ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ, ಬಿಜೆಪಿಯ ಸಂಸದರೂ ಆಗಿರುವ ಬ್ರಿಜ್ಭೂಷಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು ಸೇರಿದಂತೆ, ರೈತ ಸಂಘಟನೆಗಳು ರಾಜಕೀಯ ಮುಖಂಡರು ಕಳೆದ ಒಂದು ತಿಂಗಳಿಗಿಂತ ಹೆಚ್ಚು ದಿನಗಳ ಕಾಲ ಪ್ರತಿಭಟನೆ ನಡೆಸುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಈ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲು ಜೂನ್ 15 ರವರೆಗೆ ಸಮಯ ಕೇಳಿದೆ, ಆದರೆ ಕುಸ್ತಿಪಟುಗಳ ಪ್ರತಿಭಟನೆ ಇನ್ನೂ ಮುಗಿದಿಲ್ಲ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಬುಧವಾರ ಹೇಳಿದ್ದಾರೆ.
ಬುಧವಾರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರನ್ನು ಸಹ ಕುಸ್ತಿಪಟುಗಳು ಭೇಟಿ ಮಾಡಿದ ಬಳಿಕ ಸಾಕ್ಷಿ ಮಲಿಕ್ ಮಾತನಾಡಿದ್ದು, ”ಜೂನ್ 15 ರೊಳಗೆ ಪೊಲೀಸರು ತನಿಖೆಯನ್ನು ಪೂರ್ಣಗೊಳಿಸುವವರೆಗೆ ನಮ್ಮ ಪ್ರತಿಭಟನೆಯನ್ನು ಅಮಾನತುಗೊಳಿಸುವಂತೆ ನಮಗೆ ಕೇಳಲಾಗಿದೆ” ಎಂದು ಹೇಳಿದರು.
ಮತ್ತೋರ್ವ ಕುಸ್ತಿಪಟು ಬಜರಂಗ್ ಪುನಿಯಾ ಮಾತನಾಡಿ, ”ನಾವು ಕೆಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಜೂನ್ 15 ರೊಳಗೆ ಪೊಲೀಸ್ ತನಿಖೆಯನ್ನು ಪೂರ್ಣಗೊಳಿಸಬೇಕು ಮತ್ತು ಅಲ್ಲಿಯವರೆಗೆ ಪ್ರತಿಭಟನೆ ನಡೆಸದಂತೆ ಸಚಿವರು ನಮಗೆ ಮನವಿ ಮಾಡಿದ್ದಾರೆ. ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ನೋಡಿಕೊಳ್ಳಲಾಗುವುದು” ಎಂದು ಅವರು ಹೇಳಿದರು.
”ಕುಸ್ತಿಪಟುಗಳ ವಿರುದ್ಧದ ಎಲ್ಲಾ ಎಫ್ಐಆರ್ಗಳನ್ನು ಹಿಂಪಡೆಯಬೇಕು ಎಂದು ನಾವು ಮನವಿ ಮಾಡಿದ್ದೇವೆ ಮತ್ತು ಅವರು ಅದಕ್ಕೆ ಒಪ್ಪಿದ್ದಾರೆ. ಜೂನ್ 15 ರೊಳಗೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ನಾವು ನಮ್ಮ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ” ಎಂದು ಪುನಿಯಾ ಹೇಳಿದರು.
ಮತ್ತೊಂದೆಡೆ ಸಭೆ ಬಳಿಕ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅನುರಾಗ್ ಠಾಕೂರ್ ”ನಾನು ಕುಸ್ತಿಪಟುಗಳೊಂದಿಗೆ ಸುದೀರ್ಘ 6 ಗಂಟೆಗಳ ಕಾಲ ಚರ್ಚಿಸಿದ್ದೇನೆ. ಜೂನ್ 15 ರೊಳಗೆ ತನಿಖೆಯನ್ನು ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಲಾಗುವುದು ಎಂದು ನಾವು ಕುಸ್ತಿಪಟುಗಳಿಗೆ ಭರವಸೆ ನೀಡಿದ್ದೇವೆ. ಜೂನ್ 30 ರೊಳಗೆ WFI ಚುನಾವಣೆ ನಡೆಯಲಿದೆ” ಎಂದು ತಿಳಿಸಿದರು.
”ಕುಸ್ತಿ ಫೆಡರೇಶನ್ನ ಆಂತರಿಕ ದೂರು ಸಮಿತಿಯನ್ನು ಮಹಿಳೆಯ ನೇತೃತ್ವದಲ್ಲಿ ರಚಿಸಲಾಗುವುದು. ಕುಸ್ತಿಪಟುಗಳ ವಿರುದ್ಧದ ಎಲ್ಲ ಎಫ್ಐಆರ್ಗಳನ್ನು ಹಿಂಪಡೆಯಬೇಕು. 3 ಅವಧಿ ಪೂರೈಸಿರುವ ಬ್ರಿಜ್ ಭೂಷಣ್ ಸಿಂಗ್ ಮತ್ತು ಅವರ ಸಹಚರರನ್ನು ಮರು ಆಯ್ಕೆ ಮಾಡಬಾರದು ಎಂದು ಕುಸ್ತಿಪಟುಗಳು ವಿನಂತಿಸಿದ್ದಾರೆ. ಜೂನ್ 15 ರ ಮೊದಲು ಕುಸ್ತಿಪಟುಗಳು ಯಾವುದೇ ಪ್ರತಿಭಟನೆ ನಡೆಸುವುದಿಲ್ಲ” ಎಂದು ಸಚಿವರು ಹೇಳಿದರು.
ಕುಸ್ತಿಪಟುಗಳು ಶನಿವಾರ ರಾತ್ರಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಬುಧವಾರ ಠಾಕೂರ್ ಅವರೊಂದಿಗಿನ ಸಭೆ ನಡೆಸಿದರು.
ಶನಿವಾರ ತಡ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿದ ಬಳಿಕ ಕ್ರೀಡಾಪಟುಗಳು ಮಾಧ್ಯಮದವರೊಂದಿಗೆ ಯಾವುದೇ ಮಾತುಗಳನ್ನಾಡಲಿಲ್ಲ. ಸೋಮವಾರ ಪ್ರತಿಭಟನಾ ನಿರತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಭಾರತೀಯ ರೈಲ್ವೇಯಲ್ಲಿ ತಮ್ಮ OSD ಸೇವೆಗಳನ್ನು ಪುನರಾರಂಭಿಸಿದರು. ಇದು ಹಲವು ಊಹಾಪೋಹಗಳಿಗೆ ಕಾರಣವಾಯಿತು. ಸರ್ಕಾರದೊಂದಿಗೆ ಕ್ರೀಡಾಪಟುಗಳೊಂದಿಗೆ ಡೀಲ್ ಮಾಡಿಕೊಂಡಿದ್ದಾರೆ ಎನ್ನುವ ಮಾಧ್ಯಮವರದಿಗಳು ಪ್ರಸಾರಗೊಂಡವು.
ಇದನ್ನೂ ಓದಿ: ಕ್ರೀಡಾ ಸಚಿವ ಠಾಕೂರ್ ಎದುರು ಮಹಿಳಾ ಮುಖ್ಯಸ್ಥರ ನೇಮಕ ಸೇರಿದಂತೆ ಐದು ಬೇಡಿಕೆಗಳನ್ನಿಟ್ಟ ಕುಸ್ತಿಪಟುಗಳು
ಮಂಗಳವಾರ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಕುಸ್ತಿಪಟು ಬಜರಂಗ್ ಪುನಿಯಾ ಅವರು ಎಲ್ಲ ಊಹಾಪೋಹಳಿಗೆ ತೆರೆ ಎಳೆದಿದ್ದಾರೆ. ”ಅಮಿತ್ ಶಾ ಅವರೊಂದಿಗೆ ಕುಸ್ತಿಪಟುಗಳು ಯಾವುದೇ ಹೊಂದಾಣಿಕೆ ಅಥವಾ ಡೀಲ್ ಮಾಡಿಕೊಂಡಿಲ್ಲ ಮತ್ತು ಪ್ರತಿಭಟನೆಗಳು ಮುಂದುವರಿಯುತ್ತವೆ” ಎಂದು ಹೇಳಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರನ್ನು ಶನಿವಾರ ತಡರಾತ್ರಿ ಭೇಟಿಯಾದ ಬಗ್ಗೆ ಮಾತನಾಡದಂತೆ ಪ್ರತಿಭಟನಾ ನಿರತ ಕುಸ್ತಿಪಟುಗಳಿಗೆ ಭಾರತ ಸರ್ಕಾರದಿಂದ ಕೇಳಲಾಗಿದೆ ಎಂದು ಪುನಿಯಾ ಹೇಳಿದ್ದಾರೆ.
ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿರುವವರಲ್ಲಿ ಅಪ್ರಾಪ್ತ ವಯಸ್ಕಳು ತನ್ನ ದೂರನ್ನು ಹಿಂಪಡೆದಿದ್ದಾರೆ ಎಂಬ ವರದಿಗಳನ್ನು ಮಾಧ್ಯಮಗಳಲ್ಲಿ ಬಿತ್ತರಿಸಲಾಯಿತು. ಈ ಬಗ್ಗೆ ಮಾತನಾಡಿದ ಪುನಿಯಾ, ”ಪೋಸ್ಕೋ ಕಾಯ್ದೆಯಡಿ ಬ್ರಿಜ್ ಭೂಷಣ್ ವಿರುದ್ದ ಪ್ರಕರಣ ದಾಖಲಿಸಿರುವ ಸಂತ್ರಸ್ತೆಯ ತಂದೆ ಮತ್ತು ಆ ಬಾಲಕಿ, ದೂರನ್ನು ಹಿಂಪಡೆದಿಲ್ಲ, ಆದರೆ ಬ್ರಿಜ್ ಭೂಷಣ್ ವಿರುದ್ಧ ನ್ಯಾಯಾಲಯಕ್ಕೆ ಸಂಬಂಧಿತ ವಿವರಗಳೊಂದಿಗೆ ಹೊಸದಾಗಿ ಸಲ್ಲಿಸಿದ್ದಾಳೆ” ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರತಿಭಟನಾ ನಿರತ ಕುಸ್ತಿಪಟುಗಳಾದ ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಭಾರತೀಯ ರೈಲ್ವೇಯಲ್ಲಿ ತಮ್ಮ OSD ಸೇವೆಗಳನ್ನು ಪುನರಾರಂಭಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ”ನಾವು ಎಲ್ಲವನ್ನೂ ಪಣಕ್ಕಿಟ್ಟಿದ್ದೇವೆ ಮತ್ತು ನಮ್ಮ ಆಂದೋಲನದಲ್ಲಿ ಒಂದು ಅಡಚಣೆಯಾದರೆ ನಮ್ಮ ಸರ್ಕಾರಿ ಉದ್ಯೋಗಗಳನ್ನು ತ್ಯಜಿಸಲು ಸಿದ್ಧರಿದ್ದೇವೆ. ಇದು ದೊಡ್ಡ ವಿಷಯವಲ್ಲ” ಎಂದು ಅವರು ಹೇಳಿದರು.
”ಇದು ಗೌರವ ಮತ್ತು ಘನತೆಗಾಗಿ ಹೋರಾಟವಾಗಿದೆ. ನಾವು ವದಂತಿಗಳಿಗೆ ಹೆದರುವುದಿಲ್ಲ, ಅಥವಾ ರೈಲ್ವೇ ಉದ್ಯೋಗವನ್ನು ಕಳೆದುಕೊಳ್ಳುತ್ತೇವೆ. ಯಾರಾದರೂ ನಮ್ಮ ಮೇಲೆ ಒತ್ತಡ ಹೇರಿದರೆ ನಾವು ಕೆಲಸವನ್ನು ತೊರೆಯುತ್ತೇವೆ” ಎಂದು ಪುನಿಯಾ ಸುದ್ದಿವಾಹಿನಿಗೆ ತಿಳಿಸಿದ್ದಾರೆ.
”ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧದ ದೂರಿನ ಬಗ್ಗೆ ಕೇಂದ್ರ ಗೃಹ ಸಚಿವರೊಂದಿಗೆ ಯಾವುದೇ ಡೀಲ್ ಮಾಡಿಕೊಂಡಿಲ್ಲ” ಎಂದು ಪುನಿಯಾ ಎನ್ಡಿಟಿವಿಗೆ ತಿಳಿಸಿದ್ದಾರೆ.