ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ, ನಾಲ್ಕನೇ ವರ್ಷದ ಬಿಟೆಕ್ ವಿದ್ಯಾರ್ಥಿಯನ್ನು ಅಮಾನತುಗೊಳಿಸಿ ಜನವರಿ 31ರ ಬುಧವಾರದಂದು ಕೇರಳದ ಕ್ಯಾಲಿಕಟ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳ ಕಲ್ಯಾಣ ವಿಭಾಗದ ಡೀನ್ ಸುತ್ತೋಲೆ ಹೊರಡಿಸಿದ್ದಾರೆ.
ಮಂದಿರ ಉದ್ಘಾಟನೆಯ ದಿನದಂದು ಕ್ಯಾಂಪಸ್ನೊಳಗೆ ಪ್ರತಿಭಟನೆ ನಡೆದಿದ್ದು, ಈ ಸಂದರ್ಭದಲ್ಲಿ ಎರಡು ಗುಂಪುಗಳ ವಿದ್ಯಾರ್ಥಿಗಳ ನಡುವೆ ಘರ್ಷಣೆ ಉಂಟಾಗಿತ್ತು. ರಾಮ ಮಂದಿರ ಉದ್ಘಾಟನೆ ನಿಮಿತ್ತ ಕಾರ್ಯಕ್ರಮವನ್ನು ಆಯೋಜಿಸಿದ್ದ ಒಂದು ಗುಂಪು ಮತ್ತು ಪ್ರತಿಭಟನೆ ನಡೆಸುತ್ತಿದ್ದ ಇನ್ನೊಂದು ಗುಂಪಿನ ನಡುವೆ ಜಗಳ ನಡೆದಿತ್ತು. ಅಮಾನತುಗೊಂಡ ವಿದ್ಯಾರ್ಥಿ ಸೇರಿದಂತೆ ಪ್ರತಿಭಟನಾ ನಿರತರು ‘ಭಾರತ ರಾಮ ರಾಜ್ಯವಲ್ಲ’ ಎಂಬ ಬರಹದ ಫಲಕಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದ್ದರು.
ಡೀನ್ ಹೊರಡಿಸಿದ ಸುತ್ತೋಲೆಯಲ್ಲಿ ಸಂಸ್ಥೆಯ ಶಿಸ್ತು ಸಮಿತಿಯು ನಡೆಸಿದ ತನಿಖೆಯಲ್ಲಿ ಅಮಾನತುಗೊಂಡ ವಿದ್ಯಾರ್ಥಿಯನ್ನು ಒಳಗೊಂಡಿರುವ “ಕಾನೂನುಬಾಹಿರ ಪ್ರತಿಭಟನೆಯು ಕ್ಯಾಂಪಸ್ನಲ್ಲಿ ಅಶಾಂತಿಗೆ ಕಾರಣವಾಗಿದೆ. ಸಮಾಜದಲ್ಲಿ ಅಶಾಂತಿಗೆ ಪ್ರಚೋದಿಸಲು ವಿದ್ಯಾರ್ಥಿ ಕಾರಣನಾಗಿದ್ದಾನೆ. ತನ್ನ ಬೇಜವಾಬ್ದಾರಿ ವರ್ತನೆಯ ಮೂಲಕ ಕ್ಯಾಂಪಸ್ನ ಒಳಗೆ ಮತ್ತು ಹೊರಗೆ ಸಂಸ್ಥೆಯ ಗೌರವವಕ್ಕೆ ಚ್ಯುತಿ ತಂದಿದ್ದಾನೆ” ಎಂದು ಹೇಳಲಾಗಿದೆಯತೆ.
ಈ ಹಿಂದೆಯೂ ವಿದ್ಯಾರ್ಥಿ ಕ್ಯಾಂಪಸ್ನೊಳಗೆ ನಿಯಮ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಅದು ಪುನರಾವರ್ತನೆಯಾಗಿರುವ ಹಿನ್ನೆಲೆ, ಅಮಾನತು ಮಾಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ದಿ ನ್ಯೂಸ್ ಮಿನಿಟ್ ವರದಿ ಪ್ರಕಾರ, ವಿಡಿಯೋವೊಂದರಲ್ಲಿ ಎರಡು ಗುಂಪಿನ ವಿದ್ಯಾರ್ಥಿಗಳ ನಡುವೆ ಸೌಮ್ಯವಾದ ವಾಗ್ವಾದ ನಡೆದಿರುವುದು ಕಾಣಬಹುದು. ಎರಡು ಗುಂಪುಗಳ ಪೈಕಿ ಒಂದು ಗುಂಪಿನವರು ‘ಜೈ ಶ್ರೀರಾಮ್’ ಘೋಷಣೆ ಕೂಗಿದರೆ, ಮತ್ತೊಂದು ಗುಂಪಿನವರು ಇದು ‘ರಾಮ ರಾಜ್ಯವಲ್ಲ ಭಾರತ’ ಎಂಬ ಘೋಷಣೆ ಮೊಳಗಿಸಿದ್ದಾರೆ. ಆದರೆ, ಮಂದಿರ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಡೀನ್ ಆಮಾನತುಗೊಳಿಸಿದ್ದಾರೆ.
“ಡೀನ್ ಹೇಳಿದಂತೆ ಈ ಹಿಂದೆ ನನ್ನ ವಿರುದ್ದ ನಿಯಮ ಉಲ್ಲಂಘಿಸಿದ ಯಾವುದೇ ಆರೋಪಗಳಿಲ್ಲ. ಕಳೆದ ವರ್ಷ ಆರೆಸ್ಸೆಸ್ ನಾಯಕರು ಮತ್ತು ಕಾರ್ಯಕರ್ತರು ಪಾಲ್ಗೊಂಡ ಕಾರ್ಯಕ್ರಮವೊಂದು ಕ್ಯಾಂಪಸ್ನಲ್ಲಿ ನಡೆದಿತ್ತು. ಅದನ್ನು ವಿರುದ್ದ ನಾವು ಉಪಸವಾಸ ಸತ್ಯಾಗ್ರಹ ನಡೆಸಿದ್ದೆವು. ಆ ವಿಚಾರವನ್ನು ಉಲ್ಲೇಖಿಸಿ ಟಾರ್ಗೆಟ್ ಮಾಡಲಾಗಿದೆ” ಎಂದು ಅಮಾನತುಗೊಂಡ ವಿದ್ಯಾರ್ಥಿ ಹೇಳಿದ್ದಾಗಿ ನ್ಯೂಸ್ ಮಿನಿಟ್ ತಿಳಿಸಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ಸ್ ವಿಭಾಗದ ವಿದ್ಯಾರ್ಥಿಯನ್ನು ಜನವರಿ 30,2025 ರವರೆಗೆ ಒಂದು ವರ್ಷದ ಅವಧಿಗೆ ಅಮಾನತುಗೊಳಿಸಲಾಗಿದೆ. ಈ ಅವಧಿಯಲ್ಲಿ, ಕಾಲೇಜಿನ ಅನುಮತಿಯಿಲ್ಲದೆ ಹಾಸ್ಟೆಲ್ ಆವರಣ ಸೇರಿದಂತೆ ಕ್ಯಾಂಪಸ್ಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ.
ಡೀನ್ ವಿದ್ಯಾರ್ಥಿಯನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಎನ್ಐಟಿ ಕ್ಯಾಲಿಕಟ್ ನಿರ್ದೇಶಕರ ವಿರುದ್ದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಮತ್ತು ಕೇರಳ ಸ್ಟೂಡೆಂಟ್ ಯೂನಿಯನ್ (ಕೆಎಸ್ಯು) ನಿನ್ನೆ ರಾತ್ರಿ ಪ್ರತಿಭಟನೆ ನಡೆಸಿದೆ. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದಿದೆ.
#WATCH | Kozhikode, Kerala: KSU & SFI workers clashed with Police after they protested against the director of NIT Calicut over the suspension of an SFI activist student (01/02)
A student was suspended by NIT Calicut for protesting against the Ayodhya Ram temple inauguration, on… pic.twitter.com/q6Xr7k6sQA
— ANI (@ANI) February 1, 2024
ಇದನ್ನೂ ಓದಿ: ಅಲಿಗಢ ಮುಸ್ಲಿಂ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ಪ್ರಕರಣ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್