ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ‘ನಾವು ಮಧ್ಯಪ್ರವೇಶಿಸುತ್ತಿಲ್ಲ, ಹೈಕೋರ್ಟ್ಗೆ ಹೋಗಿ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಹೇಮಂತ್ ಸೊರೇನ್ ಅವರನ್ನು ಬುಧವಾರ ತಡರಾತ್ರಿ ಬಂಧಿಸಲಾಗಿದೆ. ಅವರನ್ನು ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, 10 ದಿನಗಳ ಕಸ್ಟಡಿಗೆ ನೀಡುವಂತೆ ಕೇಂದ್ರೀಯ ತನಿಖಾ ಸಂಸ್ಥೆಯ ಕೋರಿಕೆಯ ಕುರಿತು ಇಂದು ಹೈಕೋರ್ಟ್ ನಿರ್ಣಾಯಕ ತೀರ್ಪು ನೀಡುವ ನಿರೀಕ್ಷೆಯಿದೆ.
ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಹೇಮಂತ್ ಸೊರೇನ್, ‘ತನಿಖಾ ಸಂಸ್ಥೆಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ; ಪ್ರಜಾಸತ್ತಾತ್ಮಕವಾಗಿ ಚುನಾಯಿತ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ದುರುಪಯೋಗಪಡಿಸಿಕೊಂಡಿದೆ’ ಎಂದು ವಾದಿಸಿದ್ದಾರೆ.
ಅವರು ತಮ್ಮ ಬಂಧನವನ್ನು “ಕಾನೂನುಬಾಹಿರ ಮತ್ತು ನ್ಯಾಯವ್ಯಾಪ್ತಿ ಮೀರಿದೆ” ಎಂದು ಹೇಳಿದ್ದಾರೆ. ‘ಇಡಿ ಕೇಂದ್ರ ಸರ್ಕಾರದ (ಆದೇಶ) ಅಡಿಯಲ್ಲಿ ನಿರ್ಲಜ್ಜವಾಗಿ ವರ್ತಿಸುತ್ತಿದೆ ಮತ್ತು ಅರ್ಜಿದಾರರ ನೇತೃತ್ವದ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸಲು ವಿಪಕ್ಷಗಳ ನಾಯಕರನ್ನು ಬೇಟೆಯಾಡುತ್ತಿದೆ’ ಎಂದು ಅವರು ಹೇಳಿದರು.
ಹೇಮಂತ್ ಸೊರೇನ್ ಅವರು ₹600 ಕೋಟಿ ಭೂ ಹಗರಣ ಮತ್ತು ಅದರ ಮನಿ ಲಾಂಡರಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ. ಈ ಬೆಳವಣಿಗೆಗಳ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಜಾರ್ಖಂಡ್ ಮುಕ್ತಿ ಮೋರ್ಚಾದ ಹಿರಿಯ ನಾಯಕ ಚಂಪೈ ಸೊರೇನ್ ಅವರು ಇಂದು ಜಾರ್ಖಂಡ್ನ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ; ಇಂದು ಹೇಮಂತ್ ಸೊರೇನ್ ಅರ್ಜಿ ವಿಚಾರಣೆ: ವಿಶೇಷ ಪೀಠ ರಚಿಸಿದ ಸುಪ್ರೀಂ ಕೋರ್ಟ್