’ನವೆಂಬರ್ 26 ರ ಸಂವಿಧಾನ ದಿನಾಚರಣೆ’ಯನ್ನು ’ಜನಪದವಾಗಲಿ ಸಂವಿಧಾನ’ ಎಂಬ ವಿನೂತನ ಅಭಿಯಾನದ ಮೂಲಕ, ಭಾರತ ಸಂವಿಧಾನದ ಆಶಯ, ತತ್ವ ಮತ್ತು ಸಿದ್ದಾಂತಗಳ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಆಚರಿಸಲು ’ಜನಪದವಾಗಲಿ ಸಂವಿಧಾನ ವೇದಿಕೆ’ ಕಾರ್ಯಕ್ರಮ ರೂಪಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ವೇದಿಕೆಯು, ಸಂವಿಧಾನ ದಿನಾಚರಣೆಯನ್ನು ನವೆಂಬರ್ 26-2020 ರಿಂದ 2021 ನವೆಂಬರ್ 26 ರವರೆಗೆ ಒಂದು ವರ್ಷದ ಅಭಿಯಾನ ಮಾಡಲಿದ್ದು, ಅಭಿಯಾನದಲ್ಲಿ ಭಾರತ ಸಂವಿಧಾನದ ಆಶಯ, ತತ್ವ ಮತ್ತು ಸಿದ್ದಾಂತಗಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಪ್ರತಿಯೊಬ್ಬ ನಾಗರಿಕ, ಮಹಿಳೆ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಕೈಗೊಳ್ಳುತ್ತೇವೆ ಎಂದಿದೆ.
ಇದನ್ನೂ ಓದಿ: ಉತ್ತರ ಸಂವಿಧಾನದಲ್ಲಿದೆ, ಮೀಸಲಾತಿ ವಿರೋಧಿ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ: ಅನಂತನಾಯಕ್ ಎನ್
ಅಭಿಯಾನವು 26 ನವೆಂಬರ್ 2020(ನಾಳೆ) ರಂದು ಜಿಲ್ಲೆಯ ವಿದುರಾಶ್ವತ್ಥದ ಸ್ವತಂತ್ರ್ಯ ಸ್ಮಾರಕ ವೀರಸೌಧದಲ್ಲಿ ಸಾಂಕೇತಿಕವಾಗಿ ಉದ್ಘಾಟನೆಗೊಳ್ಳಲಿದ್ದು, ಎಲ್ಲಾ ತಾಲ್ಲೂಕುಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ 60 ದಿನಗಳ ಕಾಲ ಅಭಿಯಾನ ಜರುಗಲಿದೆ.
“ಅಭಿಯಾನದಲ್ಲಿ ಸಂವಿಧಾನ ಪೂರ್ವ ಹಾಗೂ ಸಂವಿಧಾನ ಜಾರಿಯಾದ ನಂತರದ ಭಾರತ ದೇಶದ ಚಿತ್ರಣಗಳನ್ನೊಳಗೊಂಡ ಭಿತ್ತಿ ಚಿತ್ರ ಪ್ರದರ್ಶನ ಸೇರಿದಂತೆ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕಾರ್ಯಾಗಾರಗಳು ನಡೆಯಲಿವೆ. ರೈತ ಕಾರ್ಮಿಕರು ಮತ್ತು ಮಹಿಳೆಯರಲ್ಲಿ ಅರಿವು ಮೂಡಲು ಸಂವಿಧಾನದ ಸಿದ್ದಾಂತ ಮತ್ತು ಆಶಯಗಳನ್ನೊಳಗೊಂಡ ಕಥಾ ವಸ್ತುವಿನ ಬೀದಿ ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಇದೇ ಸಮಯದಲ್ಲಿ ಸಂವಿಧಾನ ರಚನಾ ಸಭೆಯ ವಿಷಯಗಳ ಕುರಿತು ಕಿರುಹೊತ್ತಿಗೆಗಳನ್ನು ವಿತರಿಸಲಾಗುತ್ತದೆ” ಎಂದು ಪ್ರಕಟಣೆ ತಿಳಿಸಿದೆ.
ಅಭಿಯಾನದಲ್ಲಿ ಜಿಲ್ಲೆಯ ಹಿರಿಯ ಚಿಂತಕರು, ಸಾಹಿತಿಗಳು, ಕಲಾವಿದರು, ಸಮಾನ ಮನಸ್ಕರು, ರೈತಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಹಾಗೂ ವಿದ್ಯಾರ್ಥಿ ಸಂಘಟನೆಗಳು ಪಾಲ್ಗೊಳ್ಳಲಿದ್ದಾರೆಂದು ಪ್ರಕಟನೆಯು, “ಜಿಲ್ಲೆಯ ಎಲ್ಲಾ 6 ತಾಲ್ಲೂಕಿನಲ್ಲಿಯೂ ತಾಲ್ಲೂಕು ಮಟ್ಟದ ಜನಪದವಾಗಲಿ ಸಂವಿಧಾನ ಅಭಿಯಾನ ನಡೆಯಲಿದೆ” ಎಂದು ಹೇಳಿದೆ.
ಇದನ್ನೂ ಓದಿ: ಕೀಲಾರ ಟೆಂಟ್ ಹೌಸ್-1: ʼದ ಕಾನ್ಸ್ಟಿಟ್ಯೂಶನ್ʼ – ಸಂವಿಧಾನ, ಸಮುದಾಯ ಪ್ರಜ್ಞೆಯ ಸಮನ್ವಯ ಸಾರುವ ಚಿತ್ರ