ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಕರೆ ನೀಡಿದ್ದ ಭಾರತ್ ಬಂದ್ಗೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗೆ ರೈತ ಸಂಘಗಳು, ರಾಜಕೀಯ ಪಕ್ಷಗಳು, ಕಾರ್ಮಿಕ ಸಂಘಟನೆಗಳು ಯಾವುದೇ ಭೇದವಿಲ್ಲದೇ ರೈತರಿಗಾಗಿ ಬೀದಿಗಿಳಿದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕರಾಳ ಕಾನೂನುಗಳ ವಿರುದ್ದ ಹೋರಾಟ ನಡೆಸುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸಿರುವ ದೌರ್ಜನ್ಯ ವಿರೋಧಿಸಿ ’ಐಕ್ಯ ಹೋರಾಟ’ ವೇದಿಕೆಯ ರಾಜ್ಯವ್ಯಾಪಿ ಜನಾಂದೋಲನ ಹಾಗೂ ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆಯ ಬಳಿ ನಿನ್ನೆಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದೆ. ಇಂದು ಕೂಡ ನೂರಾರು ಮಂದಿ ಭಾಗವಹಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ಇತ್ತ ಮೌರ್ಯ ಸರ್ಕಲ್ ಬಳಿಯೇ ಒಂದೆಡೆ ಕಾಂಗ್ರೆಸ್ ಕಾರ್ಯಕರ್ತರು, ಮತ್ತೊಂದೆಡೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮಧ್ಯೆ ಟ್ರ್ಯಾಕ್ಟರ್ ನಿಲ್ಲಿಸಿ, ಕೇಂದ್ರ ಸರ್ಕಾರದ ವಿರುದ್ಧ ಮತ್ತು ನರೇಂದ್ರ ಮೋದಿ ತೊಲಗಲಿ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತ ಇದ್ರೇನೆ ದೇಶ: ರೈತ ಹೋರಾಟಕ್ಕೆ ನಟ ಶಿವರಾಜ್ಕುಮಾರ್ ಬೆಂಬಲ
ರೈತರು ಕರೆಕೊಟ್ಟ ಭಾರತ್ ಬಂದ್ಗೆ ಆಮ್ ಆದ್ಮಿ ಪಕ್ಷ ಕೂಡ ಬೆಂಬಲ ವ್ಯಕ್ತಪಡಿಸಿ, ಮೋಹನ್ ದಾಸರಿ, ವಿಜಯ್ ಶರ್ಮಾ ಮುಂತಾದ ರಾಜ್ಯ ಆಪ್ ನಾಯಕರು ಮೌರ್ಯ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದರು.
ಇನ್ನೂ ಟೌನ್ ಹಾಲ್ ಸರ್ಕಲ್ನಲ್ಲಿ ಹಲವಾರು ಸಂಘ ಸಂಸ್ಥೆಗಳು ಭಾರಿ ಪ್ರತಿಭಟನೆ ನಡೆಸಿದವು. ಸಿಐಟಿಯು, ಕಾಂಗ್ರೆಸ್, ರೈತ ಸಂಘಟನೆಗಳು, ಡಿಎಸ್ಪಿ, ಯೂತ್ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಕವಿಸೇ, ದಲಿತ್ ಟೈಗರ್ಸ್ ಸಮಿತಿ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಕೃಷಿ ಮಸೂದೆಗಳನ್ನು ವಾಪಸ್ ಪಡೆಯಲು ಒತ್ತಾಯಿಸಿದವು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಮಾತನಾಡಿ, “ರೈತರು ಸರ್ಕಾರ ನೀಡಿದ ಆಹಾರವನ್ನು ತೆಗೆದುಕೊಳ್ಳಲಿಲ್ಲ ಇಂತಹ ಸಂದರ್ಭದಲ್ಲಿ ರೈತರ ಸ್ವಾಭಿಮಾನ ಎಷ್ಟು ಎಂದು ಯೋಚಿಸಿ, ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ, ಅದರ ಸಾಧಕ ಬಾಧಕಗಳ ಕುರಿತು ಚರ್ಚೆಯಾಗಲಿ. ದೇಶದಲ್ಲಿ ರೈತರು, ಸಣ್ಣ ಹಿಡುವಳಿದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರೈತರನ್ನು ಕೂಲಿ ಕೆಲಸಕಾರರನ್ನಾಗಿ ಮಾಡುವ ಹುನ್ನಾರ ಕಾನೂನುಗಳ ಹಿಂದಿದೆ. ಈ ನಿಟ್ಟಿನಲ್ಲಿ ಕಾಯ್ದೆಯನ್ನು ವಾಪಸ್ ತೆಗೆದುಕೊಳ್ಳಬೇಕು, ವಿರೋಧ ಪಕ್ಷಗಳು ಸದನ ಬಹಿಷ್ಕಾರ ಮಾಡಬೇಕು “ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಿರೋಧ ಪಕ್ಷಗಳು ಸಹ ಇದೇ ಕೃಷಿ ಕಾನೂನು ತರಬಯಸಿದ್ದವು, ಈಗ ವಿರೋಧಿಸುವುದು ಅವರ ಇಬ್ಬಂದಿತನ
ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷಿ ಮಾತನಾಡಿ, ’ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳು ಅಪಾಯಕಾರಿ. ರೈತರ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ನಾವು ಹಿಂಸಾ ಮಾರ್ಗವನ್ನು ತುಳಿದರೆ ಬಂದ್ ಮಾಡುವುದು ಕಷ್ಟವಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ.
ಮೌರ್ಯ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಐಕ್ಯ ಹೋರಾಟ ಸಮಿತಿಯ ಕುರುಬೂರು ಶಾಂತಕುಮಾರ್ ಹಾಗೂ ಬಡಗಲಪುರ ನಾಗೇಂದ್ರ ಮತ್ತು ಬೆಂಬಲಿಗರು ಟೌನ್ ಹಾಲ್ ಕಡೆ ಮೆರವಣಿಗೆ ಹೊರಟಿದ್ದರು. ಅಲ್ಲಿಗೆ ಹೋಗದಂತೆ ಪೊಲೀಸರು ತಡೆಹಿಡಿದ ನಂತರ ಮೈಸೂರು ಬ್ಯಾಂಕ್ ಸರ್ಕಲ್ ಕಡೆಗೆ ಮೆರವಣಿಗೆ ಹೊರಟಿತು.
ಬ್ಯಾರಿಕೇಡ್ ಹಾರಿ ಟೌನ್ ಹಾಲ್ ಕಡೆಗೆ ಹೋಗಲು ಪ್ರಯತ್ನಿಸಿದ ರೈತರನ್ನು ತಡೆದ ಪೊಲೀಸರು. ಪೊಲೀಸರು ಹಾಗೂ ರೈತರ ನಟುವೆ ಮಾತಿನ ಜಟಾಪಟಿ ನಡೆದು, ರಸ್ತೆ ಮೇಲೆ ಉರುಳಿ ಆಕ್ರೋಶ ಹೊರ ಹಾಕಿದ ಪ್ರತಿಭಟನಾಕಾರರು. ಪ್ರತಿಭಟನಾಕಾರರನ್ನು ನಿಯಂತ್ರಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಹೋರಾಟನಿರತ ರೈತರಿಂದ ಪ್ರಧಾನಿಗೆ ಪತ್ರ; ಅಷ್ಟಕ್ಕೂ ಅವರ ಹಕ್ಕೊತ್ತಾಯಗಳೇನು?
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷದ ಮುಖಂಡರು,ಶಾಸಕರು ವಿಧಾನಸೌಧದ ಆವರಣದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಡಾ. ಜಿ. ಪರಮೇಶ್ವರ, ಎಸ್.ಆರ್. ಪಾಟೀಲ್, ಬಿ.ಕೆ. ಹರಿಪ್ರಸಾದ್, ಕೆ.ಜೆ. ಜಾರ್ಜ್, ರಾಮಲಿಂಗಾರೆಡ್ಡಿ ಮತ್ತಿತರರು ಭಾಗವಹಿಸಿದ್ದರು.
ಕೈಗೆ ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದರು.