ಉಗ್ರ ಚಿಂತಾಕ್ರಾಂತನಾಗಿ ಕುಳಿತಿದ್ದುದನ್ನು ಗಮನಿಸಿದ ಜುಮ್ಮಿ.
ಅದ್ಯಾಕ್ಲ ಹೆಂಡತಿ ಸತ್ತೋನಂಗೆ ತಲೆಮ್ಯಾಲೆ ಕೈ ಹೊತ್ತಗಂಡು ಕುಂತಿದ್ದಿ ಎಂದಳು.
ಹೇಳಿದ್ರೆ ನಿನಿಗೆ ಅರ್ಥಾಗದಿಲ್ಲ ಕಣೆ ಎಂದ.
ವಾಟಿಸ್ಸೆ ಬಂದ ಅವುನ್ನೇ ಕೇಳ್ತಿನಿ ಬುಡು.
ಗುಡಮಾನಿಂಗು ಕಣಕ್ಕ.
ಗೂಡೆ ಮಾರಮ್ಮನೂ ಬ್ಯಾಡ ಕ್ವಾಟೆ ಮಾರಮ್ಮನೂ ಬ್ಯಾಡ. ಈ ಉಗ್ರಿ ಊದಿಕಂಡು ಕುಂತವುನೆ. ಯಾಕ್ಲ ಅಂದ್ರೆ, ಹೇಳದ್ರೆ ನಿನಿಗೆ ಗೊತ್ತಾಗದಿಲ್ಲ ಅಂತನೆ ಅದೇನಾಗ್ಯದೆ ನೀನಾರ ಹೇಳ್ಳ ವಾಟಿಸ್ಸೆ.
ಏನಾಗ್ಯದೆ ಅಂತ ಇವತ್ತೇಳಿದ್ರೆ ಗೊತ್ತಾಗದಿಲ್ಲ ಕಣಕ್ಕ ಬಿಜೆಪಿಗಳು ಅಧಿಕಾರಕ್ಕೆ ಬಂದಾಗ್ಲೆ ಸುರುವಾಗ್ಯದೆ. ಈಗ ವರ್ಕು ಪಾಸ್ಟಾಗ್ಯದೆ ಅಷ್ಟೇ ಕಣಕ್ಕ.
ಅದೇನು ವರಕಲಾ.
ಅದೇನವ್ವ ಅಂದ್ರೆ ಬಿಜೆಪಿಗಳು ದೇಶನೆ ಸರ್ವನಾಶ ಮಾಡಕ್ಕೆ ವಂಟಿದ್ರಲ್ಲಕ್ಕ. ಈಗ ರೈತರನೇ ಮುಗಸೋ ಕಾನೂನು ತತ್ತಾ ಅವುರೆ.
ಅದೇನು ಅಂತ ಕಾನೂನು.
ಅದೇನವ್ವ ಅಂದ್ರೆ ರೈತೆಲ್ಲದೋರು ಭೂಮಿಕೊಳ್ಳಂಗಿರಲಿಲ್ಲ. ಈಗ ಬಂದೂ ನಮ್ಮ ಭೂಮಿ ಕೊಳ್ಳಬವುದಂತೆ ಅಂತ ಕಾನೂನು ಬತ್ತಾ ಅದೆ.
ರೈತರಲ್ಲದೊರು ಅಂದ್ರೆ ಅದ್ಯಾರ್ಲ.
ದೇಸದಲ್ಲಿ ಪ್ಯಾಗುಟ್ರಿ ಮಡಗಿರೊ ಸಾವುಕಾರ್ರ್ಅವುರೆ, ಮಾರವಾಡಿಗಳವುರೆ, ಐಎಎಸ್, ಐಪಿಎಸ್ ಅಧಿಕಾರಿಗಳವುರೆ, ಬಿಜೆಪಿಗಳವುರೆ. ಅವರಿಗ್ಯಲ್ಲ ಭೂಮಿ ಬೇಕಾದ್ರೆ ಬಂದು ಕೇಳಿದಷ್ಟು ದುಡ್ಡು ಕೊಟ್ಟು ತಗತರೆ.
ತಗಂಡೇನು ಮಾಡ್ಯರೂ.
ಗೆಣಸು ಬ್ಯಳಿತರೆ, ಕಡ್ಳೆಕಾಯಿ ಬ್ಯಳಿತರೆ, ರಾಗಿ ಬ್ಯಳಿತರೆ.
ಸರಿಯಾಗೇಳ್ಳ ಅಣಕ ವಡಿಬ್ಯಾಡ.
ಏನು ಮಾಡ್ತರೆ ಗೊತ್ತೇನಕ್ಕಾ. ಈ ಉಗ್ರಿ ನಾನು ನೀನು ಸೀರಪ್ಪನಂಥೋರು ಮಾರಿಕತ್ತೀವಿ ಅನ್ನು. ಟೋಟ್ಲು ೨೦ ಯಕರೆ ಆಯ್ತು ಅನ್ನು. ಅದಕ್ಯಲ್ಲ ತಂತಿಬೇಲಿ ಹಾಕ್ತನೆ. ಅಮ್ಯಾಲೆ ಬಂದು ಟೀಕ್ ಮರನೋ, ಸಾಗುವಾನಿ ಮರನೋ ನೆಟ್ಟು ಒಂದು ಪಾರಂ ಹೌಸ್ ಮಾಡಿ, ಒಬ್ಬ ವಾಚ್ ಮ್ಯಾನ್ ಇಟ್ಟು ವಂಟೋಯ್ತನೆ. ಇಲ್ಲ ಹಾಳು ಬುಡ್ತನೆ.
ಅಂಗೆ ಮಾಡ್ತರೇನ್ಲ.
ನಮ್ಮೂರಿಗೂ ಬೆಂಗಳೂರಿಗೂ ಕಾರಲ್ಲಿ ಒಂದೂವರೆಗಂಟೆ ಜರ್ನಿ. ಅಲ್ಲಿಂದ ಬಂದು ಇಲ್ಲಿ ಪಾರ್ಟಿ ಮಾಡಿಕಂಡು, ನಾಟಿಕೋಳಿ ತಿಂದು, ಯಾರಾದ್ರು ಲೇಡಿ ಸಿಕ್ಕಿದ್ರೆ ರಾತ್ರಿ ಅವುಳ ಜೊತೆ ಇದ್ದು, ವಂಟೋಯ್ತರೆ ಕಣಕ್ಕ.
ಥೂ ಅವುರ ಮನಿಯಾಳಾಗ ಅಂಥೋರ ಸೇರುಸಬಾರ್ದು ಕಂಡ್ಳ ಇಲ್ಲೀ.
ಅಂಗಂತ ಎಡೂರಪ್ಪನಿಗೇಳು.
ಅವುನ ಕಾಲಾಗ್ಲೆ ಅತ್ತಮುಂದಾಗ್ಯವೆ ಅವುನಿಗೇನೇಳ್ತಿಯೊ ಎಂದ ಉಗ್ರಿ ಸಿಟ್ಟಿನಿಂದ.
ಇದರಲ್ಲವುಂದೇನು ತೆಪ್ಪಿಲ್ಲ ಕಣೋ. ಮೋದಿ ಶಾಗಳು ಹೇಳಿದ್ದ ಮಾಡ್ತ ಅವುನೆ.
ಅವುರ್ಯಾಕ್ಲ ಅಂಗೆ ಮಾಡ್ತ ಅವುರೆ.
ಅವುರು ಮಾರವಾಡಿಗಳ ರಾಜ್ಯ ಗುಜರಾತಿಂದ ಬಂದೋರು ಕಣ್ಣಕ್ಕ. ಯಾವುದೇ ವಿಷಯ ತಗಂಡ್ರೂ ಮಾರವಾಡಿಗಳ ತರ ಲಾಭ-ನಷ್ಟ ನೋಡ್ತರೆ. ಅದ್ಕೆ ರೈತರು ಬೇಸಾಯದಲ್ಲಿ ನಷ್ಟ ಮಾಡಿಕತ್ತಾ ಅವುರೆ ಅಂದ್ರೇ, ಅಂಗರೆ ಮಾರಿಬುಡಿ, ಕೈತುಂಬಾ ದುಡ್ಡು ಸಿಗತದೆ ಅರಾಮಾಗಿರಿ ಅಂತರೆ.
ಅಲ್ಲಾ ಕಂಡ್ಳ, ಜಮೀನ ನಾವ್ಯಾವತ್ತು ಲಾಭ ನಷ್ಟದಲ್ಲಿ ನೋಡಿದ್ದವೀ. ಅದರ ಜ್ವತೆ ಬುದುಕ್ತಯಿದ್ದೀವಿ. ಬೇಜಾರಾದ್ರೆ ವಲ್ತಕ್ಕೋಯ್ತಿವಿ. ದನ ಮೇಸ್ತಿವಿ, ಯಮ್ಮೆ ಮೇಸ್ತಿವಿ, ಆಡುಕುರಿ ಮೇಸ್ತಿವಿ. ಅವುನ್ಯಲ್ಲ ಮೇಸಕ್ಕೆ ಜಮೀನು ಬ್ಯಾಡವೇ?
ಬೇಕವ್ವ. ಅದು ಮೋದಿಶಾಗೆ ಹೊಳಿಬೇಕಲ್ಲ. ಮೋದಿಗೆ ಬುದ್ದಿಲ್ಲ. ಶಾಗೆ ತಲಿಲ್ಲ. ಅದ್ಕೆ ಇಂತ ಮನಿಯಾಳ ಕಾನೂನು ತಂದು ಇಡೀ ದೇಶದ ರೈತರು ದಿಕ್ಕು ದೆಸೆಯಿಲ್ದೆ ನ್ಯಲೆ ಕಳಕಂಡು ಅಲಿಯಂಗೆ ಮಾಡ್ತ ಅವುರೆ.
ಇದ ತಡಿಯಕ್ಕಾಗದಿಲವೆ.
ತಡಿಬೇಕಾದ್ರೆ, ರೈತದು ಬೀದಿಗೆ ಬರಬೇಕು. ಚಳುವಳಿ ಮಾಡಬೇಕು. ಆದ್ರೆ ಕರೊನ ಬಂದು ಹಟಕಾಯಿಸಿಗಂಡದೆ. ಅಂಗಾಗಿ ಯಾರೂ ಬೀದಿಗ ಬರಂಗಿಲ್ಲ. ಅದ್ಕೆ, ಇದೇ ಸರಿಯಾದ ಟೈಮು ಅಂತ, ಬಿಜೆಪಿಗಳು ಯೋಚನೆ ಮಾಡಿ, ಎಪಿಎಂಸಿ ಕತೆ ಮುಗಿಸಿದ್ರು. ಈಗ ರೈತರ ಕತೆ ಮುಗುಸ್ತ ಅವುರೆ.
ಅಂಗಾದ್ರೆ ಗತಿಯೇನ್ಲಾ.
ಗತಿ ಇನ್ನೇನು, ಈಗಾಗ್ಲೆ ಬೆಂಗಳೂರಿಂದ ಕುಬೇರ್ರು ಬಂದು ಜಮೀನ ಹುಡುಕ್ತ ಇದ್ದರಂತೆ. ಇನ್ನುಮುಂದೆ ರೈತರೆಲ್ಲ ಹೋಗಿ ಕೃಷಿ ಕಾರ್ಮಿಕರಾಯ್ತರೆ, ಅಷ್ಟೇಯ.
ಅಯ್ಯೋ ಅವುರ ಮನಿಯಾಳಾಗ ಹೋಗು. ಇವುರ ಸೊಲ್ಲು ಯಾವತ್ತಡಗತದ್ಲ.
- ಬಿ.ಚಂದ್ರೇಗೌಡ