂದು ಪಶ್ಚಿಮ ಉತ್ತರ ಪ್ರದೇಶದ ಅಲಿಘರ್ನ ಇಗ್ಲಾಸ್ನಲ್ಲಿ ರಾಷ್ಟ್ರೀಯ ಲೋಕದಳದೊಂದಿಗೆ ಜಂಟಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ತಮ್ಮ ಟ್ವೀಟ್ನಲ್ಲಿ ಅವರು ಸಮಾಜವಾದಿ ಪಕ್ಷದ ಕಾರ್ಯಕರ್ತರಿಗೆ ರ್ಯಾಲಿಗೆ ಶುಭ ಹಾರೈಸಿದ್ದು, ಸಭೆಯಲ್ಲಿ ಪೂರ್ಣ ಹುರುಪಿನಿಂದ ಭಾಗವಹಿಸುವಂತೆ ಮನವಿ ಮಾಡಿದ್ದಾರೆ.
ಅಖಿಲೇಶ್ ಅವರ ಪತ್ನಿ ಮತ್ತು ಮಾಜಿ ಸಂಸದೆ ಡಿಂಪಲ್ ಯಾದವ್, “ನಾನು ಕೋವಿಡ್ರ ಸೋಂಕಿಗೆ ಒಳಗಾಗಿದ್ದೇನೆ. ನಾನು ಸಂಪೂರ್ಣವಾಗಿ ಲಸಿಕೆ ಹಾಕಿಸಿದ್ದೇನೆ. ನನಗೆ ಯಾವುದೇ ರೋಗಲಕ್ಷಣಗಳು ಇಲ್ಲ. ನನ್ನ ಮತ್ತು ಇತರರ ಸುರಕ್ಷತೆಗಾಗಿ, ನಾನು ಸ್ವಯಂ ಕ್ವಾರಂಟೈನ್ನಲ್ಲಿದ್ದೇನೆ” ಎಂದು ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಅವರಿಗೆ ಕರೆ ಮಾಡಿ ಮಾತನಾಡಿದ್ದು, ಪತ್ನಿ ಮತ್ತು ಮಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ.