Homeಮುಖಪುಟಉತ್ತರ ಸಂವಿಧಾನದಲ್ಲಿದೆ, ಮೀಸಲಾತಿ ವಿರೋಧಿ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ: ಅನಂತನಾಯಕ್ ಎನ್

ಉತ್ತರ ಸಂವಿಧಾನದಲ್ಲಿದೆ, ಮೀಸಲಾತಿ ವಿರೋಧಿ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ: ಅನಂತನಾಯಕ್ ಎನ್

ಮೀಸಲಾತಿಯೇ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಮೀಸಲಾತಿಯನ್ನು ಉಳಿಸಿಕೊಳ್ಳುವ ಹೋರಾಟ ಬಲಗೊಳಿಸಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲಾ ಜನಸಮುದಾಯಗಳು ಐಕ್ಯ ಹೋರಾಟಕ್ಕೆ ಮುಂದಾಗಬೇಕು.

- Advertisement -
- Advertisement -

ಒಳಮೀಸಲಾತಿ ಚರ್ಚೆಯ ಹಿನ್ನಲೆಯಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ಅನಂತನಾಯಕ್‌ರವರ ಸಂದರ್ಶನ.

  1. ಒಳಮೀಸಲಾತಿಯ ಬಗ್ಗೆ ನಿಮ್ಮ ನಿಲುವೇನು?

ಎಲ್ಲಾ ವಂಚಿತ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಬೇಕು. ಅದು ನನ್ನ ಬಲವಾದ ನಂಬಿಕೆ. ಜಾತಿಗಳ ಜನಸಂಖ್ಯೆವಾರು ಮೀಸಲಾತಿ ವೈಜ್ಞಾನಿಕವಾಗಿ ಹಂಚಿಕೆಯಾಗಬೇಕು. ಈ ಹಂಚಿಕೆಗೆ ಪೂರಕ ಆಧಾರವಾಗಲು ಎಲ್ಲಾ ಜಾತಿಗಳ ಸ್ಥಿತಿಗತಿ, ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆಯಬೇಕು. ಜಾತಿಗಳ ಹಿಂದುಳಿದಿರುವಿಕೆ, ಸರ್ಕಾರದಲ್ಲಿ ಅವರ ಪ್ರಾತಿನಿಧ್ಯ ಆಧರಿಸಿ ವಂಚಿತರನ್ನೂ ಮುಖ್ಯವಾಹಿನಿಗೆ ತರುವ ಕಾರ್ಯಕ್ರಮ, ಯೋಜನೆಗಳನ್ನು ರೂಪಿಸಬೇಕು.

2. ಒಳಮೀಸಲಾತಿ ಮತ್ತು ಮೀಸಲಾತಿ ಎರಡರ ತಾತ್ವಿಕತೆಯೂ ಭಿನ್ನವೇ ಅಥವಾ ಒಂದೆಯೇ?

ಇದು ಇನ್ನೂ ಸರ್ವೋಚ್ಚ ನ್ಯಾಯಾಲಯದ ವಿಸ್ತೃತ ಪೀಠದಲ್ಲಿ ಚರ್ಚೆಗೆ ಬರಬೇಕಿದೆ, ಕಾಯೋಣ. ಪ್ರತಿಯೊಬ್ಬರಿಗೂ ಸಮಾನ ಅವಕಾಶ ನೀಡಬೇಕೆನ್ನುವುದು ನಮ್ಮ ಸಂವಿಧಾನದ ಮೂಲ ತತ್ವ. ನಾವು ಅದಕ್ಕೆ ಬದ್ಧರಾಗಿರಬೇಕು. ಸಮತೆಯನ್ನು ಸಾಧಿಸಲು ಮಾರ್ಗ ಯಾವುದಾದರೇನು.

3. ಮೀಸಲಾತಿಗೆ ಶೇ.50 ರ ಮಿತಿ ಹೇರಿಕೆ, ಶೇ.3 ರಷ್ಟಿರುವ ಸಮುದಾಯಗಳಿಗೆ ಶೇ. 10 ಮೀಸಲಾತಿ ಕಲ್ಪಿಸಿರುವುದರ ವಿರುದ್ಧ ಹೋರಾಟಗಳಾಗಲಿಲ್ಲವೇಕೆ?

ಮೀಸಲಾತಿಯ ಮಿತಿಯನ್ನು ಶೇ.50 ಮೀರದಂತೆ ಸುಪ್ರೀಂಕೋರ್ಟ್ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಹೇಳಿದೆ. ಈ ಕುರಿತು ಆಕ್ಷೇಪಗಳೂ ಬಂದಿವೆ. ಸಕಾರಣಗಳನ್ನು ಸಾಬೀತುಪಡಿಸಿ ಕೆಲ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ.

ಬ್ರಾಹ್ಮಣ ಮತ್ತಿತರ ಸಮುದಾಯಗಳನ್ನು ಅರ್ಥಿಕ ದುರ್ಬಲ ವರ್ಗಗಳೆಂದು ಗುರುತಿಸಿ (EWS) ಶೇ.10 ಮೀಸಲಾತಿ ಕೊಡಲಾಗಿದೆ. ಇಂದಿನ ರಾಜಕಾರಣ ಸಂಪೂರ್ಣ ಬ್ರಾಹ್ಮಣೀಕರಣಗೊಂಡಿರುವುದಕ್ಕೆ ಸ್ಪಷ್ಟ ಉದಾಹರಣೆ ಇದು. ಎಡ ಮತ್ತು ಬಹುಜನ ಸಿದ್ಧಾಂತದ ಪಕ್ಷಗಳು ಕೂಡ ಈ ಬಗ್ಗೆ ಸ್ಪಷ್ಟ ಅಭಿಪ್ರಾಯಗಳನ್ನು ದೊಡ್ಡ ಪ್ರಮಾಣದಲ್ಲಿ ದಾಖಲಿಸಲಿಲ್ಲ. ಇದನ್ನು ಪ್ರತಿಭಟಿಸಲಿಲ್ಲ.

‘ಮೀಸಲಾತಿ ಬರೀ ಆರ್ಥಿಕ ಸಬಲೀಕರಣದ ಕಾರ್ಯಕ್ರಮ ಅಲ್ಲ’. ಅಸ್ಪೃಶ್ಯತೆ, ಸಾಮಾಜಿಕ ಕಳಂಕ ಹೊತ್ತವರನ್ನು ಮುಖ್ಯವಾಹಿನಿಗೆ ತರುವ ಸಾಧನ. ಮಾನವ ಘನತೆಯನ್ನು ಹೆಚ್ಚಿಸುವ ಮಾರ್ಗ ಮೀಸಲಾತಿ.

ಸಮಾಜದ ಎಲ್ಲಾ ಅಪಮಾನಿತರಿಗೆ ಸೂಕ್ತ ಪ್ರತಿನಿಧಿತ್ವ ಇರಬೇಕೆಂದು ಮೀಸಲಾತಿಯ ಮೂಲ ತತ್ವ. ಬ್ರಾಹ್ಮಣರಾದಿಯಾಗಿ ಕೆಲವರಲ್ಲಿ ಬಡತನ ಇರಬಹುದು. ಅದನ್ನು ಹೊಗಲಾಡಿಸಲು ಇಲ್ಲಿಯವರೆಗೆ ಅನೇಕ ಅರ್ಥಿಕ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರಲಾಗುತ್ತಿದೆ. ಅಗತ್ಯವಿದ್ದರೆ ಅವುಗಳನ್ನು ಹೆಚ್ಚಿಸೋಣ, ಮುಂದುವರೆಸೋಣ. ಆದರೆ, SC, ST, OBCಗಳಿಗೆ ಅಂಟಿಸಲಾದ ಸಾಮಾಜಿಕ ಕಳಂಕ ಮತ್ತು ತಾರತಮ್ಯ ನಿವಾರಿಸಲೆಂದು ಪ್ರಯೋಗಿಸಲಾದ ಮೀಸಲಾತಿ ನಿಯಮವನ್ನು ಬಡತನ ನಿರ್ಮೂಲನೆ ಹೆಸರಲ್ಲಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಮೀಸಲಾತಿ ತತ್ವವನ್ನು ಅಪಮೌಲ್ಯಗೊಳಿಸಲು ಈ EWS ಮೀಸಲು ಮೂಲಕ ಪ್ರಯತ್ನ ಮಾಡಲಾಗಿದೆ. ಹಾಗಾಗಿ 10% EWS ಮೀಸಲಾತಿಯನ್ನು ಒಪ್ಪಲಾಗದು.

4. ಸ್ಪೃಶ್ಯರನ್ನು ಪರಿಶಿಷ್ಠ ಜಾತಿ ಪಟ್ಟಿಯಿಂದ ಹೊರಗಿಡಬೇಕೆಂಬುದರ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಚಾತುವರ್ಣ ಹೇರಲ್ಪಟ್ಟ ಸಮಾಜ ನಮ್ಮದು. ಪಿರಮಿಡ್ ರೀತಿಯಲ್ಲಿ ಜಾತಿ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸಂವಿಧಾನಿಕ ಮೀಸಲಾತಿ ನೀಡುವಾಗಲೇ ಇದನ್ನು ಗುರುತಿಸಲಾಗಿದೆ. ಹೀಗಿರುವಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವವರಲ್ಲಿ ಸ್ಪೃಶ್ಯ- ಅಸ್ಪೃಶ್ಯ, ಎಡ-ಬಲ ಅಂತ ಬೇರ್ಪಡಿಸಲಾಗದು. ಹೀಗೆ ಗುರುತಿಸುವುದು ಕೂಡ ಕಾನೂನುಬಾಹಿರ. ಇಂದಿಗೂ ಮುಟ್ಟಿಸಿಕೊಳ್ಳಲಾಗದಂತೆ ಈ ಸಮಾಜದ ಕಟ್ಟಕಡೆಯಲ್ಲಿ ಬದುಕುತ್ತಿರುವ ದಕ್ಕಲಿಗ ಮುಂತಾದ ಸಮುದಾಯದ ಗೋಳು ಕೇಳುವವರ್ಯಾರು? ಇಂತಹ ಆಲಕ್ಷಿತ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಬೇಕಿದೆ. ಗುರುತಿಸುವ ಮಾನದಂಡ ಯಾವುದು ಎಂಬುದು ಮುಖ್ಯ. ಜಾತಿ ಪಟ್ಟಿಗೆ ಸೇರಿಸುವುದಕ್ಕೆ ಮತ್ತು ತೆಗೆದು ಹಾಕಲು ಸಂಸತ್ತು ಮತ್ತು ರಾಷ್ಟ್ರಪತಿ ಅವರಿಗೆ ಅಧಿಕಾರ ಇದೆ. ಅದನ್ನು ಗಮನಿಸೋಣ.

ಅಸ್ಪೃಶ್ಯತೆ ಎಂದರೇನು? ಬಾಧಿತರು ಯಾರು? ಯಾರನ್ನು ಸ್ಪೃಶ್ಯರು ಎಂದು ಕರೆಯಲಾಗುತ್ತಿದೆ? ಅದಕ್ಕೆ ಮಾನದಂಡ ಯಾವುದು? ಅದಕ್ಕೆ ಸಾಂವಿಧಾನಿಕ ಬಲವಿದೆಯೇ? ಪರಿಶಿಷ್ಟ ಜಾತಿಗಳ ಕುರಿತು ಸಂವಿಧಾನದ ವ್ಯಾಖ್ಯಾನವನ್ನು ಸರಿಯಾಗಿ ಅರ್ಥೈಸುವ ಅಗತ್ಯವಿದೆ. ಇವುಗಳನ್ನು ಸರಿಯಾಗಿ ಅರ್ಥೈಸದಿದ್ದರೆ ಮೀಸಲಾತಿ ಹಾಳಾಗಲಿ, ಕನಿಷ್ಠ ಸಹಬಾಳ್ವೆಯನ್ನು ಉಳಿಸಿಕೊಳ್ಳಲಾಗದು.

ಮೀಸಲಾತಿಯೇ ಕ್ಷೀಣಿಸುತ್ತಿರುವ ಹೊತ್ತಿನಲ್ಲಿ ಮೀಸಲಾತಿಯನ್ನು ಉಳಿಸಿಕೊಳ್ಳುವ ಹೋರಾಟ ಬಲಗೊಳಿಸಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲಾ ಜನಸಮುದಾಯಗಳು ಐಕ್ಯ ಹೋರಾಟಕ್ಕೆ ಮುಂದಾಗಬೇಕು. ಅದು ಸದ್ಯ ನಮ್ಮ ಮುಂದಿರುವ ಸವಾಲು.

5. ಕೆಲವು ಬಲಗೈ ರಾಜಕಾರಣಿಗಳು ಒಳಮೀಸಲಾತಿ ವಿರುದ್ಧವಾಗಿ ದನಿ ಎತ್ತಿದ ಕಾರಣಕ್ಕೆ ಹೊಲೆಮಾದಿಗರ ನಡುವೆ ಭಿನ್ನತೆ ಉಂಟಾಯಿತು ಎನ್ನಲಾಗುತ್ತದೆ. ನಿಜಕ್ಕೂ ಆಯಾ ದಲಿತ ಜಾತಿಗಳನ್ನು ಪ್ರತಿನಿಧಿಸುವ ಪ್ರಾಮಾಣಿಕ ರಾಜಕಾರಣಿಗಳು ಇಂದಿಗೂ ಇದ್ದಾರೆಯೇ?

ಈ ಪ್ರಶ್ನೆಯೇ ತಪ್ಪು. ನಮ್ಮ ಸಮುದಾಯಗಳ ರಾಜಕಾರಣಿಗಳನ್ನು ವಿಲನ್‍ಗಳಾಗಿಸಲು ಇಂತಹ ಪ್ರಶ್ನೆಗಳನ್ನು ಹರಿಬಿಡಲಾಗುತ್ತಿದ್ದೆ. ಮೀಸಲಾತಿ ವಿರೋಧಿ ಸವರ್ಣೀಯ ರಾಜಕಾರಣಿಗಳನ್ನು ಸುಧಾರಕರಂತೆ ಬಿಂಬಿಸಲಾಗುತ್ತಿದೆ. ಇದನ್ನು ಪರಿಶಿಷ್ಟರು ಎಚ್ಚರಿಕೆಯಿಂದ ಗಮನಿಸಬೇಕು. ಇನ್ನೂ ಸುಧಾರಿಸಬೇಕಾದ ಸಂಸದೀಯ ವ್ಯವಸ್ಥೆಯ ಮಿತಿಯೊಳಗೆ ನಮ್ಮವರು ಒಂದಷ್ಟು ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿದ್ದಾರೆ. ಇನ್ನಷ್ಟು ನೀರಿಕ್ಷೆ ಮಾಡೊಣ. ನಮ್ಮವರ ಮಧ್ಯೆ ಅನಗತ್ಯ ದ್ವೇಷ ಬಿತ್ತುವುದು ಬೇಡ.

ಜಾತಿ ತಾರತಮ್ಯ ವಿನಾಶಕ್ಕಾಗಿ ಮತ್ತು ದಲಿತ ಸಮುದಾಯಗಳ ಪ್ರಗತಿಗಾಗಿ ಹಲವು ರಾಜಕಾರಣಿಗಳು ಕೆಲಸ ಮಾಡುತ್ತಿದ್ದಾರೆ. ಬಲಗೈ ಸಮುದಾಯದವರು ಇದಕ್ಕೆ ವಿರೋಧ ಇದ್ದಾರೆ ಎಂಬುದು ತಪ್ಪು. ವೈಜ್ಞಾನಿಕವಾಗಿ ಅಧ್ಯಯನವಾಗಲಿ ಎಂದು ಎಲ್ಲರೂ ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ವೈದಿಕ ಮನಸ್ಥಿತಿಯ ಸವರ್ಣೀಯರು ಇದಕ್ಕೆ ಅವಕಾಶ ಕೊಡುತ್ತಿಲ್ಲ.

6. ಒಳಮೀಸಲಾತಿ ದಲಿತರನ್ನು ಒಡೆದು ಆಳುತ್ತದೆ ಎಂದು ಆರಂಭದಲ್ಲಿ ಭಯ ಬೀಳಿಸಿದ್ದಿದೆ. ಆದರೆ ಈಗ ಒಳಮೀಸಲಾತಿ ಜಾರಿಯಾಗದಿದ್ದರೆ ದಲಿತರ ಒಗ್ಗಟ್ಟು ಸಂಪೂರ್ಣ ಮುರಿದು ಬೀಳುತ್ತದೆ ಎಂಬ ಪರಿಸ್ಥಿತಿ ಉಂಟಾಗಿದೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು?

ಇದು ತಪ್ಪು ಅಭಿಪ್ರಾಯ. ಅಂತಹ ಪರಿಸ್ಥಿತಿ ಇಲ್ಲ. ಅಂತಹ ಪರಿಸ್ಥಿತಿ ಸೃಷ್ಟಿಸುವ ಪಿತೂರಿಗಳು ನಡೆಯುತ್ತಿವೆ. ಒಳಮೀಸಲಾತಿ ‘ಬರೀ ಪರಿಶಿಷ್ಟ ಜಾತಿಗಳ ಮಧ್ಯೆ ಮಾತ್ರ ಹಂಚಿಕೆ ಆಗಲಿ’ ಎಂಬ ಚರ್ಚೆಯೇ ಅಪಾಯಕಾರಿ. ಜಾತಿ ಜನಸಂಖ್ಯೆವಾರು ಮೀಸಲಾತಿ ಹಂಚಿಕೆ ಪ್ರಕ್ರಿಯೆ ಮೊದಲಿಗೆ EWS, OBC, ST, ಕೊನೆಗೆ SCಗಳಿಗೆ ಅನ್ವಯವಾಗಲಿ. ಸಮಾನ ಪಾಲನ್ನು ಹಂಚಿತಿನ್ನುವ ದಲಿತರಲ್ಲಿ ಮೂಲತಃ ಇದೆ. ಇದು ಸಮಾನತೆ ಸಾಧಿಸುವ ಮಾರ್ಗ. ಹೀಗಾದಾಗ ದಲಿತರ ಐಕ್ಯತೆ ಹಾಳಾಗೊಲ್ಲ. ಸಾಮಾಜಿಕ ನ್ಯಾಯ ಬಲಗೊಳ್ಳುತ್ತೆ. ಪರಿಶಿಷ್ಟ ಜಾತಿಗಳನ್ನೇ ಗುರಿಯಾಗಿಸುವ ಚರ್ಚೆ ದುರುದ್ದೇಶಪೂರಿತ. ಅವೇಶಕ್ಕೊಳಗಾಗದೆ ಸೌಹಾರ್ದಯುತವಾಗಿ ಕೂತು ಚರ್ಚಿಸಿದರೆ ಪರಿಹಾರ ಸಾದ್ಯ.

7. ಸದಾಶಿವ ಆಯೋಗದ ವರದಿ ಜಾರಿ ಮಾಡುವುದರ ಕುರಿತು ನಿಮ್ಮ ಅನಿಸಿಕೆ ಏನು?

ನ್ಯಾ. ಸದಾಶಿವ ಆಯೋಗದ ವರದಿ ಮೊದಲು ಬಹಿರಂಗ ಚರ್ಚೆಗೆ ಬಿಡುಗಡೆ ಆಗಲಿ. ಅದರ ಶಿಫಾರಸ್ಸುಗಳ ಸತ್ಯಾಸತ್ಯಾತೆ ಕುರಿತು ಅನಂತರ ಚರ್ಚಿಸೋಣ. ಈ ವರದಿ ಜನಪರವಾಗಿದ್ದರೆ ಒಪ್ಪೋಣ, ಜನವಿರೋಧಿ ಆಗಿದ್ದರೆ ತಿರಸ್ಕರಿಸೋಣ. ಭಾಗಶಃ ಸರಿಯಿದ್ದರೆ ಮತ್ತಷ್ಟು ಅವಲೋಕಿಸಿ ನಿರ್ಧರಿಸೋಣ. ಸಂಬಂಧಪಟ್ಟ ಎಲ್ಲರನ್ನೂ ಒಳಗೊಂಡು, ಚರ್ಚಿಸಿ ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಬಹುದು. ಆದರೆ ಈ ವರದಿಯನ್ನು ಬಚ್ಚಿಟ್ಟು ರಾಜಕೀಯ ಮಾಡಲಾಗುತ್ತಿದೆ. ಸಹೋದರ ಸಮುದಾಯಗಳ ಮಧ್ಯೆ ಅನಗತ್ಯ ದ್ವೇಷ ಹುಟ್ಟುಹಾಕಲಾಗುತ್ತಿರುವುದು ಬೇಸರದ ಸಂಗತಿ. ಇದಕ್ಕೆಲ್ಲಾ ಸಂವಿಧಾನದಲ್ಲಿ ಉತ್ತರವಿದೆ. ಮೀಸಲಾತಿ ವಿರೋಧಿಸುತ್ತಲೇ ಬಂದಿರುವ ಸಂಘಪರಿವಾರದ ಕಚೇರಿಗಳಲ್ಲಿ ಅಲ್ಲ. ನಮಗೆಲ್ಲ ಬಾಬಾ ಸಾಹೇಬ್ ಬೆಳಕಾಗಬಹುದು, ಕಾದು ನೋಡೊಣ.

  • ಅನಂತನಾಯಕ್ ಎನ್

(ಹೈಕೋರ್ಟ್ ವಕೀಲರು, ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿಗಳು. ವಿದ್ಯಾರ್ಥಿ ದೆಸೆಯಿಂದ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.)


ಇದನ್ನೂ ಓದಿ: ಸಾಂವಿಧಾನಿಕ ರಕ್ಷಣೆಯನ್ನು ಎತ್ತಿಹಿಡಿದ ಈ ಎರಡು ಮಹತ್ವದ ತೀರ್ಪುಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...