ಮಾರ್ಚ್ 11ರಂದು ನಿಧನರಾಗಿದ್ದ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಆರ್.ಧ್ರುವ ನಾರಾಯಣ ಅವರ ಪತ್ನಿ ವೀಣಾ ಧ್ರುವನಾರಾಯಣ ಅವರು ಇಂದು (ಏ.7) ನಿಧನರಾಗಿದ್ದಾರೆ. ಕೇವಲ ಒಂದು ತಿಂಗಳ ಅಂತರದಲ್ಲೇ ಪತಿ-ಪತ್ನಿ ಇಬ್ಬರೂ ಇಹಲೋಕ ತ್ಯಜಿಸಿರುವುದು ಅವರ ಕುಟುಂಬಕ್ಕೆ ಭಾರೀ ದುಃಖ ತಂದಿದೆ.
ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದ ವೀಣಾ (50) ಅವರು ಸುಮಾರು 16 ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ಇತ್ತೀಚೆಗೆ, ಪತಿ ಧ್ರುವನಾರಾಯಣ ಅವರ ಅಕಾಲಿಕ ಸಾವಿನಿಂದಾಗಿ ಶಾಕ್ ಗೆ ಒಳಗಾಗಿದ್ದ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಹಾಗಾಗಿ, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಶುಕ್ರವಾರ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೀರ್ಘಕಾಲದಿಂದ ಅನಾರೋಗ್ಯದಲ್ಲಿದ್ದರಿಂದಾಗಿ, ಮೃತರ ಅಂತ್ಯಕ್ರಿಯೆನ್ನು ಶುಕ್ರವಾರ ಸಂಜೆಯೇ ಧ್ರುವನಾರಾಯಣ ಹುಟ್ಟೂರಾದ ಚಾಮರಾಜ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಮಾ. 11ರಂದು ನಿಧನರಾಗಿದ್ದ ಧ್ರುವನಾರಾಯಣ ಅವರ ಅಂತ್ಯಕ್ರಿಯೆಯನ್ನು ಮಾ. 12ರಂದು ಹೆಗ್ಗವಾಡಿಯಲ್ಲೇ ನಡೆಸಲಾಗಿತ್ತು. ಅವರ ಸಮಾಧಿಯ ಪಕ್ಕದಲ್ಲೇ ವೀಣಾ ಅವರ ಅಂತ್ಯಕ್ರಿಯೆಯನ್ನೂ ನಡೆಸಲು ತೀರ್ಮಾನಿಸಿದೆ ಎಂದು ಅವರ ಕುಟುುಂಬದ ಮೂಲಗಳು ತಿಳಿಸಿವೆ.
ಕಳೆದ ಫೆಬ್ರುವರಿ ತಿಂಗಳು ವೀಣಾ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. ಚುನಾವಣೆ ಒತ್ತಡಗಳ ನಡುವೆಯೇ ಧ್ರುವ ಅವರು ತಮ್ಮ ಪತ್ನಿಯನ್ನು ಚೆನ್ನೈಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು. ನಂತರ ಧ್ರುವ ಅವರು ತೀರಿಕೊಂಡ ಮಾರನೇ ದಿನವೇ ಆಸ್ಪತ್ರೆಗೆ ವೀಣಾ ಅವರು ದಾಖಲಾಗಿದ್ದರು. ಅಂದಿನಿಂದಲೂ ಆಸ್ಪತ್ರೆಯಲ್ಲೇ ಇದ್ದರು. ಕಳೆದ ನಾಲ್ಕೈದು ದಿನಗಳಿಂದ ಆಹಾರವನ್ನೂ ತ್ಯಜಿಸಿದ್ದರು.
ನಿವೃತ್ತ ಆರ್ಎಫ್ಒ, ನಂಜನಗೂಡು ಗ್ರಾಮದ ಬದನವಾಳು ನಿವಾಸಿ ರಾಮಯ್ಯ ಅವರು ಧ್ರುವನಾರಾಯಣ ಅವರ ಸೋದರ ಮಾವ. ರಾಮಯ್ಯ ಅವರ ಮಗಳಾದ ವೀಣಾ ಅವರನ್ನು ಧ್ರುವ ವಿವಾಹವಾಗಿದ್ದರು. ವೀಣಾ ಅವರು ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಪದವೀಧರರಾಗಿದ್ದರು. ವೀಣಾ ಹಾಗೂ ಧ್ರುವ ದಂಪತಿಗೆ ಇಬ್ಬರು ಮಕ್ಕಳು (ದರ್ಶನ್ ಮತ್ತು ಬೀರನ್).
ಮಾ. 11ರಂದು ಧ್ರುವನಾರಾಯಣ್ ಅವರು ನಿಧನರಾಗಿದ್ದರು. ಅಂದು ಬೆಳಗಿನ ಜಾವದಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಮೈಸೂರಿನ ತಮ್ಮ ನಿವಾಸದಲ್ಲಿದ್ದ ಧ್ರುವನಾರಾಯಣ ಅವರನ್ನು, ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ನಿಧನರಾಗಿದ್ದರು. ಹೃದಯಾಘಾತ ಸಂಭವಿಸಿದಾಗಲೇ ಅವರು ತಮ್ಮ ಕಾರು ಚಾಲಕನಿಗೆ ಕರೆ ಮಾಡಿ, ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದರು.
ಕಾರಿನ ಚಾಲಕ ತಕ್ಷಣವೇ ಬಂದು ಅವರನ್ನು ಕಾರಿನಲ್ಲಿ ಕರೆದುಕೊಂಡು ಆಸ್ಪತ್ರೆಯನ್ನು ತಲುಪುವಷ್ಟರಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದ ಧ್ರುವನಾರಾಯಣ ಅವರು ಪ್ರಜ್ಞಾಶೂನ್ಯರಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಒಳಪಡಿಸಲಾಗಿತ್ತಾದರೂ ಅವರನ್ನು ಉಳಿಸಲಾಗಿರಲಿಲ್ಲ. ತಪಾಸಣೆ ನಡೆಸಿದ್ದ ವೈದ್ಯರು, ಧ್ರುವನಾರಾಯಣ ಅವರಿಗೆ ಹೃದಯಾಘಾತದಿಂದಾಗಿ ತೀವ್ರವಾಗಿ ಆಂತರಿಕ ರಕ್ತಸ್ರಾವವಾಗಿತ್ತು. ಉಸಿರಾಡಲೂ ಕಷ್ಟಪಡುತ್ತಿದ್ದ ಅವರು ಒಮ್ಮೆ ದೀರ್ಘವಾಗಿ ಉಸಿರು ಎಳೆದುಕೊಂಡಾಗ ರಕ್ತವು ಶ್ವಾಸಕೋಶದೊಳಕ್ಕೆ ನುಗ್ಗಿರುವುದರಿಂದ ಅವರ ಸಾವಿಗೆ ಕಾರಣ ಎಂದು ಹೇಳಿದ್ದರು.
ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಧ್ರುವನಾರಾಯಣ ಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಬಹುತೇಕ ನಿರ್ಧರಿಸಿತ್ತು. ಆದರೆ ಅವರ ಹಠಾತ್ ನಿರ್ಗಮನದಿಂದಾಗಿ ಕಾಂಗ್ರೆಸ್ ನಲುಗಿ ಹೋಗಿತ್ತು. ಹೀಗಾಗಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧಿಸಲು ಧ್ರುವ ನಾರಾಯಣ ಅವರ ಪುತ್ರ ದರ್ಶನ್ ಧ್ರುವನಾರಾಯಣ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ತಂದೆಯ ಸಾವಿನ ಆಘಾತದಿಂದ ಹಂತಹಂತವಾಗಿ ಹೊರಬಂದಿದ್ದ ದರ್ಶನ್, ಏ. 3ರಿಂದ ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಶುರು ಮಾಡಿದ್ದರು. ಹಳ್ಳಿಹಳ್ಳಿಗಳಿಗೂ ತೆರಳಿ ಮತಯಾಚನೆ ಮಾಡಿದ್ದರು. ಆದರೆ, ಪ್ರಚಾರ ಆರಂಭಿಸಿದ ಮೂರನೇ ದಿನಗಳಲ್ಲಿ ತಾಯಿಯ ಸಾವಿನ ಬರಸಿಡಿಲು ಅವರಿಗೆ ತಟ್ಟಿದೆ. ಮಾ. 11ರಂದು ಧ್ರುವನಾರಾಯಣ ಅವರು ನಿಧನರಾಗಿದ್ದು, ಅದಾಗಿ ಒಂದು ತಿಂಗಳೊಳಗೇ ಈಗ ತಾಯಿಯನ್ನೂ ಕಳೆದುಕೊಂಡಿದ್ದಾರೆ.
Very sad. Druva was a good politician.