ಜಾರಿ ನಿರ್ದೇಶನಾಲಯ (ಇಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಜಾರ್ಖಂಡ್ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂಎಂ ಸುಂದ್ರೇಶ್ ಮತ್ತು ಬೇಲಾ ಎಂ ತ್ರಿವೇದಿ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ವಿಶೇಷ ಪೀಠ ಇಂದು ಬೆಳಿಗ್ಗೆ 10:30 ಗಂಟೆಗೆ ವಿಚಾರಣೆ ನಡೆಸಲಿದೆ.
ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಡಾ. ಅಭಿಷೇಕ್ ಮನು ಸಿಂಘ್ವಿ ಅವರು ಸೊರೇನ್ ಅರ್ಜಿಯ ತುರ್ತು ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ಮನವಿ ಮಾಡಿದ್ದರು. ಸಿಜೆಐ ಇಂದಿಗೆ ವಿಷಯ ಪಟ್ಟಿ ಮಾಡಲು ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆ, ಜಾರ್ಖಂಡ್ ಹೈಕೋರ್ಟ್ಗೆ ಸೊರೇನ್ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆಯುವುದಾಗಿ ಕಪಿಲ್ ಸಿಬಲ್ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
ಆಪಾದಿತ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 31ರಂದು ಸೋರೆನ್ ಅವರನ್ನು ಇಡಿ ಬಂಧಿಸಿತ್ತು. ಅದಕ್ಕೂ ಮುನ್ನ ಸಿಎಂ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದರು.
ಕಲಂ 32ರ ಅಡಿಯಲ್ಲಿ ಸಲ್ಲಿಸಲಾದ ರಿಟ್ ಅರ್ಜಿಯಲ್ಲಿ, 2024ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪ್ರತಿಪಕ್ಷಗಳನ್ನು ಅಸ್ಥಿರಗೊಳಿಸುವ ಪಿತೂರಿಯ ಭಾಗವಾಗಿ ಇಡಿ ನನ್ನನ್ನು ಬಂಧಿಸಿದೆ ಎಂದು ಸೊರೇನ್ ಪ್ರತಿಪಾದಿಸಿದ್ದಾರೆ. ನನ್ನ ಬಂಧನ “ಅನೂರ್ಜಿತ, ಅನಿಯಂತ್ರಿತ, ಕಾನೂನುಬಾಹಿರ ಮತ್ತು ಸಂವಿಧಾನದ 21 ನೇ ವಿಧಿಯಡಿ ಖಾತರಿಪಡಿಸಿದ ಮತ್ತು ರಕ್ಷಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆ” ಎಂದಿದ್ದಾರೆ.
ಜನವರಿ 31 ರಂದು ಇಡಿ ಬಂಧನವನ್ನು ತಡೆಯುವಂತೆ ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದೆ. ಅರ್ಜಿಯ ಕುರಿತು ನ್ಯಾಯಾಲಯದ ತೀರ್ಮಾನದವರೆಗೆ ಕಾಯುವಂತೆ ಇಡಿ ಅಧಿಕಾರಿಗಳಿಗೆ ಮನವಿ ಮಾಡಿದರೂ, ಅವರು ನನ್ನನ್ನು ಬಂಧಿಸಿದ್ದಾರೆ ಎಂದು ಸೊರೇನ್ ದೂರಿದ್ದಾರೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಸಲುವಾಗಿ ರಾಜ್ಯಪಾಲರನ್ನು ಭೇಟಿ ಮಾಡಲು ಹೋದಾಗ ರಾಜಭವನದಿಂದ ಬಂಧಿಸಿದ್ದಾರೆ. ದೆಹಲಿಯಲ್ಲಿರುವ ನನ್ನ ಮನೆ ಶೋಧಿಸುವ ಮೊದಲು ಇಡಿ ಯಾವುದೇ ನೋಟಿಸ್ ನೀಡಿಲ್ಲ ಎಂದು ಸೊರೇನ್ ಆರೋಪಿಸಿದ್ದಾರೆ.
ಇದನ್ನೂ ಓದಿ : ಜಾರ್ಖಂಡ್: ನ್ಯಾಯಾಂಗ ಬಂಧನಕ್ಕೆ ಹೇಮಂತ್, ಸರ್ಕಾರ ರಚಿಸುವಂತೆ ಚಂಪೈಗೆ ರಾಜ್ಯಪಾಲರಿಂದ ಆಹ್ವಾನ