ಕೃಷಿ ಕಾನೂನುಗಳು ನಮ್ಮ ಪಾಲಿಗೆ ಸತ್ತು ಹೋಗಿದ್ದು, ನಾವೀಗ ಅದರ ಡೆತ್ ಸರ್ಟಿಫಿಕೇಟ್ ಕೊಡಿ ಎಂದು ಒಕ್ಕೂಟ ಸರ್ಕಾರದ ವಿರುದ್ದ ಹೋರಾಟ ಮಾಡುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸೋಮವಾರ ಹೇಳಿದರು. ಅವರು ‘ಭಾರತ್ ಬಂದ್’ ಪ್ರಯುಕ್ತ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಸಮಾರೋಪ ಸಭೆಯಲ್ಲಿ ಮಾತನಾಡುತ್ತಿದ್ದರು.
“ರಾಜ್ಯದಲ್ಲಿ ‘ಭಾರತ್ ಬಂದ್’ ಯಶಸ್ವಿಯಾಗಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ರೈತ ಆಂದೋಲನದಲ್ಲಿ 11 ಲಕ್ಷ ಜನರು ಭಾಷೆ, ಧರ್ಮ, ಗಡಿಗಳನ್ನು ಮೀರಿ ಸೇರಿದ್ದರು. ದೇಶದಲ್ಲಿ ಚಳವಳಿಗಳ ಯುಗ ಪ್ರಾರಂಭವಾಗಿದೆ, ಆದರೆ ಇದಕ್ಕೆ ಮಾಧ್ಯಮಗಳಲ್ಲಿ ಹೆಚ್ಚು ಪ್ರಚಾರ ಸಿಗುತ್ತಿಲ್ಲ. ಅದಕ್ಕಾಗಿ ರೈತರು ಸಮಾಜಿಕ ಜಾಲತಾಣವನ್ನು ಬಳಸಿಕೊಂಡು ದೇಶದ 130 ಕೋಟಿ ಜನರನ್ನು ತಲುಪುತ್ತಿದ್ದೇವೆ” ಎಂದರು.
ಇದನ್ನೂ ಓದಿ: ಭಾರತ್ ಬಂದ್ ಯಶಸ್ವಿಯಾಗಿದೆ: ರೈತ ಮುಖಂಡ ರಾಕೇಶ್ ಟಿಕಾಯತ್
“ಸರ್ಕಾರ ಜಾರಿಗೆ ತಂದಿರುವ ಕಾನೂನುಗಳನ್ನು 18 ತಿಂಗಳು ಅಮಾನತ್ತಿನಲ್ಲಿ ಇಟ್ಟಿದೆ. ಅಂದರೆ ಒಂದು ರೀತಿಯಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಇದೀಗ ಕಾನೂನುಗಳು ನಮ್ಮ ಪಾಲಿಗೆ ಸತ್ತು ಹೋಗಿದೆ. ನಾವೀಗ ಅದರ ಡೆತ್ ಸರ್ಟಿಫಿಕೇಟ್ ಕೊಡಿ ಎಂದು ಹೋರಾಟ ಮಾಡುತ್ತಿದ್ದೇವೆ. ನವೆಂಬರ್ನಲ್ಲಿ ಇದಕ್ಕಿಂತಲೂ ದೊಡ್ಡ ಹೋರಾಟ ದೆಹಲಿಯಲ್ಲಿ ನಡೆಲಿದೆ. ಮುಂದಿನ ದಿನಗಳಲ್ಲಿ ದೆಹಲಿಯಿಂದ ಬಿಜೆಪಿಯನ್ನು ಓಡಿಸುವಂತಹ ಮತ್ತು ಅಲ್ಲಿನ ಗದ್ದುಗೆಯ ಹತ್ತಿರ ಸುಳಿಯುವಂತಹ ನಿರ್ಣಯವನ್ನು ಕೈಗೊಳ್ಳುತ್ತೇವೆ” ಎಂದು ನಾಗೇಂದ್ರ ಅವರು ಹೇಳಿದರು.
ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರವು ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳನ್ನು ವಾಪಾಸು ಪಡೆಯುವಂತೆ ದೇಶದಾದ್ಯಂತ ರೈತರು ಪ್ರತಿಭಟನೆ ನಡೆಸಿತ್ತಿದ್ದಾರೆ. ಈ ಹೋರಾಟ ಪ್ರಾರಂಭವಾಗಿ ಹತ್ತು ತಿಂಗಳಾದ ಹಿನ್ನಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾವು ಸೋಮವಾರದಂದು ಭಾರತ್ ಬಂದ್ಗೆ ಕರೆ ನೀಡಿತ್ತು. ಈ ಕರೆಗೆ ಓಗೊಟ್ಟಿರುವ ರಾಜ್ಯದ ರೈತ, ಕಾರ್ಮಿಕ, ದಲಿತ, ಮಹಿಳಾ, ಕನ್ನಡ ಪರ, ವಿದ್ಯಾರ್ಥಿ-ಯುವಜನ ಸಂಘಟನೆಗಳು ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳೂ ಬಂದ್ಗೆ ಬೆಂಬಲಿಸಿದ್ದವು.
ಇದನ್ನೂ ಓದಿ: ಭಾರತ್ ಬಂದ್: ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟದ ಚಿತ್ರಗಳು, ವಿಡಿಯೊ ನೋಡಿ…