ತಮ್ಮ ಚುನಾವಣಾ ಪ್ರಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿರುವ ಪ್ರಧಾನ ಮಂತ್ರಿ ನರೇಂಧ್ರ ಮೋದಿಯವರಿಗೆ ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದ್ದು, ಕರ್ನಾಟಕದ ಪ್ರಮುಖ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ‘ಬಾಗಲಕೋಟೆ-ಕುಡಚಿ ರೈಲ್ವೆ ಯೋಜನೆಯಲ್ಲಿನ ವಿಳಂಬವನ್ನು ಪ್ರಶ್ನಿಸಿರುವ ಕೈ ಪಕ್ಷವು, ‘ರಾಜ್ಯದ ಮನರೇಗಾ (ಎಂಜಿಎನ್ಆರ್ಇಜಿಎ) ಕಾರ್ಮಿಕರಿಗೆ ಅವರ ವೇತನವನ್ನು ಯಾವಾಗ ಪಾವತಿಸುತ್ತೀರಾ’ ಎಂದು ಪ್ರಶ್ನಿಸಿದೆ.
ಕರ್ನಾಟಕದ ಬಾಗಲಕೋಟೆಯಲ್ಲಿ ನಡೆಯಲಿರುವ ರ್ಯಾಲಿಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
“ಬಾಗಲಕೋಟೆ-ಕುಡಚಿ ರೈಲು ಮಾರ್ಗವನ್ನು ನೀಡಲು ಮೋದಿ ಸರ್ಕಾರ ಏಕೆ ವಿಫಲವಾಗಿದೆ? ಮೋದಿ ಸರ್ಕಾರವು ಭದ್ರಾ ಮೇಲ್ದಂಡೆ ಮತ್ತು ಮಹದಾಯಿ ಯೋಜನೆಗಳನ್ನು ಏಕೆ ತಡೆಹಿಡಿಯುತ್ತಿದೆ? ಕರ್ನಾಟಕದ ಎಂಜಿಎನ್ಆರ್ಇಜಿಎ ಕಾರ್ಮಿಕರಿಗೆ ಪ್ರಧಾನಿ ಮೋದಿ ವೇತನ ಯಾವಾಗ ಪಾವತಿಸುತ್ತಾರೆ” ಎಂದು ರಮೇಶ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.
ನೈಋತ್ಯ ರೈಲ್ವೆಯ ಬಾಗಲಕೋಟೆ-ಕುಡಚಿ ಮಾರ್ಗವು ಈಗ ಎಂಟು ವರ್ಷಗಳಿಗೂ ಹೆಚ್ಚು ವಿಳಂಬವಾಗಿದೆ. ಇಂದಿನವರೆಗೆ ಶೇ.33ರಷ್ಟು ಅಂದರೆ, 142 ಕಿ.ಮೀ ಮಾರ್ಗದಲ್ಲಿ 46 ಕಿ.ಮೀ ಮಾತ್ರ ಕಾಮಗಾರಿ ಪೂರ್ಣಗೊಂಡಿದೆ ಎಂದರು.
ಬಾಗಲಕೋಟೆಗೆ ಇಂದು ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ ಅವರಿಗೆ ಈ ಪ್ರಶ್ನೆಗಳು:
1. ಬಾಗಲಕೋಟೆ – ಕುಡಚಿ ನಡುವಣ ರೈಲ್ವೇ ಮಾರ್ಗ ನೀಡಲು ಮೋದಿ ಸರ್ಕಾರ ವಿಫಲವಾಗಿದ್ದೇಕೆ?
2. ಮಹಾದಾಯಿ ಮತ್ತು ಭದ್ರಾ ಮೇಲ್ದಂಡೆ ಯೋಜನೆಗೆ ಮೋದಿ ಸರ್ಕಾರ ತಡೆ ಹಿಡಿದಿರುವುದೇಕೆ?
3. ಕರ್ನಾಟಕದ ನರೇಗಾ ಕಾರ್ಮಿಕರಿಗೆ ಮೋದಿ ಸರ್ಕಾರ ವೇತನ ನೀಡುವುದು ಯಾವಾಗ?…
— Jairam Ramesh (@Jairam_Ramesh) April 29, 2024
“ಮೂಲತಃ 2010-11 ರಲ್ಲಿ ₹986 ಕೋಟಿ ವೆಚ್ಚದಲ್ಲಿ ಈ ಯೋಜನೆ ಮಂಜೂರು ಮಾಡಲಾಗಿತ್ತು. ಈಗ ಅದರ ವೆಚ್ಚವನ್ನು ₹1,649 ಕೋಟಿ ರೂಪಾಯಿಗಳಿಗೆ ಏರಿಕೆ ಕಂಡಿದೆ. 2016ರ ಮಾರ್ಚ್ನಲ್ಲೇ ಪೂರ್ಣಗೊಳ್ಳಬೇಕಿದ್ದ ಯೋಜನೆಯು 2027 ರಲ್ಲಿ ಪೂರ್ಣಗೊಳ್ಳಲಿದೆ” ಎಂದು ರಮೇಶ್ ಪ್ರತಿಪಾದಿಸಿದರು. .
ಕರ್ನಾಟಕ ಸರ್ಕಾರವು ಯೋಜನೆಗೆ ಭೂಮಿಯನ್ನು ಉಚಿತವಾಗಿ ನೀಡಿದ್ದರೂ ಮತ್ತು ನಿರ್ಮಾಣ ವೆಚ್ಚದ ಶೇಕಡಾ 50 ರಷ್ಟು ಕೊಡುಗೆ ನೀಡಿದ್ದರೂ, ಮೋದಿ ಸರ್ಕಾರವು ಈ ಯೋಜನೆಯನ್ನು ನೀಡಲು “ವಿಫಲವಾಗಿದೆ” ಎಂದು ಅವರು ಹೇಳಿದರು.
“ಈ ಮಹತ್ವದ ರೈಲು ಯೋಜನೆಯು 11 ವರ್ಷಗಳ ವಿಳಂಬವನ್ನು ಏಕೆ ಎದುರಿಸುತ್ತಿದೆ? ಇದಕ್ಕೆ ಮೋದಿ ಸರ್ಕಾರದ ಅದಕ್ಷತೆ ಅಥವಾ ಅದರ ಕರ್ನಾಟಕ ವಿರೋಧಿ ಪ್ರವೃತ್ತಿ ಕಾರಣವೇ?” ಎಂದು ರಮೇಶ್ ಕೇಳಿದ್ದಾರೆ.
ಕಳೆದ ವರ್ಷದ ಕೇಂದ್ರ ಬಜೆಟ್ನಲ್ಲಿ ಮೋದಿ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಅನುದಾನವನ್ನು ಹೆಮ್ಮೆಯಿಂದ ಘೋಷಿಸಿತ್ತು. ಆದರೆ, ಒಂದು ವರ್ಷಕ್ಕಿಂತ ಹೆಚ್ಚು ನಂತರ ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇದರಲ್ಲಿ ಒಂದು ಪೈಸೆಯೂ ಬಂದಿಲ್ಲ್ಲಲ ಎಂದು ಬಹಿರಂಗಪಡಿಸಿದ್ದಾರೆ.
“ತಮ್ಮ ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಮಹದಾಯಿ-ಕಳಸಾ ಬಂಡೂರಿ ನಾಲಾ ಯೋಜನೆಯಲ್ಲಿ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸುವುದಾಗಿ ಹೇಳಿದ್ದರು. ಆದರೆ, ಈ ವರ್ಷದ ಆರಂಭದಲ್ಲಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯವು ಯೋಜನೆಗೆ ಅನುಮತಿಯನ್ನು ಮುಂದೂಡಿದೆ” ಎಂದು ರಮೇಶ್ ಹೇಳಿದರು.
ತೀವ್ರ ಬರಗಾಲದಲ್ಲಿ ತತ್ತರಿಸಿರುವ ರಾಜ್ಯದಲ್ಲಿ ಕುಡಿಯುವ ನೀರು ಮತ್ತು ನೀರಾವರಿ ಪ್ರವೇಶವನ್ನು ವಿಸ್ತರಿಸಲು ಈ ಯೋಜನೆಗಳು ನಿರ್ಣಾಯಕವಾಗಿವೆ. ಈ ಅಗತ್ಯ ಮೂಲಸೌಕರ್ಯ ಯೋಜನೆಗಳನ್ನು ಮೋದಿ ಸರ್ಕಾರ ಏಕೆ ನಿರ್ಲಕ್ಷಿಸಿದೆ ಎಂದು ರಮೇಶ್ ಪ್ರಶ್ನಿಸಿದರು.
“ಪ್ರಧಾನಿ ಕರ್ನಾಟಕದ ಜನರ ವಿರುದ್ಧ ಏನು ಸೇಡು ತೀರಿಸಿಕೊಂಡಿದ್ದಾರೆ?” ಎಂದು ಕಾಂಗ್ರೆಸ್ ಮುಖಂಡರು ಕೇಳಿದ್ದಾರೆ.
ಗ್ರಾಮೀಣ ಆರ್ಥಿಕತೆಯ ಮೇಲಿನ ಬರ-ಸಂಬಂಧಿತ ಒತ್ತಡವನ್ನು ನಿವಾರಿಸಲು ಸಹಾಯ ಮಾಡಲು, ಕರ್ನಾಟಕ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೆಲಸದ ದಿನಗಳ ಸಂಖ್ಯೆಯನ್ನು 100 ರಿಂದ 150 ಕ್ಕೆ ಹೆಚ್ಚಿಸಲು ಪ್ರಯತ್ನಿಸಿದೆ ಎಂದು ಅವರು ಹೇಳಿದರು.
“ಬರಗಾಲದ ಅವಧಿಯಲ್ಲಿ ಹಾಗೆ ಮಾಡಲು ಯೋಜನೆಯಲ್ಲಿ ಅವಕಾಶವಿದೆ. ಆದರೆ, ಮೋದಿ ಸರ್ಕಾರವು ಯೋಜನೆಯ ವಿಸ್ತರಣೆಯನ್ನು ಅನುಮೋದಿಸುವಲ್ಲಿ ವಿಫಲವಾಗಿದೆ. ಅದು ಅವರಿಗೆ ವೇತನ ಪಾವತಿಗೆ ₹1600 ಕೋಟಿ ಬಿಡುಗಡೆ ಮಾಡಲು ವಿಫಲವಾಗಿದೆ” ಎಂದು ರಮೇಶ್ ಹೇಳಿದರು.
‘ಕರ್ನಾಟಕದ ಎಂಜಿಎನ್ಆರ್ಇಜಿಎಸ್ ಕಾರ್ಮಿಕರಿಗೆ ಮೋದಿ ಸರ್ಕಾರ ಯಾವಾಗ ವೇತನ ನೀಡಲಿದೆ’ ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ; ಗೋಬೆಲ್ಸ್ನಿಂದ ಸ್ಫೂರ್ತಿ ಪಡೆದು ಕಾಂಗ್ರೆಸ್ ‘ನ್ಯಾಯ ಪತ್ರ’ ಟೀಕಿಸುತ್ತಿರುವ ಪ್ರಧಾನಿ: ಜೈರಾಮ್ ರಮೇಶ್