ವಿರೋಧ ಪಕ್ಷದ ನಾಯಕನೇ ಇಲ್ಲದೆ ವಿಧಾನಮಂಡದ ಜಂಟಿ ಅಧಿವೇಶನ ಎರಡು ದಿನ ಕಳೆಯಿತು. ಈವರೆಗೂ ನಾಯಕನನ್ನು ನೇಮಕ ಮಾಡಲು ಬಿಜೆಪಿ ಪಕ್ಷಕ್ಕೆ ಸಾಧ್ಯವಾಗದಿರುವುದಕ್ಕೆ ಕಾಂಗ್ರೆಸ್ ಟೀಕಾಪ್ರಹಾರ ಮುಂದುವರೆಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಘಟಕ, ”ಬಿಜೆಪಿಗರು ವಿರೋಧ ಪಕ್ಷದ ನಾಯಕನನ್ನು ಹುಡುಕುವ ಬದಲು ಪಕ್ಷದಲ್ಲಿ ತಮ್ಮ ವಿರೋಧಿ ನಾಯಕನನ್ನು ಹುಡುಕುತ್ತಿದ್ದಾರೆ” ಎಂದು ಕಾಲೆಳೆದಿದೆ.
”ಸದನ ಕಲಾಪದ 2ನೇ ದಿನವೂ ವಿರೋಧ ಪಕ್ಷದ ನಾಯಕನಿಲ್ಲ. ಎಲ್ಲಿ ಹೋದರು ಉಸ್ತುವಾರಿ ಅರುಣ್ ಸಿಂಗ್? ಎಲ್ಲಿ ಹೋದರು ಜೆ ಪಿ ನಡ್ಡಾ? ಎಲ್ಲಿ ಹೋದರು ಅಮಿತ್ ಶಾ? ಚುನಾವಣೆಗೆ ಕರ್ನಾಟಕದಲ್ಲೇ ಬಿಡಾರ ಹೂಡಿದ್ದ ಬಿಜೆಪಿ ನಾಯಕರು ಈಗ ರಾಜ್ಯ ಬಿಜೆಪಿಗರನ್ನು ಕ್ಯಾರೆ ಎನ್ನುತ್ತಿಲ್ಲವೇ?” ಎಂದು ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ವಿರೋಧ ಪಕ್ಷದ ನಾಯಕನನ್ನು ಹುಡುಕುವ ಬದಲು ಪಕ್ಷದಲ್ಲಿ ತಮ್ಮ ವಿರೋಧಿ ನಾಯಕನನ್ನು ಹುಡುಕುತ್ತಿದ್ದಾರೆ ಬಿಜೆಪಿಗರು!
ಸದನ ಕಲಾಪದ 2ನೇ ದಿನವೂ ವಿರೋಧ ಪಕ್ಷದ ನಾಯಕನಿಲ್ಲ.
ಎಲ್ಲಿ ಹೋದರು ಉಸ್ತುವಾರಿ ಅರುಣ್ ಸಿಂಗ್?
ಎಲ್ಲಿ ಹೋದರು ಜೆ ಪಿ ನಡ್ಡಾ?
ಎಲ್ಲಿ ಹೋದರು ಅಮಿತ್ ಶಾ?ಚುನಾವಣೆಗೆ ಕರ್ನಾಟಕದಲ್ಲೇ ಬಿಡಾರ ಹೂಡಿದ್ದ ಬಿಜೆಪಿ ನಾಯಕರು ಈಗ… pic.twitter.com/EH04Qu083r
— Karnataka Congress (@INCKarnataka) July 4, 2023
ಸೋಮವಾರದಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯ ಪಾಲರು ಭಾಷಣ ಮಾಡಿದರು. ಎರಡನೇ ದಿನದ ಕಲಾಪವೂ ಮಂಗಳವಾರ ಮುಗಿದಿದೆ ಆದರೆ ಈವರೆಗೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿಗೆ ಸಾಧ್ಯವಾಗಿಲ್ಲ. ಇದು ಪಕ್ಷಕ್ಕೆ ತೀವ್ರ ಇರಿಸುಮುರಿಸು ಉಂಟುಮಾಡಿದ್ದು, ಅಧಿವೇಶದನದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಬೇಕಾದ ಬಿಜೆಪಿಯೇ ಈಗ ಸಂಕಷ್ಟಕ್ಕೆ ಸಿಲುಕಿದೆ.
ಕಲಾಪ ಆರಂಭ ಆಗುವ ಮುನ್ನವೇ ವಿಪಕ್ಷ ನಾಯಕನ ಹೆಸರು ಅಂತಿಮ ಆಗಲಿದೆ ಎಂದು ಬಿಜೆಪಿ ಟ್ವೀಟ್ ಮಾಡಿತ್ತು. ಇತ್ತ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಹೋಗಿಬಂದಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ನಿಗದಿಯಾಗಿದ್ದ ಸಭೆ ನಡೆಯಲೇ ಇಲ್ಲ. ಹೀಗಾಗಿ ವಿಪಕ್ಷ ನಾಯಕನ ಆಯ್ಕೆ ನೆನೆಗುದಿಗೆ ಬಿದ್ದಿದೆ. ಇಷ್ಟೇ ಅಲ್ಲ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಕಾಂಗ್ರೆಸ್, ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಅಟ್ಯಾಕ್ ಮಾಡಿದೆ.
”ಬಿಜೆಪಿಯ 66 ಶಾಸಕರಲ್ಲಿ ವಿಪಕ್ಷ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು. ಕರ್ನಾಟಕದ ಇತಿಹಾಸದಲ್ಲಿ ವಿಪಕ್ಷ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು. ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನ ಗೌರವಿಸಲಿಲ್ಲ. ಈಗ ವಿಪಕ್ಷ ಸ್ಥಾನದಲ್ಲಿದ್ದಾಗಲೂ ಗೌರವಿಸುತ್ತಿಲ್ಲ” ಎಂದು ಕಿಡಿಕಾರಿದೆ.
ಇದನ್ನೂ ಓದಿ: ವಿಪಕ್ಷ ನಾಯಕನ ಆಯ್ಕೆ ವಿಳಂಬ: ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕಾದ ಬಿಜೆಪಿಯೇ ಸಂಕಷ್ಟದಲ್ಲಿ…