ಕಳೆದ ಒಂದು ತಿಂಗಳಿನಿಂದ ಮಣಿಪುರ ರಾಜ್ಯ ಅಕ್ಷರಶಃ ಹೊತ್ತಿಯುರಿಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಮೌನವಾಗಿರುವುದನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನೆ ಮಾಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ”ಮಣಿಪುರವು ಕಳೆದ ಏಳು ವಾರಗಳಿಂದ ತೀವ್ರ ಮತ್ತು ಅಗಾಧ ವಿಪತ್ತನ್ನು ಅನುಭವಿಸುತ್ತಿದೆ. ಅಲ್ಲಿ ಯಾವುದೇ ಸುಧಾರಣೆಯ ಲಕ್ಷಣಗಳು ಕಾಣಿಸುತ್ತಿಲ್ಲ. ದುರಂತ ಸಂಭವಿಸಿದ ಒಂದು ತಿಂಗಳ ನಂತರ ಗೃಹ ಸಚಿವರ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಗೃಹ ಸಚಿವರು ಒಂದು ತಿಂಗಳ ನಂತರ ವಿಳಂಬವಾದರೂ ಭೇಟಿ ನೀಡಿದ್ದಾರೆ. ಅವರ ಸಣ್ಣ ಕರುಣೆಗೆ ರಾಷ್ಟ್ರವು ಕೃತಜ್ಞರಾಗಿರಬೇಕು.”
There appears to be no letting up in the enormous disaster that has engulfed Manipur for the past seven weeks. The Home Minister visited belatedly after a month and the nation must be thankful for small mercies.
But why is the Prime Minister still silent? Why doesnt he visit…
— Jairam Ramesh (@Jairam_Ramesh) June 7, 2023
”ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಇನ್ನೂ ಮೌನವಾಗಿರುವುದೇಕೆ? ಅವರು ಏಕೆ ರಾಜ್ಯಕ್ಕೆ ಭೇಟಿ ನೀಡಿಲ್ಲ ಮತ್ತು ಸಮುದಾಯಗಳ ನಡುವೆ ಸೌಹಾರ್ದತೆ ಕಾಪಾಡಿಕೊಳ್ಳುವಂತೆ ಜನರಲ್ಲಿ ಏಕೆ ಮನವಿ ಮಾಡುತ್ತಿಲ್ಲ? ಮಣಿಪುರಕ್ಕೆ ಸರ್ವಪಕ್ಷ ನಿಯೋಗ ತೆರಳಲು ಅವರು ಏಕೆ ಪ್ರೋತ್ಸಾಹಿಸಬಾರದು?” ಎಂದು ಕೇಳಿದ್ದಾರೆ.
ಬಿಜೆಪಿ ನೇತೃತ್ವದ ಆಡಳಿತಾರೂಢ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ವಾಗ್ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ.
ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ ತಡೆಯಲು ಅಮಿತ್ ಶಾ ಮನೆ ಎದುರು ಕುಕಿ ಬುಡಕಟ್ಟು ಮಹಿಳೆಯರಿಂದ ಪ್ರತಿಭಟನೆ
ಮಣಿಪುರದಲ್ಲಿ ಭೀಕರ ಹಿಂಸಾಚಾರ ಭುಗಿಲೆದ್ದ 15 ದಿನಗಳ ನಂತರ ಮತ್ತು ಇನ್ನೂ ಐದು ದಿನಗಳವರೆಗೆ ಇಂಟರ್ನೆಟ್ ಅನ್ನು ಮತ್ತೆ ಸ್ಥಗಿತಗೊಳಿಸಿದ ನಂತರ, ರಾಜ್ಯದಲ್ಲಿ ಶಾಂತಿಗಾಗಿ ಕರೆ ನೀಡುವ ಯಾವುದೇ ಸಂದೇಶವನ್ನು ನೀಡಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ ಎಂದು ಈ ಹಿಂದೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರತಿಪಾದಿಸಿದರು.
ಈ ಮಧ್ಯೆ ಗೃಹ ವ್ಯವಹಾರಗಳ ಸಚಿವಾಲಯವು ಘಟನೆಗಳ ತನಿಖೆಗಾಗಿ ತನಿಖಾ ಆಯೋಗವನ್ನು ನೇಮಿಸಿದೆ. ಬಿಕ್ಕಟ್ಟಿನ ಹಿಂದಿನ ಕಾರಣಗಳು ಮತ್ತು ಅಂಶಗಳನ್ನು ಪರಿಶೀಲಿಸಲು ಮಣಿಪುರ ಸರ್ಕಾರವು 1952ರ ವಿಚಾರಣಾ ಆಯೋಗಗಳ ಅಡಿಯಲ್ಲಿ ನ್ಯಾಯಾಂಗ ವಿಚಾರಣಾ ಆಯೋಗವನ್ನು ಸ್ಥಾಪಿಸಲು ಶಿಫಾರಸು ಮಾಡಿತ್ತು.
ವಿಶೇಷ ಸದಸ್ಯರನ್ನು ಒಳಗೊಂಡ ತನಿಖಾ ಆಯೋಗವು ಮಣಿಪುರದಲ್ಲಿ ನಡೆದ ಹಿಂಸಾಚಾರದ ಘಟನೆಗಳನ್ನು ಕೂಲಂಕಷವಾಗಿ ಪರಿಶೀಲಿಸು ಮುಂದಾಗಿದೆ. ಈ ಹಿಂಸಾಚಾರಕ್ಕೆ ಮೂಲ ಕಾರಣವಾದದ್ದು ಏನು ಎಂಬ ಬಗ್ಗೆ ಬೆಳಕು ಚೆಲ್ಲುತ್ತಿದೆ. ಈ ಆಯೋಗದಲ್ಲಿ ನ್ಯಾಯಮೂರ್ತಿ ಅಜಯ್ ಲಂಬಾ, ಗೌಹಾಟಿ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ, ಹಿಮಾಂಶು ಶೇಖರ್ ದಾಸ್ (ಐಎಎಸ್ ನಿವೃತ್ತ), ಮತ್ತು ಅಲೋಕ ಪ್ರಭಾಕರ್ (ಐಪಿಎಸ್ ನಿವೃತ್ತ) ಇದ್ದಾರೆ.
ಈ ಆಯೋಗವು ತನ್ನ ಮೊದಲ ಸಭೆಯ ದಿನಾಂಕದಿಂದ ಆರು ತಿಂಗಳೊಳಗೆ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ. ಆದಾಗ್ಯೂ, ಇದು ನಿಗದಿತ ಗಡುವಿನ ಮೊದಲು ಯಾವುದೇ ಸಂಬಂಧಿತ ವಿಷಯಗಳ ಕುರಿತು ಮಧ್ಯಂತರ ವರದಿಗಳನ್ನು ಒದಗಿಸಬಹುದಾಗಿದೆ.