Homeಕರ್ನಾಟಕಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

ಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

- Advertisement -
- Advertisement -

ಆಗತಾನೇ ಅಡುಗೆಮನೆಯಲ್ಲಿದ್ದ ಕಾಂಪೋಸ್ಟ್ ಡಬ್ಬವನ್ನು ಮೂಗು ಮುಚ್ಚಿಕೊಂಡು ಕಂಬಕ್ಕೆ ರವಾನಿಸಿ ಕೂತಿದ್ದೆ; ಅದೇ ಸಮಯಕ್ಕೆ ಫೋನ್ ಬಂತು; ನಿಮ್ಮನೇಲಿ ಹಸಿ ಕಸ ಕಾಂಪೋಸ್ಟ್ ಮಾಡ್ತೀರಲ್ಲ, ಅದರ ಬಗ್ಗೆ ಲೇಖನ ಬರೆದು ಕೊಡಿ ಅಂತ.

ಮೂವ್ವತ್ತು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಬಂದಾಗ ಅಕ್ಕಪಕ್ಕದ ಸೈಟುಗಳು ಖಾಲಿ ಇದ್ದವು. ತುಸು ದೂರದಲ್ಲಿದ್ದ ಹೊಲಗಳು ಕಣ್ಣಿಗೆ ಬೀಳ್ತಾ ಇದ್ದವು. ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಅಜ್ಜಅಜ್ಜಿಯರು ತಮ್ಮ ದನಕರುಗಳನ್ನು ನಮ್ಮ ಪಕ್ಕದ ಸೈಟಿನಲ್ಲಿ ಮೇಯಿಸುತ್ತಾ ತಮ್ಮ ಕಷ್ಟಸುಖ ಮಾತಾಡಿಕೊಳ್ತಾ, ಅಮ್ಮನ ಜೊತೆ ಆಗೀಗ ಕುಶಲೋಪರಿ ಮಾತುಕತೆ ಆಡ್ತಾ ಇದ್ದರು. ಅವರೆಕಾಯಿ, ಅಲಸಂದೆಕಾಯಿ ಸಿಪ್ಪೆ, ಹಲಸಿನ ಸಿಪ್ಪೆ, ಮಿಕ್ಕಿದ ಅನ್ನ-ಸಾರು ಇವೆಲ್ಲವೂ ಹಸುಗಳಿಗೆ ಆಹಾರವಾಗ್ತಾ ಇತ್ತು. ಕಾಲಕ್ರಮೇಣ ಸೈಟುಗಳಿದ್ದ ಕಡೆ ಮನೆಗಳೆದ್ದವು. ಅಜ್ಜ-ಅಜ್ಜಿಯರು ಹಸು ಮೇಯಿಸಲು ಶಕ್ತಿಯಿಲ್ಲದೆ ತಾವೇ ಹಾಲು ಕೊಳ್ಳುವ ಸ್ಥಿತಿಗೆ ತಲುಪಿದರು. ತರಕಾರಿ ಸಿಪ್ಪೆ ಕಸದಗಾಡಿಗೆ, ತಂಗಳು ಬಚ್ಚಲ ಕಿಂಡಿಯ ಮೂಲಕ ಚರಂಡಿ ಸೇರಲಾರಂಭಿಸಿತು. ಸುಮಾರು ಹತ್ತು ವರ್ಷಗಳ ಹಿಂದೆ ಇರ್ಬೇಕು, ಕೃಷಿ ವಿಜ್ಞಾನಿಯಾಗಿರುವ ನಮ್ಮಣ್ಣ ತರಕಾರಿ ಸಿಪ್ಪೆಯನ್ನು ಇನ್ಮೇಲೆ ಮಹಡಿ ಮೇಲೆ ಖಾಲಿ ಪಾಟ್‌ಗಳಿಗೆ ಹಾಕಿ ಮಣ್ಣು ತುಂಬಿ ಅಂದ್ರು. ಅದಾದಮೇಲೆ ಮನೆಯ ಎಲ್ಲಾ ಹಸಿ ಕಸವನ್ನು ಹೊರಗೆ ಹಾಕೋದು ಬೇಡ ಅಂದ್ರು. ಏನೋ ದೊಡ್ಡ ಕ್ರಾಂತಿ ಮಾಡುವ ಉತ್ಸಾಹದಲ್ಲಿ ಅಡುಗೆ ಮನೆಯ ಸಿಂಕ್ ಹತ್ತಿರ ೭-೮ ಕೆಜಿ ತುಂಬುವ ಡಬ್ಬ ಇಟ್ಟುಕೊಂಡು ತರಕಾರಿ ಸಿಪ್ಪೆ, ಅಳಿದುಳಿದ ಊಟ ತಿಂಡಿ ಎಲ್ಲಾ ಅದರಲ್ಲಿ ಹಾಕತೊಡಗಿದೆವು. ಮೂರನೇ ದಿವಸಕ್ಕೆ ಡಬ್ಬದ ಮುಚ್ಚಳ ತೆಗೆದರೆ ಸಹಿಸಲಾರದ ವಾಸನೆ, ಜೊತೆಗೆ ಪಿತಗರೆಯುವ ಬಿಳಿ ಹುಳುಗಳು. ಅವಾದರೋ ಜಿಗಿಯುವ ಸಾಮರ್ಥ್ಯವುಳ್ಳವು! ಫ್ರೂಟ್ ಫ್ಲೈಗಳ ಲಾರ್ವಾಗಳಂತೆ ಅವು! ಮಹಡಿಯ ಮೇಲಿನ ಪಾಟ್‌ಗಳಿಗೆ ಹಾಕಿ ಮಣ್ಣು ಸುರಿದರೂ ದುರ್ವಾಸನೆ. ಅಕ್ಕಪಕ್ಕದ ಮನೆಯವರು ಕೆಲವೊಮ್ಮೆ ಮೆಲ್ಲಗೆ, ಕೆಲವೊಮ್ಮೆ ಕೇಳುವ ಹಾಗೆ ಬೈದುಕೊಂಡದ್ದೂ ಉಂಟು. ಯಾರೂ ನೇರವಾಗಿ ಕೇಳಲಿಲ್ಲ ಸದ್ಯ!

ಇದನ್ನೂ ಓದಿ : ಹೈದ್ರಾಬಾದ್‌: ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಸರ್ಕಲ್‌ ಇನ್‌ಸ್ಪೆಕ್ಟರ್‌‌

ಅಲ್ಲಿಇಲ್ಲಿ ಲೇಖನ ಓದಿ, ಮನೆಯ ಹಾಲ್‌ನಲ್ಲೆ ಇಟ್ಕೋಬಹುದಾದ, ವಾಸನೆ ಬರದ ಕಾಂಪೋಸ್ಟ್ ನಿರ್ವಹಣೆಯ ಬಗ್ಗೆ ತಿಳಿದುಕೊಂಡದ್ದಾಯ್ತು. ಮುಂದಿನ ಹಂತ: ಸಾವಿರಾರು ರೂಪಾಯಿ ಕೊಟ್ಟು ಮೂರು ಪಾಟ್‌ಗಳ ಕಂಬ ತಂದಿದ್ದಾಯ್ತು. ಆದರೆ ಮೂರೇ ಮಂದಿಯ ನಮ್ಮ ಪುಟ್ಟ ಮನೆಯ ಅಡುಗೆಮನೆ ಹಸಿ ಕಸಕ್ಕೆ ಆ ಕಂಬ ವಾರಕ್ಕೂ ಮುಂಚೆ ತುಂಬಿಹೋಗುತ್ತಿತ್ತು! ಮತ್ತದೇ ಪುನರಾವರ್ತನೆ. ಹೈಡ್ರೋಜನ್ ಸಲ್ಫೈಡ್ ವಾಸನೆಯನ್ನು ಬೀರುವ ಮಹಡಿ ಮೇಲಿನ ಪಾಟ್‌ಗಳಲ್ಲಿ ಕಾಂಪೋಸ್ಟ್ ಮಾಡುವ ಕೆಲಸ ಮತ್ತೆ ಶುರು. ಪಾಟ್‌ಗಳು ಸಾಲದೆಂದು ಪ್ಲಾಸ್ಟಿಕ್ ಚೀಲಗಳನ್ನೂ ಕೆಲ ಸಮಯ ಉಪಯೋಗಿಸಲಾಯ್ತು. ಆದರೆ ಕಾಂಪೋಸ್ಟ್ ಚೀಲವನ್ನು ಆಚೀಚೆ ಸರಿಸಿ ಇಡುವಾಗ ಚೀಲ ಹರಿದು, ಅರೆಬರೆ ಕೊಳೆತ ಕಾಂಪೋಸ್ಟ್ ಸುರಿದು, ಅದನ್ನು ಶುಚಿ ಮಾಡುವ ಮತ್ತೊಂದು ಕೆಲಸದ ಹೊರೆ ಆಗುತ್ತಿತ್ತು. ಹಸಿ ಕಸ ಸಂಗ್ರಹಿಸಿದ ಡಬ್ಬದಲ್ಲಿ ಗಾಳಿ ಆಡದೆ ಇದ್ದರೆ ಕಾಂಪೋಸ್ಟ್ ತಯಾರಿಕೆ ಕ್ರಿಯೆ ತುಸು ಇರಿಸುಮುರಿಸು ತರುತ್ತದೆ, ಮನೆಯವರಿಗೂ, ಅಕ್ಕಪಕ್ಕದವರಿಗೂ.
ಕೊನೆಗೂ ಈ ದುರ್ವಾಸನೆಯುಕ್ತ ಕಾಂಪೋಸ್ಟ್ ಮಾಡುವ ವಿಧಾನ ಕೊನೆಯಾಗಿದ್ದು ಏರೋಬಿಕ್ ವಿಧಾನವನ್ನು ಅಳವಡಿಸಿಕೊಂಡಾಗ.

ಹೆಸರಿನಿಂದ ಇದೇನೋ ಭಾರೀ ಕಷ್ಟದ ವಿಧಾನ ಅನಿಸಿರಬಹುದು! ಹಾಗೇನೂ ಇಲ್ಲ. ದೊಡ್ಡದೊಡ್ಡ ಅಂಗಡಿಗಳಲ್ಲಿ, ಹಾಪ್ಕಾಮ್ಸ್ ಅಂಗಡಿಗಳಲ್ಲಿ ನೋಡಿಯೇ ಇರುತ್ತೀರಿ ಪ್ಲಾಸ್ಟಿಕ್ ಕ್ರೇಟ್‌ಗಳನ್ನು. 200-300 ರೂಪಾಯಿಗಳಿಗೆ ದೊರಕುವ ಈ ಕ್ರೇಟ್‌ಗಳಿಗೆ ತಳದಲ್ಲಿ ತೂತು ಮಾಡಿ, ಕಬ್ಬಿಣದ ಸ್ಟಾಂಡ್ ಮೇಲೆ ಅವನ್ನಿಟ್ಟು ಅದರಲ್ಲಿ ಹಸಿ ಕಸವನ್ನು ಸಂಗ್ರಹಿಸಲು ಆರಂಭಿಸಿದೆವು. ಇದು ಪ್ರಾರಂಭಿಸಿ 4-5 ವರ್ಷಗಳಾಯ್ತು. ನಮ್ಮ ಬಿಲ್ಡಿಂಗ್‌ನಲ್ಲಿರುವ ಮೂರು ಮನೆಗಳಿಂದ ಏನಿಲ್ಲವೆಂದರೂ ವಾರಕ್ಕೆ 15-20 ಕೆಜಿ ಹಸಿ ಕಸ ಸಂಗ್ರಹವಾಗುತ್ತದೆ. ಅದನ್ನು ದಿನಾ ದಿನ ಕ್ರೇಟ್‌ನಲ್ಲಿ ತುಂಬಿ, ಅದರ ಮೇಲೆ ಈಗಾಗಲೇ ತಯಾರಾಗಿರುವ ಕಾಂಪೋಸ್ಟ್, ಅಥವಾ
ಮಣ್ಣು, ಜೊತೆಗೆ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಡಿಕಂಪೋಸರ್‌ಅನ್ನು ಬೆರೆಸಿ ಮಳೆ ನೀರು ಬೀಳದ ಹಾಗೆ ಮುಚ್ಚಿಟ್ಟರೆ, ಸುಮಾರು ಒಂದು ತಿಂಗಳಲ್ಲಿ ಹಸಿ ಕಸದ ಶೇ.೧೦ರಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರು. ನಮ್ಮ ಟೆರೇಸ್ ಗಾರ್ಡನ್‌ನಲ್ಲಿನ ಗಿಡಗಳಿಗೂ ಆಗಿ ಮಿಗುವಷ್ಟು ಕಾಂಪೋಸ್ಟ್ ತಯಾರಾಗುತ್ತದೆ. ಕಾಂಪೋಸ್ಟ್ ತಯಾರಿಯಲ್ಲಿ ಸ್ವಾಭಾವಿಕವಾಗಿ ಸಹಾಯ ಮಾಡುವ ಇತರೆ ಜೀವಿಗಳೆಂದರೆ ಎರೆಹುಳುಗಳು, ಸೋಲ್ಜರ್ ಹುಳುಗಳು, ಜಿರಳೆ, ಇರುವೆಗಳು. 10 ವರ್ಷಗಳಲ್ಲಿ ಸಂಗ್ರಹಿಸಿದ ಹಸಿ ಕಸ ವರ್ಷಕ್ಕೆ 1000 ಕೆಜಿಯಂತೆ 10 ಟನ್. ತನ್ಮೂಲಕ ತಯಾರಾದ ಸಾವಯವ ಗೊಬ್ಬರ ವರ್ಷಕ್ಕೆ 100 ಕೆಜಿಯಂತೆ 1 ಟನ್.

ಹಸಿಕಸವನ್ನು ಗೊಬ್ಬರವನ್ನಾಗಿಸುವುದು ಸುಲಲಿತವಾದ ಪಯಣವೇನಲ್ಲ. ಅಡುಗೆ ಮನೆಯಲ್ಲಿ ತರಕಾರಿ, ಊಟದ ತ್ಯಾಜ್ಯ ಸಂಗ್ರಹಿಸುವ ಜಾಗದಲ್ಲಿ ಯಾವಾಗಲೂ ಸೊಳ್ಳೆ, ಇರುವೆ ಮುಸುರುತ್ತವೆ. ಕಸವನ್ನು ಮಹಡಿಗೆ ಸಾಗಿಸುವುದು ನಿಧಾನಿಸಿದಷ್ಟು ಹೆಚ್ಚೆಚ್ಚು ದುರ್ಗಂಧ ಆವರಿಸುತ್ತದೆ. ಮಹಡಿಯ ಮೇಲೂ ಕೂಡ ಈ ಹಸಿ ಕಸವನ್ನು ತಿನ್ನಲೆಂದೇ ಹೇರಳವಾಗಿ ಇರುವೆ, ಜಿರಳೆ, ಹಲ್ಲಿ, ಹೆಗ್ಗಣ ಮುಗಿಬೀಳುತ್ತವೆ. ಒಂದು ಸಣ್ಣ ಮಳೆ ಬಿದ್ದರೂ ಸಾಕು ಸೋಲ್ಜರ್ ಹುಳುಗಳು ಮಹಡಿ, ಮೆಟ್ಟಿಲು ಎಲ್ಲೆಲ್ಲೂ ಹರಡಿ ತಮ್ಮ ಇರವನ್ನು ಖಚಿತಪಡಿಸುತ್ತವೆ. ಮಳೆಗಾಲದಲ್ಲಿ ಕಸ ಬೇಗ ಒಣಗುವುದಿಲ್ಲ. ಕ್ರೇಟ್‌ಗಳ ತಳದಿಂದ ಸೋರಿದ ನೀರು ಸರಿಯಾದ ವಾಟರ್ ಪ್ರೂಫಿಂಗ್ ಇಲ್ಲದಲ್ಲಿ ಗೋಡೆಗೆ ಇಳಿದು ಹಾನಿ ಮಾಡಬಹುದು. ಕಸ ಒಣಗಿದ ಮೇಲೆ ಗಾಳಿಗೆ ಹಾರಿ ಮಹಡಿಯೆಲ್ಲ ಹರಡಬಹುದು. ನಿತ್ಯ ಅದನ್ನು ಗುಡಿಸುವುದೂ ಸಹ ದಿನಚರಿಯಲ್ಲಿ
ಸೇರಿಸಿಕೊಳ್ಳಬೇಕಾಗುತ್ತದೆ.

ಇಷ್ಟೆಲ್ಲಾ ಅಡಚಣೆಗಳ ಮಧ್ಯೆಯೂ ಒಂದು ಸುಂದರ ಪರಿಸರ ವ್ಯವಸ್ಥೆ (eco system) ರೂಪುಗೊಳ್ಳುತ್ತದೆ. ಕಾಂಪೋಸ್ಟ್‌ನಲ್ಲಿರುವ ಹುಳುಗಳನ್ನು ತಿನ್ನಲೆಂದೇ ಕಾಗೆ, ಗೊರವಂಕಗಳು ಬರುತ್ತವೆ. ಪುಟಾಣಿ ಸನ್ ಬರ್ಡ್ ಗೂಡು ಕಟ್ಟಲು ಒಣಗಿದ ಕಡ್ಡಿಯ ಹುಡುಕಾಟದಲ್ಲಿ, ಗಿಡಗಳ ಮೇಲಿನೆ ಹುಳು-ಹುಪ್ಪಟೆ ತಿನ್ನಲು ಅಥವಾ
ನೀರಿಗಾಗಿ ದಿನಾಲು ನಿಗದಿತ ಸಮಯದಲ್ಲಿ ಹಾಜರಾಗುತ್ತವೆ. ಟೆರೇಸ್ ಗಾರ್ಡನ್‌ನಲ್ಲಿನ ಹೂವುಗಳನ್ನರಸಿ ಜೇನುನೊಣ, ಬಣ್ಣಬಣ್ಣದ ಚಿಟ್ಟೆಗಳು, ಕೆಲವೊಮ್ಮೆ ಕಣಜಗಳು ಕೂಡ ಆಗಮಿಸುತ್ತವೆ. ನೀರು ತುಂಬಿಟ್ಟ ಪಾತ್ರೆಗಳಲ್ಲಿ ಸ್ನಾನ ಮಾಡಲು ಬುಲ್ಬುಲ್ ಜೋಡಿ ಕೂಡ ಹಾಜರ್. ಬೇರೆ ಪಕ್ಷಿಗಳು ಬಂದರೆ ತುಸು ದೂರವೇ ನಿಂತು ತಮ್ಮ ಸರತಿ ಬರುವವರೆಗೂ ಕಾದು ಯಾವುದೇ ಜಗಳವಿಲ್ಲದೆ ನೀರಿನ ದಾಹ ಪರಿಹರಿಸಿಕೊಂಡು ಮನಸೋ ಇಚ್ಛೆ ಸ್ನಾನ ಮಾಡಿ ತೆರಳುತ್ತವೆ. ಆಗೀಗ ಮಾನವನ ಉಗಮ ಪ್ರಕ್ರಿಯೆಯಲ್ಲಿ ಕೊಂಡಿ ಎನ್ನಲಾಗುವ ಪೂರ್ವಜರು ಕೂಡ ಬರುವುದೂ ಉಂಟು. ಹಣ್ಣುಗಳನ್ನು ತಿಂದು ನಮಗೂ ಸ್ವಲ್ಪ ಉಳಿಸಿಯೇ ಸಾಗುತ್ತವೆ!
ಉದ್ಯಾನ ನಗರಿ ಬೆಂಗಳೂರಿನ ಹಸಿ ತ್ಯಾಜ್ಯಕ್ಕೆ ಕೆಲವು ಟನ್‌ಗಳಷ್ಟು ಹೊರೆ ಇಳಿಸಿದ್ದೇವೆ ಅನ್ನುವುದೇ ಸಮಾಧಾನದ ವಿಷಯ. ಅನುಕೂಲವಿದ್ದ ವಸತಿ ಪ್ರದೇಶಗಳಲ್ಲಿ ನಿಯಮಿತವಾಗಿ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ವ್ಯವಸ್ಥೆ ಸಾರ್ವಜನಿಕವಾಗಿ ಲಭ್ಯವಿದ್ದಲ್ಲಿ ಅಥವಾ ಮಹಡಿಯ ಮೇಲೆ ಜಾಗದ ಅನುಕೂಲವಿರುವವರು ತಾವೇ ಕಾಂಪೋಸ್ಟ್ ಮಾಡುವ ಮನಸ್ಸು ಮಾಡಿ ಸೂಕ್ತ ವ್ಯವಸ್ಥೆ ಮಾಡಿಕೊಂಡರೂ ಸಹ ಹಲವಾರು ಟನ್ ಹಸಿ ಕಸದ ವಿಲೇವಾರಿ ಕಡಿಮೆಯಾಗುತ್ತದೆ. ಪರಿಸರಕ್ಕೂ ಒಳ್ಳೆಯದು, ಪೌರಕಾರ್ಮಿಕರಿಗೂ ತುಸು ಶ್ರಮ ಕಡಿಮೆಯಾಗಬಹುದು.

ರಾಧಿಕಾ ಗಂಗಣ್ಣ
ವೃತ್ತಿಯಲ್ಲಿ ಎಂಜಿನಿಯರ್. ಸಾಹಿತ್ಯ ಆಸಕ್ತಿಯ ಕ್ಷೇತ್ರ.
ಗೆಳೆಯರೊಂದಿಗೆ ಸೇರಿ ಕನ್ನಡ ಪುಸ್ತಕಗಳ ಬಗ್ಗೆ ಪ್ರತಿ ವಾರ
ಕ್ಲಬ್ ಹೌಸ್ ಕಾರ್ಯಕ್ರಮವೊಂದನ್ನು ನಿರ್ವಹಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...