ಮಣಿಪುರದ ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಸಾಮೂಹಿಕ ಅತ್ಯಾಚಾರ ವಿಡಿಯೋ ಕುರಿತು ನನ್ನ ಹೃದಯವು ನೋವು ಮತ್ತು ಕೋಪದಿಂದ ತುಂಬಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಕುರಿತು ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿಯವರು 8 ನಿಮಿಷ 25 ಸೆಕೆಂಡ್ ಭಾಷಣ ಮಾಡಿದ್ದು ಅದರಲ್ಲಿ ಮಣಿಪುರದ ಬಗ್ಗೆ ಕೇವಲ 36 ಸೆಕೆಂಡ್ ಮಾತನಾಡಿದ್ದಾರೆ. ಮಾತ್ರವಲ್ಲದೇ ಅದರೊಟ್ಟಿಗೆ ರಾಜಸ್ಥಾನ ಮತ್ತು ಚತ್ತೀಸ್ಘಡ ರಾಜ್ಯಗಳನ್ನು ಉಲ್ಲೇಖಿಸಿದ್ದು ಏಕೆ? ಮಣಿಪುರದಲ್ಲಿ ಯಾರ ಸರ್ಕಾರವಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನಾಠೆ ಪ್ರಶ್ನಿಸಿದ್ದಾರೆ.
ಮಣಿಪುರದ ವಿಡಿಯೋ ನೋಡಿ ನನಗೆ ನೋವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ವಿಡಿಯೋ 140 ಕೋಟಿ ಭಾರತೀಯರನ್ನು ಘಾಸಿಗೊಳಿಸಿದೆ ಎಂದು ಹೇಳಿದ್ದೀರಿ. ತದನಂತರ ನೀವು ಮಣಿಪುರದ ವಿಷಯಕ್ಕೆ ಕೇವಲ 36 ಸೆಕೆಂಡುಗಳನ್ನು ಮೀಸಲಿಟ್ಟಿದ್ದೀರಾ? ಛತ್ತೀಸ್ಗಢ ಮತ್ತು ರಾಜಸ್ಥಾನದ ಬಗ್ಗೆಯೂ ಅವಹೇಳನಕಾರಿಯಾಗಿ ಮಾತನಾಡಿದ್ದೀರಿ. ಇದಕ್ಕೆ ನಿಮ್ಮ ಸರ್ಕಾರವೇ ಹೊಣೆ. ನೀವು ಈ ಹಿಂದೆಯೇ ಮಣಿಪುರದ ಬಗ್ಗೆ ಮಾತನಾಡಿದ್ದರೆ, 77 ದಿನಗಳ ಹಳೆಯ ವೀಡಿಯೊವನ್ನು ನೋಡಿ ರಾಷ್ಟ್ರವು ಸ್ತಬ್ಧವಾಗಬೇಕಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ನಿಮ್ಮ ಹೃದಯವು ನೋವು ಮತ್ತು ಕೋಪದಿಂದ ತುಂಬಿದೆಯೇ? ನಿಮಗೆ ಪೊಲೀಸ್ ಬಲ ಇದೆ, ನಿಮಗೆ ತನಿಖಾ ಏಜೆನ್ಸಿಗಳಿವೆ. ಆದರೂ ಹಿಂಸಾಚಾರ ನಿಗ್ರಹಿಸಲಿಲ್ಲ. ನೀವು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರನ್ನು ಏಕೆ ವಜಾ ಮಾಡುತ್ತಿಲ್ಲ? ಘಟನೆ ನಡೆದು ಎರಡೂವರೆ ತಿಂಗಳಾಗಿದೆ. ವೀಡಿಯೊ ವೈರಲ್ ಆದ ನಂತರ ಮೊದಲ ಬಂಧನ ಮಾಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಆ ವೀಡಿಯೊವನ್ನು ನೋಡುತ್ತಿರುವಾಗ, ಪ್ರತಿಯೊಬ್ಬ ಮಹಿಳೆ ಬೆದರಿಕೆಗೆ ಒಳಗಾಗುತ್ತಿದ್ದಾಳೆ” ಎಂದು ಶ್ರೀನಾಠೆ ಹೇಳಿದ್ದಾರೆ.
प्रधानमंत्री मोदी सत्र शुरू होने से पहले 8 मिनट 25 सेकंड बोले – और उनके पास मणिपुर के लिए सिर्फ़ 36 सेकंड थे? मणिपुर पर बोलने के बजाय आप राजस्थान और छत्तीसगढ़ पर ताने देने लगे?
घटना 77 दिन पुरानी है और आपको वाक़ई में अब पता चल रहा है इसके बारे में?
सच तो ये है कि इस हैवानियत… pic.twitter.com/h2MoVuWSln
— Supriya Shrinate (@SupriyaShrinate) July 20, 2023
1800 ಗಂಟೆಗಳಿಗೂ ಹೆಚ್ಚು ಕಾಲ ಗ್ರಹಿಸಲಾಗದ ಮತ್ತು ಕ್ಷಮಿಸಲಾಗದ ಮೌನದ ನಂತರ, ಪ್ರಧಾನಮಂತ್ರಿ ಅಂತಿಮವಾಗಿ ಒಟ್ಟು 30 ಸೆಕೆಂಡುಗಳ ಕಾಲ ಮಣಿಪುರದ ಕುರಿತು ಮಾತನಾಡಿದರು. ಅದರ ನಂತರ, ಇತರ ರಾಜ್ಯಗಳಲ್ಲಿನ ವಿಶೇಷವಾಗಿ ಪ್ರತಿಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿನ ಮಹಿಳೆಯರ ಮೇಲಿನ ಅಪರಾಧಗಳನ್ನು ಸಮೀಕರಿಸುವ ಮೂಲಕ ಮಣಿಪುರದ ಬೃಹತ್ ಆಡಳಿತ ವೈಫಲ್ಯಗಳು ಮತ್ತು ಮಾನವೀಯ ದುರಂತದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಮಂತ್ರಿ ಪ್ರಯತ್ನಿಸಿದರು. ಯುಪಿ ಮತ್ತು ಗುಜರಾತ್ನಂತಹ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿರ್ಲಕ್ಷಿಸಿದರು ಎಂದು ಕಾಂಗ್ರೆಸ್ ಮಾಧ್ಯಮ ಸಂಚಾಲಕ ಜೈರಾಂ ರಮೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಷ್ಟೇ ಟೀಕೆಗಳು ಬಂದರೂ ಮೌನಹಿಸಿದ್ದ ಪ್ರಧಾನಿ ಮೋದಿಯವರು 77 ದಿನಗಳ ನಂತರ ಮೌನ ಮುರಿದಿದ್ದು, “ಈ ಘಟನೆಗಳಿಂದ ನನ್ನ ಹೃದಯವು ನೋವು ಮತ್ತು ಕೋಪದಿಂದ ತುಂಬಿದೆ. ಮಣಿಪುರದ ಘಟನೆಯು ಮುನ್ನೆಲೆಗೆ ಬಂದಿರುವುದು ಯಾವುದೇ ನಾಗರಿಕತೆಗೆ ನಾಚಿಕೆಗೇಡಿನ ಸಂಗತಿಯಾಗಿದೆ. ದೇಶ ನಾಚಿಕೆಪಡುವಂತಾಗಿದೆ. ಅಪರಾಧದ ವಿರುದ್ಧ ವಿಶೇಷವಾಗಿ ಮಹಿಳೆಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನುಗಳನ್ನು ಬಲಪಡಿಸುವಂತೆ ನಾನು ಎಲ್ಲ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಘಟನೆಯು ರಾಜಸ್ಥಾನ, ಛತ್ತೀಸ್ಗಢ ಅಥವಾ ಮಣಿಪುರದಿಂದ ಆಗಿರಬಹುದು, ಅಪರಾಧಿ ದೇಶದ ಯಾವುದೇ ಮೂಲೆಯಲ್ಲಿ ಇದ್ದರೂ ಶಿಕ್ಷೆಯಿಂದ ಮುಕ್ತವಾಗಬಾರದು” ಎಂದು ಪ್ರಧಾನಿ ಮೋದಿ ಹೇಳಿದ್ದರು.
ಇದನ್ನೂ ಓದಿ: 77 ದಿನಗಳ ನಂತರ ಮಣಿಪುರದ ಹಿಂಸಾಚಾರದ ಕುರಿತು ಮೌನ ಮುರಿದ ಪ್ರಧಾನಿ ಮೋದಿ