ಹಿಂದಿ ಸುದ್ದಿ ವಾಹಿನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತನೊಬ್ಬನನ್ನು ಆಗಸ್ಟ್ 24 ರಂದು ಉತ್ತರಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೋಲೀಸರು ಹೇಳಿದ್ದಾರೆ. ಗಾಜಿಯಾಬಾದ್ನಲ್ಲಿ ಮತ್ತೊಬ್ಬ ಪತ್ರಕರ್ತನ ಹತ್ಯೆ ನಡೆದ ಒಂದು ತಿಂಗಳಿನಲ್ಲಿ ಈ ಘಟನೆ ನಡೆದಿದೆ.
ರತನ್ ಸಿಂಗ್ ಎಂದು ಗುರುತಿಸಲ್ಪಟ್ಟ ಪತ್ರಕರ್ತನನ್ನು ಬಲ್ಲಿಯಾ ಜಿಲ್ಲೆಯ ಫೆಫ್ನಾ ಪ್ರದೇಶದ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.
ಆತನನ್ನು ಬೆನ್ನಟ್ಟಿ ಗುಂಡು ಹಾರಿಸಿದ ಮೂವರನ್ನು ಪೊಲೀಸರು ಗುರುತಿಸಿ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ರತನ್ ಸಿಂಗ್ ಮತ್ತು ಆರೋಪಿಗಳ ನಡುವಿನ ಆಸ್ತಿ ವಿವಾದಕ್ಕೆ ಈ ಕೊಲೆ ನಡೆದಿದೆ. ಆದರೆ, ಪತ್ರಕರ್ತನ ಕುಟುಂಬ ಇದನ್ನು ನಿರಾಕರಿಸಿದ್ದು, ಪೊಲೀಸ್ ಮುಖ್ಯಸ್ಥರೆ ಪ್ರಮುಖ ಕೊಲೆ ಆರೋಪಿಗಳಾಗಿದ್ದು, ಪೊಲೀಸರು ಸುಳ್ಳು ಕಥೆ ಕಟ್ಟುತ್ತಿದ್ದಾರೆ ಎಂದು ಕುಟುಂಬ ಆರೋಪಿಸಿದೆ.
ರತನ್ ಸಿಂಗ್ ಜಿಲ್ಲೆಯ ನಗರ ಭಾಗದಲ್ಲಿ ವಾಸಿಸುತ್ತಿದ್ದು, ಅವರ ಹಳ್ಳಿಯ ಮನೆಯು ವಿವಾದದಲ್ಲಿತ್ತು. ಹಾಗಾಗಿಯೇ ಆರೋಪಿಗಳು ಆತನನ್ನು ಥಳಿಸಿ ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೋಲೀಸರು ಶಂಕಿಸಿದ್ದಾರೆ. ಗುಂಡಿನ ದಾಳಿಗೊಳಗಾಗಿದ್ದ ರತನ್ ಸಿಂಗ್ರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.
ಆನಂತರ ಪೊಲೀಸರು ಅರವಿಂದ್ ಸಿಂಗ್, ದಿನೇಶ್ ಸಿಂಗ್ ಮತ್ತು ಸುನಿಲ್ ಸಿಂಗ್ ಎಂಬ ಮೂರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಪತ್ರಕರ್ತನ ಕುಟುಂಬವು ಹತ್ಯೆಯ ಮುಖ್ಯ ಅಪರಾಧಿ ಫೆಫ್ನಾ ಪೊಲೀಸ್ ಠಾಣೆಯ ಉಸ್ತುವಾರಿ ಪೋಲೀಸ್ ಎಂದು ಆರೋಪಿಸಿದ್ದಾರೆ. ಅವನು ತನ್ನ ವಾಹನದಲ್ಲಿ ಕೃತ್ಯ ನಡೆದ ಸ್ಥಳಕ್ಕೆ ಹೋಗಿ, ನಂತರ ಪರಾರಿಯಾಗಿದ್ದಾನೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅವರು ಆರೋಪಿಸಿದರು.
ಈ ಘಟನೆಯು ಪೊಲೀಸ್ ಸ್ಟೇಷನ್ನಿಂದ ಕೇವಲ 20 ಹೆಜ್ಜೆ ದೂರದಲ್ಲಿ ನಡೆದಿದೆ. ಪೊಲೀಸರು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ಕುಟುಂಬವು ದೂರಿದೆ.
“ರತನ್ ಸಿಂಗ್, ಅವರ ಸಂಬಂಧಿಕರೊಂದಿಗೆ ಮನೆಗೆ ಸಂಬಂಧಿಸಿದಂತೆ ಹಳೆಯ ವಿವಾದ ಹೊಂದಿದ್ದರು. ಆ ಮೂವರನ್ನು ಕೂಡಲೇ ವಶಕ್ಕೆ ತೆಗೆದುಕೊಳ್ಳಲಾಗಿದೆ. ಈ ಘಟನೆಗೂ ಪತ್ರಿಕೋದ್ಯಮಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಬಲ್ಲಿಯಾ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು, ಇನ್ನೊಬ್ಬ ಪತ್ರಕರ್ತ ವಿಕ್ರಮ್ ಜೋಶಿ ತನ್ನ ಸೋದರ ಸಂಬಂಧಿಯೊಬ್ಬರ ಕಿರುಕುಳದ ಬಗ್ಗೆ ಪೊಲೀಸ್ ದೂರು ದಾಖಲಿಸಿದ ನಂತರ ಅವರ ಮಕ್ಕಳ ಮುಂದೆಯೇ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು.
ಇದನ್ನೂ ಓದಿ: ಕಳೆದೊಂದು ವಾರದಲ್ಲಿ 8 ಪತ್ರಕರ್ತರ ಮೇಲೆ ಹಲ್ಲೆ: ತೀವ್ರ ಆಕ್ರೋಶ