ತನ್ನ ಏಕೈಕ ಜೀವನಾಧಾರವಾಗಿದ್ದ ತರಕಾರಿ ಗಾಡಿಯನ್ನು ಅಧಿಕಾರಿಗಳು ಜಖಂಗೊಳಿಸುವಾಗ ತಡೆಯಲು ಬೇರೆ ದಾರಿಯಿಲ್ಲದೆ ಬಡ ವ್ಯಾಪಾರಿಯೊಬ್ಬ ಜೆಸಿಬಿ ಏರಿದ ಹೃದಯ ವಿದ್ರಾವಕ ಘಟನೆ ಜಮ್ಮು ಕಾಶ್ಮೀರದ ಕಥುವಾದಲ್ಲಿ ನಡೆದಿದೆ.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಕಥುವಾ ನಗರದಲ್ಲಿ ಅಕ್ರಮ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆಯ ಭಾಗವಾಗಿ ಜಿಲ್ಲಾಡಳಿತ ಬೀದಿ ಬದಿಯ ವ್ಯಾಪಾರಿಗಳನ್ನು ತೆರವುಗೊಳಿಸಿದೆ. ಈ ವೇಳೆ ಬಡ ವ್ಯಾಪಾರಿಯ ಮೇಲೆ ಅಧಿಕಾರಿಗಳು ದಬ್ಬಾಳಿಕೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
Incident from Kathua, Jammu where JCB was used by staff of the municipal council to damage the cart of a poor vegetable vendor causing a financial loss.
CC : @districtadmkat1 pic.twitter.com/m1kGcUHVKo— Mohammed Zubair (@zoo_bear) December 14, 2023
ವೈರಲ್ ವಿಡಿಯೋದಲ್ಲಿ ಕಾಣುವಂತೆ ತರಕಾರಿ ವ್ಯಾಪಾರಿಯ ತಳ್ಳುಗಾಡಿಯನ್ನು ದೂಡಿಕೊಂಡು ಬಂದ ಅಧಿಕಾರಿಗಳು, ಅದನ್ನು ಜೆಸಿಬಿಯಿಂದ ಧ್ವಂಸ ಮಾಡಿಸಿದ್ದಾರೆ. ಈ ವೇಳೆ ತನ್ನ ಗಾಡಿಯನ್ನು ಬಿಟ್ಟು ಬಿಡುವಂತೆ ಆ ವ್ಯಾಪಾರಿ ಪರಿ ಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು ಕೇಳಿಲ್ಲ. ದಬ್ಬಾಳಿಕೆ ತಡೆಯಲು ಬೇರೆ ದಾರಿ ಕಾಣದ ವ್ಯಾಪಾರಿ ಜೆಸಿಬಿ ಮುಂಭಾಗದಲ್ಲಿ ಹತ್ತಿ ಕುಳಿತಿದ್ದಾನೆ. “ನನ್ನ ಮೇಲೆ ಹತ್ತಿಸಿ” ಎಂದು ಕಣ್ಣೀರು ಹಾಕಿದ್ದಾನೆ.
ಅಷ್ಟೇ ಅಲ್ಲದೆ ಅಧಿಕಾರಿಗಳ ವಿರುದ್ದ ಆಕ್ರೋಶಗೊಂಡ ವ್ಯಾಪಾರಿ ಓಡಿ ಹೋಗಿ ಕಟ್ಟಿಗೆಯೊಂದನ್ನು ತಂದು ಜೆಸಿಬಿಯ ಗಾಜು ಪುಡಿ ಮಾಡಿದ್ದಾನೆ. ಅಷ್ಟೊತ್ತಿಗೆ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆಯುವ ಪ್ರಯತ್ನ ಮಾಡಿದ್ದು, ಸ್ಥಳದಲ್ಲಿದ್ದ ಮನುಷ್ಯರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಎಲ್ಲಾ ಪ್ರಸಂಗದ ನಡುವೆ ಬಡ ವ್ಯಾಪಾರಿ ಕುಸಿದು ಬಿದ್ದಿದ್ದು, ಆತನನ್ನು ಸ್ಥಳೀಯರು ಎತ್ತಿಕೊಂಡು ಹೋಗುವುದನ್ನು ವಿಡಿಯೋದಲ್ಲಿ ಕಾಣಬಹುದು.
ವಿಡಿಯೋದಲ್ಲಿ ಕಾಣುವಂತೆ ಬಡ ತರಕಾರಿ ವ್ಯಾಪಾರಿ ಶಾಶ್ವತವಾಗಿ ಯಾವುದೇ ಅಂಗಡಿ ಹಾಕಿರಲಿಲ್ಲ. ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ. ಅದನ್ನು ದೂಡಿಕೊಂಡು ಬೇರೆಡೆಗೆ ಕೊಂಡು ಹೋಗುವುದಾಗಿಯೂ ಆತ ಅಧಿಕಾರಿಗಳ ಮುಂದೆ ಬೇಡಿಕೊಂಡಿದ್ದಾನೆ. ಆದರೂ, ಮಾನವೀಯತೆ ಮರೆತ ಅಧಿಕಾರಿಗಳು ತರಕಾರಿ ತುಂಬಿದ್ದ ಆತನ ಗಾಡಿಯನ್ನು ಹಾಳುಗೆವಿದ್ದಾರೆ. ಅಧಿಕಾರಿಗಳ ದರ್ಪಕ್ಕೆ ಗಾಡಿ ಮತ್ತು ತರಕಾರಿ ಎರಡೂ ಹಾಳಾಗಿದೆ.
ಇದನ್ನೂ ಓದಿ: ಜೀವನ ಕೊನೆಗೊಳಿಸಲು ಅನುಮತಿ ನೀಡಿ; ಲೈಂಗಿಕ ಕಿರುಕುಳದಿಂದ ನೊಂದು ಸಿಜೆಐಗೆ ಪತ್ರ ಬರೆದ ನ್ಯಾಯಾಧೀಶೆ!