ಮುಂದಿನ 5 ವರ್ಷಗಳವರೆಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ 2013ರ ಅಡಿಯಲ್ಲಿ ಫಲಾನುಭವಿಗಳಿಗೆ ಉಚಿತ ಆಹಾರ ಧಾನ್ಯಗಳನ್ನು ನೀಡುವುದನ್ನು ಕೇಂದ್ರ ಸರ್ಕಾರ ಮುಂದುವರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಕೊರೋನ ವೈರಸ್ ಸಾಂಕ್ರಾಮಿಕವು ಹರಡಿದ್ದಾಗ, 2020ರಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ (ಪಿಎಮ್ಜಿಕೆಎವೈ)ಯನ್ನು ಜಾರಿಗೆ ತರಲಾಗಿತ್ತು. ಆ ಯೋಜನೆಯ ಪ್ರಕಾರ, ಪ್ರತಿಯೊಬ್ಬ ವ್ಯಕ್ತಿಗೆ 5 ಕೆಜಿ ಆಹಾರ ಧಾನ್ಯವನ್ನು ಸರಕಾರವು ಉಚಿತವಾಗಿ ನೀಡುತ್ತಿತ್ತು. ಇದು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೀಡಲಾಗುತ್ತಿದ್ದ ಆಹಾರ ಧಾನ್ಯಗಳಿಗೆ ಹೆಚ್ಚುವರಿಯಾಗಿತ್ತು.
ಪಿಎಂ ಗರೀಬ್ ಕಲ್ಯಾಣ್ (ಪಿಎಂಜಿಕೆಎವೈ) ಯೋಜನೆಯು ಈ ವರ್ಷ ಡಿಸೆಂಬರ್ನಲ್ಲಿ ಕೊನೆಗೊಳ್ಳಬೇಕಿತ್ತು. ಶನಿವಾರ ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂದು ಖಚಿತಪಡಿಸಿಕೊಳ್ಳಲು ಅದನ್ನು ವಿಸ್ತರಿಸುವುದು ತಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು. ನಾನು ಬಡತನವನ್ನು ನೋಡಿದ್ದೇನೆ. ನಾವು ಇನ್ನೂ ಐದು ವರ್ಷಗಳವರೆಗೆ ಯೋಜನೆಯನ್ನು ವಿಸ್ತರಿಸುತ್ತೇವೆ. ಇದು ಮೋದಿಯ ಸಂಕಲ್ಪ. ಇದು ಮೋದಿಯ ಗ್ಯಾರಂಟಿ. ಬಡವರಿಗೆ ಉಚಿತ ಪಡಿತರ ಸಿಗುತ್ತಲೇ ಇರುತ್ತದೆ. ಮೋದಿ ಅವರು ಗ್ಯಾರಂಟಿ ನೀಡಿದರೆ ಅದನ್ನು ಈಡೇರಿಸುತ್ತಾರೆ ಎಂಬ ಭರವಸೆ ಪ್ರತಿಯೊಬ್ಬ ಬಡ ತಾಯಿ ಮತ್ತು ಸಹೋದರಿಗೆ ತಿಳಿದಿದೆ ಎಂದು ಅವರು ಹೇಳಿದರು.
ಅವರು ಭಾನುವಾರ ಮಧ್ಯಪ್ರದೇಶದ ಸಿಯೋನಿಯಲ್ಲಿ ಮತ್ತೊಮ್ಮೆ ಇದೆ ಘೋಷಣೆಯನ್ನು ಪುನರಾವರ್ತಿಸಿದರು. ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ ದೇಶದಲ್ಲಿ ಯಾರೂ ಹಸಿವಿನಿಂದ ಇರಬಾರದು ಎಂದು ಖಚಿತಪಡಿಸಿಕೊಳ್ಳಲು ಅದನ್ನು ಯೋಜನೆಯನ್ನು ವಿಸ್ತರಿಸುವುದು ತಮ್ಮ ಸಂಕಲ್ಪವಾಗಿದೆ ಎಂದು ಹೇಳಿದರು.
ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುವ ನಿರ್ಧಾರವು ಉನ್ನತ ಮಟ್ಟದ ಆರ್ಥಿಕ ಸಂಕಷ್ಟ ಮತ್ತು ಬೆಳೆಯುತ್ತಿರುವ ಅಸಮಾನತೆಗಳ ಸೂಚನೆಯಾಗಿದೆ ಎಂದು ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೇಂದ್ರ ಸರಕಾರವನ್ನು ಟೀಕಿಸಿದೆ.
ಕೇಂದ್ರ ಸರ್ಕಾರವು ಜನರಿಗೆ NFSA ಅಡಿಯಲ್ಲಿ ಅಕ್ಕಿ ಕೆಜಿಗೆ 3 ರೂಗೆ, ಗೋಧಿ ಕೆಜಿಗೆ 2 ರೂಗೆ, ಮತ್ತು ಧಾನ್ಯಗಳು ಕೆಜಿಗೆ ರೂ 1 ರಂತೆ ನೀಡುತ್ತದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಸರ್ಕಾರವು PMGKAYನ್ನು NFSA ನೊಂದಿಗೆ ವಿಲೀನಗೊಳಿಸಿತು ಮತ್ತು NFSA ಅಡಿಯಲ್ಲಿ ಫಲಾನುಭವಿಗಳಿಗೆ ಅವರ ಅರ್ಹತೆಯ ಪ್ರಕಾರ 2023ರಲ್ಲಿ ಒಂದು ವರ್ಷಕ್ಕೆ ಉಚಿತ ಆಹಾರಧಾನ್ಯಗಳನ್ನು ನೀಡಲು ನಿರ್ಧರಿಸಿತು. ಮುಂದಿನ ಐದು ವರ್ಷಗಳವರೆಗೆ ಈ ಯೋಜನೆಯನ್ನು ವಿಸ್ತರಿಸುವುದಾಗಿ ಪ್ರಧಾನಮಂತ್ರಿ ಘೋಷಿಸಿದ್ದಾರೆ.
ಎನ್ಎಫ್ಎಸ್ಎ ಸುಮಾರು 81.35 ಕೋಟಿ ಜನರನ್ನು ಒಳಗೊಂಡಿದೆ ಮತ್ತು ಅವರಿಗೆ ಆಹಾರ ಭದ್ರತೆ ಒದಗಿಸಲು 2 ಲಕ್ಷ ಕೋಟಿ ರೂಪಾಯಿಗಳ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಕೇಂದ್ರ ಹೇಳಿತ್ತು.
ಪ್ರಧಾನಮಂತ್ರಿಯವರ ಘೋಷಣೆಯು ಉನ್ನತ ಮಟ್ಟದ ಆರ್ಥಿಕ ಸಂಕಷ್ಟ ಮತ್ತು ಬೆಳೆಯುತ್ತಿರುವ ಅಸಮಾನತೆಗಳ ಸೂಚನೆಯಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ. ಅಗತ್ಯ ವಸ್ತುಗಳ ಗಗನಕ್ಕೇರಿರುವ ಬೆಲೆಗಳಿಗೆ ಅನುಗುಣವಾಗಿ ಬಹುಪಾಲು ಭಾರತೀಯರ ಆದಾಯವು ಹೆಚ್ಚಾಗಿಲ್ಲ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 2013ರಲ್ಲಿ ಸಂಸತ್ತು ಅಂಗೀಕರಿಸಿದ ರಾಷ್ಟ್ರೀಯ ಆಹಾರ ಭದ್ರತೆಯನ್ನು ಸತತವಾಗಿ ವಿರೋಧಿಸಿದ್ದರು ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ದಲಿತ ಯುವಕನ ಮೇಲೆ ಹಲ್ಲೆ ನಡೆಸಿ ಮೈಮೇಲೆ ಮೂತ್ರ ವಿಸರ್ಜನೆ: 6 ಮಂದಿ ದುಷ್ಕರ್ಮಿಗಳ ಬಂಧನ