Homeಮುಖಪುಟವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

ವಿರೋಧ ಅಂದರೇನು, ವಿರೋಧ ಪಕ್ಷ ಅಂದರ ಏನು? ನಿಮಗೇನಾರ ಗೊತ್ತಾ?

- Advertisement -
- Advertisement -

ನಿಮ್ಮಲ್ಲಿ ವಿರೋಧ ಪಕ್ಷದ ಪರವಾಗಿ ಇರುವವರು ಯಾರು? ಹೋಗಲಿ ವಿರೋಧ ಪಕ್ಷ ಅಂದರ ಏನು? ಹೋಗಲಿ ಆತಲಾಗ ವಿರೋಧ ಅಂದ್ರ ಏನು ?

ಈ ಗಹನವಾದ ವಿಷಯ ಇಂದಿನ ಖೋಲಿಯ ವಸ್ತು.

ರಾಜಕೀಯ ಶಾಸ್ತ್ರ ಓದೋ ಹುಡುಗರ ನಡುವ ಒಂದು ಬಹುಚರ್ಚಿತ ಮಾತು ಐತಿ : “ನಮ್ಮ ಸಂವಿಧಾನದಾಗ ಆಡಳಿತ ಪಕ್ಷ ಅನ್ನೋ ಪದ ಇಲ್ಲಾ. ಆದರ ವಿರೋಧ ಪಕ್ಷ ಅನ್ನೋ ಪದ ಐತಿ’. ಈ ಮಾತು ಯಾಕ ಹೇಳತಾರ ಅಂದ್ರ, “ಭಾರತ ಅನ್ನೋದು ಆಡಳಿತ ಪಕ್ಷ ಕೇಂದ್ರಿತ ಪ್ರಜಾಪ್ರಭುತ್ವ ಅಲ್ಲ, ಅದು ಸಮ್ಮಿಳಿತ ಪ್ರಜಾಪ್ರಭುತ್ವ, ಇದರಲ್ಲಿ ವಿರೋಧ ಪಕ್ಷಕ್ಕೆ ಭಾಳ ಪ್ರಾಮುಖ್ಯತೆ ಇದೆ’ ಅಂತ ತಿಳಿಸಲಿಕ್ಕೆ.

ಬ್ರಿಟಿಷ್ ಸರ್ಕಾರದಾಗ ವಿರೋಧ ಪಕ್ಷ ಅಂದ್ರ ಬಹಳ ಗೌರವ. ವಿರೋಧ ಪಕ್ಷದ ನಾಯಕನಿಗೆ ಛಾಯಾ ಪ್ರಧಾನಿ ಅಂತ, ಇತರ ನಾಯಕರಿಗೆ ಛಾಯಾ ಕೃಷಿ ಸಚಿವ, ಛಾಯಾ ಹಣಕಾಸು ಸಚಿವ, ಛಾಯಾ ರಕ್ಷಣಾ ಸಚಿವ, ಇತ್ಯಾದಿ ಹೆಸರುಗಳಿಂದ ಕರೀತಾರ.

ಅವರು ತಮಗೆ ವಹಿಸಿಕೊಟ್ಟ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಸಂಸತ್ತಿನಲ್ಲಿ ಮಾತಾಡತಾರ. ಅಲ್ಲದೇ ಪ್ರತಿ ಬಾರಿ ಆ ಕ್ಷೇತ್ರದ ಬಗ್ಗೆ ಸರಕಾರ ಏನಾದರೂ ಹೊಸಾ ನೀತಿ ಮಾಡಿದರ, ಅಥವಾ ಬದಲಾವಣೆ ಮಾಡಿದರ, ಅದಕ್ಕ ಸಂಬಂಧ ಪಟ್ಟ ಛಾಯಾ ಸಚಿವರು ಮಾತಾಡತಾರ. ನಮ್ಮಲ್ಲಿ ಹಂಗ ಯಾರಾರರ, ಏನೇನರ ತಲಿಯೊಳಗ ಒಂದು- ಒಂದು ಮಾತಾಡೋದಿಲ್ಲ.

ಹಂಗಾರ ನಮ್ಮ ಹಿರಿಯರೆಲ್ಲ – ಯಾರು ಯಾರು ಈ ದೇಶದ ಸ್ವಾತಂತ್ರ್ಯದ ಸಲುವಾಗಿ ಮನಿ ಬಿಟ್ಟು ಓಡಿಹೋಗಿ, ಸಾಲಿ, ನೌಕರಿ ಬಿಟ್ಟು ವರ್ಷಗಟ್ಟಲೆ ತಪ್ಪಿಸಿಕೊಂಡು ಅಡ್ಡಾಡಿದವರು- ಈ ದೇಶದ ಸರ್ಕಾರದ ಸ್ವರೂಪ ಹೆಂಗ ಇರಬೇಕು ಅಂತ ನಿರ್ಧಾರ ಮಾಡಿದಾಗ ಅವರ ತಲಿಯೊಳಗ ಏನು ಇತ್ತು?

ಅವರಿಗೆ ಈ ದೇಶ ಬಹಳ ದೊಡ್ಡದು, ಅದನ್ನ ಸರಿಯಾಗಿ ನಡಸಬೇಕು ಅಂದ್ರ ಇದು ಬಹುಜನರ ಸರಕಾರದಿಂದ ಮಾತ್ರ ಸಾಧ್ಯ ಅನ್ನೋದು ಗೊತ್ತಿತ್ತು. ಚುನಾವಣೆ ಅನ್ನೋದು ಲಕ್ ಬೈ ಛಾನ್ಸ್ ಅನ್ನೋದು ಗೊತ್ತಿತ್ತು. ಬರೇ ಒಂದು ವೋಟಿನಿಂದ ಗೆದ್ದ ಮನಿಶಾ ಜನರ ಪ್ರತಿನಿಧಿ ಆಗಿಬಿಡೋದು, ಸೋತವ ಮೂಲಿ ಒಳಗ ಕೂಡೋದು, ಅದು ತಪ್ಪು ಅಂತ ಅವರಿಗೆ ಗೊತ್ತಿತ್ತು.

ನಮ್ಮ ದೇಶದ ಮುಂದಿನ ದಾರಿ ನಿರ್ಧಾರ ಮಾಡೋವಾಗ ಎಲ್ಲಾ ಮತದಾರರ ಅಭಿಪ್ರಾಯವನ್ನೂ ಪರಿಗಣಿಸಬೇಕು, ವಿರೋಧ ಪಕ್ಷದವರೂ ಇಲ್ಲಿ ಅಮುಖ್ಯರಲ್ಲ ಅಂತ ಅವರು ಠರಾವಿಸಿದ್ದರು.

ಹೀಂಗೇ ಮುಂದುವರೆದು ಸರಕಾರ ಅಂದ್ರ ಬರೇ ಕಾಯಾಂಗ ಅಲ್ಲ. ಅದರಾಗ ಮೂರು ಅಂಗ ಆದವು. ಅವು ಎಲ್ಲವೂ ಮುಖ್ಯ ಅಂದ್ರು. ಒಂದು ಹೆಜ್ಜಿ ಮುಂದ ಹೋಗಿ ಶಾಸಕಾಂಗ ಅನ್ನೋದು ಕಾಯಾಂಗಕ್ಕಿಂತ ಮುಖ್ಯ ಅಂತ ತಿಳಿಸಿ ಹೇಳಿದರು. ಕಾಯಾಂಗ ಅನ್ನೋದು ಶಾಸಕಾಂಗದ ಕೈ ಗೊಂಬೆ, ಅದನ್ನು ಇದು ಯಾವಾಗ ಬೇಕಾದಾದರೂ ಬೀಳಿಸಬಹುದು ಅಂತ ಸಾರಿದರು.

ಸಂವಿಧಾನದ ಪ್ರಕಾರ ವಿರೋಧ ಪಕ್ಷದ ಕೆಲಸ ಏನು ಅಂದರೆ ೧. ಸರ್ಕಾರದ ನೀತಿ- ನಿಯಮಗಳ ಸರಿ- ತಪ್ಪುಗಳ ವಿಮರ್ಶೆ ಮಾಡೋದು, ೨. ಯೋಜನೆ ಜಾರಿ ಬಗ್ಗೆ ತಮ್ಮ ಅಭಿಪ್ರಾಯ ತಿಳಸೋದು, ೩. ಸದನದೊಳಗ ಜನರ ದನಿ ಆಗೋದು ೪. ತೆರಿಗೆ ಹಣದ ಸರಿಯಾದ ಬಳಕೆ ಅಗೇದೋ ಇಲ್ಲೋ ನೋಡೋದು, ಮತ್ತು ಆಳುವವರು ಶಾಸಕರ ವಿಶ್ವಾಸ ಕಳೆದುಕೊಂಡರ ಅವರನ್ನ ತಕ್ಷಣಕ್ಕೆ ಮನಿಗೆ ಕಳಸೋದು, ಹೊಸಾ ನಾಯಕನ್ನ ಆಯ್ಕೆ ಮಾಡೋದು.

ಸರಕಾರ ಅನ್ನುವುದು, ಅದು ಯಾರದೇ ಇರಲಿ, ಅದನ್ನ, ಅದರ ಸರಿ- ತಪ್ಪುಗಳನ್ನ, ಅದರ ಜನಪರ ಹಾಗೂ ಜನ ವಿರೋಧಿ ನೀತಿ, ಅಥವಾ ಕಾರ್ಯಕ್ರಮಗಳ ಜಾರಿಗಳ ಬಗ್ಗೆ ಮಾತಾಡುವುದು ವಿರೋಧ ಪಕ್ಷದ ಮೂಲಭೂತ ಹಕ್ಕು. ಬಾಹುಳ್ಯದ ಪ್ರಜಾಪ್ರಭುತ್ವದಲ್ಲಿ ಇದು ಅವರ ಪವಿತ್ರ ಹಕ್ಕು. ಅದನ್ನು ಮಾಡದಿದ್ದರೆ ಅವರು ತಪ್ಪು ಮಾಡಿದಂಗೆ. ಅವರು ಜನರಿಗೆ ನೀಡಿದ ಜವಾಬುದಾರಿಯನ್ನು ತಪ್ಪಿಸಿಕೊಂಡಂತೆ.

ಇದನ್ನೆಲ್ಲಾ ಯಾಕ ಹೇಳಬೇಕಾತು ಅಂದ್ರ ಮೊನ್ನೆ ನಮ್ಮ ಗೃಹ ಸಚಿವ ಅಮಿತ್ ಷಾ ಅವರು ಆಡಳಿತ ಪಕ್ಷದ ಬಗ್ಗೆ ಮಾತಾಡೋ ವಿರೋಧ ಪಕ್ಷದವರು ಮೊದಲು ತಾವು ಏನು ಮಾಡಿದಾರ ಅನ್ನೋದು ತೋರಿಸಕೊಡಬೇಕು ಅಂತ ಫರಮಾನು ಕೊಟ್ಟಾರ.

ಅಂತವರಿಗೆ ಒಂಚೂರು ಬ್ರಿಟನ್‌ನ ಗಾರ್ಡಿಯನ ಪತ್ರಿಕೆಯ ಬಗ್ಗೆ ಹೇಳಬೇಕು. ಅವರು ಪ್ರತಿ ಚುನಾವಣೆಯ ನಂತರ ಈ ಪಕ್ಷ ಬಹುಮತ ಪಡೆದು ಆಳುವ ಪಕ್ಷವಾಗಿದೆ. ಆ ಪಕ್ಷ ವಿರೋಧ ಪಕ್ಷವಾಗಿ ಜನರ ಪಕ್ಷವಾಗಿದೆ ಅಂತ ಘೋಷಿಸುವ ಪರಂಪರೆ ಹೊಂದಿದೆ. ತನ್ನನ್ನು ತಾನು ಸರ್ವಕಾಲಿಕ ವಿರೋಧ ಪಕ್ಷ ಅಂತ ಹೇಳಿಕೊಂಡಿದೆ.

ಇದು ಸದನದ ಎಡಗಡೆ, ಬಲಗಡೆ ಕೂಡುವ ಎಲ್ಲರಿಗೂ ತಿಳಿಯಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...