ಅಸ್ಸಾಂನ ಕಾಮ್ರೂಪ್ ಜಿಲ್ಲೆಯಲ್ಲಿ ಕಳ್ಳತನದ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಗ್ರಾಮಸ್ಥರ ಗುಂಪು ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಶನಿವಾರ ರಾತ್ರಿ ಕಳ್ಳತನದ ಆರೋಪದ ಮೇಲೆ ಯುವಕನೋರ್ವನನ್ನು ಬಂಧಿಸಲು ತೆರಳಿದಾಗ ಬರುವಾಜನಿ ಗ್ರಾಮದಲ್ಲಿ ಗ್ರಾಮಸ್ಥರ ಗುಂಪು ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ ಗಾಯವಾಗಿದ್ದು, ಪೊಲೀಸ್ ವಾಹನಕ್ಕೂ ಹಾನಿಯಾಗಿದೆ.
ಭಾಸ್ಕರಮಲ್ಲ ಪಟವಾರಿ ನೇತೃತ್ವದ ರಂಗಿಯಾ ಪೊಲೀಸ್ ಠಾಣೆಯ ತಂಡವು ಕಳ್ಳನನ್ನು ಹಿಡಿಯಲು ಬರುವಾಜನಿ ಗ್ರಾಮಕ್ಕೆ ತೆರಳಿದ ವೇಳೆ ಘಟನೆ ನಡೆದಿದೆ.
ನಾವು ಸಮವಸ್ತ್ರದಲ್ಲಿ ಇರಲಿಲ್ಲ. ಆದರೆ ನಾವು ಪೊಲೀಸರು ಎಂದು ಗ್ರಾಮಸ್ಥರಿಗೆ ಪರಿಚಯಿಸಿದ್ದೇವೆ. ಆದರೆ ಅವರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ವಾಹನಕ್ಕೆ ಹಾನಿ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ನಡೆದ ತಕ್ಷಣ ಪೊಲೀಸ್ ವರಿಷ್ಠಾಧಿಕಾರಿ ಹಿತೇಶ್ ರಾಯ್ ಮತ್ತು ಉಪವಿಭಾಗೀಯ ಪೊಲೀಸ್ ಅಧಿಕಾರಿ ಸಿಜಲ್ ಅಗರ್ವಾಲ್ ಅವರು ಹೆಚ್ಚುವರಿ ಪೊಲೀಸರ ಜೊತೆ ಗ್ರಾಮಕ್ಕೆ ತೆರಳಿದ್ದಾರೆ. ಈ ಪ್ರದೇಶದಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಈಗ ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಮೈಮೇಲೆ ಮೂತ್ರ ವಿಸರ್ಜನೆ: 6 ಮಂದಿ ದುಷ್ಕರ್ಮಿಗಳ ಬಂಧನ