ನಿನ್ನೆ (ಫೆ.1) ಕೇಂದ್ರ ಬಿಜೆಪಿ ಸರ್ಕಾರದ ಮಧ್ಯಂತರ ಬಜೆಟ್ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ನಲ್ಲಿ ಮಂಡನೆ ಮಾಡಿದ್ದಾರೆ.
ಕೇವಲ 59 ನಿಮಿಷಗಳಲ್ಲಿ ವಿತ್ತ ಸಚಿವೆ ಓದಿ ಮುಗಿಸಿದ ಬಜೆಟ್ನಲ್ಲಿ ದೊಡ್ಡ ಮಟ್ಟ ಯಾವುದೇ ಘೋಷಣೆಗಳನ್ನು ಮಾಡಿಲ್ಲ. ಈಗಾಗಲೇ ಇರುವ ಕೆಲ ಯೋಜನೆಗಳನ್ನು ಮುಂದುವರಿಸಲಾಗಿದೆ.
ಈ ಬಾರಿ ಬಜೆಟ್ನಲ್ಲಿ ಮುಂದುವರೆಸಿರುವ ಒಂದು ಪ್ರಮುಖ ಯೋಜನೆಯೆಂದರೆ, ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ನೀಡುವುದು. ಅಭಿವೃದ್ದಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ರಾಜ್ಯಗಳಿಗೆ 50 ವರ್ಷಗಳವರೆಗೆ 75 ಸಾವಿರ ಕೋಟಿ ರೂಪಾಯಿ ದೀರ್ಘಕಾಲಿನ ಬಡ್ಡಿರಹಿತ ಸಾಲ ನೀಡುವ ಯೋಜನೆಯನ್ನು ಮುಂದುವರಿಸಲಾಗುವುದು ಎಂದು ಕೇಂದ್ರ ಘೋಷಣೆ ಮಾಡಿದೆ.
ವಿತ್ತ ಸಚಿವರ ಈ ಘೋಷಣೆ ಬಗ್ಗೆ ರಾಜ್ಯ ಕಾಂಗ್ರೆಸ್ ವ್ಯಂಗ್ಯವಾಡಿದೆ. “ಬಾಟ್ಲಿನೂ ಹಳೇದು, ವೈನೂ ಹಳೇದು” ಎಂದು ಕಾಂಗ್ರೆಸ್ ಎಕ್ಸ್ನಲ್ಲಿ ಪೋಸ್ಟ್ ಹಾಕಿದೆ. ಕರ್ನಾಟಕದಿಂದ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಒಕ್ಕೂಟ ಸರ್ಕಾರ ಮರಳಿ ಕರ್ನಾಟಕಕ್ಕೆ ಕೊಡುತ್ತಿರುವುದು ಚಿಪ್ಪು ಮಾತ್ರ. ಕನ್ನಡಿಗರ ಬೆವರಿನ ಹಣವನ್ನು ಕನ್ನಡಿಗರಿಗೇ ಸಾಲವಾಗಿ ಕೊಡುವುದು ಯಾವ ಸೀಮೆಯ ಅರ್ಥ ಶಾಸ್ತ್ರ? ಹಿಂದಿನ ಬಜೆಟ್ಟನ್ನೇ ಇಂದು ಓದಿದ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ಆಯ್ಕೆಯಾದ ಋಣಕ್ಕೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಕರ್ನಾಟಕದಿಂದ ಅತಿ ಹೆಚ್ಚು ತೆರಿಗೆ ಸಂಗ್ರಹಿಸುವ ಒಕ್ಕೂಟ ಸರ್ಕಾರ ಮರಳಿ ಕರ್ನಾಟಕಕ್ಕೆ ಕೊಡುತ್ತಿರುವುದು ಚಿಪ್ಪು ಮಾತ್ರ!
ಕನ್ನಡಿಗರ ಬೆವರಿನ ಹಣವನ್ನು ಕನ್ನಡಿಗರಿಗೇ ಸಾಲವಾಗಿ ಕೊಡುವುದು ಯಾವ ಸೀಮೆಯ ಅರ್ಥ ಶಾಸ್ತ್ರ?
ಹಿಂದಿನ ಬಜೆಟ್ಟನ್ನೇ ಇಂದು ಓದಿದ @nsitharaman ಅವರು ಕರ್ನಾಟಕದಿಂದ ಆಯ್ಕೆಯಾದ ಋಣಕ್ಕೆ ದ್ರೋಹ ಮಾಡಿದ್ದಾರೆ. pic.twitter.com/lVyJKabGvu
— Karnataka Congress (@INCKarnataka) February 1, 2024
ಕಳೆದ ವರ್ಷದ ಫೆಬ್ರವರಿ 1ರಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ರಾಜ್ಯಗಳಿಗೆ ಬಡ್ಡಿರಹಿತ ಸಾಲ ನೀಡುವ ಬಗ್ಗೆ ಘೋಷಣೆ ಮಾಡಿದ್ದರು. ಈ ಬಾರಿ ಆ ಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಮುಂದುವರೆಸಲಾಗಿದೆ. ಕೆಲ ಮಾಧ್ಯಮಗಳು ಇದನ್ನು ಈ ಬಾರಿಯ ಬಜೆಟ್ನ ದೊಡ್ಡ ಘೋಷಣೆಯಾಗಿ ಪರಿಗಣಿಸಿದೆ.
ಸಿಎಂ ಸಿದ್ದರಾಮಯ್ಯ ಸೇರಿದಂತೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ಕೇಂದ್ರ ನಮ್ಮ ಪಾಲಿನ ಅನುದಾನ ಕೊಡುತ್ತಿಲ್ಲ ಎಂದು ಆರೋಪಿಸುತ್ತಲೇ ಇದ್ದಾರೆ. ರಾಜ್ಯವು ದೇಶಕ್ಕೆ ಸಂಗ್ರಹಿಸಿಕೊಡುವ ಪ್ರತಿ 100 ರೂಪಾಯಿಗಳಿಗೆ 12.50 ರೂಪಾಯಿ ಮಾತ್ರ ರಾಜ್ಯಕ್ಕೆ ಮರಳಿ ಬರುತ್ತಿದೆ. ಕರ್ನಾಟಕದಿಂದ ವಾರ್ಷಿಕ ರೂ. 4 ಲಕ್ಷ ಕೋಟಿ ಆದಾಯ ಗಳಿಕೆಯಾದರೆ, ಇದಕ್ಕೆ ಪ್ರತಿಯಾಗಿ ಕೇಂದ್ರದಿಂದ ನಮಗೆ ಬರುವುದು ಸುಮಾರು ರೂ. 50,000 ಕೋಟಿ ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ: ಇದು ವಿಕಸಿತ ಅಲ್ಲ, ವಿನಾಶಕಾರಿ ಬಜೆಟ್ : ಸಿಎಂ ಸಿದ್ದರಾಮಯ್ಯ