”ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನವನ್ನು ನೀಡದಿದ್ದರೆ ರಾಜ್ಯಾದ್ಯಂತ ಚಳವಳಿಯನ್ನು ಪ್ರಾರಂಭಿಸುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಕೈಗಾರಿಕಾ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ”ಹೆಚ್ಚು ಅಭಿವೃದ್ಧಿ ಮತ್ತು ಪ್ರಗತಿಗಾಗಿ ಬಿಹಾರಕ್ಕೆ ವಿಶೇಷ ಸ್ಥಾನಮಾನದ ಅಗತ್ಯವಿದೆ. ಕೇಂದ್ರವು ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡದಿದ್ದರೆ, ಅವರು ಬಿಹಾರದ ಅಭಿವೃದ್ಧಿಗೆ ವಿರುದ್ಧವಾಗಿದ್ದಾರೆ ಎಂದರ್ಥ” ಎಂದು ಹರಿಹಾಯ್ದರು.
ಆರ್ಥಿಕ ಮತ್ತು ಮೂಲಸೌಕರ್ಯ ಹಿಂದುಳಿದಿರುವ, ಅಂತರಾಷ್ಟ್ರೀಯ ಗಡಿಗಳಲ್ಲಿ ನೆಲೆಗೊಂಡಿರುವ ಅಥವಾ ಕಡಿಮೆ ಜನಸಾಂದ್ರತೆ ಹೊಂದಿರುವಂತಹ ಅನಾನುಕೂಲಗಳನ್ನು ಎದುರಿಸುತ್ತಿರುವ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡಲಾಗುತ್ತದೆ.
2000ರಲ್ಲಿ ರಾಜ್ಯದಿಂದ ಜಾರ್ಖಂಡ್ನ್ನು ಬೇರ್ಪಡಿಸಿದಾಗಿನಿಂದಲೂ ಬಿಹಾರವು ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದೆ.
ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ಜಾತಿ ಗಣತಿಯ ಆಧಾರದ ಮೇಲೆ 50% ರಿಂದ 65%ಕ್ಕೆ ಹೆಚ್ಚಿಸುವ ಮಸೂದೆಯನ್ನು ಬಿಹಾರ ವಿಧಾನಸಭೆಯು ಇತ್ತೀಚೆಗೆ ಅಂಗೀಕರಿಸಿದೆ ಎಂದು ಕುಮಾರ್ ಹೇಳಿದರು.
”ನಾವು ಸಮಾಜದ ಆರ್ಥಿಕ ದುರ್ಬಲ ವರ್ಗಗಳಿಗೆ ಹಲವಾರು ಕಲ್ಯಾಣ ಯೋಜನೆಗಳನ್ನು ರೂಪಿಸಿದ್ದೇವೆ ಮತ್ತು ಬಿಹಾರದಂತಹ ಬಡ ರಾಜ್ಯಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚವಾಗಲಿದೆ. ನಾವು ಅದನ್ನು ಐದು ವರ್ಷಗಳಲ್ಲಿ ಖರ್ಚು ಮಾಡಬೇಕಾಗುತ್ತದೆ” ಎಂದು ಅವರು ಹೇಳಿದರು.
”ವಿಶೇಷ ವರ್ಗದ ಸ್ಥಾನಮಾನದ ಬೇಡಿಕೆಯನ್ನು ಈಡೇರಿಸಿದರೆ, ಬಿಹಾರವು ಎರಡೂವರೆ ವರ್ಷಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಎಲ್ಲಾ ಪ್ರಯೋಜನಗಳನ್ನು ನೀಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಇದನ್ನೂ ಓದಿ: ಛತ್ತೀಸ್ಗಢ: ಮತದಾನದ ಮುನ್ನಾ ದಿನ ಬಿಜೆಪಿ ಅಭ್ಯರ್ಥಿಯ ವಾಹನದಲ್ಲಿ ಕಂತೆ ಕಂತೆ ನೋಟು ಪತ್ತೆ